लाइव कैलेंडर

February 2025
M T W T F S S
 123
45678910
11121314151617
18192021222324
25262728293031
08/02/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಅನಿರೀಕ್ಷಿತ ರೋಗಗಳು ಮತ್ತು ಸಾವುಗಳ ಸುತ್ತಾ ನಿಜ ಬದುಕಿನ ಹುಡುಕಾಟ………..

1 min read

ಅನಿರೀಕ್ಷಿತ ರೋಗಗಳು ಮತ್ತು ಸಾವುಗಳ ಸುತ್ತಾ ನಿಜ ಬದುಕಿನ ಹುಡುಕಾಟ………..

ಆರೋಗ್ಯಕ್ಕೆ ಸಂಬಂಧಿಸಿದ ಆಘಾತಕಾರಿ ಸುದ್ದಿಗಳು ಸಹಜವಾಗುತ್ತಿರುವ ಕಾಲಘಟ್ಟದಲ್ಲಿ ನಾವು ನೀವು…..

ಕೆಲವು ದಶಕಗಳ ಹಿಂದೆ 80 ರ ನಂತರದ ಅನಾರೋಗ್ಯ ಮತ್ತು ಸಾವುಗಳ ಸುದ್ದಿಗಳನ್ನು ಕೇಳುತ್ತಿದ್ದೆವು. ನಂತರದಲ್ಲಿ 70 ರ ಆಸುಪಾಸಿನ ವಯಸ್ಸು, ತದನಂತರ 60 ರ ಸುತ್ತಮುತ್ತಲಿನ ವಯಸ್ಸು, ಕೆಲವು ವರ್ಷಗಳ ಹಿಂದೆ 40/50 ರ ವಯಸ್ಸಿನಲ್ಲಿಯೇ ಅನಾರೋಗ್ಯ ಮತ್ತು ಸಾವುಗಳು ಸಾಮಾನ್ಯ ಎನ್ನುವಂತಾಗಿ, ಇತ್ತೀಚೆಗೆ 20/30/40 ರ ನಡುವೆಯೂ ಪ್ರಕರಣಗಳು ಹೆಚ್ಚಾಗುತ್ತಿವೆ…..

ಇದು ಅನಿರೀಕ್ಷಿತವಲ್ಲ. ಬಹುತೇಕ ನಿರೀಕ್ಷಿತವೇ. ಕಳೆದ 15/20 ವರ್ಷಗಳ ಜೀವನ ಶೈಲಿಯ ದುಷ್ಪರಿಣಾಮ ಈಗ ನಿಧಾನವಾಗಿ ನಮ್ಮ ಮೇಲೆ ಪ್ರಭಾವ ಬೀರತೊಡಗಿದೆ. ಈಗ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಆದರೆ ಸಮಸ್ಯೆಯ ಮೂಲವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಅತ್ಯಂತ ಮೂಲಭೂತ ಸಮಸ್ಯೆ ಎಂದರೆ ಮನುಷ್ಯ ಹೆಚ್ಚು ಶಿಕ್ಷಣ ಪಡೆದು ಅಕ್ಷರಸ್ಥನಾದಷ್ಟು ಸಾಮಾಜಿಕ ಸ್ಪಂದನೆ ತುಂಬಾ ಕಡಿಮೆಯಾಗಿದೆ. ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿಯ ಸಂದರ್ಭದಲ್ಲೂ ನೇರ ಪ್ರತಿಕ್ರಿಯೆ ಬಹುತೇಕ ನಾಶವಾಗಿದೆ. ಕೇವಲ ಸಾಮಾಜಿಕ ಜಾಲತಾಣಗಳ ಮೂಲಕ ಒಂದಷ್ಟು ಉಡಾಫೆ ಅಭಿಪ್ರಾಯ ವ್ಯಕ್ತಪಡಿಸುವುದು ಬಿಟ್ಟರೆ ಸಮಗ್ರ ಚಿಂತನೆಯ ಒಳನೋಟ ಮಾಯವಾಗಿ ಸಂಕುಚಿತ ಮನೋಭಾವ ಬೆಳೆದಿದೆ……..

