ಬೆಟ್ಟಗೆರೆ ಫೋಸ್ಟಾಫೀಸು ಲವ್ ಲೆಟರ್ ನಾಗರಾಜ್ ಶೆಟ್ರಿಗೆ ವಯೋನಿವೃತ್ತಿ!
1 min read
ಬೆಟ್ಟಗೆರೆ ಫೋಸ್ಟಾಫೀಸು
ಲವ್ ಲೆಟರ್ ನಾಗರಾಜ್ ಶೆಟ್ರಿಗೆ ವಯೋನಿವೃತ್ತಿ!
****
“ಶೆಟ್ರೆ, ನಮಸ್ತೇ”
“ನಮಸ್ತೆ, ಮತ್ತೇನ್ ಸಮಾಚಾರ?”
“ಏನೂ ಇಲ್ಲ ಶೆಟ್ರೇ, ನಂಗೆ ಏನಾದ್ರು ಲವ್ ಲೆಟ್ರು ಬಂದಿದೀಯಾ ಅಂತ?”
“ನಿನ್ನೆ ಟಪಾಲಿನಲ್ಲಿ ಏನು ಬಂದಿಲ್ಲ! ಇವತ್ತಿನ ಟಪಾಲಿನಲ್ಲಿ ಬರಬಹುದು! ಅರ್ಧಗಂಟೆ ಬೇಕಾದರೆ ಇಲ್ಲೇ ಕಾಯಿ. ಬಂದ್ರು ಬರಬಹುದು!”
“ಶೆಟ್ರೆ ಹಾಗೆಲ್ಲಾ ಸುಮ್ಮನೆ ಕುಳಿತು ಕಾಯಲು ಈಗ ಟೈಮಿಲ್ಲ! ಹೇಗೋ ಬಂದ್ರೆ ಕೊಡ್ತೀರಲ್ವ! ರಿಜಿಸ್ಟರ್, ಸ್ಪೀಡ್ ಪೋಸ್ಟ್ ಬಂದ್ರೆ ಕರೆಮಾಡಿ. ಮಾಮೂಲಿ ಫೋಸ್ಟ್ ಆಗಿದ್ರೆ ಮನೆ ಕಡೆಗೆ ಹೇಗೂ ಬರ್ಲೇಬೇಕಲ್ಲ, ಬರ್ತೀರಲ್ಲ ಕೊಡಿ!”
“ಅಯ್ತು ಹೂಂ!”
ಇದು ಬೆಟ್ಟಗೆರೆ ಫೋಸ್ಟಾಫೀಸಿನಲ್ಲಿ ಫೋಸ್ಟ್ ಮನ್ ಅಥವಾ ಫೋಸ್ಟ್ ರನ್ನರ್ (ಡಾಕ್ ಸೇವಕ್) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಮ್ಮ ಬೆಟ್ಟಗೆರೆಯ ನಾಗರಾಜ್ ಶೆಟ್ಟರೊಂದಿಗೆ ನಮ್ಮಿಬ್ಬರ ಮಾತಿನ ಪೀಠಿಕೆಯಲ್ಲಿ ಪ್ರಸ್ತಾಪವಾಗುತ್ತಿದ್ದ ಸಂಭಾಷಣೆಯ ಒಂದು ಝಲಕ್. ಆದರವರು ಇದೇ 2024 ರ ಸೆಪ್ಟೆಂಬರ್ 30ಕ್ಕೆ ವಯೋಸಹಜ ನಿವೃತ್ತಿ ಹೊಂದಿದ್ದಾರೆ. ಸರಿ ಸುಮಾರು 35 ವರ್ಷಗಳಿಗೂ ಅಧಿಕಕಾಲ ಸುದೀರ್ಘ ಸೇವೆಯನ್ನು ಇದೇ ಅಂಚೆ ಕಛೇರಿಯಲ್ಲಿ ಊರಿನವರ ವಿಶ್ವಾಸದೊಂದಿಗೆ ಪೂರ್ಣಗೊಳಿಸಿರುವುದು ಅವರ ಹೆಗ್ಗಳಿಕೆ. ಹೀಗಾಗಿ ನಾನಿನ್ನು ಅವರ ಬಳಿ “ಲವ್ ಲೆಟರ್ ಬಂತಾ ಶೆಟ್ರೆ?” ಎಂದು ಹೇಗೆ ಕೇಳಲಿ? ಜೊತೆಗೆ ಲವ್ ಲೆಟರ್ ಕೇಳುವ ತಮಾಷೆಯ ವಯಸ್ಸಿನಿಂದ ಗಾಂಭೀರ್ಯ ವ್ಯಕ್ತಿತ್ವದ ಕಡೆಗೂ ನೀನು ಹೆಜ್ಜೆ ಹಾಕಬೇಕು. ಆದಷ್ಟು ಬೇಗನೆ ಒಂದು ಸಾಂಸಾರಿಕ ಜೀವನವನ್ನು ಸಾಗಿಸಲು ಅಡಿಯಿಡಬೇಕು. ಇಲ್ಲದಿದ್ದರೆ ನನ್ನಂತೆ ನಿನಗೂ ವಯೋ ನಿವೃತ್ತಿ ಖಾತ್ರಿ! ಬದುಕಿನಲ್ಲಿ ವಯಸ್ಸು ತುಂಬಾ ಕಡಿಮೆ. ಅದು ಕಳೆದುಹೋಗುವುದು ಗೊತ್ತೇ ಆಗುವುದಿಲ್ಲ ಎಂಬ ಬದುಕಿನ ಪ್ರೀತಿಯ ಸಂದೇಶದಂತೆ ಪ್ರಕೃತಿ ಸಹಜ ಸಮೃದ್ಧ ವಯೋ ನಿವೃತ್ತಿ ಹೊಂದಿದ್ದಾರವರು ಎನಿಸುತ್ತದೆ ನನಗೆ!
ಈ ವಿಷಯ ತಿಳಿದ ಕೆಲವು ಹಿರಿಯರು “ಓ ಹೌದಾ? ನಾಗರಾಜ್ ಶೆಟ್ರಿಗೆ ಅಷ್ಟು ಬೇಗ ಅರವತ್ತು ವರ್ಷ ಆಗೋಯ್ತಾ? ಹಂಗೆ ಅನ್ಸಲ್ಲ ಮಾರಾಯಾ! ಫೋಸ್ಟ್ ಮಾಸ್ಟರ್ ಪ್ರಕಾಶ್ ಭಟ್ರಿಗೂ ಕೂಡ ಇನ್ನು ಸರ್ವೀಸ್ ಮುಗಿಯುವ ಹೊತ್ತು! ಇಬ್ಬರೂ ನಮ್ಮ ಊರಿನವರೇ! ಇಲ್ಲೇ ಕೆಲ್ಸಕ್ಕೆ ಸೇರಿ ಇಲ್ಲೇ ನಿವೃತ್ತಿ ಆಗೋದು ಅಂದ್ರೆ ವಿಶೇಷವೇ! ಅವರು ಊರಿನಲ್ಲೇ ಇದ್ದು ಸೇವೆ ಸಲ್ಲಿಸಲು ಅವಕಾಶ ಇರಲಿ ಅಂತ ಮುಂದೆ ಡೀಪಾರ್ಟ್ ಮೆಂಟ್ ಎಕ್ಸಾಮ್ ಕೂಡ ಬರೆಯಲಿಲ್ಲವೇನೋ! ಬರೆದಿದ್ದರೆ ಪ್ರಮೋಷನ್ ಆಗಿ ತಾಲ್ಲೂಕು, ಜಿಲ್ಲಾ ಅಥವಾ ಹೋಬಳಿಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಅವಕಾಶಗಳು ಒದಗಿ ಬರುತಿತ್ತು. ಅದಕ್ಕೆ ಸೇರಿದ ಕೆಲಸದಲ್ಲೇ ಸೇರಿದ ಸ್ಥಳದಿಂದಲೇ ನಿವೃತ್ತಿ ಹೊಂದಿದ ಆತ್ಮಸಂತೃಪ್ತಿ ಅವರದು!” ಎಂದು ಅಭಿಪ್ರಾಯಪಡುವುದರಲ್ಲಿ ಅಚ್ಚರಿ ಎನಿಸದು. ಜೊತೆಗೆ ಇಂತಹ ಹಿರಿಯ ಗ್ರಾಮೀಣ ಅಂಚೆ ಸೇವಕರನ್ನು ಇಲಾಖೆಯು ಸೇವಾ ಹಿರಿತನದ ಆಧಾರದ ಮೇಲೆ ಖಾಯಂ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಹಿಂದೇಟು ಹಾಕಿದ್ದೂ ಅವರ ಈ ಪರಿಯ ಜೀವನಯಾನಕ್ಕೆ ಕಾರಣವಾಗಿದ್ದೂ ದಿಟವೇ!
