ಇದು ಎದೆಯ ದುಗುಡದ ಭಾಷಾ ಬನಿ ಕುರಿತು ಅವಿನ್ ಟಿವಿ ಸುದ್ದಿಜಾಲದ ಮಾತು ✒️:*
1 min read
*ಇದು ಎದೆಯ ದುಗುಡದ ಭಾಷಾ ಬನಿ ಕುರಿತು ಅವಿನ್ ಟಿವಿ ಸುದ್ದಿಜಾಲದ ಮಾತು ✒️:*
ತಾಯಿಯನ್ನು ತಾಯಿ ಭಾಷೆಯನ್ನು ಬದಲಿಸಲು ಸಾಧ್ಯವಿಲ್ಲ. ನಾವು ನಮ್ಮ ನಮ್ಮ ಮಾತೃಭಾಷೆಯೊಳಗೆಯೇ ಅಂದರೆ ತಾಯಿಭಾಷೆಯೊಳಗೆಯೆ ಅಡಗಿರಬೇಕು, ಅಡಗಿ ಕುಳಿತುಕೊಳ್ಳಬೇಕು. ತಾಯಿಯ ನಂತರ ನಮಗೆ ತಾಯಿಯಷ್ಟೇ ಸಮೀಪವಾಗಿರುವುದು ನಮ್ಮ ಮಾತೃಭಾಷೆ.
ಹಾಗಾಗಿ,
ಭಾಷೆ ಎಂದರೆ ಅದೊಂದು ಜೀವನ ವಿಧಾನ ಮತ್ತು ಭಾವನಾ ವಿಧಾನ ಈ ಎರಡೂ ಆಗಿದೆ. ಈ ಕಾರಣದಿಂದ ನಮ್ಮ ನಮ್ಮ ಮಾತೃಭಾಷೆ ನಮ್ಮತನದ ಪ್ರತೀಕವಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಚಿಂತನೆಗಳು ಹೊರಹೊಮ್ಮಬೇಕು.
ಮಾನವನ ಆಲೋಚನೆಗಳು, ಆತನೊಳಗಿರುವ/ ಆಕೆಯೊಳಗಿರುವ ಚಿಂತನೆಗಳು ಇಂದು ಅಗಾಧವಾಗಿ ಬೆಳೆದು ನಿಂತಿದ್ದಾವೆ. ಈಗ ಈ ಭೂಮಿಯ ಮೇಲಿರುವ ಚಿಂತನೆಯ ಪ್ರಮಾಣ ಆಕಾಶದಲ್ಲಿರುವ ನಕ್ಷತ್ರಗಳಿಗಿಂತ ಅಗಾಧವಾಗಿವೆ. ಪ್ರತಿನಿತ್ಯ ಅದರ ಪ್ರಮಾಣ ತೀವ್ರ ಗತಿಯಲ್ಲಿ ಬೆಳೆಯುತ್ತಿದೆ.
ಹೀಗೆ ಚಿಂತನೆಗಳು ಆಲೋಚನೆಗಳು ತೀವ್ರ ಗತಿಯಲ್ಲಿ ಬೆಳೆಯಲು ಮೂಲ ಕಾರಣ ಭಾಷೆಯೇ ಆಗಿದೆ.
ಈ ಕಾರಣಕ್ಕಾಗಿ ಭಾಷೆಯ ವಿಚಾರ ಬಂದಾಗ ಈ ಮನುಷ್ಯ ಜಾತಿ ತೀರ ಭಾವುಕವಾಗಿ ಮಾತನಾಡುತ್ತದೆ. ಈ ಭಾವುಕತೆ ಅತಿರೇಕಕ್ಕೆ ಹೋದಾಗ ಕೆಲವು ಮನುಷ್ಯರು ಸಹೋದರ ಭಾಷೆಗೂ ಹಾಗೂ ತಾಯಿ ಭಾಷೆಗೂ ಇರುವ ವ್ಯತ್ಯಾಸ ಗೊತ್ತಿಲ್ಲದೆ ಭಾವುಕತೆಯೊಂದಿಗೆ ವಿವೇಕ ರಹಿತವಾದ ತಮ್ಮ ಮಾತುಗಳನ್ನು ದಾಖಲಿಸಲು ಹೋಗಿ ನಗೆ ಪಾಟಿಲಿಗೀಡಾಗುತ್ತಾರೆ.
ಕನ್ನಡಿಗರು ಒಪ್ಪಿಕೊಂಡಿದ್ದ ತಮಿಳಿನ ಪ್ರತಿಭಾವಂತ ನಟ ಕಮಲ್ ಹಾಸನ್ ಅವರು , ಕನ್ನಡ ಮತ್ತು ತಮಿಳು ಭಾಷೆಯ ಕುರಿತಾಗಿ ತಮ್ಮ ಭಾವುಕ ಮಾತುಗಳಿಂದ ಅವರ ವ್ಯಕ್ತಿತ್ವಕ್ಕೆ ಅವರೇ ಧಕ್ಕೆ ತಂದುಕೊಂಡಿರುವುದು ವಿಷಾದನೀಯ ಸಂಗತಿಯಾಗಿದೆ. ಕನ್ನಡಿಗರನ್ನು ಕ್ಷಮೆಕೇಳಿ ತನ್ನ ತಪ್ಪನ್ನು ತಾನು ಆದಷ್ಟು ಬೇಗ ಅರಿತುಕೊಳ್ಳುವುದು ತುರ್ತಾಗಿದೆ.
ಹಾಗಾಗಿ,
ಭಾಷೆಯ ವಿಚಾರ ಬಂದಾಗ ಭಾವೋದ್ವೇಗವಾಗದೆ, ವಿವೇಕ ಮತ್ತು ಪ್ರಜ್ಞೆಯೊಂದಿಗೆ ಕಿಚ್ಚಿನಿಂದ ಮಾತನಾಡೋಣ. ಕನ್ನಡ ನೆಲಕ್ಕೆ, ಕನ್ನಡ ಪರಂಪರೆಗೆ ಧಕ್ಕೆಯಾದಾಗ ಧ್ವನಿಮಾಡಿ ಧ್ವನಿತಗೊಳೋಣ. ತಾಯಿ ಭಾಷೆಯನ್ನು ಪ್ರೀತಿಸೋಣ, ಇತರೆ ಎಲ್ಲ ಭಾಷೆಗಳನ್ನು ಗೌರವಿಸೋಣ, ಭಾಷಾ ವೈವಿಧ್ಯತೆಯ ಶ್ರೀಮಂತಿಕೆಯನ್ನು ಎತ್ತಿ ಹಿಡಿಯೋಣ.
ಭಾಷೆ ಕುರಿತು ನಮ್ಮ ಆಲೋಚನಾ ವಿಧಾನ, ಸಂವೇದನ ಸ್ವರೂಪ, ಚಿಂತನ ವೈಖರಿ ಇತರ ಎಲ್ಲ ಭಾಷೆಗಳಿಗೆ ಮಾದರಿಯಾಗಿರಲಿ.
•••••••••••••••✒️
ಡಿ.ಎಂ. ಮಂಜುನಾಥಸ್ವಾಮಿ
ಚಿಕ್ಕಮಗಳೂರು