ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಮಹನೀಯರಿಗೆ ನಮನಗಳನ್ನು ಸಲ್ಲಿಸುತ್ತಾ,,,…
1 min read
ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಮಹನೀಯರಿಗೆ ನಮನಗಳನ್ನು ಸಲ್ಲಿಸುತ್ತಾ,,,…
ಶ್ರೀಮಂತ ಭಾರತದೊಳಗಿರುವ ಬಡ ಭಾರತಕ್ಕೂ ಸ್ವಾತಂತ್ರ್ಯ ಸಿಗಬೇಕು ಎಂಬ ಆಶಯದೊಂದಿಗೆ,,…
ಉಳ್ಳವರ ಸ್ವಾತಂತ್ರ್ಯಕ್ಕೆ ಇರುವ ಶಕ್ತಿ; ಇಲ್ಲದವರ ಬಾಳಲ್ಲಿಯೂ ಸ್ವಾತಂತ್ರ್ಯದ ಶಕ್ತಿ ಬೆಳಗಬೇಕಲ್ಲವೇ?
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ಸಹ ಪೂರ್ಣ ಸ್ವಾತಂತ್ರ್ಯ ಇಲ್ಲದ ಭಾರತವನ್ನೊಮ್ಮೆ ಸರ್ವರೂ ನೆನೆಯಬೇಕೆಂಬ ಮನವಿಯೊಂದಿಗೆ,,,,.
ಬ್ರಿಟೀಷರು ಭಾರತದಿಂದ ಹೊರ ಹೋಗಿದ್ದಾರಷ್ಟೇ…. ಇದೇ ಪೂರ್ಣ ಸ್ವಾತಂತ್ರ್ಯವಲ್ಲ.
ಆದರೆ
ಜಾತಿ ಬಿಟ್ಟು ಯೋಚಿಸುವ ಸ್ವಾತಂತ್ರ್ಯವಿಲ್ಲ;
ಧರ್ಮ ಬಿಟ್ಟು ಯೋಚಿಸುವ ಸ್ವಾತಂತ್ರ್ಯವಿಲ್ಲ;
ಪಕ್ಷ ಬಿಟ್ಟು ಯೋಚಿಸುವ ಸ್ವಾತಂತ್ರ್ಯವಿಲ್ಲ.
ಹೆಣ್ಣಿಗೆ ಸಿಕ್ಕಿರುವುದು ಚಿನ್ನ ಬಂಗಾರಿ ಎಂಬ ಹೊಗಳಿಕೆಯೇ ಹೊರತು ಸಿಕ್ಕಿರುವುದು ಸ್ವಾತಂತ್ರ್ಯವಲ್ಲ,
ರೈತನಿಗೆ ಸಿಕ್ಕಿರುವುದು ಅನ್ನದಾತ ಎಂಬ ಹೊಗಳಿಕೆಯೇ ಹೊರತು ಅವನ ಕಷ್ಟನಷ್ಟಗಳಿಂದ ಸ್ವಾತಂತ್ರ್ಯ ಸಿಕ್ಕಿಲ್ಲ,
ಬಡವನಿಗೆ ಸಿಕ್ಕಿರುವುದು ಸಾಲಗಾರನ ಪಟ್ಟವೇ ಹೊರತು ಸಾಲಕೊಟ್ಟ ಧನಿಕನಿಂದ ಸ್ವಾತಂತ್ರ್ಯ ಸಿಕ್ಕಿಲ್ಲ,
ಕಾರ್ಮಿಕರಿಗೆ ಸಿಕ್ಕಿರುವುದು ಬೆವರು ಸುರಿಸುವ ಅವಕಾಶವೇ ಹೊರತು ಬೆವರಿಗೆ ತಕ್ಕಂತೆ ಹಣ ಗಳಿಸುವ ಸ್ವಾತಂತ್ರ್ಯ ಸಿಕ್ಕಿಲ್ಲ,
ಭ್ರಷ್ಟರಿಗೆ ಸಿಕ್ಕಿರುವುದು ಹಣವೇ ಹೊರತು ಜನಸಾಮನ್ಯರ ಬಡತನಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ;
ಮತ ಮಾರಿಕೊಳ್ಳುವ ಸ್ವಾತಂತ್ರ್ಯ,
ಮತ ಖರೀದಿಸುವ ಸ್ವಾತಂತ್ರ್ಯ,
ಭ್ರಷ್ಟಾಚಾರ ಮಾಡುವ ಸ್ವಾತಂತ್ರ್ಯ,
ಹತ್ಯಾಚಾರ ಮಾಡುವ ಸ್ವಾತಂತ್ರ್ಯ,
ಅನಾಚಾರ ಮಾಡುವ ಸ್ವಾತಂತ್ರ್ಯ,
ಒಳ್ಳೆಯವರನ್ನು ಸೋಲಿಸುವ ಸ್ವಾತಂತ್ರ್ಯ,
