ಕೋರೋನ ವೈರಸ್ ತಗುಲಿಕೊಂಡ ಮೇಲೆ *ಬದುಕಿಗೆ ಕರೆ ಕೊಟ್ಟ ಕೊರೊನ ಪೀಡಿತ ನಮ್ಮೂರ ದೀರ*#avintvcom
1 min read
*ಬದುಕಿಗೆ ಕರೆ ಕೊಟ್ಟ
ಕೊರೊನ ಪೀಡಿತ ನಮ್ಮೂರ ದೀರ*
ಗಿಡದ ಒಡತಿಗೆ ಧನ್ಯವಾದಗಳು
ಕೋರೋನ ವೈರಸ್ ತಗುಲಿಕೊಂಡ ಮೇಲೆ ಅದನ್ನು ಬೇರೆಯವರಿಗೆ ಹರಡಿಸಬಾರದು ಎಂಬ ಕಾರಣಕ್ಕೆ ಆಪ್ತಮಿತ್ರ ಕರೆ ಬಂದ ಒಂದು ಗಂಟೆಯ ಒಳಗೆ ಸರ್ಕಾರ ನಡೆಸುವ covid ಆಸ್ಪತ್ರೆ ಆಯ್ಕೆ ಮಾಡಿಕೊಂಡು ಇಂದಿರಾನಗರದ ESI ಆಸ್ಪತ್ರೆಗೆ ದಾಖಲಾದೆ. Covid ಟೆಸ್ಟ್ ಮಾಡಿದ ಮತ್ತು ಆಸ್ಪತ್ರೆ ಸೇರುವವರೆಗು ನಮಗೆ ಯಾವುದೇ ತರಹ ತೊಂದರೆ ಮಾಡದ ಬದಲಿಗೆ ಸಂಪೂರ್ಣ ಸಹಕಾರ ಮಾಡಿದ ಸರ್ಕಾರದ ಸಿಬ್ಬಂದಿಯ ಕಾರ್ಯಕ್ಕೆ ಅಭಿನಂದನೆಗಳು.
ಆಸ್ಪತ್ರೆಯಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರಿಂದ ಹಿಡಿದು ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿರುವ ನರ್ಸ್(ಪುರುಷ/ಮಹಿಳೆ) ಗಳ ಶ್ರಮ ಮತ್ತು ಸೇವೆ ಶ್ಲಾಘನೀಯ. ವೈದ್ಯಕೀಯ ಸೇವೆ, ಆಹಾರ ಸರಬರಾಜು ಎಲ್ಲವೂ ಉಚಿತ ಆದರೆ ಎಲ್ಲೂ ಗುಣಮಟ್ಟದ ಕೊರತೆ ಇರಲಿಲ್ಲ .ಇದು ನಮ್ಮ ಸರ್ಕಾರಿ ವ್ಯವಸ್ಥೆಯ ಮೇಲೆ ಅಪಸ್ವರದ ಮದ್ಯೆಯು ಸರ್ಕಾರಿ ವ್ಯವಸ್ತೆಯನ್ನು ಬಲಪಡಿಸಲು ಸಾದ್ಯ ಎಂಬ ನಂಬಿಕೆ ಹುಟ್ಟಿಸಿತು.
ನಮ್ಮೊಂದಿಗೆ ಇದ್ದವರು ಕೂಲಿ ಮಾಡುವ ಮತ್ತು ಮದ್ಯಮ ವರ್ಗದ ಬಡವರು ಹೆಚ್ಚಾಗಿದ್ದರು. ಭಯ ಆತಂಕದ ನಡುವೆ ಆಸ್ಪತ್ರೆಗೆ ದಾಖಲಾದ ಈ ಜನ ಎರಡೇ ದಿನದಲ್ಲಿ covid ಜಯಿಸಿದ ಹುಮ್ಮನಿಸಿನಲ್ಲಿದರು. ಆದರೆ ಮೊದಲೇ ಮಧುಮೇಹ, ಬ್ಲಡ್ ಪ್ರೆಶರ್ ಹಾಗೂ ಇನ್ನಿತರ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೊವಿಡ್ ಭಾಧಿತರು ತೊಂದರೆಗೆ ಸಿಲುಕಿದ್ದರು .ಅವರಿಗೆ ಅಗತ್ಯ ವಿದ್ದ ವೆಂಟಿಲೇಟರ್ ಮತ್ತು ಹೆಚ್ಚಿನ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್ಗೆ ಕರೆದು ಕೊಂಡು ಹೋಗುತ್ತಿದ್ದರು.
