ಮಲೆನಾಡ ಕಾಫಿ ಬೆಳೆಗಾರರಲ್ಲಿ ಕೊರೊನಾ ಕರಾಳ ಛಾಯೆ#avintvcom
1 min read
ಮಲೆನಾಡ ಕಾಫಿ ಬೆಳೆಗಾರರಲ್ಲಿ ಕೊರೊನಾ ಕರಾಳ ಛಾಯೆ
ಕರ್ನಾಟಕದಲ್ಲಿ ಮಲೆನಾಡು ಎಂದಾಕ್ಷಣ ನೆನಪಾಗುವುದು ಭೂಲೋಕ ಸ್ವರ್ಗ, ಹಸಿರುವನ ಚಿಕ್ಕಮಗಳೂರು,
ಹಾಸನದ ಸಕಲೇಶಪುರ ಹಾಗೂ ಕೊಡಗು.
ಕಾಫಿ ಬೆಳೆಯಿಂದಲೇ ಬದುಕು ಕಟ್ಟಿಕೊಂಡ ಜಿಲ್ಲೆಗಳಿವು.
ಕರ್ನಾಟಕದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿನ ಆಚಾರ, ವಿಚಾರ, ಸಂಪ್ರದಾಯ, ಸುಗ್ಗಿಹಬ್ಬಗಳು, ವಾತಾವರಣ, ಜೀವನಶೈಲಿ ಎಲ್ಲವೂ ವಿಭಿನ್ನ.
ಕೆಲವು ವರ್ಷಗಳ ಹಿಂದೆ ಕಾಫಿ ಬೆಳೆಗಾರರೆಂದರೆ ಅದೊಂದು ಹೆಮ್ಮೆ ಗೌರವ. ಆದರೆ ಈಗ ಅವರ ಜೀವನ ಹರಿದ ಛತ್ರಿಯಂತಾಗಿದೆ. ಸರ್ಕಾರಕ್ಕೆ ಈ ಜಿಲ್ಲೆಗಳು ಆದಾಯದ ಮೂಲಗಳಾಗಿದ್ದರೂ ಸರ್ಕಾರಗಳು ಮಾತ್ರ ಬೆಳೆಗಾರರ ಸಂಕಷ್ಟಕ್ಕೆ ಆರ್ಥಿಕವಾಗಿ ನೆರವಾಗುತ್ತಿಲ್ಲ.
ಈ ಮೊದಲು ಸರ್ಕಾರ ಬೆಳೆಗಾರರಿಗೆ ಕಾಫಿ ಮಂಡಳಿ ಮೂಲಕ ಗೋಡೌನ್, ಕಾಫಿಕಣ, ಮೋಟಾರ್ಗಳು, ಕೃಷಿಹೊಂಡ ಹೀಗೆ ಸಬ್ಸಿಡಿ ಮೂಲಕ ನೀಡಲಾಗುತ್ತಿತ್ತು. ಅವುಗಳು ನಿಂತು ಏಳೆಂಟು ವರ್ಷಗಳೇ ಕಳೆದಿವೆ. ಹೋಬಳಿ ಮಟ್ಟದ ಅನೇಕ ಕಾಫಿ ಮಂಡಳಿಗಳು ಈಗಾಗಲೇ ಮುಚ್ಚಿಹೋಗಿವೆ. ಈ ಬಗ್ಗೆ ಕಾಫಿ ಮಂಡಳಿ ಕೇಂದ್ರ ಅಧ್ಯಕ್ಷ MS ಭೋಜೆಗೌಡ ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಇನ್ನು ಈ ವಿಷಯದಲ್ಲಿ ಜನಪ್ರತಿನಿಧಿಗಳು ಇದ್ದೂ ಮೃತಪಟ್ಟಿದ್ದಾರೆ.
