ಸರ್ಫೇಸಿಕಾಯ್ದೆ: ಕಾಫಿ ತೋಟ ಹರಾಜು ಸ್ಥಗಿತಕ್ಕೆ ಭರವಸೆ
1 min read
ಚಿಕ್ಕಮಗಳೂರು:ಸರ್ಫೇಸಿ ಕಾಯ್ದೆ ಬಳಸಿ ಕಾಫಿ ತೋಟಗಳ ಹರಾಜು ಮಾಡದಂತೆ ತಮ್ಮ ಬ್ಯಾಂಕ್ ಶಾಖೆಗಳಿಗೆ ಈ ತಕ್ಷಣವೇ ನಿರ್ದೇಶನ ನೀಡುವುದಾಗಿ ಕೆನರಾ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಹರ್ದೀಪ್ ಸಿಂಗ್ ಅಲುವಾಲಿಯಾ ಕಾಫಿ ಮಂಡಳಿಗೆ ಭರವಸೆ ನೀಡಿದ್ದಾರೆ.
ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜಿ. ದಿನೇಶ್ ಮತ್ತು ಕಾಫಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೂರ್ಮಾರಾವ್ ಅವರು ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸಿದಾಗ ಮುಂದಿನ ದಿನಗಳಲ್ಲಿ ಒನ್ ಟೈಂ ಸೆಟ್ಲ್ಮೆಂಟ್ಗೆ ಉತ್ತಮ ರಿಯಾಯಿತಿ ನೀಡುವುದಾಗಿ ಭರವಸೆ ನೀಡಿದರು.
ಬ್ಯಾಂಕ್ ಸಾಲ ಮರು ಪಾವತಿಸಲು ವಿಫಲರಾದ ಖಾತೆದಾರರ ಆಸ್ತಿ ಹರಾಜು ಪ್ರಕ್ರಿಯೆ ಮುಂದುವರಿಸಿದ್ದ ಕೆನರಾ ಬ್ಯಾಂಕ್ನ ಈ ನೀತಿಯಿಂದಾಗಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಕಾಫಿ ಮಂಡಳಿ ಅಧ್ಯಕ್ಷರು, ಜುಲೈ 15 ರಂದು ಕೆನರಾ ಬ್ಯಾಂಕ್ ಮುಖ್ಯ ಕಚೇರಿಗೆ ತೆರಳಿ ವ್ಯವಸ್ಥಾಪಕ ನಿರ್ದೇಶಕರನ್ನೇ ಭೇಟಿ ಮಾಡಿ ಪ್ರತಿ ಹಂತದಲ್ಲಿಯೂ ಸಂಕಷ್ಟದ ಕೃಷಿ ಜೀವನ ಎದುರಿಸುತ್ತಿರುವ ಕಾಫಿ ಬೆಳೆಗಾರರ ಬ್ಯಾಂಕ್ ಸಾಲ ಮರುಪಾವತಿ ವಿಳಂಬದ ಖಾತೆದಾರರ ತೋಟಗಳನ್ನು ಸರ್ಫೇಸಿ ಕಾಯ್ದೆ ಬಳಸಿ ಹರಾಜು ನಡೆಸುತ್ತಿರುವ ಕೆನರಾ ಬ್ಯಾಂಕ್ ವ್ಯವಸ್ಥೆಯನ್ನು ಸರಿಪಡಿಸುವಂತೆ ಮತ್ತು ಹರಾಜು ಪ್ರಕ್ರಿಯೆ ನಿಲ್ಲಿಸುವಂತೆ ಮನವಿ ಮಾಡಿದರು.
ಹವಾಮಾನ ವೈಪರೀತ್ಯ, ಕೀಟ ಬಾಧೆ, ಕಾರ್ಮಿಕರ ಸಮಸ್ಯೆ ಹಾಗೂ ಬೆಲೆ ಏರಿಕೆಯಿಂದ ಬೆಳೆಗಾರರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಮನವಿ ಮಾಡಿಕೊಟ್ಟು, ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಕಾಫಿ ತೋಟಗಳನ್ನು ಹರಾಜು ಮಾಡದಂತೆ ಕ್ರಮ ವಹಿಸಬೇಕು ಮತ್ತು ಒನ್ ಟೈಂ ಸೆಟ್ಲ್ಮೆಂಟ್ಗೆ ಅವಕಾಶ ನೀಡುವಂತೆ ಕೋರಿದರು.
ಮನವಿಗೆ ಸ್ಪಂದಿಸಿದ ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಹರ್ದೀಪ್ ಸಿಂಗ್ ಅಲುವಾಲಿಯಾ ಅವರು, ಕಾಫಿ ತೋಟಗಳ ಹರಾಜು ಮಾಡದಂತೆ ನಮ್ಮ ಬ್ಯಾಂಕ್ನ ಎಲ್ಲಾ ಶಾಖೆಗಳಿಗೆ ತಕ್ಷಣ ನಿರ್ದೇಶನ ನೀಡಲಾಗುವುದು. ಮುಂದಿನ ದಿನಗಳಲ್ಲಿ ಒನ್ ಟೈಂ ಸೆಟ್ಲ್ಮೆಂಟ್ಗೆ ಉತ್ತಮ ರಿಯಾಯಿತಿ ನೀಡುವ ಮೂಲಕ ದಿನ ನಿಗದಿಪಡಿಸಿ ಬೆಳೆಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುವುದು ಎನ್ನುವ ಭರವಸೆ ನೀಡಿದರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

