“ನಾನು ಮತ್ತು ಚಂದ್ರು” ಕ್ಲಾಸ್ ಮೇಟ್ಸ್…
1 min read
“ನಾನು ಮತ್ತು ಚಂದ್ರು” ಕ್ಲಾಸ್ ಮೇಟ್ಸ್.
ಬಿ.ಎಲ್.ಶಂಕರ್ ಅವರು ಲೋಕಾರೂಢಿಯಾಗಿ ಸಾಣೇಹಳ್ಳಿ ಪೂಜ್ಯರ ಬಳಿ “ನಾನು ಮತ್ತು ಚಂದ್ರು” ಕ್ಲಾಸ್ ಮೇಟ್ಸ್ ಬುದ್ಧಿ ಅಂದರು. ತಕ್ಷಣಕ್ಕೆ ನಾನು ಬಿ.ಎಲ್.ಶಂಕರ್ ಸರ್ ಅವರ ಮಾತಿಗೆ ಕಿವಿ ಕೊಟ್ಟೆ. ಅಲ್ಲಿಯೇ ಇದ್ದ ಮುಖ್ಯಮಂತ್ರಿ ಚಂದ್ರು ಮಾತನಾಡುತ್ತ “ನನಗೆ ರಾಜಕೀಯಕ್ಕೆ ತಂದದ್ದೇ ಬಿ.ಎಲ್.ಶಂಕರ್ ಎಂದರು. ನನ್ನ ಕಿವಿ ಮತ್ತಷ್ಟು ಅರಳಿದವು. 1985ರಲ್ಲಿ ಗೌರಿಬಿದನೂರು ಕ್ಷೇತ್ರದಿಂದ ಜನತ ದಳದ ಟಿಕೆಟ್ ಕೊಡಿಸಿ MLA ಮಾಡಿದ್ದು ಬಿ.ಎಲ್.ಶಂಕರ್ ಎಂದು ಹೆಮ್ಮೆಯಿಂದ ಮುಖ್ಯಮಂತ್ರಿ ಚಂದ್ರು ಹೇಳಿಕೊಂಡರು. ಆಗ ಸಾಣೇಹಳ್ಳಿ ಪೂಜ್ಯರು ಬಿ.ಎಲ್.ಶಂಕರ್ ಕುರಿತು ‘ಮುಖ್ಯಮಂತ್ರಿ ಚಂದ್ರು ಜೊತೆ ಫಿಲ್ಮ್ ಕಡೆ ಹೋಗಿ ಬಣ್ಣ ಹಚ್ಚುವುದಲ್ವಾ ಶಂಕರ್’ ಎಂದರು. ಅದಕ್ಕೆ ಶಂಕರ್ ಅವರು ರಾಜಕೀಯದಲ್ಲೂ ಬಣ್ಣದ ಮಾತು, ನಾಟಕ ಇದಿಯಲ್ವಾ ಬುದ್ಧಿ ಎಂದು ತಮಾಷೆ ಮಾಡಿದರು.
ಇದನ್ನು ಏಕೆ ಬರೆದೆ ಅಂದರೆ; ಮುಖ್ಯಮಂತ್ರಿ ಚಂದ್ರು ಅವರು ನನಗೆ MLA ಮಾಡಿದ್ದೇ ಬಿ.ಎಲ್.ಶಂಕರ್ ಎಂದು ಸಾರ್ವಜನಿಕವಾಗಿ ಕೃತಜ್ಞತಾ ಭಾವದಿಂದ ನೆನೆದಾಗ; ಮುಖ್ಯಮಂತ್ರಿ ಚಂದ್ರು ಸರ್ ತೆರೆದ ಪುಸ್ತಕ, ಕನ್ನಡಿಯಷ್ಟೇ ಅವರ ಸ್ಪಷ್ಟ ನಿಲುವನ್ನು ಕಂಡು ನಿಜದ ಬದುಕಿನಲ್ಲಿ ಎತ್ತರದ ಸತ್ಯಗಳನ್ನು ಆಳವಾಗಿ ಹೊಂದಿರುವ ಚಂದ್ರು ಸರ್ ಸದಾ ಈ ನಾಡಿಗೆ ಮಾದರಿ
ಮತ್ತು ಬಿ.ಎಲ್.ಶಂಕರ್ ಸರ್ ಚಂದ್ರು ಸರ್ ಕ್ಲಾಸ್ ಮೇಟ್ ಆಗಿ ಅರ್ಥಪೂರ್ಣ ಸ್ನೇಹವೊಂದು ಕಾಣುವ ಸೌಭಾಗ್ಯ ನಮ್ಮದು. BLS ನಾಲ್ಕೈದು ಡಿಗ್ರಿಗಳನ್ನು, ಮಂತ್ರಿ ಸಂಸದ ಶಾಸಕ ಅದು ಇದು ಎಲ್ಲವೂ ಆದರೂ ಕೂಡ ಶಂಕರ್ ಸರ್ ಮತ್ತು ಐನೂರು ಚಿತ್ರಕ್ಕೂ ಹೆಚ್ಚರಲ್ಲಿ ನಟಿಸಿ ಮನೆ ಮಾತಾಗಿರುವ ಮುಖ್ಯಮಂತ್ರಿ ಚಂದ್ರು ಹಾರಾಡುವರ ನಡುವೆ ನೆಲದ ಮೇಲೆ ನಿಂತಿರುವುದು ಖುಷಿ. ಸಾಣೇಹಳ್ಳಿಯ ಒಂದು ಮರದ ಕೆಳಗಡೆ ಕುಳಿತು ದಿನವಿಡಿ ಒಳಿತನ್ನು ಮಾತನಾಡಿದ ನೀವೇ ಇವತ್ತಿನ ಜನರೇಶನ್ ಗೆ ಮಾಡೆಲ್ ಆಗಬೇಕು.
