ಇರಬೇಕು ಇರುವಂತೆ* *ತೊರೆದು ಸಾವಿರ ಚಿಂತೆ* *ಮಳೆ ಸುರಿಸಿ ಹಗುರಾದ* *ಮುಗಿಲಿನಂತೆ..!*
1 min read
ಅವಿನ್ ಟಿವಿ ಸುದ್ದಿಜಾಲ ✒️:
*ಇರಬೇಕು ಇರುವಂತೆ*
*ತೊರೆದು ಸಾವಿರ ಚಿಂತೆ*
*ಮಳೆ ಸುರಿಸಿ ಹಗುರಾದ*
*ಮುಗಿಲಿನಂತೆ..!*
*ಊರ ಸೇರಬಹುದೇ ನೀನು ದಾರಿ ಮುಗಿಯದೆ…*
ಇಂತಹ ಹಲವಾರು ಮನೋಜ್ಞ ಸಾಲುಗಳನ್ನು ಬರೆದು, ತನ್ನ ಈ ಬರವಣಿಗೆಯ ಮೂಲಕ ಅ ಎಲ್ಲಾ ಬರವಣಿಗೆಗೊಂದು ಘನತೆ, ತೇಜಸ್ಸು,ಜನಪ್ರಿಯತೆ ತಂದುಕೊಟ್ಟು, ಕನ್ನಡ ಕಾವ್ಯ ಲೋಕ ಹಿಗ್ಗಿಸಿ, ಗದ್ಯ ಪ್ರಕಾರಗಳನ್ನು ಕೃಷಿ ಮಾಡಿ, ಭಾವಗೀತೆಗಳ ಕಣಜ ವಿಸ್ತರಿಸಿದ ಪ್ರೀತಿಯ ಮೇಷ್ಟ್ರು, ಈ ನೆಲದ ಹಿರಿಯ ಕವಿ ಡಾ. ಹೆಚ್. ಎಸ್. ವೆಂಕಟೇಶ್ ಮೂರ್ತಿಯವರು ಇನ್ನಿಲ್ಲ.
ಇಂದು ಬೆಳಿಗ್ಗೆ ಅನಾರೋಗ್ಯದ ಕಾರಣ ಬೆಂಗಳೂರಿನ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
81ರ ವಯೋಮಾನದ ಡಾ. ಹೆಚ್. ಎಸ್. ವಿ ಅವರು ಈಗಿನ ವಿಭಜಿತ ದಾವಣಗೆರೆ ಜಿಲ್ಲೆ (ಅಂದಿನ ಶಿವಮೊಗ್ಗ ಜಿಲ್ಲೆ )ಚೆನ್ನಗಿರಿ ತಾಲೂಕಿನ ಹೊದ್ದಿಗೆರೆ ಗ್ರಾಮದಲ್ಲಿ 1944 ಜೂನ್ 23 ರಂದು ಜನಿಸಿದ್ದರು.ಇಂದು 30 ಮೇ 2025ರಂದು ತಮ್ಮ ಕಾವ್ಯಮಯವಾದ ಬದುಕಿಗೆ ವಿದಾಯ ಹೇಳಿ ಚಿರ ನಿದ್ರೆಗೆ ಜಾರಿದ್ದಾರೆ.
ಡಿಪ್ಲೋಮೋ ಇಂಜಿನಿಯರ್ ಓದಿ,ಸಾಹಿತ್ಯದ ಒಲವು ತನ್ನೊಳಗೆ ಹೆಚ್ಚಿಗಿದ್ದಾ ಕಾರಣ, ಮುಂದೆ ಅಧ್ಯಾಪಕರಾಗಿ ಸಾಹಿತಿಯಾಗಿ ಕವಿತೆ ಕವಿಯಾಗಿ ಕನ್ನಡಿಗರ ಜೀವನೋತ್ಸಾಹವನ್ನು ಹೆಚ್ಚಿಸಿದವರು ಡಾ. ಹೆಚ್. ಎಸ್. ವೆಂಕಟೇಶ ಮೂರ್ತಿಯವರು, ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸುಮಾರು 30 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಕನ್ನಡದಲ್ಲಿ ಕಥನ ಕವನಗಳು ಎಂಬ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿಯನ್ನು ಸಹ ಗಳಿಸಿದ್ದರು.
