AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮತ್ಸ್ಯ ಕ್ಷಾಮ; ಬಲೆಗೆ ಬೀಳುತ್ತಿಲ್ಲ ಮೀನು* *ಮಲ್ಪೆಯಲ್ಲೇ 1ಕೆಜಿ ಬಂಗುಡೆಗೆ 402 ರೂಪಾಯಿ!*

1 min read

*ಮತ್ಸ್ಯ ಕ್ಷಾಮ; ಬಲೆಗೆ ಬೀಳುತ್ತಿಲ್ಲ ಮೀನು*
*ಮಲ್ಪೆಯಲ್ಲೇ 1ಕೆಜಿ ಬಂಗುಡೆಗೆ 402 ರೂಪಾಯಿ!*

ಮಲ್ಪೆ: ಕರಾವಳಿಯಲ್ಲಿ ಮೀನುಗಾರಿಕೆಗೆ ಋತು ಆರಂಭದಲ್ಲೇ ಕ್ಷಾಮ ತಲೆದೋರಿದೆ. ಹವಾಮಾನ ವೈಪರೀತ್ಯದ ಕಾರಣದಿಂದ ಬೋಟುಗಳು ಲಂಗರು ಹಾಕುವಂತಾಗಿದೆ. ಗಾಳಿ ಹಾಗೂ ನೀರಿನ ಒತ್ತಡ ಒಂದು ಕಡೆಯಾದರೆ, ಕಷ್ಟಪಟ್ಟು ಮೀನುಗಾರಿಕೆ ನಡೆಸುವ ಬೋಟುಗಳಿಗೂ ಮೀನು ಸಿಗದೆ ಮೀನುಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಜು. 31ರಂದು ಮೀನುಗಾರಿಕೆ ನಿಷೇಧ ಅವಧಿ ಮುಗಿದ ಬಳಿಕ ಆಳಸಮುದ್ರ ಸಹಿತ ಎಲ್ಲ ವಿಧದ ಬೋಟುಗಳು ಉತ್ಸಾಹದಿಂದ ಸಮುದ್ರಕ್ಕೆ ಇಳಿದಿದ್ದವು. ಆದರೆ ಶೇ. 95ರಷ್ಟು ಬೋಟುಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಕ್ಕಿಲ್ಲ.
*ಬಂದರು ಸ್ತಬ್ಧ*
ಏಷ್ಯಾದಲ್ಲೇ ಅತಿ ದೊಡ್ಡ ಸರ್ವ ಋತು ಬಂದರು ಖ್ಯಾತಿಯ ಮಲ್ಪೆ ಮೀನುಗಾರಿಕೆ ಬಂದರು ಈಗ ಅಕ್ಷರಶಃ ಸ್ತಬ್ಧವಾಗಿದ್ದು, ಅದರ ಪರಿಣಾಮ ಕರಾವಳಿಯ ಆರ್ಥಿಕತೆಯ ಮೇಲೆ ಬೀಳುತ್ತಿದೆ. ಮಲ್ಪೆ ಬಂದರಿನಲ್ಲೇ ದಿನಕ್ಕೆ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದ್ದು, ಸುಮಾರು 50 ಸಾವಿರ ಮಂದಿ ಪ್ರತ್ಯಕ್ಷ – ಪರೋಕ್ಷವಾಗಿ ಮೀನುಗಾರಿಕೆಯನ್ನೇ ಅವಲಂಬಿಸಿಕೊಂಡಿದ್ದಾರೆ. ಕಳೆದ 15 ದಿನಗಳಲ್ಲಿ ನೂರಾರು ಕೋ. ರೂ. ನಷ್ಟ ಅಂದಾಜಿಸಲಾಗಿದೆ. 25 ವರ್ಷಗಳಿಂದ ಋತು ಆರಂಭದಲ್ಲಿ ಮೀನಿನ ಕ್ಷಾಮ ಎದುರಾಗಿಲ್ಲ. ಮಾಹಿತಿ ಪ್ರಕಾರ ಒಂದೆರಡು ದಿನಗಳಲ್ಲಿ ವಾತಾವರಣ ಸಹಜ ಸ್ಥಿತಿಗೆ ಬರಲಿದ್ದು, ಗಣೇಶ ಚತುರ್ಥಿ ಬಳಿಕ ಉತ್ತಮ ಮೀನುಗಾರಿಕೆಯ ನಿರೀಕ್ಷೆ ಇದೆ ಎಂದು ಮಲ್ಪೆ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಕೃಷ್ಣ ಸುವರ್ಣ ತಿಳಿಸಿದ್ದಾರೆ.
