ಇಂತಹ ಮುಂದಾಲೋಚನೆ ಇಲ್ಲದ ಅಧಿಕಾರಿಗಳ ಅವಾಂತರಕ್ಕೆ ಪ್ರಕೃತಿಯು ಸರ್ವನಾಶವಾಗುತ್ತಿದೆ #avintvcom
1 min read
ಇಂತಹ ಮುಂದಾಲೋಚನೆ ಇಲ್ಲದ ಅಧಿಕಾರಿಗಳ ಅವಾಂತರಕ್ಕೆ ಪ್ರಕೃತಿಯು ಸರ್ವನಾಶವಾಗುತ್ತಿದೆ
‘ನಿರ್ಭಾವುಕ ಅಭಿವೃದ್ಧಿಗೆ ನಿಷ್ಕಾರಣ ಬಲಿಯಾಗುವ ಮಹಾಜೀವಗಳು’
ಮೂಡಿಗೆರೆಯಿಂದ ಕೊಟ್ಟಿಗೆಹಾರದ ಕಡೆಗೆ ಹೋಗುವಾಗ ಬಿದರಹಳ್ಳಿಯ ದರ್ಗಾ ದಾಟಿ ಸ್ವಲ್ಪ ಮುಂದೆ ರಸ್ತೆಯ ಬಲಭಾಗಕ್ಕೆ ಸ್ವಲ್ಪ ಎತ್ತರದಲ್ಲಿ ಒಂದು ಬೃಹತ್ ಕಳೇಬರ ಬಿದ್ದಿರುವುದನ್ನು ನೀವು ನೋಡಬಹುದು. ರಸ್ತೆ ಅಗಲೀಕರಣದ ‘ಅಭಿವೃದ್ಧಿ’ಕಾರ್ಯ ಭರದಿಂದ ನಡೆಯುತ್ತಿರುವುದರಿಂದ ಚಿಕ್ಕಮಗಳೂರಿನಿಂದ ಕೊಟ್ಟಿಗೆಹಾರದವೆಗೂ ರಸ್ತೆಯ ಎರಡೂ ಬದಿಗಳಲ್ಲಿ ಕಳೇಬರಗಳು ರಾಶಿಬಿದ್ದಿರುವುದು ಸಾಮಾನ್ಯವಾಗಿ ಕಾಣುವ ದೃಶ್ಯ. ವಿಪರೀತ ವೇಗದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅದಕ್ಕೆ ದುಪ್ಪಟ್ಟು ಪ್ರಮಾಣದಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ, ಜನರಲ್ಲಿ ಅಧಿಕವಾಗುತ್ತಿರುವ ಪ್ರವಾಸದ ಹವ್ಯಾಸ, ಇವೆಲ್ಲವನ್ನು ನೋಡಿದಾಗ ರಸ್ತೆಗಳು ಅಗಲವಾಗಬೇಕಿರುವುದು ನಿಜವಾಗಿಯೂ ಅಗತ್ಯವೇನೋ ಎಂದು ಅನಿಸದಿರದು. ಇಂಥ ‘ಹುಸಿ ಅಗತ್ಯ’ಗಳ ಪೂರೈಕೆ ಅನಿವಾರ್ಯವೆನಿಸಿದಾಗ ಅದನ್ನು ಕಾರ್ಯಗತಗೊಳಿಸಲು ರಸ್ತೆಯ ಇಕ್ಕೆಲಗಳಲ್ಲಿ ನೂರಾರು ವರ್ಷಗಳಿಂದ ಹತ್ತಾರು ತಲೆಮಾರುಗಳ ಓಡಾಟಕ್ಕೆ ಸಾಕ್ಷಿಯಾಗಿ ನಿಂತ ಸಾವಿರಾರು/ಲಕ್ಷಾಂತರ ವೃಕ್ಷಾತ್ಮಗಳ ತಲೆದಂಡವೂ ಅನಿವಾರ್ಯತೆಯ ಮರೆಯಲ್ಲಿ ಸಿಂಧುವಾಗಿಬಿಡುತ್ತದೆ… ಆದಾಗ್ಯೂ ಇಲ್ಲಿ ಚಿತ್ರದಲ್ಲಿ ಕಾಣುವ ಬೃಹತ್ ಮಾವಿನಮರದ ಕಳೇಬರದ ಬಗ್ಗೆ ಬರೆಯುತ್ತಿರುವುದಕ್ಕೆ ವಿಶೇಷ ಕಾರಣವಿದೆ. ಅದೇನೆಂದರೆ ಈ ಮರದ ಹನನ ಅನಿವಾರ್ಯತೆಯ ಮುಸುಕಿನಲ್ಲಿ ಮುಚ್ಚಿಡಲು ಸಾಧ್ಯವಿಲ್ಲದ ಮನುಷ್ಯನ ಪಾತಕಿ ಮನಸ್ಥಿತಿಯ ಸ್ವೇಚ್ಛಾಚಾರಕ್ಕೆ ಸಾಕ್ಷಿಯಾಗಿದೆ…
ಕೊಟ್ಟಿಗೆಹಾರದಿಂದ ಮೂಡಿಗೆರೆಗೆ ಹೋಗುವಾಗ ಬಿದರಹಳ್ಳಿಯಲ್ಲಿ ರಸ್ತೆಯ ಎಡಭಾಗಕ್ಕೆ ದೂರದಲ್ಲಿ ಸ್ವಲ್ಪ ಎತ್ತರದಲ್ಲಿ ಇದ್ದ ಬೃಹತ್ ಮರವನ್ನು ನಾನು ಬಹಳ ಸಣ್ಣವನಿದ್ದಾಗಿನಿಂದಲೂ ಬಸ್ಸಿನಲ್ಲಿ ಹೋಗುವಾಗೆಲ್ಲ ಮರೆಯದೆ ಕಾದು ನೋಡುತ್ತಿದ್ದೆ. 80ರಿಂದ 100 ಅಡಿಗಳಷ್ಟು ಎತ್ತರವಿದ್ದ ಇದರ ಸುತ್ತಳತೆಯೇ ಸುಮಾರು 15ರಿಂದ 20 ಅಡಿಗಳಷ್ಟು ಇದ್ದಿರಬಹುದು. ಅದರ ಗಾತ್ರದ ಆಧಾರದಲ್ಲಿ ಅಂದಾಜು ಮಾಡಿದರೆ ಅದರ ವಯಸ್ಸು ಸುಮಾರು ಮುನ್ನೂರು ವರ್ಷಗಳಿಗೂ ಹೆಚ್ಚಿರಬಹುದು. ನನ್ನ, ನಿಮ್ಮ ತಾತ ಮುತ್ತಾತಂದಿರಾದಿಯಾಗಿ ಅದೆಷ್ಟೋ ತಲೆಮಾರುಗಳು ಅದರ ಎದುರಿನಲ್ಲಿ ಹಾದುಹೋಗಿದ್ದನ್ನು ಅದು ನೋಡಿರಬಹುದು. ದಟ್ಟ ನೆರಳಿನ ಕಪ್ಪನ್ನು ತನ್ನ ಸುತ್ತೆಲ್ಲ ಹರಡಿ ಮನಕ್ಕೆ ತಂಪನ್ನುಂಟುಮಾಡುತ್ತಿದ್ದ ಅದನ್ನು ನಾನು ಯಾವಾಗಲೂ ಒಬ್ಬ ಜೀವಂತ ಹಿರಿಯಜ್ಜ/ಜ್ಜಿಯಂತೆಯೇ ಭಾವುಕನಾಗಿ ನೋಡುತ್ತಿದ್ದೆ. ಈಗ್ಗೆ ಕೆಲವು ತಿಂಗಳುಗಳ ಹಿಂದೆ ರಸ್ತೆ ಕೆಲಸ ಆರಂಭವಾದಾಗ ಬಲಿಯಾಗಲಿರುವ ಮರಗಳನ್ನು ನೆನೆದು ಬಹಳ ಮರುಗಿದ್ದೆ. ಸಮಾಧಾನವೆಂದರೆ ಕೊನೆಯ ಪಕ್ಷ ಈ ಹಿರಿಮರ ರಸ್ತೆಯಿಂದ ದೂರದಲ್ಲಿರುವುದರಿಂದ ಬಲಿಯಾಗಲಾರದು ಎಂದುಕೊಂಡಿದ್ದೆ. ಆದರೆ ಒಂದು ದಿನ ಈ ಮಾರ್ಗದಲ್ಲಿ ಹೋಗುವಾಗ ನೋಡುತ್ತೇನೆ… ನೂರಾರು ವರ್ಷಗಳ ಜೀವನವನ್ನು ಕಂಡಿದ್ದ ಈ ಮಹಾಜೀವ ಮೌನವಾಗಿ, ನಿಸ್ತೇಜವಾಗಿ ನೆಲಕ್ಕೊರಗಿತ್ತು! ನನ್ನ ಕಣ್ಣಿನಲ್ಲಿ ಝಲ್ಲನೆ ಚಿಮ್ಮಿದ ನೀರನ್ನು ನಿಜವಾಗಿಯೂ ಹತ್ತಿಕ್ಕಲಾಗಲಿಲ್ಲ. ಸಧ್ಯಕ್ಕೆ, ‘ಕೇವಲ ಒಂದು ಮರ ಕಡಿದಿದ್ದಕ್ಕಾಗಿ ಕಣ್ಣೀರಿಡುವುದೇ… ಥೂ, ಎಂಥ ಭಾವುಕ ಮೂರ್ಖ ನೀನು’ ಎಂದು ಹಂಗಿಸಲು ನನ್ನ ಜೊತೆ ಈ ನಾಗರಿಕ ಸಮಾಜದ ಪ್ರತಿನಿಧಿಗಳ್ಯಾರೂ ಇರಲಿಲ್ಲ, ಒಬ್ಬನೇ ಇದ್ದೆ. ಸತ್ತುಬಿದ್ದಿದ್ದ ಆ ಮಹಾಮರವನ್ನು ನೋಡಿ ‘ಮನುಷ್ಯ ಮೂಲತಃ ಒಳ್ಳೆಯವನು’ ಎಂದು ಬಲವಂತದಲ್ಲಿ ರೂಢಿಸಿಕೊಂಡಿದ್ದ ನನ್ನ ನಂಬಿಕೆ ಕಳಚಿ ತಲೆಕೆಳಗಾಯಿತು. ಇಲ್ಲ, ಮನುಷ್ಯ ಆಳದಲ್ಲಿ ನಿಜವಾಗಿಯೂ ಮಹಾಕ್ರೂರಿ. ಇಲ್ಲವಾದರೆ ಈತನ ನಿರರ್ಥಕ ಅಭಿವೃದ್ಧಿಗೆ ತೊಡಕಾಗದೆ ತನ್ನಷ್ಟಕ್ಕೆ ತಾನು ರಸ್ತೆಯಿಂದ ದೂರದಲ್ಲಿ ತಲೆತಲಾಂತರಗಳಿಂದ ನಿಂತಿದ್ದ ಹಿರಿಯಜ್ಜನಂಥ ಹೆಮ್ಮರವನ್ನು ಕಡಿದುರುಳಿಸಲು ಕಾರಣ ಮನುಷ್ಯನ ‘ಕ್ರೌರ್ಯಚಾಪಲ್ಯ’ವಲ್ಲದೆ ಮತ್ತಿನ್ನೇನು. ಮರ ಕಡಿದುರುಳಿಸುವುದನ್ನು ನೋಡಲು ಸೇರಿದಷ್ಟು ಜನ ಗಿಡ ನೆಡುವ ಕಡೆ ಸೇರುವುದಿಲ್ಲ. ಈ ಕ್ರೌರ್ಯಪ್ರದರ್ಶನದಲ್ಲಿ ಭಾಗಿಯಾಗಿ ಸುಖಿಸಿದ ಕಟುಕರ ಅಜ್ಜಮುತ್ತಜ್ಜಂದಿರು ಧರ್ಮಸ್ಥಳದ ನೇತ್ರಾವತಿಯ ಒಡಲಿಗೆ ತಮ್ಮ ಒಳಚಡ್ಡಿಗಳನ್ನು ಎಸೆದು ಮಲಿನಗೊಳಿಸಿಬರಲು