ಜೀವ ವಿಮಾ ನಿಗಮದ (ಎಲ್.ಐ.ಸಿ) ಪಾಲಿಸಿಗಳನ್ನು ಮಾಡಿಸಿಕೊಳ್ಳಿ. ಕಷ್ಟಕಾಲದಲ್ಲಿ ನಿಮಗೆ ನೆರವಿಗೆ ಬರುತ್ತದೆ. ದುಡಿದಿದ್ದೆಲ್ಲವನ್ನು ಖರ್ಚು ಮಾಡುವ ಮೂಲಕ ಕೊನೆಗೊಂದು ದಿನ ಬರಿಗೈ ಆಗಬೇಡಿರೆಂದು ಎಚ್ಚರಿಸಿ ತನ್ಮೂಲಕ ಬಹುತೇಕ ಗ್ರಾಮೀಣ ಜನತೆಗೆ ವರ್ತಮಾನದ ಅಂಚೆ ಪತ್ರಗಳೊಂದಿಗೆ ಭವಿಷ್ಯದ ಜೀವನ ಚಿತ್ರಗಳನ್ನು ನೋಡಿಕೊಳ್ಳುವಂತೆ ಮಾಡಿದ ಹೆಗ್ಗಳಿಕೆ ಅವರದ್ದಾಗಿದೆ.
ಕೆಲವೊಮ್ಮೆ ಕನ್ಫ್ಯೂಸ್ ಆಗಿ ಸಂಪತ್ ನ ಪತ್ರವನ್ನು ಸಮಂತ್ ನ ಕೈಗೆ ಕೊಟ್ಟು “ಥೋ! ವಾಪಸ್ಸು ಕೊಡು. ಅದು ನಿಂದಲ್ಲ ಅವನದು” ಅಂತ ಮೀಸೆಯಡಿ ನಗಾಡಿ ಕನ್ನಡಕ ಏರಿಸಿ ಮತ್ತೊಮ್ಮೆ ಕನ್ಫರ್ಮ್ ಆಗಿ ಸರಿಯಾದ ಹೆಸರು ಮತ್ತು ವಿಳಾಸವನ್ನು ದೃಢಪಡಿಸಿ ಸಕಾಲದಲ್ಲಿ ತಲುಪಿಸಿದಾಗ ಸಂಪತ್ತನಿಗೂ ಈ ವಿಷಯವನ್ನು ಅವರಿಂದಲೇ ಕೇಳಿ ತಿಳಿದು ಮುಖದ ತುಂಬಾ ನಗು ಅರಳುತಿತ್ತು!