ಕಾಫಿ ಬೆಳೆಗಾರರ ಮೇಲೆ ಸರ್ಕಾರಗಳ ಈ ಮಲತಾಯಿ ಧೋರಣೆ ಯಾಕೋ ಗೊತ್ತಿಲ್ಲ. ಕಾರ್ಮಿಕರ ಸಂಬಳ,
ಕೃಷಿ ಅಗತ್ಯ ವಸ್ತುಗಳ ಖರೀದಿ, ತೋಟದ ಪೋಷಣೆ ಸೇರಿ ಶೇಕಡಾ 90 ರಷ್ಟು ಆದಾಯ ತೋಟದ ನಿರ್ವಹಣೆಗೆ ಖರ್ಚು ಮಾಡಬೇಕಾಗಿದೆ. ನೆನಪಿರಲಿ ಮಲೆನಾಡು ವ್ಯಾಪ್ತಿಯ ಒಂದು ಕ್ಷೌರಿಕರಿಂದ ಹಿಡಿದು ಗ್ರಾಮ ಪಂಚಾಯಿತಿಗಳು, ಸರ್ಕಾರಿ ಕಚೇರಿಗಳು, ಸಾರಿಗೆ ವ್ಯವಸ್ಥೆ, ಹೋಟೆಲ್ಗಳು, ಪ್ರತಿಯೊಂದು ಅಂಗಡಿ ಮುಂಗಟ್ಟುಗಳಿಂದ ಗುಂಡುಸೂಜಿ ವ್ಯಾಪಾರದವರೆಗೂ ಪ್ರತಿಯೊಬ್ಬರ ಮೂಲ ಕಾಫಿ ಬೆಳಯೇ ಆಗಿದೆ. ಚಿಕ್ಕಮಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಇರುವ ಕೂಲಿ ಕಾರ್ಮಿಕರ ಜೀವನ ಭವಿಷ್ಯ ಕೂಡ ಕಾಫಿ ಬೆಳೆಗಾರರ ಮೇಲೆ ಅವಲಂಬಿಸಿದೆ. ಒಂದು ವೇಳೆ ಎಲ್ಲ ಬೆಳೆಗಾರರು ತಮ್ಮ ತಮ್ಮ ತೋಟದ ನಿರ್ವಹಣೆಯನ್ನು ಕೆಲ ಕಾಲ ನಿಲ್ಲಿಸಿದಲ್ಲಿ( ಕಷ್ಟಸಾಧ್ಯ)ಮಲೆನಾಡು ಅಘೋಶಿತ ಬಂದ್ ಆದಂತೆ. ಮಲೆನಾಡಿನಲ್ಲಿ ಮೆಣಸು ಬೆಳೆ ಕೂಡ ಬೆಳೆಗಾರರಿಗೆ ಒಂದೊಳ್ಳೆ ಆದಾಯದ ಮೂಲ ಆಗಿತ್ತು. KG ಗೆ 800-1000 ರೂಪಾಯಿ ಇದ್ದ ಮೆಣಸು ಬೆಲೆ ಈಗ 300 ರ ಆಜುಬಾಜಿನಲ್ಲಿದೆ. ಜೊತೆಗೆ ಹವಾಮಾನ ವೈಪರೀತ್ಯ, ರೋಗಬಾಧೆಗಳ ಕಡೆಯಿಂದ ಕಳೆದ ಐದಾರು ವರ್ಷಗಳಿಂದ ಮೆಣಸು ಬೆಳೆ ಶೇಕಡಾ 10 ಕ್ಕೆ ಕುಸಿದಿದೆ.
ಕಾಡಂಚಿನ ತೋಟಗಳಲ್ಲಿ ಮುಳ್ಳುಹಂದಿಯ ಕಾಟ ಒಂದು ಕಡೆಯಾದರೆ, ಇನ್ನೊಂದೆಡೆ ಕಾಡಾನೆ, ಕಾಡೆಮ್ಮೆಗಳ ಹಾವಳಿ. ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ಕಾಫಿ ಬೆಳೆಗಾರರ ಸಂಕಷ್ಟ ಹೇಳತೀರದು.
ಕಾಫಿ ಬೆಳೆಗಾರರ ಸಂಘ ಕಳೆದ ಅನೇಕ ವರ್ಷಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕಾಫಿ ಹಾಗೂ ಮೆಣಸಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಒತ್ತಾಯ ಮಾಡುತ್ತಲೇ ಇದೆ.
