ಆಲ್ದೂರು ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಮೌನ ಪ್ರತಿಭಟನೆ*…
1 min read
ಅವಿನ್ ಟಿವಿ ಸುದ್ದಿಜಾಲ ಆಲ್ದೂರು ೨೫:
*ಕಾಶ್ಮೀರದ ಪೆಹಲ್ಗಾಮ್ನಲ್ಲಿ ನೆಡೆದ ಉಗ್ರರ ದಾಳಿ ಖಂಡಿಸಿ ಆಲ್ದೂರು ಪಟ್ಟಣದಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಮೌನ ಪ್ರತಿಭಟನೆ*
ಕಾಶ್ಮೀರದ ಪೆಹಲ್ಗಾಮ್ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿ ಖಂಡಿಸಿ ಶುಕ್ರವಾರ ಆಲ್ದೂರು ಪಟ್ಟಣದ ಮುಸ್ಲಿಂ ಬಾಂಧವರು ಅಂಬೇಡ್ಕರ್ ವೃತ್ತದಿಂದ ಪಟ್ಟಣದ ಮುಖ್ಯ ಬೀದಿಯಲ್ಲಿ ಮೌನ ಪ್ರತಿಭಟನೆ ನಡೆಸಿದರು.
ಮೌನ ಮೆರವಣಿಗೆಯ ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಬ್ಲಾಕ್ ಅಲ್ಪಸಂಖ್ಯಾತರ ಅಧ್ಯಕ್ಷ ಅಶ್ರಫ್, ‘ಕುರಾನ್ನಲ್ಲಿ ತಾನು ಜನಿಸಿದ ಮಣ್ಣಿಗೆ, ತಾಯಿನಾಡಿಗೆ ಎಂದಿಗೂ ದ್ರೋಹ ಬಗೆಯಬಾರದೆಂಬ ಸಂದೇಶವಿದ್ದು, ಭಾರತೀಯ ಮುಸಲ್ಮಾನರು ದೇಶಕ್ಕೆ ಚಿರಋಣಿಯಾಗಿದ್ದಾರೆ. ಅಮಾಯಕರನ್ನು ಕೊಂದು ಹಾಕಿದ ನರರಾಕ್ಷಸರನ್ನು ಎಂದಿಗೂ ಮುಸ್ಲಿಂ ಜನಾಂಗ ಒಪ್ಪುವುದಿಲ್ಲ. ಉಗ್ರರನ್ನು ಹೆಡೆಮುರಿ ಕಟ್ಟುವ ಕೇಂದ್ರ ಸರ್ಕಾರದ ನಿಲುವುಗಳಿಗೆ ನಮ್ಮ ಸಮುದಾಯ ನೈತಿಕ ಬೆಂಬಲ ನೀಡುತ್ತದೆ’ ಎಂದರು.
ಕಸಾಪ ಆಲ್ದೂರು ಹೋಬಳಿ ಘಟಕದ ಅಧ್ಯಕ್ಷ ನೂರ್ ಮಹಮ್ಮದ್ ಮಾತನಾಡಿ, ‘ಗೌತಮ ಬುದ್ಧ ಬೋಧಿಸಿದಂತೆ ಒಬ್ಬರಿಗೆ ಜೀವ ಕೊಡುವ ಶಕ್ತಿ ನಮ್ಮಲ್ಲಿ ಇಲ್ಲದಿದ್ದ ಮೇಲೆ ಕೊಲ್ಲಲು ಹಕ್ಕು ಕೊಟ್ಟವರು ಯಾರು? ಎಂದು ಬೇಸರ ವ್ಯಕ್ತಪಡಿಸಿದರು. ಉಗ್ರರ ದಾಳಿಯಲ್ಲಿ ಮೃತಪಟ್ಟ ಭಾರತೀಯರು ಮತ್ತು ವಿದೇಶಿ ಪ್ರಜೆಗಳಿಗಾಗಿ ಶ್ರದ್ಧಾಂಜಲಿ ಅರ್ಪಿಸಿ, ಮೌನ ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ಬೆಂಬಲಕ್ಕೆ ಭಾರತೀಯ ಮುಸಲ್ಮಾನರೆಲ್ಲರೂ ಇದ್ದೇವೆ’ ಎಂದು ತಿಳಿಸಿದರು.
ಪ್ರಮುಖರಾದ ಬಿಬಿಸಿ ಆಸಿಫ್, ಜಾಕಿರ್ ಹುಸೇನ್, ಮನ್ಸೂರ್ ಅಲಿ, ಗ್ರಾಮ ಪಂಚಾಯಿತಿ ಸದಸ್ಯ ಬಾಬರ್ ಪಾಶ ಸೇರಿದಂತೆ ಜಾಮಿಯಾ, ಮದೀನಾ, ಕೂಬಾ, ಹಂಝತುಲ್ ಕರ್ರಾರ್ ಮಸೀದಿಯವರು ಮತ್ತು ಮುಸ್ಲಿಂ ಸಮುದಾಯದ ಅನೇಕ ಮುಖಂಡರು, ದೊಡ್ಡ ಸಂಖ್ಯೆಯಲ್ಲಿ ಸೇರಿ, ಮೌನ ಪ್ರತಿಭಟನೆಯನ್ನು ನೆಡೆಸಿ ಈ ಭೀಕರ ದುಷ್ಕೃತ್ಯವನ್ನು ಖಂಡಿಸಿ ಸಾರ್ವಜನಿಕ ಸಭೆಯ ಮೂಲಕ ತಮ್ಮ ಸಮುದಾಯದ ಭಾವನೆಯನ್ನು ವ್ಯಕ್ತಪಡಿಸಿದರು.
ಮೌನ ಪ್ರತಿಭಟನೆ ಮತ್ತು ಸಾರ್ವಜನಿಕ ಸಭೆಯ ನಂತರ ಸರ್ಕಲ್ ಇನ್ಸ್ಪೆಕ್ಟರ್ ಸೋಮೇಗೌಡ ಅವರಿಗೆ ಮನವಿ ಸಲ್ಲಿಸಿದರು.
ವರದಿ••✒️
ಡಿ.ಎಂ. ಮಂಜುನಾಥಸ್ವಾಮಿ