ಪೌರಾಣಿಕ ಪ್ರತಿಮೆಗಳನ್ನು ಆಧುನಿಕತೆಗೆ ಒಗ್ಗಿಸಿ ಬರೆಯುವ ಅವರ ಶೈಲಿ ಎಲ್ಲರನ್ನು ಸಮೂಹನಗೊಳಿಸಿದೆ.
ಕಾವ್ಯಕ್ಕೆ ಬೇಕಾದ ಲಯ, ರೂಪಕ ಶಕ್ತಿ, ಕಾರ್ಯಕರ್ತವ ಕಲೆ ಮತ್ತು ವಸ್ತುವನ್ನು ಬಳಸುವ ಅವರ ವಿನ್ಯಾಸದ ಬರಹದ ವಿಸ್ತಾರ ಅತಿ ದೊಡ್ಡದು.
ಕವಿತೆ,ನಾಟಕ, ಪ್ರಬಂಧ,ಕಾದಂಬರಿ,ಮಕ್ಕಳ ಸಾಹಿತ್ಯ, ಅನುವಾದ ವಿಮರ್ಶೆ, ಹಳೆಗನ್ನಡ ಇತ್ಯಾದಿ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಹಿತ್ಯದ ಕೃಷಿಯನ್ನು ಕನ್ನಡಿಗರೆಲ್ಲರೂ ನೆನಪಿಟ್ಟುಕೊಳ್ಳಬೇಕಾದ ಸಂಗತಿಯಾಗಿದೆ.
ಕನ್ನಡ ಸಾಹಿತ್ಯ ಲೋಕಕ್ಕೆ ನೂರಕ್ಕೂ ಹೆಚ್ಚು ಕೃತಿ ನೀಡಿ, ವಿಶೇಷವಾಗಿ ಭಾವಗೀತೆಯ ಕವಿ ಎಂದೇ ಪ್ರಸಿದ್ಧಿ ಪಡೆದಿದ್ದ ಡಾ. ಹೆಚ್. ಎಸ್. ವಿ ಅವರು ಕಲ್ಬುರ್ಗಿಯಲ್ಲಿ ನಡೆದ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಭಾಜನರಾಗಿದ್ದರು.
ವಿಶೇಷವಾಗಿ ಕನ್ನಡ ಸಾರಸತ್ವ ಲೋಕದೊಳಗೆ ಭಾವಗೀತೆಯ ಮೂಲಕ ಜೀವಂತ ಕವಿತೆಗಳಿಗೆ ಜನ್ಮ ನೀಡಿದ ವೆಂಕಟೇಶ್ ಮೂರ್ತಿಯವರು ತಮ್ಮ ಕವಿತೆಗಳ ಮೂಲಕ ಸದಾಕಾಲ ಜೀವಂತವಾಗಿರುತ್ತಾರೆ ಎಂಬುದನ್ನು ಎಲ್ಲರೂ ಒಪ್ಪಬೇಕಾಗಿದೆ.
ಹಾಗಾಗಿ,ಕನ್ನಡ ಸಾಹಿತ್ಯ ಲೋಕದಲ್ಲಿ ನೀವು ಸದಾ ಜೀವಂತವಾಗಿ ಹೊಸ ಹೊಸದಾಗಿ ಅರಳುತ್ತಲೇ ಇರುತ್ತೀರಿ.
ಹೋಗಿ ಬನ್ನಿ ಸಾರ್…
ನಿಮಗಿದೂ ಅವಿನ್ ಟಿವಿ ಸುದ್ದಿಜಾಲದ ಓದುಗರೆಲ್ಲರ ಪರವಾಗಿ ನಮ್ಮ ಅಂತಿಮ ನಮನ. ಭಾವಪೂರ್ಣ ಸಂತಾಪಗಳು 🙏🌹🙏
•••••••••••••••••••
ಡಿ. ಎಂ. ಮಂಜುನಾಥಸ್ವಾಮಿ
ಚಿಕ್ಕಮಗಳೂರು