ಆದರೆ ಇದುವರೆಗೂ ಪ್ರಯೋಜನ ಆಗಿಲ್ಲ. ಬೆಳೆಗಾರರು ಬ್ಯಾಂಕಿನ ಬಡ್ಡಿ ಕಟ್ಟಲೂ ಆಗದೆ, ಕೈ ಸಾಲ ತೀರಿಸಲೂ ಆಗದೆ ಪರದಾಡುವಂತಾಗಿದೆ. ಇದೀಗ ಮಲೆನಾಡು ಕೊರೊನಾ ದಾಳಿಗೆ ತತ್ತರಿಸಿಹೋಗಿದೆ.
ಬೇರೆ ಬೇರೆ ಜಿಲ್ಲೆಗಳಲ್ಲಿ ಸೋಂಕಿತರು ಹೆಚ್ಚಿದ್ದರೂ ಮಲೆನಾಡು ಭಾಗದಲ್ಲಿ ಹೆಚ್ಚಾಗಿ ವ್ಯಾಪಿಸಿರಲಿಲ್ಲ. ಕೆಲವು ದಿನಗಳಿಂದ ಮಲೆನಾಡ ಹಳ್ಳಿ ಹಳ್ಳಿಗಳಲ್ಲಿ ಕೊರೊನಾ ಹೆಚ್ಚಾಗುತ್ತಿದೆ.
ತೋಟದ ಕಾರ್ಮಿಕರಲ್ಲಿ ಸೋಂಕು ಹೆಚ್ಚುತ್ತಿದ್ದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಮಳೆಗಾಲ ಆರಂಭದಲ್ಲಿ ತೋಟಗಳಲ್ಲಿ, ಮರಗಸಿ, ಗಿಡದ ಬುಡ ಬಿಡಿಸುವುದು, ಗೊಬ್ಬರ ಹಾಕುವುದು, ಅರೇಬಿಕ ಗಿಡಗಳಿಗೆ ಔಷಧಿ ಸಿಂಪರಣೆ, ಚಿಗುರು ತೆಗೆಯುವುದು, ಕಟ್ಟಿಗೆ ಶೇಖರಣೆ, ಭತ್ತದ ನಾಟಿ, ಹೀಗೆ ಸಾಲು ಸಾಲು ಕೆಲಸ ಇದ್ದು, ಕೊರೊನಾ ಸೋಂಕಿನಿಂದ ಕಾರ್ಮಿಕರ ಕೊರತೆ ಎದುರಾಗುತ್ತದೆ. ಈಗಾಗಲೇ ಅಧಿಕಾರಿಗಳು ಒಂದೆಡೆಯಿಂದ ಮತ್ತೊಂದುಕಡೆ ಕಾರ್ಮಿಕರನ್ನು ಕರೆತರದಂತೆ ತೋಟದ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. ಇದೇ ರೀತಿ ಸೋಂಕು ಹೆಚ್ಚುತ್ತಾ ಹೋದರೆ ಮಲೆನಾಡು ಭಾಗದಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಲಿವೆ.
ಮೊದಲೇ ಸಂಕಷ್ಟದಲ್ಲಿದ್ದ ಬೆಳೆಗಾರರಲ್ಲಿ ಕೊರೊನಾ ಹಾವಳಿಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಾರ್ಮಿಕ ವರ್ಗದಲ್ಲಿ ಕೊರೊನಾ ಸೋಂಕಿನ ಅರಿವು ಕಡಿಮೆ ಇದ್ದು, ಅವರಿಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸ ಆಗಬೇಕಿದೆ.
