ಸನ್ಮಾನ್ಯ ದೇವೇಗೌಡರು 92 ವರ್ಷಗಳನ್ನು ಕಳೆದು ಇಂದು 93ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
1 min readಅವಿನ್ ಟಿವಿ ಸುದ್ದಿ ಜಾಲ..
ಕನ್ನಡಿಗರೊಬ್ಬರು, ಅದರಲ್ಲೂ ರೈತನ ಮಗನೊಬ್ಬ ಈ ದೇಶದ ಪ್ರಧಾನಿಯಾಗಿದ್ದಕ್ಕೆ ಸದಾ ಕಾಲ ನಾವೆಲ್ಲರೂ ಹೆಮ್ಮೆ ಪಡಬೇಕು. ಸನ್ಮಾನ್ಯ ದೇವೇಗೌಡರು 92 ವರ್ಷಗಳನ್ನು ಕಳೆದು ಇಂದು 93ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಆರು ದಶಕಗಳಿಗೂ ಹೆಚ್ಚು ಸುದೀರ್ಘವಾದ ರಾಜಕೀಯ ಇತಿಹಾಸ ಸನ್ಮಾನ್ಯ ದೇವೇಗೌಡರ ಬದುಕಿನೊಳಗೆ ಇದೆ. ಅವರದೊಂದು ಅವಿರತವಾದ ಹೋರಾಟ, ಈ ಹೋರಾಟದಲ್ಲಿ ಹಲವಾರು ಏಳುಬೀಳುಗಳನ್ನು ಕಂಡರೂ ಕೂಡ , ಎಂದಿಗೂ ರಾಜಕೀಯದಿಂದ ಹಿಂದೆ ಸರಿಯುತ್ತೇನೆ ಅನ್ನುವ ಮಾತುಗಳನ್ನು ಇದುವರೆಗೂ ಆಡಿಲ್ಲ.
ರೈತಪರ ಹೋರಾಟಗಾರರಾಗಿ, ರಾಜಕಾರಣಿಯಾಗಿ ಅದರಲ್ಲೂ ಒಬ್ಬ ತಜ್ಞರಂತೆ ಅವರು ರೂಪಿಸಿದ ನೀರಾವರಿ ಯೋಜನೆಗಳು ಅನೇಕ. ರಾಜಕೀಯದ ಪಟ್ಟನ್ನು ಯಾವ ಸಂದರ್ಭದಲ್ಲಿ ಹೇಗೆ ಹಾಕಬೇಕು ಎಂಬ ಚಾಣಾಕ್ಷತನಕ್ಕೆ ಗೌಡರಿಗೆ ಗೌಡರೆ ಉದಾರಣೆ ಯಾಗಿದ್ದಾರೆ ಎನ್ನಬಹುದು.
ಇಂದು ಸನ್ಮಾನ್ಯ ದೇವೇಗೌಡರ 93ನೇ ಜನುಮದಿನ. ಶತಮಾನವನ್ನು ಆರೋಗ್ಯಪೂರ್ಣವಾಗಿ ದಾಟಿ , ರಾಜಕೀಯದ ಭೀಷ್ಮನಂತೆ ಈ ನಾಡಿಗೆ ಮಾರ್ಗದರ್ಶಕರಾಗಿ ಸದಾ ಕಾಣುವಂತಾಗಲಿ ಎಂದು ನ್ಯೂಸ್ ಕಿಂಗ್ ಈ ಸಂದರ್ಭದಲ್ಲಿ ಹಾರೈಸುತ್ತದೆ.
ಹಾಗೆ,ಈ ಸಂದರ್ಭದಲ್ಲಿ ಬೆಂಗಳೂರು ವರದಿಗಾರರ ಒಕ್ಕೂಟದ ನೂತನ ಅಧ್ಯಕ್ಷರು. ಹಿರಿಯ ಪತ್ರಕರ್ತರು ಆದ ಆರ್. ಟಿ. ವಿಠಲಮೂರ್ತಿಯವರು ದೇವೇಗೌಡರ ಜನ್ಮದಿನದ ಪ್ರಯುಕ್ತ ಅವರ ಬದುಕಿನ ನಿಗೂಢ ಕಥೆಯೊಂದನ್ನು ಲೇಖನರೂಪದಲ್ಲಿ ಇಂದು ಬರೆದಿದ್ದಾರೆ. ಆ ಲೇಖನವನ್ನು ಯಥಾವತ್ತಾಗಿ ನ್ಯೂಸ್ ಕಿಂಗ್ ತನ್ನ ಓದುಗರಿಗಾಗಿ ಈ ಮೂಲಕ ಕೊಡ ಮಾಡುತ್ತಿದೆ.