ಆರ್ಥಿಕ ಗುಲಾಮಿತನದ ಸುಳಿಗೆ ಸಿಲುಕಿ ತಾನು ತನ್ನ ಕುಟುಂಬ ಎಂಬುದಷ್ಟೇ ಆತನ ಆದ್ಯತೆಯಾಗಿದೆ. ಅದರ ಪರಿಣಾಮ ಒಂದು ಸ್ವಂತ ಮನೆ, ಕಾರು, ನಿಶ್ಚಿತ ತಿಂಗಳ ಆದಾಯ ಗಳಿಸಲು ತನ್ನ ಬದುಕಿನ ಗುರಿಯನ್ನು ನಿಗದಿಪಡಿಸಿಕೊಂಡಿದ್ದಾನೆ. ಸಮಯದ ಮಿತಿ ಇಲ್ಲದೇ ಬಹುತೇಕ ಕುಟುಂಬದ ಎಲ್ಲಾ ವಯಸ್ಕರು ಉದ್ಯೋಗ ಮಾಡಬೇಕಾದ ಅನಿವಾರ್ಯತೆ ಇದೆ. ಇದರ ಪರಿಣಾಮ ಸುತ್ತಮುತ್ತಲಿನ ಒಟ್ಟು ಆಗುಹೋಗುಗಳಿಗೆ ಆತ ಹೆಚ್ಚು ಕಡಿಮೆ ಕುರುಡಾಗಿದ್ದಾನೆ.

ಇದರ ಲಾಭ ಪಡೆಯಲು ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸರ್ಕಾರಗಳು ಅಭಿವೃದ್ಧಿ ಎಂಬ ಬಲೆ ಬೀಸಿದರು. ಶಿಕ್ಷಣ ದುಬಾರಿಯಾಯಿತು, ಗ್ಯಾಸ್, ವಿದ್ಯುತ್, ನೀರು, ಮನೆ ಬಾಡಿಗೆ, ಜೀವ ವಿಮೆ, ಮೊಬೈಲ್ ಇಂಟರ್ನೆಟ್, ಟೋಲ್ ಬೆಲೆ ಹೆಚ್ಚು ಮತ್ತು ಅನಿವಾರ್ಯಿತು, ಸಿಮೆಂಟ್ ಕಬ್ಬಿಣ, ಫರ್ನೀಚರ್, ಲೈಟ್ಸ್, ಇಂಟೀರಿಯರ್ ಮುಂತಾದ ಮನೆ ನಿರ್ಮಾಣ ಗಗನಕ್ಕೇರಿತು. ತೆರಿಗೆ, ಆರೋಗ್ಯ, ಮದುವೆ ಖರ್ಚುಗಳು ಎಲ್ಲವೂ ಹೆಚ್ಚಾಗುತ್ತಲೇ ಇದೆ. ಇದೆಲ್ಲದರ ಪರಿಣಾಮ ಸಮಯದ ಒತ್ತಡಕ್ಕೆ ಸಿಲುಕಿದ. ಸಾಮಾಜಿಕ ಸೂಕ್ಷ್ಮತೆ ಕಳೆದುಕೊಂಡು ಬಹುತೇಕ ನಿರ್ವೀರ್ಯನಾದ…..

ಯಾವಾಗ ಆತ ತನ್ನ ಸಂವೇದನಾ ಶೀಲತೆಯನ್ನು ಕಳೆದುಕೊಂಡು ಹಣ ಕೇಂದ್ರಿತ ಮನಸ್ಥಿತಿ ಬೆಳೆಸಿಕೊಂಡನೋ ಆಗಲೇ ಅವನ ದೈಹಿಕ ಮತ್ತು ಮಾನಸಿಕ ಅಧೋಗತಿ ಪ್ರಾರಂಭವಾಯಿತು….

