ಕೆ.ಆರ್.ಪೇಟೆಯಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ..ಒಂದು ಕ್ವಿಂಟಾಲ್ ರಾಗಿಗೆ 3295/= ರೂ ಬೆಂಬಲ #avintvcom
1 min read
ಕೆ.ಆರ್.ಪೇಟೆಯಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ..ಒಂದು ಕ್ವಿಂಟಾಲ್ ರಾಗಿಗೆ 3295/= ರೂ ಬೆಂಬಲ ಬೆಲೆ ನಿಗಧಿ..ರೈತರು ರಾಗಿ ಖರೀದಿ ಕೇಂದ್ರಗಳಲ್ಲಿಯೇ ರಾಗಿ ಮಾರಾಟ ಮಾಡಲು ರಾಜ್ಯ ಸಹಕಾರ ಮಾರಾಟ ಮಹಾ ಮಂಡಲದ ನಿರ್ದೇಶಕ ಬಿ.ರಾಜೇಗೌಡ ಮನವಿ …
ಕೃಷ್ಣರಾಜಪೇಟೆ ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕರಾದ ಬಿ.ರಾಜೇಗೌಡ ರಾಗಿ ರಾಶಿಪೂಜೆ ಮಾಡುವ ಮೂಲಕ ಚಾಲನೆ ನೀಡಿದರು…
ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ರೈತ ಸಂಪರ್ಕ ಕೇಂದ್ರ, ಬೂಕನಕೆರೆ ರೈತ ಸಂಪರ್ಕ ಕೇಂದ್ರ, ಕೆ.ಆರ್.ಪೇಟೆ ಎಪಿಎಂಸಿ, ಕಿಕ್ಕೇರಿ ರೈತ ಸಂಪರ್ಕ ಕೇಂದ್ರ, ಸಂತೇಬಾಚಹಳ್ಳಿ ಗ್ರಾಮ ಪಂಚಾಯತಿ ಮತ್ತು ತೆಂಡೇಕೆರೆ ಗ್ರಾಮ ಪಂಚಾಯತಿಯಲ್ಲಿ ರೈತರು ತಮ್ಮ ಹೆಸರನ್ನು ಫ್ರೂಟ್ ಐಡಿಯನ್ನು ನೀಡಿ ಆನ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದ ರಾಜೇಗೌಡ ಕೇಂದ್ರ ಸರ್ಕಾರವು ನಿಗಧಿಪಡಿಸಿರುವಂತೆ ಪ್ರತೀ ಕ್ವಿಂಟಾಲ್ ರಾಗಿಗೆ 3295ರೂನಂತೆ ಖರೀದಿಸಲಾಗುವುದು. ರೈತರು ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ನೇರವಾಗಿ ತಾವು ಬೆಳೆದಿರುವ ರಾಗಿಯನ್ನು ವೈಜ್ಞಾನಿಕ ದರವನ್ನು ಪಡೆದುಕೊಂಡು ಮಾರಾಟ ಮಾಡಬಹುದಾಗಿದೆ. ರೈತರ ಬ್ಯಾಂಕ್ ಖಾತೆಗೆ ನೇರವಾಗಿ ರಾಜ್ಯ ಸಹಕಾರ ಮಾರಾಟ ಮಂಡಳಿಯು ಪಾವತಿಸುವುದರಿಂದ ರೈತ ಬಂಧುಗಳು ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ತಾಲ್ಲೂಕು ಆಡಳಿತವು ನಿಗಧಿಪಡಿಸಿರುವ ರಾಗಿ ಖರೀದಿ ಕೇಂದ್ರಗಳಲ್ಲಿಯೇ ಮಾರಾಟ ಮಾಡಬೇಕು ಎಂದು ರಾಜೇಗೌಡ ಮನವಿ ಮಾಡಿದರು.
ಕೃಷ್ಣರಾಜಪೇಟೆ ತಹಶೀಲ್ದಾರ್ ಎಂ. ಶಿವಮೂರ್ತಿ ಮಾತನಾಡಿ ಈವರೆಗೆ ತಾಲ್ಲೂಕಿನ 1630 ರೈತರು ತಮ್ಮ ಫ್ರೂಟ್ ಐಡಿಯನ್ನು ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈವರೆಗೆ 36566 ಕ್ವಿಂಟಾಲ್ ರಾಗಿಯ ನೋಂದಣಿಯಾಗಿದ್ದು ಕನಿಷ್ಢ ಒಂದು ಲಕ್ಷ ಕ್ವಿಂಟಾಲ್ ರಾಗಿಯು ಕೇಂದ್ರ ಸರ್ಕಾರವು ನಿಗಧಿಪಡಿಸಿರುವ 3295ರೂನಂತೆ ಖರೀದಿಯಾಗುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ ರೈತಬಾಂಧವರು ಯಾವುದೇ ದಳ್ಳಾಳಿಗಳು ಹಾಗೂ ಮಧ್ಯವರ್ತಿಗಳನ್ನು ಆಶ್ರಯಿಸದೇ ನೇರವಾಗಿ ಖರೀದಿ ಕೇಂದ್ರಕ್ಕೆ ಬಂದು ತಾವು ಬೆಳೆದಿರುವ ರಾಗಿಯನ್ನು ಮಾರಾಟ ಮಾಡಬೇಕು ಎಂದು ತಹಶೀಲ್ದಾರ್ ಶಿವಮೂರ್ತಿ ಮನವಿ ಮಾಡಿದರು ..
ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಶ್, ಎಪಿಎಂಸಿ ಕಾರ್ಯದರ್ಶಿ ಸೈಯ್ಯದ್ ರಫೀಕ್ ಅಹಮದ್, ರೈತ ಮುಖಂಡರಾದ ರಾಜೇಶ್, ನರಸಿಂಹಮೂರ್ತಿ, ಆಹಾರ ನಿರೀಕ್ಷಕರಾದ ಮಂಜುನಾಥ್, ರಾಜ್ಯ ಸಹಕಾರ ಮಾರಾಟ ಮಂಡಳಿಯ ಜಿಲ್ಲಾ ವ್ಯವಸ್ಥಾಪಕ ವೆಂಕಟೇಶ್ ಸೇರಿದಂತೆ ನೂರಾರು ರೈತಬಾಂಧವರು ರಾಗಿ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ.