ವಚನ ಸಾಹಿತ್ಯದ ತಾತ್ವಿಕತೆಯನ್ನು ದಿಕ್ಕುತಪ್ಪಿಸಿ ಬ್ರಾಹ್ಮಣ್ಯ ಹೇರಿಕೆ,….
1 min read
ವಚನ ಸಾಹಿತ್ಯದ ತಾತ್ವಿಕತೆಯನ್ನು ದಿಕ್ಕುತಪ್ಪಿಸಿ ಬ್ರಾಹ್ಮಣ್ಯ ಹೇರಿಕೆ, ವಚನ ಸಾಹಿತ್ಯಕ್ಕೆ ಮಾಡುವ
ಅಪಮಾನ…
ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ವಚನ ಸಾಹಿತ್ಯದ ತಾತ್ವಿಕತೆಯನ್ನು ದಿಕ್ಕುತಪ್ಪಿಸುವ ಮೂಲಕ ಪರೋಕ್ಷವಾಗಿ ಬ್ರಾಹ್ಮಣ್ಯವನ್ನು ಒತ್ತಾಯ ಪೂರ್ವಕವಾಗಿ ಹೇರುತ್ತಿರುವುದು ವಚನ ದರ್ಶನಕ್ಕೆ ಮಾಡುವ ಅಪಮಾನ ಎಂದು ಸಾಹಿತಿ ರವೀಶ್ ಕ್ಯಾತನ ಬೀಡು ಅಭಿಪ್ರಾಯಿಸಿದರು.
ಜಾಗತಿಕ ಲಿಂಗಾಯಿತ ಮಹಾಸಭಾ ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತಾಶ್ರದಲ್ಲಿ ನಗರದಲ್ಲಿ ಆಯೋಜಿಸಲಾಗಿದ್ದ ವಚನದರ್ಶನ ಮಿಥ್ಯ/ಸತ್ಯ ಗ್ರಂಥದ ಬಿಡುಗಡೆ ಸಮಾರಂಭದಲ್ಲಿ ಗ್ರಂಥವನ್ನು ಪರಿಚಯಿಸಿ ಮಾತನಾಡಿದರು.
ಶತಮಾನದಿಂದಲೂ ಬ್ರಾಹ್ಮಣ್ಯದ ಹೇರಿಕೆಯನ್ನು ವಿರೋಧಿಸಿದ ವಚನಕಾರರು ವೇದ, ಆಗಮಗಳಿಗೆ ಹೊರೆಯಕಟ್ಟಿ ಪರಿಸರದ ವಿಜ್ಞಾನ, ಧರ್ಮವನ್ನು ನಮ್ಮ ನಡುವೆ ಬಿಟ್ಟು ಹೋಗಿದ್ದಾರೆ. ವಚನ ದರ್ಶನ ಪುಸ್ತಕದ ಹಿಂದೆ ಸ್ಥಾಪಿತ ಆರ್.ಎಸ್.ಎಸ್. ಇತರೆ ಸಂಘಟನೆಗಳು ಕೆಲಸ ಮಾಡಿರುವಂತೆ ಗೋಚರವಾಗುತ್ತಿದ್ದು, ವಚನ ಸಾಹಿತ್ಯದ ನಡೆಕಾರರು ಈ ಬಗ್ಗೆ ಜಾಗೃತರಾಗಬೇಕಿದೆ ಎಂದ ಅವರು ಮಿಥ್ಯವನ್ನು ಕಳೆದು ವಚನ ಸತ್ಯವನ್ನು ಜನರಿಗೆ ತಿಳಿಸಿ ಹೇಳಬೇಕಾಗಿದೆ ಎಂದರು.
ವಚನ ಧರ್ಮವು ಆಳವಾದುದು. ಎದುರುಗೊಳ್ಳುವುದು ಬಹು ಸುಲಭವಲ್ಲ, ಅರಿತುಕೊಳ್ಳುವುದೂ ಸುಲಭವಲ್ಲ. ಶಾಂತವಾದದ್ದು. ಉದಾತ್ತವಾದದ್ದು, ಸಾಮಾನ್ಯ ತರ್ಕಕ್ಕೆ ನಿಲುಕಲಾರದ್ದು. ಸೂಕ್ಷ್ಮವಾದದ್ದು ವಿವೇಕಿಗಳಿಗೆ ಮಾತ್ರ ದಕ್ಕುವಂತಹದ್ದು ಎಂದು ವಚನ ಧರ್ಮದ ಅನೇಕರು ಹೇಳಿದ್ದಾರೆ. ಈ ಮಾತುಗಳನ್ನು ತುಂಬಾ ಎಚ್ಚರಿಕೆಯಿಂದ ಪರಿಭಾವಿಸಬೇಕುಎಂದರು.