ಕುಡಿಯುವ ನೀರು, ಉಸಿರಾಡುವ ಗಾಳಿ, ಸೇವಿಸುವ ಆಹಾರ ವಿಷಯುಕ್ತವಾಯಿತು. ಶ್ವಾಸ ಕೋಶ, ರಕ್ತನಾಳಗಳು, ನರಮಂಡಲ, ಕರುಳು, ಹೃದಯ ಸೇರಿ ಎಲ್ಲವೂ ಶಿಥಿಲವಾಗತೊಡಗಿತು. ತಂತ್ರಜ್ಞಾನದ ಅಭಿವೃದ್ಧಿ ದೇಹದ ಚಲನೆಯನ್ನು ನಿಯಂತ್ರಿಸಿತು. ಒತ್ತಡ ದೇಹದ ತೂಕವನ್ನು ಹೆಚ್ಚಿಸಿತು. ಹಣ ನಮ್ಮನ್ನೇ ಖರೀದಿ ಮಾಡಿತು. ದುರ್ಬಲಗೊಂಡ ದೇಹ ಮತ್ತು ಮನಸ್ಸು ರೋಗಗಳ ಗೂಡಾಯಿತು……

ಹಳೆ ಖಾಯಿಲೆಗಳ ಜೊತೆ ಹೊಸ ಖಾಯಿಲೆಗಳು ಸೃಷ್ಟಿಯಾದವು. ವೈದ್ಯಕೀಯ ಕ್ಷೇತ್ರ ಹೆಚ್ಚು ಮುಂದುವರಿದಷ್ಟು ಆರೋಗ್ಯವಂತರ ಸಂಖ್ಯೆ ಕಡಿಮೆಯಾಯಿತು. ( Medical science is so advanced that only few healthy people is living in this earth.)

ಮೆಟ್ರೋ, ಫ್ಲೈ ಓವರ್, ದಶಪಥ ರಸ್ತೆ, ಡಿ ಮಾರ್ಟ್, ವಿಮಾನ ನಿಲ್ದಾಣ, ಸ್ಮಾರ್ಟ್ ಸಿಟಿ, ಅದ್ಬುತ ಕಟ್ಟಡಗಳು, ವೇಗದ ವಾಹನಗಳು, ಹೈಟೆಕ್ ಆಸ್ಪತ್ರೆಗಳು, ಶಾಪಿಂಗ್ ಮಾಲ್ ಗಳು ಮುಂತಾದ ಕೆಲಸಗಳನ್ನು ಅತ್ಯಂತ ಸಂಭ್ರಮಿಸುವ ಜನಗಳು, ಮನುಷ್ಯ ದೇಹವನ್ನು ಅತ್ಯಂತ ಕಾಡುತ್ತಿರುವ ಆಹಾರದ ಕಲಬೆರಕೆ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ಆರೋಗ್ಯ ವಿಮೆ ಮತ್ತು ಆಸ್ಪತ್ರೆಗಳ ಖರ್ಚಿನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

ತೀರಾ ವಿಚಿತ್ರವೆಂದರೆ,
ಸ್ವಂತ ಮನೆಯಲ್ಲಿ ವಾಸಿಸುವ ಜೀತದಾಳುಗಳು, ಕಾರಿನಲ್ಲಿ ಓಡಾಡುವ ಜೀತದಾಳುಗಳು, ಅತ್ಯಧಿಕ ಸಂಬಳ ಪಡೆಯುವ ಜೀತದಾಳುಗಳು, ದೊಡ್ಡ ಅಧಿಕಾರದಲ್ಲಿ ಇರುವ ಜೀತದಾಳುಗಳು, ಡಾಕ್ಟರೇಟ್ ಮಾಡಿಯೂ ಜೀತದಾಳುಗಳಾಗಿರುವವರು ಇತ್ಯಾದಿ ಇತ್ಯಾದಿ ಆಧುನಿಕ ಜೀತದಾಳು ಸಮುದಾಯಗಳು ಸೃಷ್ಟಿಯಾಗಿವೆ. ಅವು ಎಲ್ಲಾ ಕ್ಷೇತ್ರಗಳಲ್ಲೂ ಇದೆ…..

ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಜೀವಂತ ಶವಗಳಂತೆ ಬದುಕುತ್ತಿರುವ ಅಸಂಖ್ಯಾತ ಮನುಷ್ಯ ಪ್ರಾಣಿಗಳು ಈಗ ಅನಿರೀಕ್ಷಿತ ರೋಗ ಸಾವುಗಳಗೆ ಆತಂಕ ಎದುರಿಸುವ ಪರಿಸ್ಥಿತಿ ಸೃಷ್ಠಿಯಾಗಿದೆ. ತನ್ನ ವಾಹನದ ಸುರಕ್ಷತೆ ಮತ್ತು ಇಂಧನದ ಉಳಿತಾಯದಲ್ಲಿ ಸುಖ ಬಯಸುವ, ಫ್ಲೈ ಓವರ್ ಕೆಳಗೆ ನಾಶವಾಗುತ್ತಿರುವ ತನ್ನ ಅನ್ನದಾತನ ಬದುಕಿನ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿಸುವ ದುರಹಂಕಾರಿ ಮನುಷ್ಯ ಪ್ರಜ್ಞೆ, ಬದಲಾದ ಸುಖದ ಸ್ಪರ್ಶದ ಕಲ್ಪನೆ, ಆತನ ‌ಪಂಚೇಂದ್ರಿಯಗಳ ಕಾರ್ಯವಿಧಾನದ ಬಗ್ಗೆಯೇ ಅನುಮಾನ ಮೂಡಿಸಿದೆ…..

ನಿಜವಾದ ಅಭಿವೃದ್ಧಿ ಆರೋಗ್ಯವಂತ‌ ದೇಹ, ಸ್ವಸ್ಥ ಮನಸ್ಸು, ನೆಮ್ಮದಿ ಸಂತೋಷದ ಬದುಕು, ಪ್ರೀತಿಯ ಸಂಬಂಧಗಳು, ಸುರಕ್ಷತೆಯ ಭಾವ, ಬದುಕಿನ ಸಾರ್ಥಕತೆಯ ಕ್ಷಣಗಳ ಹೆಚ್ಚಳವೇ ಹೊರತು ಸ್ವಾತಂತ್ರ್ಯ ಕಳೆದುಕೊಂಡ ನಿದ್ರೆಯ ಕ್ಷಣಗಳು, ಊಟದ ಅವಧಿಗಳು, ಮೈಥುನದ ಸಮಯಗಳು, ವಿಶ್ರಾಂತಿಯ ಸನ್ನಿವೇಶಗಳು……

ಯೋಚಿಸುವ ಸರದಿ ನಮ್ಮದು. ಸಮೂಹ ಸನ್ನಿಗೆ ಒಳಗಾಗಿ ಮರೆಯಾಗುವ ಮುನ್ನ ಮತ್ತೊಮ್ಮೆ ನಮ್ಮನ್ನು ನಾವು ಹುಡುಕಿಕೊಳ್ಳೋಣ.
ಸಾಮಾಜಿಕ ಸನ್ನಿವೇಶಗಳಿಗೆ ನೇರವಾಗಿ ಪ್ರತಿಕ್ರಿಯಿಸೋಣ. ವ್ಯಾವಹಾರಿಕ ಜಗತ್ತಿನಲ್ಲಿ ಇದ್ದೂ ನಮ್ಮ ಮೇಲೆ ನಾವು ನಿಯಂತ್ರಣ ಪಡೆಯೋಣ. ಜೀತದಾಳು ಬದುಕಿಗೆ ಮುಕ್ತಿ ನೀಡಿ ಸ್ವಾತಂತ್ರ್ಯದ ತಂಗಾಳಿಗೆ ಮೈ ಮನಸ್ಸು ತೆರೆದು ಕೊಳ್ಳೋಣ..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……..

About Author

Leave a Reply

Your email address will not be published. Required fields are marked *

You may have missed