ಕೆಟ್ಟವರನ್ನು ಗೆಲ್ಲಿಸುವ ಸ್ವಾತಂತ್ರ್ಯ,
ಸತ್ಯವನ್ನು ಹೇಳದಿರುವ ಸ್ವಾತಂತ್ರ್ಯ,
ಸುಳ್ಳನ್ನು ಹೇಳುವ ಸ್ವಾತಂತ್ರ್ಯ,
ದೇವರು-ಧರ್ಮದ ಹೆಸರಲ್ಲಿ ಭಯ ಉತ್ಪಾದಿಸುವ ಸ್ವಾತಂತ್ರ್ಯ,
ವಿವಾದ ಸೃಷ್ಟಿಸುವ ಸ್ವಾತಂತ್ರ್ಯ,
ಮೌಢ್ಯಗಳನ್ನು ಕಟ್ಟುವ ಸ್ವಾತಂತ್ರ್ಯ,
ಮೌಲ್ಯಗಳನ್ನು ಕೆಡವುವ ಸ್ವಾತಂತ್ರ್ಯ,
ಸಂವಿಧಾನವನ್ನೇ ಬದಲಾಯಿಸುವ ಸ್ವಾತಂತ್ರ್ಯ,
ಸಾರ್ವಜನಿಕವಾಗಿರುವ ಭಾರತವನ್ನು ಖಾಸಗಿಯಾಗಿಸುವ ಸ್ವಾತಂತ್ರ್ಯ,
ಸ್ವಾತಂತ್ರ್ಯ ತಂದು ಕೊಟ್ಟ ಗಾಂಧೀಜಿ ಮತ್ತು ಅದರ ಸಂತತಿಯನ್ನು ಕೊಲ್ಲುವ ಸ್ವಾತಂತ್ರ್ಯ,
ನೈತಿಕ ಮೌಲ್ಯಗಳನ್ನು ಕೊಲ್ಲುವ ಸ್ವಾತಂತ್ರ್ಯ ಭರತ ಖಂಡದಲ್ಲಿ ರಾರಾಜೀಸುತ್ತಿರುವುದು ಸ್ವತಂತ್ರ ಭಾರತದ ಲಕ್ಷಣವಲ್ಲ..
ಹೀಗೆ
ಸತ್ಯವನ್ನು ಕೊಲ್ಲುವುದಕ್ಕೆ,
ನ್ಯಾಯವನ್ನ ಹಿಸುಕುವುದಕ್ಕೆ “ಸ್ವಾತಂತ್ರ್ಯವನ್ನು” ಉಪಯೋಗಿಸಿಕೊಂಡ ಮನಸ್ಸುಗಳು ಒಮ್ಮೆ ಆತ್ಮ ಇದ್ದರೆ ಆತ್ಮಾವಲೋಕನ ಮಾಡಿಕೊಳ್ಳಲಿ.
ಕೇವಲ ಸ್ವತಂತ್ರದ ಭಾರತದ ಬಗ್ಗೆ
ಭಾಷಣ ಮಾಡುವುದಲ್ಲ,
ಧ್ವಜ ಹಿಡಿಯುವುದಲ್ಲ,
ಘೋಷಣೆ ಕೂಗುವುದಲ್ಲ ಈ ಸ್ವಾತಂತ್ರ್ಯ ದಿನಾಚರಣೆ;:
ರಾಷ್ಟ್ರಗೀತೆಯ ಆಶಯಗಳನ್ನು ತಿಳಿಯುವ,
ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ,
“ಸತ್ಯಮೇವಜಯತೇ” ಗೆ ಜೀವ ನೀಡುವ ಸಂಕಲ್ಪವೇ ನಿಜವಾದ ಸ್ವಾತಂತ್ರ್ಯೋತ್ಸವ…
ಭಾಗ್ಯವಂತರ ಭಾರತ ಕಟ್ಟಲು ಗಾಂಧಿ ಮಾರ್ಗದಲ್ಲಿ, ಅಂಬೇಡ್ಕರ್ ಅವರ ಸಂವಿಧಾನದಲ್ಲಿ, ಬುದ್ಧ ಬಸವಾದಿಗಳಾಗಲು
ವಂದೇ ಮಾತರಂ
ಸುಜಲಾಂ ಸುಫಲಾಂ ಮಲಯಜ-ಶೀತಲಾಂ ಸಸ್ಯ-ಶ್ಯಾಮಲಾಂ ಮಾತರಂ!
ಮತ್ತು
ಜನಗಣ ಮಂಗಳ ಅಧಿನಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ!
ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ ಜಯಹೇ ಎಂಬುದು ಪ್ರತಿಯೊಬ್ಬರ ಬದುಕಿನ ಯಶಸ್ಸಿನಲ್ಲಿ ಮೊಳಗಲಿ..
ಮೊದಲು ಅನ್ನ ಆಶ್ರಯ ಅಕ್ಷರದಿಂದ ಪ್ರತಿ ಭಾರತೀಯರ ಬದುಕು ಸ್ವತಂತ್ರವಾಗಿ ಹಾರಾಡಲಿ…
ಮನಸುಳಿ ಮೋಹನ್ ತರೀಕೆರೆ.