ಯಾವುದೇ ತೊಂದರೆ ಇಲ್ಲದ ನಾವು ಒಂದೇ ವಾರ್ಡ್ನಲ್ಲಿ ಇರುತ್ತಿದ್ದೆವು. ಇಲ್ಲಿನ ಅನುಭವ ವಿಶೇಷವಾಗಿತ್ತು.
ನಾನು ರಾತ್ರಿ ಸುಮಾರು 11.00 ಗಂಟೆಯ ಸುಮಾರಿಗೆ ಆಸ್ಪತ್ರೆ ಸೇರಿದ್ದೆ ಜ್ವರ ಮೈ ಕೈ ನೋವು ನನ್ನನ್ನು ಭಾಧಿಸುತಿತ್ತು. ಇದಕ್ಕೆ ಕೂಡಲೇ dolo ಮಾತ್ರೆ ಕೊಟ್ಟಿದ್ದರು .ಇದರ ಪರಿಣಾಮ ನಿದ್ದೆ ಬಂದಿತ್ತು.
ಬೆಳಿಗ್ಗೆ ಎದ್ದ ತಕ್ಷಣ ಅಕ್ಕ ಪಕ್ಕದ ಸಹ ಕೊರೊನ ಸಂಗಾತಿಗಳು ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿದ್ದರು. ಪಕ್ಕದ ಹಾಸಿಗೆಯಲ್ಲಿ ಇದ್ದ ಗೆಳೆಯ ಶೇಖರ್” ಭಾಯ್” ಚೆನ್ನಾಗಿದ್ದೀರಾ ಎಂದು ಕೇಳಿ ತಮಗೆ ಮಾಡಿಕೊಂಡ ಬಿಸಿ ಬಿಸಿ ಕಾಫಿ ಕೊಟ್ಟರು. ಬೇಡ ಅನ್ನದೆ ಕಾಫಿ ಕುಡಿದೆ. ಸುಸ್ತು ಕಾಡುತಿತ್ತು ಹಾಗಾಗಿ ಮಾತನಾಡದೆ ಮಲಗಿದೆ. ಆದರೆ ಶೇಖರ ಸುಮ್ಮನಿರದೆ ನನ್ನನ್ನು ಮಾತಿಗೆಳೆಯುತ್ತಿದ್ದರು. ಬಾಯ್ ನನಗೆ ತುಂಬಾ ನಿಮ್ಮ ಜನ ಸ್ನೇಹಿತರು ಇದ್ದಾರೆ ಅಂದರು. ಹೌದ ಅಂದೆ. ವಿಜಯನಗರದ ಗೋರಿ ಪಾಳ್ಯದ ಅಮ್ಜದ್ ಗೊತ್ತಾ ಅಂದರು. ಇಲ್ಲ ಅಂದೆ,
ಇವರ್ಯಾಕೆ ಹೀಗೆ ಕೇಳುತ್ತಿದ್ದಾರೆ ಎಂದು ಊಹಿಸಲು ಕಷ್ಟವಾಗಲಿಲ್ಲ ಕಾರಣ ನನ್ನ” ಗಡ್ಡ” ಎಂದು ಗೊತ್ತಾಯಿತು. ನಾನು ಸುಮ್ಮನೆ ಮನಸೊಳಗೆ ಯೋಚಿಸುತ್ತಿದ್ದೆ. ದೇಶದಲ್ಲಿ ಗಡ್ಡ ಬಿಟ್ಟವರು ಒಂದು ಧರ್ಮದ ವಾರಸುದಾರ ಆಗುವಷ್ಟರ ಮಟ್ಟಿಗೆ
ಜನತೆಯ ಪ್ರಜ್ಞೆ ಯ ಮೇಲೆ ದಾಳಿ ನಡೆಸಿರುವ ಸಂಘಟನೆಗಳ ಬಗ್ಗೆ ಖೇಧವೆನಿಸಿತು.
ಆದರೆ ಬಾಯ್ ಎಂದು ಕರೆದು ನನ್ನನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದ ಹಿಂದೂ ಶೇಖರ ನ ಪ್ರೀತಿ ಭಾರತದ ಬಹುಸಂಖ್ಯಾತ ಜನರ ಮನಸ್ಥಿತಿಗೆ ಹಿಡಿದ ಕೈಗನ್ನಡಿ ಆಗಿತ್ತು.