ಇದೇ ಮಾರ್ಗದಲ್ಲಿ ಹೋಗಿದ್ದನ್ನು ಈ ಮರವು ಮೌನವಾಗಿ ನೋಡಿರಬಹುದು. ಮನುಷ್ಯರೇಕೆ ಇಷ್ಟೊಂದು ನಿರ್ಭಾವುಕರಾಗತೊಡಗಿದ್ದಾರೆ ಎಂಬುದೇ ತಿಳಿಯುವುದಿಲ್ಲ. ಕೊಟ್ಟಿಗೆಹಾರದಿಂದ ಮುಂದಕ್ಕೆ ಘಾಟಿಯನ್ನು ಹೇಗೂ ಅಗಲಗೊಳಿಸಲು ಸಾಧ್ಯವಿಲ್ಲದಿರುವುದರಿಂದ ಈ ರಸ್ತೆಗೆ ವಾಣಿಜ್ಯ ಸಾಗಾಟದ ಮಹತ್ವವೇನೂ ಇಲ್ಲ. ಕೇವಲ ದಾರಿಯುದ್ದಕ್ಕೂ ಪ್ಲಾಸ್ಟಿಕ್, ಇತ್ಯಾದಿ ಕಸ ಎಸೆದು ಪರಿಸರ ಮಲಿನಗೊಳಿಸುತ್ತ ಧರ್ಮಸ್ಥಳ ತಲುಪಿ ಅಂತಿಮವಾಗಿ ಅಲ್ಲಿ ನದಿಯಲ್ಲಿ ತಮ್ಮ ಒಳಚಡ್ಡಿ ಬಿಸುಟು ತಮ್ಮ ಹರಕೆ ಪೂರೈಸಿದಂತೆ ಸಂತೃಪ್ತರಾಗುವ ಪರಮ ದೈವಭಕ್ತ ಪ್ರವಾಸಿಗರಿಗೆ ಅನುಕೂಲ ಮಾಡುವ ಸಲುವಾಗಿ ಎಷ್ಟೊಂದು ಮರಗಳ ಮಾರಣಹೋಮ! ಇವೆಲ್ಲವನ್ನು ಯೋಚಿಸಿ ಖಿನ್ನನಾಗುತ್ತಿರುವಾಗ ಈ ಯಾವ ‘ಅಭಿವೃದ್ಧಿ’ಗೂ ಅಡ್ಡಿಯಾಗದಂತೆ ಬದುಕಿದ್ದ ನನ್ನ/ನಮ್ಮ ಹಿರಿಯಜ್ಜನ ಈ ಮಹಾಕಾಯ ಮಣ್ಣಾಗುವುದನ್ನೇ ಎದುರುನೋಡುತ್ತ ಮಿಸುಕದೆ ಬಿಸಿಲಿನಲ್ಲಿ ಬಿದ್ದಿದೆ. ಅದರ ಎದುರು ಹಾದುಹೋಗುವಾಗ ಕಣ್ಣಿನಲ್ಲಿ ನೀರೂಡುತ್ತದೆ… ಪ್ರತಿ ವ್ಯಕ್ತಿಯೂ ಭೂಮಿ ಮತ್ತು ಅದರಲ್ಲಿನ ಸಕಲ ಜೀವಿಗಳೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಳ್ಳದೆ ಮನುಷ್ಯರಿಗೆ, ಭೂಮಿಗೆ, ಈ ಸೃಷ್ಟಿಗೆ, ಉಳಿಗಾಲವಿಲ್ಲ… ನಿರ್ಭಾವುಕ ಅಭಿವೃದ್ಧಿಶೀಲನಾಗಿರುವುದಕ್ಕಿಂತ ನೀವೆಲ್ಲ ಹಾಸ್ಯಮಾಡಬಹುದಾದ ಒಬ್ಬ ಭಾವುಕ ಮೂರ್ಖನಾಗಿಯೇ ಉಳಿಯಲು ನಾನು ಬಯಸುತ್ತೇನೆ…
Varadi Mahalmakki Ganesh Beuro News Avin Tv