ಅಧಿಕಾರಿವರ್ಗ ಹಗಲಿರುಳು ಸೋಂಕು ತಡೆಗೆ ಶ್ರಮಿಸುತ್ತಿದ್ದು ಮಲೆನಾಡಿನಲ್ಲಿ ಜನಪ್ರತಿನಿಧಿಗಳು ಇದ್ದೂ ಇಲ್ಲದಂತೆ ಆಗಿದ್ದಾರೆ. ನಿಜಕ್ಕೂ ಇದು ಮಲೆನಾಡ ಜನರ ದೌರ್ಭಾಗ್ಯವಲ್ಲದೆ ಮತ್ತೇನೂ ಅಲ್ಲ. ಇಲ್ಲಿಯವರೆಗೆ ಮಲೆನಾಡಿನಲ್ಲಿ ಲಾಕ್ಡೌನ್ ಅಷ್ಟೇನೂ ಪರಿಣಾಮಕಾರಿ ಆಗಿಲ್ಲ. ಇನ್ನು ಮುಂದಾದರೂ ನಿಗಮಮಂಡಳಿ, ಮಂತ್ರಿ ಸ್ಥಾನಕ್ಕೆ ರೋಷಾವೇಷ ತೋರುವ ಜನಪ್ರತಿನಿಧಿಗಳು ಅಧಿಕಾರಿಗಳ ಜೊತೆಗೂಡಿ ಹೆಚ್ಚಿನ ಆಸಕ್ತಿ ವಹಿಸಿ ಹೆಚ್ಚು ಲಸಿಕೆ ಪೂರೈಕೆಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ನೀವೂ ಕೂಡಾ ಈಗಲೇ ಕಾರ್ಯ ಪ್ರವೃತ್ತರಾಗಬೇಕು.
ಜೊತೆಗೆ ಲಾಕ್ಡೌನ್ ಹೆಚ್ಚು ಪರಿಣಾಮಕಾರಿ ಆಗಲು ಅಧಿಕಾರಿಗಳಿಗೆ ಸೂಚನೆ ಕೊಡಬೇಕು… ಹಾಗೇ ಜನರೂ ಸಹ, ಎಲ್ಲವೂ ಸರ್ಕಾರ ಮತ್ತು ಅಧಿಕಾರಿಗಳ ಜವಾಬ್ದಾರಿ ಎನ್ನುವಂತೆ ವರ್ತಿಸದೇ ಮನೆಯಲ್ಲಿಯೇ ಇದ್ದು ಅನವಶ್ಯಕವಾಗಿ ಸುತ್ತಾಡದೆ, ಅವಶ್ಯಕ ಇದ್ದಲ್ಲಿ ಮಾತ್ರ ಹೊರಗೆ ಬರಬೇಕು.. ಮಾಸ್ಕ್, ಅಂತರ, ಸ್ಯಾನಿಟೈಸರ್ ಕಡ್ಡಾಯ ಮರೆಯದಿರಿ.. ನಮ್ಮ ಜೀವ ಜೀವನ ನಮ್ಮ ಹಕ್ಕು.. ನೊಂದ ಜನರ ಕಣ್ಣೀರು ಒರೆಸಿ, ಕಷ್ಟಕ್ಕೆ ಹೆಗಲಾಗಿ, ಸಾಂತ್ವನ ಹೇಳುವಾಗ ಸಿಗುವ ಪುಣ್ಯ, ಮಂದಿರ ಮಸೀದಿ ಚರ್ಚುಗಳಲ್ಲಿ ಪ್ರಾರ್ಥಿಸಿ ಪಡೆಯುವ ಪುಣ್ಯಕ್ಕಿಂತ ಅದೆಷ್ಟೋ ಪಟ್ಟು ಜಾಸ್ತಿಯೇ ಆಗಿರುತ್ತದೆ.. ಆದಷ್ಟು ಬೇಗನೆ ನಮ್ಮ ಹಿಂದೂಸ್ಥಾನ ದೇಶವ್ಯಾಪಿ ಕೊರೊನಾ ಮುಕ್ತ ಆಗಲಿ ಎಂದು ಆಶಿಸುತ್ತಾ..
ಕೃಪೆ: ಮಧು K. ದುರ್ಗಾ,
ಅಲ್ದೂರು ಅಂಚೆ.
ಚಿಕ್ಕಮಗಳೂರು.