ಮೊದಲ ಹಂತದ ಕೋವಿಡ್ ಲಸಿಕೆ ನೀಡಿಕೆಗೆ ಜಿಲ್ಲಾಡಳಿತ ಸರ್ವ ಸನ್ನದ್ಧ- ಎಸ್.ಆರ್. ಉಮಾಶಂಕರ್ #avintvcom
1 min read
ಕೋವಿಡ್ 19 ಲಸಿಕೆ ವಿತರಣೆ ತಾಲೀಮು ಯಶಸ್ವಿ
ಮೊದಲ ಹಂತದ ಕೋವಿಡ್ ಲಸಿಕೆ ನೀಡಿಕೆಗೆ ಜಿಲ್ಲಾಡಳಿತ ಸರ್ವ ಸನ್ನದ್ಧ- ಎಸ್.ಆರ್. ಉಮಾಶಂಕರ್
******
ದಾವಣಗೆರೆ ಜ. 08 (ಕರ್ನಾಟಕ ವಾರ್ತೆ):
ಕಳೆದ 10 ತಿಂಗಳಿನಿಂದಲೂ ಇಡೀ ಜಗತ್ತನ್ನು ಕಾಡುತ್ತಿರುವ ಕೋವಿಡ್-19 ವೈರಸ್ ಸೋಂಕು ರೋಗ ನಿಯಂತ್ರಣಕ್ಕಾಗಿ ತಯಾರಿಸಲಾಗಿರುವ ಲಸಿಕೆಯನ್ನು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಡಲು ಯೋಜಿಸಿದ್ದು, ಸರ್ಕಾರದ ನಿರ್ದೇಶನದಂತೆ ಇದಕ್ಕಾಗಿ ಜಿಲ್ಲೆಯ 06 ಆರೋಗ್ಯ ಸಂಸ್ಥೆಗಳಲ್ಲಿ ಲಸಿಕೆ ವಿತರಣೆ ತಾಲೀಮು ಶುಕ್ರವಾರದಂದು ಯಶಸ್ವಿಯಾಗಿ ನಡೆಸಲಾಯಿತು.
ದಾವಣಗೆರೆಯ ಬಾಷಾ ನಗರದ ನಗರ ಪ್ರಾಥಮಿಕ ಆರೋಗ್ಯ ಸಂಸ್ಥೆಯಲ್ಲಿ ನೈಜ ಲಸಿಕೆ ವಿತರಣೆ ಹೊರತುಪಡಿಸಿ, ಲಸಿಕೆ ವಿತರಣೆಯ ಉಳಿದೆಲ್ಲ ಪ್ರಕ್ರಿಯೆಗಳ ತಾಲೀಮು ಶುಕ್ರವಾರದಂದು ವ್ಯವಸ್ಥಿತವಾಗಿ ಜರುಗಿತು. ಈ ವೇಳೆ ದಾಖಲೆ ಪರಿಶೀಲನೆ, ಲಸಿಕೆ ಸಂಗ್ರಹ ವ್ಯವಸ್ಥೆ, ಸಂಗ್ರಹಗಾರದಿಂದ ಲಸಿಕೆ ಕೇಂದ್ರಕ್ಕೆ ಸಾಗಾಣಿಕೆ, ಲಸಿಕೆ ಪಡೆಯುವವರಿಗೆ ಅಣುಕು ಲಸಿಕೆ ನೀಡಿಕೆ ನಡೆಯಿತು. ಇಲ್ಲಿನ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ದೀಪಾ ಎ ಅವರಿಗೆ ಕೋವಿಡ್ ಲಸಿಕೆಯ ತಾಲೀಮು ನಡೆಸಿ, ಅವರ ಮೊಬೈಲ್ ಸಂಖ್ಯೆಯ ದಾಖಲು, ಬಳಿಕ ಮೊಬೈಲ್ಗೆ ಒಟಿಪಿ ಕಳುಹಿಸಿ, ಒಟಿಪಿ ಆಧಾರದಲ್ಲಿ ಮಾಹಿತಿ ದಾಖಲಿಸಿ, ಕೋವಿಡ್ ಲಸಿಕೆ ಮೊದಲ ಡೋಸ್ ವಿತರಣೆಯ ಅಣುಕು ತಾಲೀಮು ನಡೆಸಲಾಯಿತು. ಬಳಿಕ ನಿಗಾವಣೆ ಕೊಠಡಿಯಲ್ಲಿ 30 ನಿಮಿಷಗಳ ಕಾಲ ನಿಗಾದಲ್ಲಿರಿಸಿ, ಲಸಿಕೆ ಪಡೆದ ಬಳಿಕ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ಕರಪತ್ರ ನೀಡಿಕೆ. 28 ದಿನಗಳ ಬಳಿಕ ಎರಡನೆÉ ಡೋಸ್ ಪಡೆಯಲು ಅನುಸರಿಸಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸುವ ತಾಲೀಮು ಕೂಡ ನಡೆಸಲಾಯಿತು. ಈ ವೇಳೆ ಆರೋಗ್ಯ ಅಧಿಕಾರಿಗಳು, ವೈದ್ಯರು, ಲಸಿಕೆ ನೀಡುವ ಸಿಬ್ಬಂದಿ, ಶುಶ್ರೂಷಕರು, ಸಹಾಯಕ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಲಸಿಕೆ ದಾಸ್ತಾನು, ಸುರಕ್ಷತೆ ಗಮನಿಸುವುದು, ಲಸಿಕೆ ಪಡೆಯಲು ಒಳ ಬರಲು ಮತ್ತು ಹೊರ ಹೋಗಲು ಪ್ರತ್ಯೇಕ ಬಾಗಿಲು, ನಿಗಾವಣೆ ಕೊಠಡಿ ವ್ಯವಸ್ಥೆಯ ಪರಿಶೀಲನೆ ನಡೆಸಲಾಯಿತು.
ಲಸಿಕೆ ವಿತರಣೆ ಡ್ರೈರನ್ ವ್ಯವಸ್ಥೆಯನ್ನು ಪರಿಶೀಲಿಸಲು ಬಾಷಾ ನಗರದ ನಗರ ಪ್ರಾಥಮಿಕ ಆರೋಗ್ಯಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಖುದ್ದು ಭೇಟಿ ನೀಡಿದರು.