SARFAESI ಸಂಕೋಲೆಯಿಂದ ಕಾಫಿ ಬೆಳೆಗಾರರಿಗೆ ಮುಕ್ತಿ
1 min read
SARFAESI ಸಂಕೋಲೆಯಿಂದ ಕಾಫಿ ಬೆಳೆಗಾರರಿಗೆ ಮುಕ್ತಿ
ಈ ಹಿಂದೆ ನಿರ್ದಿಷ್ಟ ಮೊಕದ್ದಮೆಯೊಂದರ ತೀರ್ಪಿನ ಆಧಾರದಲ್ಲಿ ಎಲ್ಲ ಕಾಫಿ ಬೆಳೆಗಾರರಿಗೂ ಕಂಟಕ ಪ್ರಾಯವಾದ ಸರ್ಫಾಸಿ ಕಾಯ್ದೆಯನ್ನು ಅನ್ವಯಿಸಿ ತೋಟಗಳನ್ನು ಇ-ಹರಾಜು ಮಾಡಲು ಬ್ಯಾಂಕ್ ಗಳು ಸಜ್ಜಾಗಿದ್ದವು.
ಈ ಹಿಂದೆ ಮೂರೂ ಜಿಲ್ಲೆಗಳಲ್ಲಿ ಹಲವಾರು ಕಾಫಿ ತೋಟಗಳನ್ನ ಹರಾಜು ಮಾಡಲಾಗಿತ್ತು.
ಮೂಡಿಗೆರೆ ತಾ ಬೆಳೆಗಾರರ ಸಂಘ ಈ ಬಗ್ಗೆ ಹೋರಾಟ ನಡೆಸಿತ್ತು.
ಚಿಕ್ಕಮಗಳೂರು ಹಾಸನ ಹಾಗೂ ಕೊಡಗಿನಲ್ಲಿ ಅನೇಕ ಪ್ರತಿಭಟನಾ ಸಭೆಗಳು ನಡೆದಿದ್ದವು.
ಮೂಡಿಗೆರೆ ಯಲ್ಲಿ ಕೆನರಾ ಬ್ಯಾಂಕ್ ಎದುರು ಪ್ರತಿಭಟನಾ ಧರಣಿ ಕೂಡ ಆಯೋಜಿಸಲಾಗಿತ್ತು.
ಕಳೆದ ತಿಂಗಳು ಮಂಗಳೂರಿನಲ್ಲಿ ಕೂಡ ಕೆನರಾ ಬ್ಯಾಂಕ್ ವಿರುದ್ಧ ತೀವ್ರ ಪ್ರತಿಭಟನೆ ನಡೆದಿತ್ತು.
ಉಡುಪಿ-ಚಿಕ್ಕಮಗಳೂರು ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರ ಮಧ್ಯಪ್ರವೇಶದಿಂದ ಪ್ರತಿಭಟನೆ ಹಿಂಪಡೆಯಲಾಗಿತ್ತು.
ತದನಂತರ ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಬ್ಯಾಂಕರ್ ಗಳ ಹಾಗೂ ಬೆಳೆಗಾರರ ಸಭೆಯನ್ನ ಮಾನ್ಯ ಸಂಸದರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.
ಕಾಫಿ ಮಂಡಳಿ ಅಧ್ಯಕ್ಷರಾದ ಶ್ರೀ ಎಂ ಜೆ ದಿನೇಶ್ ರವರು ಪರಿಷತ್ ಉಪಸಭಾಪತಿಗಳಾದ ಶ್ರೀ ಎಂ ಕೆ ಪ್ರಾಣೇಶ್ ರವರು ಶಾಸಕರಾದ ಶ್ರೀ ತಮ್ಮಯ್ಯನವರು ಹಾಗೂ ಪರಿಷತ್ ಸದಸ್ಯರಾದ ಶ್ರೀ ಸಿ ಟಿ ರವಿ ಯವರು ಬ್ಯಾಂಕರ್ ಗಳಿಗೆ ಕಟ್ಟು ನಿಟ್ಟಾದ ಸೂಚನೆ ನೀಡಿ ಯಾವುದೇ ಬೆಳೆಗಾರರ ತೋಟಗಳನ್ನ ಏಪ್ರಿಲ್ ವರೆಗೆ ಇ-ಹರಾಜು ಮಾಡದಂತೆ ಆಗ್ರಹಿಸಿದ್ದರು.
ನಿನ್ನೆ 04-12-24 ದ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಕಾಫಿ ಸಂಬಂಧಿತ ಚರ್ಚೆಯಲ್ಲಿ ಕೇಂದ್ರ ವಾಣಿಜ್ಯ ಸಚಿವರಾದ ಶ್ರೀ ಪಿಯೂಷ್ ಗೋಯಲ್ ರವರಿಗೆ ಪರಿಸ್ಥಿತಿಯನ್ನ ವಿವರಿಸಿದಾಗ ಕಾಫಿ ಕೃಷಿ ಸಂಬಂಧಿತ ಸಾಲಗಳಿಗೆ SARFAESI ಅನ್ವಯವಾಗುವುದಿಲ್ಲವೆಂಬ ಸಮಾಧಾನಕರ ಉತ್ತರ ದೊರೆತಿದೆ.
ಮಾನ್ಯ ಸಂಸದರ ಜನಪರ ಕಾಳಜಿ ಹಾಗೂ ಬೆಳೆಗಾರರ ಕುರಿತಾದ ಕಳಕಳಿಗೆ ಮೂಡಿಗೆರೆ ತಾ ಬೆಳೆಗಾರರ ಸಂಘದ ಅಧ್ಯಕ್ಷರಾದ ಬಿ ಆರ್ ಬಾಲಕೃಷ್ಣ ಬಾಳೂರು ಅವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
SARFAESl ಕುರಿತಾಗಿ ಸರ್ಕಾರದ ಮಟ್ಟಕ್ಕೆ ಈ ವಿಚಾರ ಮುಟ್ಟಿಸುವಲ್ಲಿ ಪ್ರತ್ಯಕ್ಷವಾಗಿ / ಪರೋಕ್ಷವಾಗಿ ಶ್ರಮಿಸಿದ ಎಲ್ಲ ಮಹನೀಯರಿಗೂ ಬೆಳೆಗಾರರ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಹಾಗೂ ಸಂಸತ್ತಿನಲ್ಲಿ ಸಚಿವರು ಸರ್ಫಾಸಿ ಕುರಿತಾಗಿ ನೀಡಿದ ಉತ್ತರ ಹಾಗೂ ಅಭಿಪ್ರಾಯವನ್ನು ರಿಸರ್ವ್ ಬ್ಯಾಂಕ್ ಮೂಲಕ ಎಲ್ಲ ಬ್ಯಾಂಕ್ ಗಳಿಗೂ ಸ್ಪಷ್ಟವಾಗಿ ರವಾನೆ ಆಗುವಂತೆ ಕ್ರಮವಹಿಸುವಂತೆ ವಿನಂತಿಸಿಕೊಂಡಿರುತ್ತಾರೆ.