ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುವವರ ಬಾಯಿಗೆ ಬೀಗ ಹಾಕಬೇಕು
1 min read
ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡುವವರ
ಬಾಯಿಗೆ ಬೀಗ ಹಾಕಬೇಕು
ಮೂಡಿಗೆರೆ: ತಾ.ಪಂ. ಮತ್ತು ಜಿ.ಪಂ. ಚುನಾವಣೆ ಹತ್ತಿರ
ಸಮೀಪಿಸುತ್ತಿದೆ. ಇದರಿಂದ ವಿರೋಧ ಪಕ್ಷದ ನಾಯಕರು ಗ್ಯಾರಂಟಿ ಯೋಜನೆ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದಾರೆ ಗ್ಯಾರಂಟಿ ಯೋಜನೆ ಬಗ್ಗೆ ಕೇವಲವಾಗಿ ಮಾತನಾಡುವ ಬಾಯಿಗೆ ಬೀಗ ಹಾಕುವಂತೆ ನಮ್ಮ ಕಾರ್ಯಕರ್ತರು ಕೆಲಸ ಮಾಡಬೇಕಿದೆ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಟಾನ ಸಮಿತಿ ಏರ್ಪಡಿಸಿದ್ದ ಫಲಾನುಗಳ ಸಭೆಯಲ್ಲಿ ಮಾತನಾಡಿದರು. ಗ್ಯಾರಂಟಿ ಯೋಜನೆಯ ಯಶಸ್ಸಿನಿಂದಾಗಿ ದೇಶದ ಎಲ್ಲಾ ರಾಜ್ಯ ಇತ್ತ ತಿರುಗಿ ನೋಡುವಂತೆ ಮಾಡಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ವಿರೋಧ ಪಕ್ಷದ ಕೇಂದ್ರದ ನಾಯಕರ ಬಾಯಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಅಪ ಪ್ರಚಾರದ ಮಾತುಗಳು ಬರುತ್ತಿದೆ ಎಂದರು.
ಮುಂದೆ ಜಿ.ಪಂ. ಹಾಗೂ ತಾ.ಪಂ. ಚುನಾವಣೆ ಎದುರಿಸಲು ಗ್ಯಾರಂಟಿ ಯೋಜನೆ ದಾರಿದೀಪವಾಗಿದೆ. ಹಾಗಾಗಿ ಗ್ಯಾರಂಟಿ ಮತ್ತು ಸಿದ್ದರಾಮಯ್ಯ ಸರಕಾರದ ಜನಪರ ಯೋಜನೆ ಬಗ್ಗೆ ಜನರಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಹಾಗೂ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದ ಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ 2062966 ಮಹಿಳೆಯರು, ಗೃಹಜ್ಯೋತಿ 308058 ಕುಟುಂಬ, ಅನ್ನಭಾಗ್ಯ 242703 ಕುಟುಂಬ, ಶಕ್ತಿ ಯೋಜನೆಯಲ್ಲಿ 3.5 ಕೋಟಿ ಮಹಿಳೆಯರು ಬಳಕೆ ಮಾಡಿಕೊಂಡಿದ್ದಾರೆ. ಇದರಿಂದ ಗ್ಯಾರಂಟಿ ಯೋಜನೆ ಕಟ್ಟ ಕಡೆಯ ವ್ಯಕ್ತಿಗೆ ತಲುಪಿರುವುದರಿಂದ ಸರಕಾರದ ಯೋಜನೆ ಯಶಸ್ವಿಗೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್.ಜಯರಾಂ ವಹಿಸಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಸಮಿತಿಯ ಕಾರ್ಯದರ್ಶಿ ಹಾಗೂ ತಾ.ಪಂ. ಇಒ ದಯಾವತಿ, ಸದಸ್ಯರಾದ ಚಂದ್ರಯ್ಯ ಸಲ್ಲಿ, ಗುರುವಪ್ಪ, ಎಚ್.ಪಿ.ರಮೇಶ್, ನಾರಾಯಣ ನಿಡಗೂಡು, ಶ್ರೀನಿವಾಸ್ ಕುನ್ನಳ್ಳಿ, ನವೀನ್ ಕೆಂಜಿಗೆ, ಜಯಮ್ಮ, ಲೀಲಾವತಿ ಬಣಕಲ್, ದೀಕ್ಷಿತ್ ಹಾಲೂರು, ಬಿ.ಕೆ.ಜಯಮ್ಮ, ಇರ್ಫಾನ್ ಬಣಕಲ್, ಮೆಲ್ವಿನ್ ಮತ್ತಿತರರಿದ್ದರು.