ಮೊದಮೊದಲು ಹಳೆಯ ಮಣ್ಣಿನ ಗೋಡೆಯ ಸಿರಕಲು ಸಣ್ಣ ಕೊಠಡಿ ಹಾಗೂ ಗೆದ್ದಲು ಹಿಡಿದ ಮರದ ಬಾಗಿಲು, ಸೋರುವ ಹೆಂಚಿನ ಮಾಡಿನಲ್ಲಿ ಕಾರ್ಯನಿರ್ವಹಿಸುವ ಅನಿವಾರ್ಯ ಸಂದರ್ಭಗಳಲ್ಲಿ ಪರ್ಯಾಯವಾಗಿ ಹೊಸತೊಂದು ಒಂಟಿಕೋಣೆಯ ಸಿಮೆಂಟಿನ ಪುಟ್ಟ ಕಟ್ಟಡ ಬೆಟ್ಟಗೆರೆ ಬಸ್ ಸ್ಟಾಪ್ ನ ಹೊದ್ದಿಗೆ ತಲೆ ಎತ್ತಿದ್ದು ಈ ಫೋಸ್ಟ್ ರನ್ನರ್ ನಾಗರಾಜ್ ಶೆಟ್ರಿಗೇನು? ಫೋಸ್ಟ್ ಮಾಸ್ಟರ್ ಪ್ರಕಾಶ್ ಭಟ್ರಿಗೂ ಹೊಸತನದ ಒಂದು ಖದರ್ ಕಲರ್ ತಂದುಕೊಟ್ಟಂತಾಗಿದ್ದು ಸುಳ್ಳಲ್ಲ!
ಮೊದಮೊದಲು ಮುಂಜಾನೆ ಹಾಗೂ ಇಳಿಸಂಜೆ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ಮಕ್ಕಳಿಗೆ ಅಟ್ಲಾಸ್ ಸೈಕಲ್ ನಲ್ಲಿ ಒಂದೊಬ್ಬ ಚಾಕ್ಲೇಟ್ ಹೀರೋನಂತೆ ಕಾಣಿಸಿಕೊಂಡು ಟ್ರಿಣ್ ಟ್ರಿಣ್ ಅಂತ ಬೆಲ್ ಮಾಡುತ್ತ ನಡುನಡುವೆ ಜಲ್ಲಿರಸ್ತೆಯಲ್ಲಿ ಸಾಗುತ್ತಲೇ ‘ಓ ಏನೋ?’ ಅಂತ ಗುರುತಿಡಿದು ಮಾತನಾಡಿಸುತ್ತಿದ್ದ ಇದೇ ಅಂಚೆಮಾಮ ನಾಗರಾಜ್ ಶೆಟ್ರು ತದನಂತರದ ದಿನಗಳಲ್ಲಿ ಹೋಂಡಾ ಆಕ್ಟೀವಾ ಸ್ಕೂಟರ್ ಏರಿ ಸವಾರಿ ಮಾಡಿಕೊಂಡು ಬಂದು ಕೀ.. ಎಂಬ ಹಾರನ್ ಮಾಡುತ್ತ ಮನೆಗೆ ಎದುರಿಗೆ ಬಂದು ನಿಲ್ಲಿಸಿ ಸಡಗರದಿಂದ ಅದರ ಸೀಟ್ ಬಾಕ್ಸಿನಲ್ಲಿ ಇದ್ದ ಕವರ್ ತೆಗೆದು “ತಗೋ ಈ ಫಾರ್ಮ್ ಗೆ ಸಹಿಹಾಕು ಒಂದು ರಿಜಿಸ್ಟರ್ಡ್ ಲವ್ ಲೆಟರ್ ಫೋಸ್ಟ್ ಬಂದಿದೆ!” ಎಂಬ ಅವರ ಧ್ವನಿಯಲ್ಲಿ ಒಂದು ಪ್ರೀತಿಯ ಮನಸಿತ್ತಲ್ಲ! ಅದಕ್ಕಾಗಿ ಈಗ ಒಂದು ಪ್ರೀತಿಯ ನೆನಪಿನ ಅಭಿನಂದನೆಗಳು.
ಬರಹ:
ಡಾ.ಸಂಪತ್ ಬೆಟ್ಟಗೆರೆ, ಲೇಖಕರು, ಕನ್ನಡ ಉಪನ್ಯಾಸಕರು