ಪ್ಲೀಸ್… 👏
••••••••••••••••••••••••••••
ದೇವೇಗೌಡರ ಬದುಕಿನ
ನಿಗೂಢ ಕತೆಗಳು
ಇದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬದುಕಿನಲ್ಲಿ ನಡೆದ ವಿಸ್ಮಯಕಾರಿ ಘಟನೆ.
ಒಂದು ಸಲ (೨೦೦೪) ತಮಗೆ ಬಂದ ಕರೆಯ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಆ ಮನೆಗೆ ಹೋಗುತ್ತಾರೆ.
ಹೀಗೆ ಹೋದವರು ಅಲ್ಲಿದ್ದವರ ಮಾತಿನಂತೆ ಮನೆಯ ಮೊದಲ ಮಹಡಿಗೆ ಹೋಗುತ್ತಾರೆ.ಈ ರೀತಿ ಹೋದವರಿಗೆ ಅಚ್ಚರಿ ಕಾದಿರುತ್ತದೆ.ಯಾಕೆಂದರೆ ಮನೆಗೆ ಬರುವಂತೆ ಅವರಿಗೆ ಕರೆ ಮಾಡಿದವರು ಮನೆಯ ಗೋಡೆಗೆ ಮುಖ ಮಾಡಿ ಕುಳಿತಿರುತ್ತಾರೆ.
ಹೀಗೆ ಗೋಡೆಯನ್ನು ತದೇಕ ಚಿತ್ತದಿಂದ ದಿಟ್ಟಿಸುತ್ತಾ ಕುಳಿತರೆ ಬದುಕಿನ ಅವರ ಮುಂದಿನ ಹೆಜ್ಜೆಗಳ ಸುಳಿವು ಸಿಗುತ್ತದೆ.ಇದು ವಿಶ್ವಶಕ್ತಿಯ ಜತೆ ಚೌಕಾಬಾರಾ ಆಡುವ ಒಂದು ಟೆಕ್ನಿಕ್.
ಸರಿ,ಬಸವರಾಜ ಬೊಮ್ಮಾಯಿಯವರು ಬಂದಿದ್ದನ್ನು ಮನೆಯ ಯಜಮಾನತಿ ಗೋಡೆ ನೋಡುತ್ತಾ ಕುಳಿತಿದ್ದವರಿಗೆ ಹೇಳುತ್ತಾರೆ.ಅಂದ ಹಾಗೆ ಅವತ್ತು ಗೋಡೆಯನ್ನು ತದೇಕ ಚಿತ್ತದಿಂದ ನೋಡುತ್ತಾ ಕುಳಿತವರ ಹೆಸರೇನು ಗೊತ್ತಾ?
ಹೆಚ್.ಡಿ.ದೇವೇಗೌಡ.
ಈ ದೇಶದ ಪ್ರಧಾನಿಯಾಗಿದ್ದ ದೇವೇಗೌಡರು ವಿಶ್ವಶಕ್ತಿಗೆ ಹತ್ತಿರವಾಗುವ ಇಂತಹ ಟೆಕ್ನಿಕ್ಕುಗಳ ವಿಷಯದಲ್ಲಿ ಬಹಳ ಫೇಮಸ್ಸು.ಅದರ ಭಾಗವಾಗಿ ಅವತ್ತು ಅವರು ಹೀಗೆ ಕುಳಿತಿರುತ್ತಾರೆ.ರೇಕಿಯಂತಹ ವಿದ್ಯೆಯನ್ನು ಬಲ್ಲವರಿಗೆ ಇದು ಗೊತ್ತಿರುತ್ತದೆ.
ಬಸವರಾಜ ಬೊಮ್ಮಾಯಿಯವರು ಬಂದಿದ್ದಾರೆ ಎಂಬ ವಿಷಯ ಕಿವಿಗೆ ಬಿದ್ದರೂ ತಿರುಗಿ ನೋಡದೆ ಕೈ ಸನ್ನೆ ಮಾಡಿ:ಕುಳಿತುಕೊಳ್ಳಿ ಬಸವರಾಜ್ ಎನ್ನುತ್ತಾರೆ.
ಅವರ ಮಾತಿನಂತೆ ಅಲ್ಲೇ ಇದ್ದ ಖುರ್ಚಿಯ ಮೇಲೆ ಕುಳಿತ ಬಸವರಾಜ ಬೊಮ್ಮಾಯಿ:ಸಾರ್,ಬರಲು ಹೇಳಿದ್ದಿರಿ.ಯಾಕೆ ಅಂತ ಕೇಳಬಹುದಾ?ಅಂತ ಪ್ರಶ್ನಿಸುತ್ತಾರೆ.
