“ಚುಚ್ಚುಮಾತಿಗೆ ಎರಡು ಅಮಾಯಕ ಜೀವಗಳ ದುರಂತ ಅಂತ್ಯ : ಕಡೂರಿನಲ್ಲೊಂದು ಮನಕಲಕುವ ಘಟನೆ.”
1 min read
ಅವಿನ್ ಟಿವಿ ಸುದ್ದಿಜಾಲ : ಕಡೂರು ಆ 19: ಸಮಾಜದ ಚುಚ್ಚುಮಾತಿಗೆ ಇಬ್ಬರು ಅಮಾಯಕ ಜೀವಗಳು ಬಲಿಯಾಗಿರುವ ಅತ್ಯಂತ ಮನಕಲಕುವ ಘಟನೆ ಕಡೂರಿನಲ್ಲಿ ನಡೆದಿದೆ. ಬೆಂಗಳೂರು ಮೂಲದ ನವೀನ್ ಹಾಗೂ ಕುಣಿಗಲ್ ಮೂಲದ ರೋಹಿಣಿ ಎಂಬ ಯುವಕ-ಯುವತಿ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಕ್ತಸಂಬಂಧ ಇಲ್ಲದಿದ್ದರೂ ಅಕ್ಕ-ತಮ್ಮನಂತೆ ಅನ್ಯೋನ್ಯವಾಗಿದ್ದ ಇವರ ಪವಿತ್ರ ಬಾಂಧವ್ಯಕ್ಕೆ ಸಂಬಂಧಿಕರು ಹಾಗೂ ಸ್ನೇಹಿತರು ‘ಅಕ್ರಮ ಪ್ರೀತಿ’ಯ ಕಳಂಕ ಮೆತ್ತಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.

ಸಾವಿಗೂ ಮುನ್ನ ಇಬ್ಬರೂ ಜಂಟಿಯಾಗಿ ಬರೆದಿಟ್ಟಿರುವ ಡೆತ್ನೋಟ್ ಕಣ್ಣೀರು ತರಿಸುವಂತಿದ್ದು, ಜನರ ಕಲ್ಪಿತ ಕತೆಗಳಿಗೆ ನೊಂದು ಈ ನಿರ್ಧಾರಕ್ಕೆ ಬಂದಿರುವುದಾಗಿ ಉಲ್ಲೇಖಿಸಿದ್ದಾರೆ. “ನಾವು ರಕ್ತ ಹಂಚಿಕೊಂಡು ಹುಟ್ಟದಿದ್ದರೂ ಅಕ್ಕ-ತಮ್ಮನ ರೀತಿಯೇ ಇದ್ದೆವು. ಆದರೆ ನಮ್ಮ ಸಂಬಂಧವನ್ನು ಯಾರೂ ಅರ್ಥಮಾಡಿಕೊಳ್ಳಲಿಲ್ಲ, ಮನೆಯಲ್ಲೂ ಬೆಂಬಲ ಸಿಗಲಿಲ್ಲ. ನಮ್ಮ ಒಡನಾಟವನ್ನು ನೋಡಿ ಸಹಿಸದವರ ಚುಚ್ಚುಮಾತಿನಿಂದ ಬದುಕಲು ಸಾಧ್ಯವಾಗದೆ ಒಟ್ಟಿಗೆ ಸಾಯುತ್ತಿದ್ದೇವೆ. ಇನ್ನಾದರೂ ಎಲ್ಲರೂ ನೆಮ್ಮದಿಯಿಂದ ಇರಿ. ನಮ್ಮಿಬ್ಬರ ಅಂತ್ಯಕ್ರಿಯೆಯನ್ನು ಒಂದೇ ಕಡೆ, ಪಕ್ಕಪಕ್ಕದಲ್ಲೇ ಮಾಡಿ” ಎಂದು ಡೆತ್ನೋಟ್ನಲ್ಲಿ ತಮ್ಮ ಕೊನೆಯ ಆಸೆಯನ್ನು ಬಿಚ್ಚಿಟ್ಟಿದ್ದಾರೆ.
ಬೆಳೆದು ನಿಂತಿದ್ದ ಮಕ್ಕಳನ್ನು ಸಮಾಜದ ಅಪಪ್ರಚಾರಕ್ಕೆ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಘಟನೆ ಸಂಬಂಧ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಶಪಡಿಸಿಕೊಂಡಿರುವ ಡೆತ್ನೋಟ್ ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ
ಯಾವುದೇ ಸಂಬಂಧವನ್ನು ಪೂರ್ವಗ್ರಹದಿಂದ ನೋಡುವ ಬದಲು, ವ್ಯಕ್ತಿಗಳ ಗೌರವ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ ಎಂಬ ಸಂದೇಶವನ್ನೂ ಈ ಘಟನೆ ಮೂಡಿಸಿದೆ.
••••••••••••
✍ಬರಹ ಕೃಪೆ.✍

ಡಿ.ಎಂ.ಮಂಜುನಾಥಸ್ವಾಮಿ.
ಅವಿನ್ ಟಿವಿ ಸುದ್ದಿಜಾಲ.
ಚಿಕ್ಕಮಗಳೂರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

