ಅರಿವನ್ನು ವಿಸ್ತರಿಸುವ ಜಾಗತಿಕ ಸಿನಿಮಾ ವೀಕ್ಷಣೆ……
1 min read
ಅರಿವನ್ನು ವಿಸ್ತರಿಸುವ ಜಾಗತಿಕ ಸಿನಿಮಾ ವೀಕ್ಷಣೆ
ತೇಜಸ್ವಿ ಪ್ರತಿಷ್ಠಾನದಲ್ಲಿ ಮೂಡಿಗೆರೆ ಸಿನಿಮಾಹಬ್ಬ
ಕೊಟ್ಟಿಗೆಹಾರ:ಜಾಗತಿಕ ಸಿನಿಮಾಗಳ ವೀಕ್ಷಣೆಯಿಂದ ಅರಿವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ಐವಾನ್ ಡಿಸಿಲ್ವಾ ಹೇಳಿದರು.
ಮನುಜಮತ ಸಿನಿಯಾನ ಮತ್ತು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ಎರಡು ದಿನಗಳ ಕಾಲ ನಡೆದ ಮೂಡಿಗೆರೆ ಸಿನಿಮಾಹಬ್ಬದಲ್ಲಿ ಭಾಗವಹಿಸಿ ಮಾತನಾಡಿದರು.
ಮನುಜಮತ ಸಿನಿಯಾನ ೨೦೧೬ ರಲ್ಲಿ ಜಾಗತಿಕ ಸಿನಿಮಾಗಳ ವೀಕ್ಷಣೆ ಮತ್ತು ಸಂವಾದಕ್ಕಾಗಿ ಹುಟ್ಟಿಕೊಂಡ ಸಿನಿಮಾಸಕ್ತರ ತಂಡ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸ್ಥಳೀಯ ಸಿನಿಮಾಸಕ್ತರೊಂದಿಗೆ ಸೇರಿಕೊಂಡು ಎರಡು ದಿನಗಳ ನಿರ್ದಿಷ್ಟ ವಿಷಯಾಧಾರಿತ ಸಿನಿಮಾ ಹಬ್ಬಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ದೇಶೀಯ, ಅಂತರಾಷ್ಟೀಯ ಸಿನಿಮಾಗಳ ವೀಕ್ಷಣೆ, ಚರ್ಚೆ ಮತ್ತು ಸಂವಾದವನ್ನು ಏರ್ಪಡಿಸುವುದು, ಈ ಮೂಲಕ ಪ್ರಜ್ಞಾವಂತ ಪ್ರಬುದ್ದ ಸಿನಿಮಾ ವೀಕ್ಷಕರನ್ನು ಸೃಷ್ಟಿಸುವುದು ಮನುಜಮತ ಸಿನಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ಪ್ರದೀಪ್ ಕೆಂಜಿಗೆ ಮಾತನಾಡಿ, ಸಿನಿಮಾ ಮತ್ತು ನಾಟಕ ಮುಂತಾದ ಚಟುವಟಿಕೆಗಳಿಗೆ ಪೂರಕವಾಗಿರುವ ಸಭಾಂಗಣ ಮತ್ತು ವಸತಿಗೃಹ ನಿರ್ಮಾಣವಾಗುತ್ತಿದ್ದು ಕೆಲ ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಸಿನಿಮಾ ಪ್ರದರ್ಶನ, ನಾಟಕ, ವಿಚಾರ ಸಂಕಿರಣ, ಸಂವಾದ, ಕಾರ್ಯಾಗಾರಗಳು ನಿರಂತರವಾಗಿ ನಡೆಯಲಿದೆ ಎಂದರು.
ವನ್ಯಜೀವಿ ಛಾಯಾಗ್ರಾಹಕ ಡಾ.ಲೋಕೇಶ್ ಮೊಸಳೆ ಅವರಿಂದ ಸಿನಿಮಾದಲ್ಲಿ ಧ್ವನಿ ಬೆಳಕು, ಸಿನಿಮಾಟೋಗ್ರಫಿ ಕುರಿತ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನಡೆಯಿತು. ಅಬ್ಬಾಸ್ ಅಮೀನಿ ನಿರ್ದೇಶನದ ಎಂಡ್ ಲೆಸ್ ಬಾಡರ್ಸ್, ಇಂಗ್ಮರ್ ಬರ್ಗ್ ಮೆನ್ ನಿರ್ದೇಶನದ ಶೇಮ್, ಎಲೆಮ್ ಕ್ಲಿಮೋವ್ ನಿರ್ದೇಶನದ ಕಮ್ ಆಂಡ್ ಸೀ ಸಿನಿಮಾ ಹಾಗೂ ಯುವಲ್ ಅವ್ರಹಾಮ್, ಬಾಸೆಲ್ ಅಡ್ರಾ ಮತ್ತು ಹಂದಾನ್ ಬಳ್ಳಾಲ್ ನಿರ್ದೇಶನದ ನೋ ಅದರ್ ಲ್ಯಾಂಡ್ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.
ಕಲಾವಿದ ಮತ್ತು ತೇಜಸ್ವಿ ಒಡನಾಡಿ ಬಾಪು ದಿನೇಶ್ ಮಾತನಾಡಿ, ಅಂತರಾಷ್ಟೀಯ ಸಿನಿಮಾಗಳ ವೀಕ್ಷಣೆಯಿಂದ ಆ ನೆಲದ ಜನಜೀವನ, ಸಂಕಷ್ಟ, ರಾಜಕೀಯದ ಚಿತ್ರಣ ನೋಡುಗರ ಎದೆಗೆ ದಾಟುತ್ತದೆ. ಸಿನಿಮಾ ಪರಿಣಾಮಕಾರಿ ಮಾಧ್ಯಮವಾಗಿದ್ದು ಹೊಸ ನೋಟವನ್ನು ನೀಡುತ್ತದೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ವಿಷ್ಣುಕುಮಾರ್, ದೇಶಾದ್ರಿ ಹೊಸಮನಿ, ಶಿವಮೊಗ್ಗ ಜಿಲ್ಲಾ ವಾರ್ತಾಧಿಕಾರಿ ಭಾಗ್ಯ ಕೆ.ಟಿ, ಕುವೆಂಪು ಭಾಷಾಪ್ರಾಧಿಕಾರದ ಸದಸ್ಯರಾದ ಭಾರತಿ ದೇವಿ, ಸಾಹಿತಿ ಹಾಗೂ ಸಿನಿಮಾ ಚಿತ್ರಕಥಾಕಾರರಾದ ಶಿಲ್ಪ ಕೆ.ಆರ್, ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿಗಳಾದ ಸತೀಶ್ ತರುವೆ, ಸಂಗೀತಾ, ಕೀಟ ತಜ್ಞರಾದ ಡಾ.ಅವಿನಾಶ್, ಲೇಖಕ ಪೂರ್ಣೇಶ್ ಮತ್ತಾವರ ಮುಂತಾದವರು ಇದ್ದರು.