ಆ. 10ರಿಂದ ಆಳಸಮುದ್ರ ಬೋಟುಗಳು ಹಾಗೂ ಆ. 15ರ ಬಳಿಕ ಪರ್ಸಿನ್‌ ಸಹಿತ ಇನ್ನಿತರ ಬೋಟುಗಳು ಮೀನುಗಾರಿಕೆಗೆ ತೆರಳಿದ್ದರೂ ಎಲ್ಲರೂ ಬರಿಗೈಯಲ್ಲಿ ಮರಳುತ್ತಿದ್ದಾರೆ. ರವಿವಾರವೂ ಗಾಳಿ ಹಾಗೂ ನೀರಿನ ಒತ್ತಡದಿಂದಾಗಿ ಬಹುತೇಕ ಬೋಟುಗಳು ಮೀನುಗಾರಿಕೆ ಮಾಡಲಾಗದೆ ಕಾರವಾರ ಬಂದರನ್ನು ಪ್ರವೇಶಿಸಿವೆ. ಡೀಸೆಲ್‌ ಹಾಗೂ ಕಾರ್ಮಿಕರ ಕೂಲಿ ನೀಡಲೂ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲೂ ಬಹುತೇಕ ಮೀನುಗಾರರು ಮೀನುಗಾರಿಕೆ ಸ್ಥಗಿತಗೊಳಿಸಿದ್ದಾರೆ. ಕಳೆದ ವರ್ಷ ಈ ಹೊತ್ತಲ್ಲಿ ಬಂಗುಡೆ, ಬೂತಾಯಿ, ಕ್ಯಾದರ್‌, ಬೊಂಡಾಸ್‌, ಅಂಜಲ್‌, ರಿಬ್ಬನ್‌ಫಿಶ್‌ ಮೊದಲಾದವು ದೊಡ್ಡ ಪ್ರಮಾಣದಲ್ಲಿ ಸಿಕ್ಕಿವೆ ಎನ್ನುತ್ತಾರೆ ಮೀನುಗಾರ ಸಂಘದ ಮಾಜಿ ಅಧ್ಯಕ್ಷ ಸತೀಶ್‌ ಕುಂದರ್‌.
*ಸಮುದ್ರ ಮಧ್ಯೆ ಸಾಮೂಹಿಕ ಪ್ರಾರ್ಥನೆ*
ಮಲ್ಪೆ ಪರ್ಸಿನ್‌ ಮೀನುಗಾರರಿಗೆ ಮೀನಿನ ಕ್ಷಾಮ, ಹವಾಮಾನ ವೈಪರೀತ್ಯ ನಿವಾರಣೆಗಾಗಿ ಕೊಡವೂರು ಶಂಕರನಾರಾಯಣ, ಉಚ್ಚಿಲ ಮಹಾಲಕ್ಷ್ಮೀ, ಕಾಪು ಮಾರಿಯಮ್ಮ ಬೊಬ್ಬರ್ಯ ದೈವಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಎಲ್ಲ ದೈವ ದೇವರ ಪ್ರಸಾದವನ್ನು ಶನಿವಾರ ಸಮುದ್ರ ಮಧ್ಯೆ (10 ಮಾರು ಆಳ ದೂರದಲ್ಲಿ) ಎಲ್ಲ ಬೋಟುಗಳನ್ನು ಒಂದೆಡೆ ಸೇರಿಸಿ ಸಾಮೂಹಿಕವಾಗಿ ಪ್ರಾರ್ಥನೆ ನಡೆಸಿ ಪ್ರಸಾದವನ್ನು ಸಮುದ್ರರಾಜನಿಗೆ ಅರ್ಪಿಸಿದರು.

About Author

Leave a Reply

Your email address will not be published. Required fields are marked *