ಸುಮಾರು 10.00 ಗಂಟೆಗೆ ನಮ್ಮನ್ನು ಪರೀಕ್ಷೆ ಮಾಡುವ ಸಲುವಾಗಿ ನಮ್ಮ ಹೆಸರನ್ನು ಜೋರಾಗಿ ಕೂಗುತ್ತಿದ್ದರು.
ಸಾಯಿ ಸುಂದರೇಶ್…
ಸಾಯಿ ಸುಂದರೇಶ್ ಎಂದು ನರ್ಸ್ ಕರೆಯುತಿದ್ದಾಗ
ಪಕ್ಕದ ಮಹಿಳಾ ವಾರ್ಡ್ ನಲ್ಲಿ ಇದ್ದ ಚಳುವಳಿಯ ಸಂಗಾತಿಗೆ ಅನುಮಾನ ಬಂದಿದೆ
ಇದು ಸಾಯಿ ಸುಂದರೇಶ್
ಅಥವಾ ಸಾತಿ ಸುಂದರೇಶ್ ಇರಬಹುದು
ಎಂದು ನನ್ನ ವಾರ್ಡ್ ಕಡೆಗೆ ಬಂದರೆ ಅದು ಸಾತಿ ಸುಂದರೇಶ್ ಆಗಿದ್ದರಿಂದ ಆಕೆಗೆ ಕುಷಿಯೋ ಕುಶಿ ಕಾಮ್ರೇಡ್ ಎನ್ನುತ್ತಾ ನನ್ನ ಬೆಡ್ ಬಳಿ ಬಂದು.
ನನಗೆ ನಿಮ್ಮ ಹೆಸರು ತಪ್ಪು ಕರೆಯುತ್ತಿದ್ದಾರೆ ಅನ್ನಿಸಿತು ಅದಕ್ಕೆ ಬಂದೆ ಅಂದರು. ಕಾಮ್ರೇಡ್ ಪ್ರಭ ಮತ್ತು ನಾನು ಆಸ್ಪತ್ರೆಯಲ್ಲಿ ನಮ್ಮ ಕೆಲಸ ಆರಂಭಿಸಿದೆವು.
ಅಲ್ಲಿದ್ದ ಎಲ್ಲರೂ ನಮ್ಮನ್ನು “ಕಾಮ್ರೇಡ್ “ಎಂದು ಕರೆಯುವ ಸ್ಟ್ರಮಟ್ಟಿಗೆ……
ವಾರ್ಡ್ನಲ್ಲಿ ಇದ್ದವರಿಗೆ ಒಂದೇ ಧರ್ಮ ಒಂದೇ ಜಾತಿ ಆಗಿತ್ತು ಅದು “ಕೋರೋನ ”
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಾಗ ನಮ್ಮದೇ ವಾಟ್ಸಪ್ ಗುಂಪು ಮಾಡಿ ಅದನ್ನು ಪ್ರಭ ನಿರ್ವಹಿಸುತ್ತಿದ್ದಾರೆ.
ಆಸ್ಪತ್ರೆಯಿಂದ ಎಂಟು ದಿನಕ್ಕೆ ಮನೆಗೆ ಬಂದೆ ಆದರೆ ಮನೆಯಲ್ಲಿ ಬಾಳಸಂಗಾತಿ ಜ್ಯೋತಿ,ಮಗಳು ಭೂಮಿ ,ಹೋಂ ಐಸೋಲೇಷನ್ ನಲ್ಲಿ ಇದ್ದರು ಇಬ್ಬರು ಪಾಸಿಟಿವ್. ನನಗಿಂತ ಮೊದಲೇ ಆಸ್ಪತ್ರೆ ಸೇರಿದ್ದ ಕಾಮ್ರೇಡ್ ಅನಂತಸುಬ್ಬರಾವ್ ಒಂದು ದಿನದ ನಂತರ ಮನೆಗೆ ಬಂದರು. ಅದಾದ ಎರಡು ದಿನಕ್ಕೆ ಮಗ ಸೂರ್ಯ ಪಾಸಿಟಿವ್.
ಈಗ ಮನೆಯ ಒಂದೊಂದು ಕೋಣೆಯಲ್ಲಿ ಒಬ್ಬರು ಇಬ್ಬರು ಇದ್ದೇವೆ. ಆದರೂ ನಮ್ಮೊಂದಿಗೆ ಇರುವ ನಮ್ಮತ್ತೆಗೆ ಯಾವುದೇ ಕಾರಣಕ್ಕೂ covid ವೈರಸ್ ಹತ್ತಿಸ ಬಾರದು ಎಂಬ ಛಲ ದೊಂದಿಗೆ.