ವಚನ ತತ್ವವನ್ನು ತಿಳಿದುಕೊಳ್ಳುವ ಹಂಬಲ ಇದ್ದರೆ ಸಾಲದು, ಅದನ್ನು ಅರ್ಥೈಸಿಕೊಳ್ಳುವ ಸರಿಯಾದ ಮಾರ್ಗ ಕಂಡು ಹಿಡಿದುಕೊಳ್ಳದ ಹೊರತು ಅದು ಸಾಧ್ಯವಿಲ್ಲ. ತಪ್ಪು ದಾರಿ ಹಿಡಿದು ಬಲು ದೂರ ಬಂದಾಗಿದೆ. ಸರಿಯಾದುದನ್ನು ದಕ್ಕಿಸಿಕೊಳ್ಳಬೇಕಾದರೆ ಸರಿಯಿಲ್ಲದ ದಾರಿಯನ್ನು ತ್ಯಜಿಸಿ, ಸರಿಯಾದ ದಾರಿ ಹಿಡಿಯಬೇಕಾದದ್ದು ಅನಿವಾರ್ಯ ಎಂದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಸಾನಿಧ್ಯವನ್ನು ವಹಿಸಿದ್ದ ಸಾಣೇಹಳ್ಳಿ ಪಂಡಿತರಾಧ್ಯ ಶ್ರೀಗಳು ಮಾತನಾಡಿ ವೇದ, ಆಗಮಗಳಲ್ಲಿ ಇರಬಹುದಾದ ಮನುಷ್ಯ ಶೋಷಿತ ನಡುವಳಿಕೆಗಳ ವಿರುದ್ಧ ಕಾಯಕ ಧರ್ಮ, ದಾಸೋಹ ಧರ್ಮ, ಪ್ರಸಾದ ಧರ್ಮ, ಸ್ತ್ರೀ ಸಮಾನತೆ, ಮೇಲು ಕೀಳಿಲ್ಲದ ಶರಣ ಸಮಾಜವನ್ನು ಕಟ್ಟಿದವರು ಬಸವಾದಿ ಶರಣರು.
ವಚನ ಸಾಹಿತ್ಯ ಎರವಲು ತಂದಿದ್ದಲ್ಲ, ಕನ್ನಡದ ಸ್ವಯಾರ್ಜಿತ ಸ್ವತ್ತು, ವಚನಕಾರರು ಸಂಸ್ಕೃತದ ಆಚಾರ್ಯರಲ್ಲ; ಅವರು ಅಚ್ಚ ಕನ್ನಡದ ಬೇಸಾಯಗಾರರು ಎನ್ನುವ ಮಾತಿನಂತೆ ವಚನ ದರ್ಶನ ಕನ್ನಡದ ಮೊಟ್ಟ ಮೊದಲ ಧರ್ಮ ಎಂದರು.
ಪುಸ್ತಕ ಬಿಡುಗಡೆಗೊಳಿಸಿ ಶಾಸಕ ತಮ್ಮಯ್ಯ ಮಾತನಾಡುತ್ತಾ ವಚನಗಳು ನಮ್ಮ ಬದುಕಿನ ದೀವಿಗೆಗಳು, ಆ ಬೆಳಕಿನಲ್ಲಿ ಈ ಸಮಾಜವನ್ನು ಕರೆದುಕೊಂಡು ಹೋಗಬೇಕಾಗಿದೆ. ಸಮ ಸಮಾಜದ ನಿರ್ಮಾಣವನ್ನು ಮಾಡಿದವರು ವಚನಕಾರರು ಎಂದರು.
ಕಾರ್ಯಕ್ರಮದಲ್ಲಿ ಪಾಂಡುಮಟ್ಟಿಯ ಗುರುಬಸವ ಶ್ರೀಗಳು, ಬಸವ ಮಂದಿರದ ಡಾ. ಬಸವ ಮರುಳಸಿದ್ದ ಶ್ರೀಗಳು, ಯಳನಾಡು ಮಠದ ಜ್ಞಾನಪ್ರಭು ಸಿದ್ಧರಾಮ ಶ್ರೀಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ವಿಭಾಗೀಯ ಮುಖ್ಯಸ್ಥರಾದ ಮಹಾದೇವಪ್ಪ, ನಿವೃತ್ತ ನ್ಯಾಯಾಧೀಶರಾದ ಕೆಂಪಣ್ಣ,ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಗಂಗಾಧರ ಶಿವಪುರ, ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಡೂರು ವಿರೂಪಾಕ್ಷ ಕಾರ್ಯಕ್ರಮ ನಿರೂಪಿಸಿದರು. ಅಕ್ಕನ ಬಳಗ ಹಾಗೂ ಅನೇಕ ಬೇರೆ ಬೇರೆ ಸಂಘಟನೆಗಳು ವಚನ ಗಾಯನ ನಡೆಸಿಕೊಟ್ಟರು.