ಇವತ್ತಿನ ಕಾಲಘಟ್ಟದಲ್ಲಿ ಈ ಕೃತಜ್ಞತೆಯ ಭಾವ ಕಳೆದು ಹೋಗುತ್ತಿದಿಯಾ ಎಂಬ ಪ್ರಶ್ನೆ ಕಾಡುತ್ತದೆ. ಈಗ ಎಲ್ಲಡೆ Use and throw ಆಟ ಮೇಲುಗೈ ಸಾಧಿಸುತ್ತಿದೆ. ಈ ಕಾರಣಕ್ಕೆ ಏನೋ ಬಿ.ಎಲ್.ಶಂಕರ್ ‘ನಾನು ಮತ್ತೊಬ್ಬರಿಗೆ use ಆದರೂ ಪರವಾಗಿಲ್ಲ; ಮತ್ತೊಬ್ಬರಿಂದ throw ಆಗಬಾರದೆಂದು’ ಅಧಿಕಾರಕ್ಕಾಗಿ ಯಾರಲ್ಲಿಯೂ ಕೈ ಚಾಚದೇ ಪೂರ್ಣ ರಾಜಕೀಯದಲ್ಲಿ ಇದ್ದರೂ ಕೂಡ ರಾಜಕೀಯೇತರವಾಗಿ ಲೆಕ್ಕವಿಲ್ಲದಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.
ಅಧಿಕಾರ ಹೋದರೆ ಜೀವ ಮತ್ತು ಜೀವನವೇ ಹೋಯಿತು ಎನ್ನುವಷ್ಟು ಕುಗ್ಗುವ ರಾಜಕಾರಣಿಗಳು ಬಿ.ಎಲ್.ಶಂಕರ್ ಅವರ ಬದುಕು ಬರಹ ಭಾಷಣಗಳನ್ನು ತಿಳಿದರೆ ಅಧಿಕಾರ ಹಣ ಇಲ್ಲದಿದ್ದರೂ ಸಂತೋಷವಾಗಿ ಇರುವುದನ್ನು ಕಲಿಯಬಹುದು.
ಪ್ರಾಮಾಣಿಕತೆ ಬದ್ಧತೆ ಅರ್ಹತೆಯ ಕಾರಣಕ್ಕೆ ಮುಖ್ಯಮಂತ್ರಿ ಆಗುವ ವ್ಯವಸ್ಥೆ ರಾಜಕೀಯ ಕ್ಷೇತ್ರದಲ್ಲಿ ಇದ್ದಿದ್ದರೆ “ಮುಖ್ಯಮಂತ್ರಿ ಬಿ.ಎಲ್.ಶಂಕರ್” ಎಂಬ ವಿಚಾರವೂ ಈ ನೆಲದಲ್ಲಿ ದಾಖಲಾಗುತ್ತಿತ್ತು ಮತ್ತು ದಾಖಲಾಗಲೇಬೇಕಿತ್ತು. But ಆಗಲಿಲ್ಲ ಎಂಬುದು ಈ ನಾಡಿನ ದುರಾದೃಷ್ಟ.
ಎಪ್ಪತ್ತರ ದಶಕದ ಅರ್ಧಭಾಗದಿಂದ ಇವತ್ತಿನ ತನಕ ಅಂದರೆ ಲೋಹಿಯ, ಜೆಪಿ, ಚಂದ್ರಶೇಖರ್, ವಿ.ಪಿ.ಸಿಂಗ್, ಫರ್ನಾಂಡೀಸ್, ಇಂದಿರಾ ರಾಜೀವರಿಂದ ಹಿಡಿದು ಇವತ್ತಿನ ಮೋದಿ ದೇವೇಗೌಡರು ಸಿದ್ದರಾಮಯ್ಯ ಯಡಿಯೂರಪ್ಪ ಕುಮಾರಸ್ವಾಮಿ ತನಕ ಈ ದೇಶದ ರಾಜಕೀಯವನ್ನು ಪೂರ್ಣವಾಗಿ ಅನುಭಾವಿಸಿ ಮತ್ತು ಪರಾಮರ್ಶಿಸಿ ನೋಡಿದವರು ಬಿ.ಎಲ್.ಶಂಕರ್.
ಅವಕಾಶ ಸಿಕ್ಕಾಗ ಬಹಳಷ್ಟು ಜನ ಬಿ.ಎಲ್.ಶಂಕರ್ ಅವರಿಂದ ಶಾಸಕರಾಗಿದ್ದಾರೆ, ಸಂಸದರಾಗಿದ್ದಾರೆ, ಮಂತ್ರಿಗಳಾಗಿದ್ದಾರೆ. ಆದರೆ ಅವರು ಯಾವುದನ್ನು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ; ಆದರೆ ಮುಖ್ಯಮಂತ್ರಿ ಚಂದ್ರು ತರಹ ಕೃತಜ್ಞತಾ ಭಾವ ಎಲ್ಲರಲ್ಲೂ ಮೇಳೈಸಿದರೆ ಮಾತ್ರ ಆ ಲೆಕ್ಕ ಸಿಗುವುದು.
ಬಿ.ಎಲ್.ಶಂಕರ್ ಅವರಲ್ಲಿ ನನ್ನ ವಿನಂತಿ ಏನೆಂದರೆ ಅವರ ಸಾರ್ವಜನಿಕವಾದ ಜೀವನ ಚರಿತ್ರೆಯನ್ನು ಅಕ್ಷರ ರೂಪಕ್ಕೆ ಬರಲೇಬೇಕಿದೆ. ಸ್ವಾತಂತ್ರ್ಯ ನಂತರ ಕರ್ನಾಟಕದ ವಿಷಯ ಮಾತ್ರವಲ್ಲ ದೇಶದ ಯಾವುದೇ ರಾಜಕೀಯ ವಿದ್ಯಮಾನಗಳನ್ನು ಪೂರ್ಣವಾಗಿ, ಪ್ರಜ್ಞಾಪೂರ್ವಕವಾಗಿ ಗ್ರಹಿಸಿದವರು. ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಜೊತೆಜೊತೆಗೆ ಕನ್ಯಾಕುಮಾರಿ ಇಂದ ಕಾಶ್ಮೀರದವರೆಗೂ ಬಿ.ಎಲ್.ಶಂಕರ್ ಪಾದಯಾತ್ರೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ವಿವಿಧ ರಾಜ್ಯಗಳಲ್ಲಿ ಅನೇಕ ಭಾಷೆಗಳಿಗೆ ಮಾಜಿ ಪ್ರಧಾನ ಮಂತ್ರಿ ಚಂದ್ರಶೇಖರ್ ಅವರ ಭಾಷಣವನ್ನು ಭಾಷಾಂತರ ಮಾಡುವ ಮೂಲಕ ಮತ್ತು ರಾಷ್ಟ್ರಮಟ್ಟದಲ್ಲಿ ಜನತಾ ದಳ ಅಸ್ತಿತ್ವದಲ್ಲಿ ಇದ್ದಾಗ ದೇಶದ ಎಲ್ಲಾ ರಾಜ್ಯದಲ್ಲೂ ರಾಜಕೀಯ ಸ್ನೇಹಿತರನ್ನು ಮತ್ತು ಅವರ ಅನುಭವಗಳನ್ನು ಅರಿತವವರು. ಹಳೆಯ ಬೇರನ್ನು ಹೊಸ ಚಿಗುರಿನೊಂದಿಗೆ ಇತಿಹಾಸವನ್ನು ವರ್ತಮಾನದೊಂದಿಗೆ ಜೋಡಿಸಲು ನಿಮ್ಮ ಪೂರ್ಣ ಅನುಭವ ಅಕ್ಷರ ರೂಪಕ್ಕೆ ಬಂದರೆ ಕನ್ನಡ ನಾಡಿನಲ್ಲಿ ಒಂದು ಐತಿಹಾಸಿಕ ದಾಖಲೆಯಾಗಿ ಉಳಿಯಲಿದೆ. ದಯವಿಟ್ಟು ಉಳಿಸಿಕೊಡಿ.
ಐದು ದಶಕಗಳನ್ನು ಕಟ್ಟಿಕೊಡಲು, ಐದು ದಶಕಗಳನ್ನು ಒಳಗೊಳ್ಳುವಂತೆ ಮಾಡಲು ಮತ್ತು ಲೆಕ್ಕವಿಲ್ಲದಷ್ಟು ಅನುಭವಗಳನ್ನು ಒಂದೇ ಸೂರಿನಡೆಗೆ ತರಲು ಭಾಷಾ ಜ್ಞಾನ, ಸಾಕ್ಷಿ ಪ್ರಜ್ಞೆ, ಪ್ರಜ್ಞಾಪೂರ್ವಕ ಅನುಭವ ಮತ್ತು ಆರೋಗ್ಯ ನಿಮ್ಮಲ್ಲಿ ಇರುವುದರಿಂದ ಈ ಕನ್ನಡದ ನೆಲಕ್ಕೆ, ಮನಕ್ಕೆ ಒಂದು ಪುಸ್ತಕ ನೀಡಿ ಸರ್.
ನಿಮಗಾಗಿ ಬುದ್ಧ ಬಸವ ಭೀಮ ಕೃಪೆ ಬಯಸುತ್ತಾ…
ಮನಸುಳಿ ಮೋಹನ್ ತರೀಕೆರೆ..