ಮಾಸ್ಕ್, ಸ್ಯಾನಿಟೇಸರ್ ಮತ್ತು physical distance ಚಾಚೂ ತಪ್ಪದೇ ಪಾಲಿಸುತ್ತಾ…..
ಕೊನೆಯ ಮಾತು….
*ಇಂದು ನಾವೆಲ್ಲರೂ ಕೊರೋನ ಜೊತೆಗೆ ಬದುಕುವ ಅನಿವಾರ್ಯತೆಗೆ ಸಿಲುಕಿ ದ್ದೇವೆ.
*ಆದ್ದರಿಂದ ನಾವೆಲ್ಲರೂ ಕೊರೋನಾ ಭಯದಿಂದ ಹೊರ ಬರೋಣಾ
*ತಪ್ಪದೆ ಮಾಸ್ಕ್, ಸೋಪ್ ಬಳಸೋಣ,ದೈಹಿಕ ಅಂತರ ಕಾಪಾಡಿ ಕೊಳ್ಳೋಣ.
*ಸರ್ಕಾರದ ಅವೈಜ್ಞಾನಿಕ ಕ್ರಮಗಳು ಕೊರೋನ ತಡೆಯುವಲ್ಲಿ ವಿಫಲ ವಾಗಿದೆ.
*ಅನಗತ್ಯವಾಗಿ ಜನ ಸಂದಣಿ ತಡೆಯಲು ಸೂಕ್ತ ಕ್ರಮ ವಹಿಸಲು ಸರ್ಕಾರ ಮುಂದಾಗಬೇಕಿದೆ.
*ಜನತೆಗೆ ಅಗತ್ಯವಿರುವ ವೈದ್ಯಕೀಯ ಸೇವೆ ನೀಡಲು ಸರ್ಕಾರ ಮುಂದಾಗಬೇಕಿದೆ.
*ಕೊರೋನ ಭಾಧಿತ ಬಡ ಕುಟುಂಬಗಳ ಜೀವನ ನಿರ್ವಹಣೆಗೆ ವಿಶೇಷ ಆರ್ಥಿಕ ಪ್ಯಾಕೆಜ್ ನೀಡಿ ಕೊರೋನೋತ್ತರ ಬದುಕಿಗೆ ಸಹಾಯ ಮಾಡಬೇಕಿದೆ.
*ಮನೆಯಲ್ಲೇ ಚಿಕಿತ್ಸೆ ಗೆ ಅವಕಾಶ ವಿಲ್ಲದ ಕುಟುಂಬಗಳಿಗೆ ಎಲ್ಲಸೌಕರ್ಯ ಇರುವ ವಸತಿ ವ್ಯವಸ್ಥೆ ಮಾಡಲು ಸರ್ಕಾರ ಮುಂದಾಗಬೇಕಿದೆ.
ಕೋರೋನ ಬಂದ ಮೇಲೆ ಸರಿಯಾಗಿ ನಿಗಾ ವಹಿಸದ ಪರಿಣಾಮ ಮನೆಯ ತಾರಸಿ ತೋಟದಲ್ಲಿ ಹೂವಿನ ಗಿಡಗಳು ಬಾಡಿ ಹೋಗಿದ್ದವು.ಆದರೆ ಈಗ ಹೋಂ ಐಸೋಲೇಷನ್ ಕಾರಣ ಅವುಗಳಿಗೆ ನೀರುಣಿಸಿ ಆರೈಕೆ ಮಾಡಲು ಸಾಧ್ಯವಾಯ್ತು. ನನಗೆ ಅರಿವಿಲ್ಲದಂತೆ ಹೂವು ಬಿಟ್ಟ ಗಿಡಗಳನ್ನು ಮಗಳು ತೋರಿಸಿದಾಗ ಆಶ್ಚರ್ಯವಾಯಿತು. ಕೋರೋನ ಬಂದಮೇಲೆ ಸರಿಯಾಗಿ ಆರೈಕೆ ಯಾದರೆ ಎಲ್ಲರ ಬದುಕು ಹೀಗೆ ಅರಳಬಹುದು ಅನಿಸಿತು. ಈ ಹೂವು ಇಷ್ಟೆಲ್ಲಾ ಬರೆಯುವಂತೆ ಪ್ರೇರೇಪಿಸಿತು ಗಿಡದ ಒಡತಿಗೆ ಧನ್ಯವಾದಗಳು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್