ಗೋಡೆಯನ್ನು ನೋಡುತ್ತಾ ಕುಳಿತಿದ್ದ ದೇವೇಗೌಡರು:ನಿಮ್ಮಿಂದ ಒಂದು ನೆರವಾಗಬೇಕಲ್ಲ ಬಸವರಾಜ್ ಎನ್ನುತ್ತಾರೆ.ಅಚ್ಚರಿಗೊಂಡ ಬಸವರಾಜ ಬೊಮ್ಮಾಯಿ,ನನ್ನಿಂದ ನೆರವೇ?ಏನದು ಹೇಳಿ ಸಾರ್ ಎನ್ನುತ್ತಾರೆ.
ಆಗ ದೇವೇಗೌಡರು:ಈ ಸಲ ವಿಧಾನಸಭೆ ಚುನಾವಣೆಗೆ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಕುಮಾರಸ್ವಾಮಿಯವರು ಪಟ್ಟು ಹಿಡಿದಿದ್ದಾರೆ.ಅವರ ಜತೆ ಮಾತನಾಡಿ.ಯಾವ ಕಾರಣಕ್ಕೂ ಸ್ಪರ್ಧಿಸದಂತೆ ಅವರ ಮನವೊಲಿಸಿ ಎನ್ನುತ್ತಾರೆ.
ಅರೇ,ಕುಮಾರಸ್ವಾಮಿಯವರು ನಿಮ್ಮ ಮಗ.ಅವರು ನಿಮ್ಮ ಮಾತು ಕೇಳದಿರಲು ಸಾಧ್ಯವೇ?ನೀವೇ ಒಂದು ಮಾತು ಹೇಳಿಬಿಡಿ ಸಾರ್ ಅಂತ ಬಸವರಾಜ ಬೊಮ್ಮಾಯಿ ಹೇಳುತ್ತಾರೆ.
ಅದಕ್ಕೆ ಪ್ರತಿಯಾಗಿ ದೇವೇಗೌಡರು:ಮಕ್ಕಳು ಬಹಳ ಸೂಕ್ಷ್ಮ ನೋಡಿ ಬಸವರಾಜ್.ಸ್ವಲ್ಪ ಹೆಚ್ಚು ಕಡಿಮೆಯಾದರೂ ತಿರುಗಿ ಬೀಳುತ್ತಾರೆ.ಹೀಗಾಗಿ ನಿಮಗೆ ಹೇಳಿದೆ.ಎಷ್ಟಾದರೂ ಅವರು ನಿಮ್ಮ ಸ್ನೇಹಿತರು ಅನ್ನುತ್ತಾರೆ.
ಈಗ ಬಸವರಾಜ ಬೊಮ್ಮಾಯಿ ಸ್ವಲ್ಪ ಮೈಚಳಿ ಬಿಟ್ಟು:ಸಾರ್,ಈಗ ಕುಮಾರಸ್ವಾಮಿಯವರು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಏನು ತಪ್ಪು?ಸ್ಪರ್ಧಿಸಲಿ ಬಿಡಿ ಎಂದಾಗ ದೇವೇಗೌಡರು ಸಣ್ಣನೆಯ ಧ್ವನಿಯಲ್ಲಿ ವಿವರಿಸುತ್ತಾರೆ.
ಕುಮಾರಸ್ವಾಮಿಯವರು ರಾಮನಗರದಿಂದ ಸ್ಪರ್ಧಿಸಿ ಗೆದ್ದರು ಅಂತಿಟ್ಟುಕೊಳ್ಳಿ.ಆಗ ಅವರ ಮತ್ತು ಹೊಳೆನರಸೀಪುರದಿಂದ ಸ್ಪರ್ಧಿಸಿ ಗೆಲ್ಲಲಿರುವ ಅವರಣ್ಣ ರೇವಣ್ಣ ಅವರ ಮಧ್ಯೆ ಒಡಕಾಗುತ್ತದೆ ಎಂಬುದು ದೇವೇಗೌಡರ ವಾದ.
ಆದರೆ ಬಸವರಾಜ ಬೊಮ್ಮಾಯಿ ಅದನ್ನೊಪ್ಪುವುದಿಲ್ಲ.ಹೀಗಾಗಿ:ಅದು ಹೇಗೆ ಸಾರ್?ರೇವಣ್ಣ ಅವರು ಸ್ಪರ್ಧಿಸುವುದು ಹಾಸನ ಜಿಲ್ಲೆಯಿಂದ.ಕುಮಾರಸ್ವಾಮಿಯವರು ಸ್ಪರ್ಧಿಸುವುದು ರಾಮನಗರ ಜಿಲ್ಲೆಯಿಂದ.ಇಬ್ಬರೂ ಬೇರೆ ಬೇರೆ ಜಿಲ್ಲೆಗಳಿಂದ ಸ್ಪರ್ಧಿಸಿದರೆ ಸಮಸ್ಯೆ ಏನು?ಅಂತ ಪ್ರಶ್ನಿಸುತ್ತಾರೆ.
