ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಕಕ್ಕೆ ಆಗ್ರಹ…
1 min read
ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಕಕ್ಕೆ ಆಗ್ರಹ.
ಮೂಡಿಗೆರೆ: ಪಟ್ಟಣ ವ್ಯಾಪ್ತಿಯಲ್ಲಿ ವಾಹನ ದಟ್ಟಣಿ ಹಾಗೂ ಪೊಲೀಸ್ ಸಿಬ್ಬಂದಿ ಕೊರತೆಯಿಂದಾಗಿ ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆ ಅಧಿಕಗೊಳ್ಳುತ್ತಲ್ಲೇ ಇದೆ. ವಾಹನಗಳ ಸಂಚಾರಕ್ಕೆ ಬಾರಿ ತೊಂದರೆ ಉಂಟಾಗುತ್ತಿದೆ. ಪಾದಾಚಾರಿಗಳಿಗೂ ರಸ್ತೆ ದಾಟಲು ಕಷ್ಟವಾಗುತ್ತಿದೆ.
ಹಾಗಾಗಿ ಕನಿಷ್ಟ 10 ಮಂದಿ ಹೆಚ್ಚುವರಿ ಸಿಬ್ಬಂದಿ ಟ್ರಾಫಿಕ್ ನಿಯಂತ್ರಣಕ್ಕೆ ನೇಮಕಗೊಳಿಸಿ ಟ್ರಾಫಿಕ್ ಸಮಸ್ಯೆ ಬಗೆಹರಿಸಬೇಕೆಂದು ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಎಂ. ಎಚ್.ಅಮರ್ನಾಥ್ ಆಗ್ರಹಿಸಿದರು.
ಮಂಗಳವಾರ ವಾಹಿನಿಯೊಂದಿಗೆ ಮಾತನಾಡಿ, ತಾಲೂಕಿನಲ್ಲಿ ವಾಹನಗಳ ಸಂಖ್ಯೆ ಅಧಿಕಗೊಳ್ಳುತ್ತಿದೆ. ಪಟ್ಟಣದ ಕೆ.ಎಂ. ರಸ್ತೆ ಸೇರಿದಂತೆ ಬಹುತೇಕ ಎಲ್ಲಾ ರಸ್ತೆಗಳು ಕಿರಿದಾಗಿದ್ದರಿಂದ ಪ್ರತಿನಿತ್ಯ ವಾಹನಗಳ ಸಂಚಾರ ಹಾಗೂ ಪಾರ್ಕಿಂಗ್ಗೆ ತೀವ್ರ ರೀತಿಯಲ್ಲಿ ತೊಂದರೆ ಎದುರಾಗಿದೆ. ಅಲ್ಲದೇ ಪಟ್ಟಣದಲ್ಲಿ ಏಕಮುಖ ಸಂಚಾರ ರಸ್ತೆಗಳಲ್ಲಿ ನಾಮ ಫಲಕಗಳನ್ನು ಸಮರ್ಪಕವಾಗಿ ಅಳವಡಿಸದ ಕಾರಣ, ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದರು.
ಅಲ್ಲದೇ ಪಟ್ಟಣದ ಬಹುತೇಕ ರಸ್ತೆಗಳಲ್ಲಿ ಆಗಾಗ ಅಪ್ರಾಪ್ತರು ವಾಹನ ಚಲಾಯಿಸುವುದು, ವೀಲಿಂಗ್
ಮಾಡುವುದು ಕಂಡು ಬರುತ್ತಿದೆ ಎಂದು ದೂರಿದರು. ಇಲ್ಲಿನ ಪ.ಪಂ. ವ್ಯಾಪ್ತಿಯ ಬಹುತೇಕ ಎಲ್ಲಾ ರಸ್ತೆಗಳು ಕಿರಿದಾಗಿವೆ. ಇಲ್ಲಿ ವಾಸವಿರುವ ಜನರು ಸಾರ್ವಜನಿಕರ ರಸ್ತೆಯನ್ನು ಅಕ್ರಮವಾಗಿ ಪಾರ್ಕಿಂಗ್ ಸ್ಥಳಗಳನ್ನಾಗಿ ಪರಿವರ್ತಿಸಿಕೊಂಡು ವಾರಗಟ್ಟಲೆ ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ ಎಂದರು..
ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ವಹಿಸದೇ ಇರುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಹಾಗಾಗಿ ಅಪ್ರಾಪ್ತರು ವಾಹನ ಚಲಾಯಿಸದಂತೆ ಹಾಗೂ ಸಾರ್ವಜನಿಕ ರಸ್ತೆಯನ್ನೇ ನಿಲುಗಡೆ ತಾಣವನ್ನಾಗಿ ಪರಿವರ್ತಿಸಿಕೊಂಡಿರುವ ವಾಹನ ಮಾಲೀಕರ ಮೇಲೆ ಸೂಕ್ತ ಕ್ರಮ ವಹಿಸಬೇಕು. ಜತೆಗೆ ಕನಿಷ್ಟ 10 ಮಂದಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಅಥವಾ ಗೃಹ ರಕ್ಷಕದಳ ಸಿಬ್ಬಂದಿ ನೇಮಿಸಿ ಟ್ರಾಫಿಕ್ ಸಮಸ್ಯೆ ಬಗೆಹರಿಸಬೇಕೆಂದು ಜಿಲ್ಲಾ ವರಿಷ್ಟಾಧಿಕಾರಿಳಿಗೆ ಒತ್ತಾಯಿಸಿದರು.