ದೇವೇಗೌಡರು ಯಥಾ ಪ್ರಕಾರ ಸಣ್ಣನೆಯ ಧ್ವನಿಯಲ್ಲಿ:ರಾಮನಗರದಿಂದ ಸ್ಪರ್ಧಿಸಿ ಕುಮಾರಸ್ವಾಮಿಯವರು ಗೆದ್ದರೆ ಈ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ.ಆಗ ರೇವಣ್ಣ ಅವರಿಗೆ ಉಪಮುಖ್ಯಮಂತ್ರಿಯಾಗುವ ಯೋಗ ತಪ್ಪುತ್ತದೆ ಅಂತ ಹೇಳಿದಾಗ ಬಸವರಾಜ ಬೊಮ್ಮಾಯಿ ಅವರಿಗೆ ಅಚ್ಚರಿ.
ಆದರೂ ಸಾವರಿಸಿಕೊಂಡು ಅವರು:ಇರಲಿ ಬಿಡಿ ಸಾರ್,ಉಪಮುಖ್ಯಮಂತ್ರಿ ಹುದ್ದೆಯ ಬದಲಿಗೆ ಮುಖ್ಯಮಂತ್ರಿ ಹುದ್ದೆಯೇ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದಾದರೆ ಅದೇ ಬೆಟರ್ ಅಲ್ಲವಾ?ಎನ್ನುತ್ತಾರೆ.
ಆದರೆ ದೇವೇಗೌಡರು:ಸಮಸ್ಯೆ ಇರುವುದು ಅಷ್ಟೇ ಅಲ್ಲ ಬಸವರಾಜ್.ಒಂದು ವೇಳೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ರೇವಣ್ಣ ಅವರಿಗೆ ಡಿಸಿಎಂ ಆಗುವ ಅವಕಾಶ ತಪ್ಪಿದರೆ ದಿಲ್ಲಿ ಮಟ್ಟದಲ್ಲಿ ನನಗೆ ಸಿಗಬಹುದಾದ ಉನ್ನತ ಹುದ್ದೆಯೊಂದು ಕೈ ಜಾರಿ ಹೋಗುತ್ತದೆ ಎಂದು ವಿವರಿಸುತ್ತಾರೆ.
ಅದ್ಹೇಗೆ ಸಾರ್ ಎಂದು ಬಸವರಾಜ ಬೊಮ್ಮಾಯಿ ಕೇಳಿದರೆ:ಅದು ಹಾಗೇ ಬಸವರಾಜ್.ಜಾತಕಗಳ ಪ್ರಕಾರ ನನ್ನ ಲಕ್ಕು ರೇವಣ್ಣ ಅವರ ಜತೆ ತಳಕು ಹಾಕಿಕೊಂಡಿದೆ.ಕುಮಾರಸ್ವಾಮಿ ಅವರ ಜತೆಗಲ್ಲ.ರೇವಣ್ಣ ಅವರ ಲಕ್ಕು ಕೂಡಾ ಸಹಜವಾಗಿ ನನ್ನ ಜಾತಕಕ್ಕೆ ಅಂಟಿಕೊಂಡಿದೆ ಎನ್ನುತ್ತಾರೆ.
ಬಸವರಾಜ ಬೊಮ್ಮಾಯಿ ಅರೆ ಕ್ಷಣ ಮೌನವಾಗುತ್ತಾರೆ.ನಂತರ:ಈ ಹಂತದಲ್ಲಿ ಚುನಾವಣೆಗೆ ನಿಲ್ಲಬೇಡಿ ಎಂದು ಕುಮಾರಸ್ವಾಮಿಯವರಿಗೆ ಹೇಳುವುದು ಕಷ್ಟ ಸಾರ್,ನೀವೇ ಹೇಳಿಬಿಡಿ ಎಂದವರೇ ಅಲ್ಲಿಂದ ಹೊರಟು ಬಿಡುತ್ತಾರೆ.
ಮುಂದಿನದು ಇತಿಹಾಸ.ಕುಮಾರಸ್ವಾಮಿ ಬಿಜೆಪಿ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸುವುದು,ಈ ಬೆಳವಣಿಗೆಯಿಂದ ಕ್ರುದ್ಧರಾದ ಕಮ್ಯೂನಿಸ್ಟರು ದೇಶದ ರಾಷ್ಟ್ರಪತಿ ಹುದ್ದೆಗೆ ದೇವೇಗೌಡರ ಹೆಸರನ್ನು ಪ್ರಪೋಸ್ ಮಾಡಲು ಹಿಂಜರಿಯುವುದು..ಹೀಗೆ ಒಂದಕ್ಕಿಂತ ಒಂದು ವಿಸ್ಮಯಕಾರಿ ಘಟನೆಗಳು.
•••••••••••••••••ಸಂಗ್ರಹ
ಡಿ.ಎಂ. ಮಂಜುನಾಥಸ್ವಾಮಿ