AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

…….ಕನ್ನಡದ ಶಕ್ತಿ…. 1 ರಿಂದ 10 ರವರೆಗೆ ಓದಿದ್ದು ಕನ್ನಡ ಮೀಡಿಯಂ, ಆದರೆ ಪಡೆದಿದ್ದು ಭಾರತ ರತ್ನ ಪ್ರಶಸ್ತಿ!!!!!! ಇವರೇ ನಮ್ಮ 🌹 *ಪ್ರೊ. ಸಿ.ಎನ್.ಆರ್. ರಾವ್* 🌹 ಇಂದು ಅವರ ಜನ್ಮದಿನ 💐💐

1 min read

..,…….ಕನ್ನಡದ ಶಕ್ತಿ….
1 ರಿಂದ 10 ರವರೆಗೆ ಓದಿದ್ದು ಕನ್ನಡ ಮೀಡಿಯಂ,
ಆದರೆ ಪಡೆದಿದ್ದು ಭಾರತ ರತ್ನ ಪ್ರಶಸ್ತಿ!!!!!!
ಇವರೇ ನಮ್ಮ
🌹 *ಪ್ರೊ. ಸಿ.ಎನ್.ಆರ್. ರಾವ್* 🌹
ಇಂದು ಅವರ ಜನ್ಮದಿನ
💐💐💐💐💐💐💐💐

ಭಾರತದ ಮಹಾನ್ ವಿಜ್ಞಾನಿಗಳಲ್ಲೊಬ್ಬರಾದ ಭಾರತರತ್ನ ಪ್ರೊ. ಸಿ. ಎನ್. ರಾವ್ ಅವರು ಕಳೆದ ಆರೂವರೆ ದಶಕಗಳಿಂದ ತಮ್ಮ ಜೀವನವನ್ನು ವಿಜ್ಞಾನಕ್ಕಾಗಿ ಮುಡಿಪಾಗಿಟ್ಟು ಆ ಕ್ಷೇತ್ರದಲ್ಲಿ ಅಹರ್ನಿಶಿ ದುಡಿಯುತ್ತಿದ್ದಾರೆ.
ಚಿಕ್ಕಂದಿನಿಂದಲೂ ರಾವ್ ಅವರು ಸರ್ ಸಿ. ವಿ. ರಾಮನ್ ಅವರ ಅಭಿಮಾನಿ. “ನನ್ನ ಮೇಲೆ ಬಹುವಾಗಿ ಪ್ರಭಾವ ಬೀರಿದವರು ಮಹಾನ್‌ ವಿಜ್ಞಾನಿ ಸರ್‌. ಸಿ.ವಿ. ರಾಮನ್‌ ಅವರು. ನನಗಾಗ 11 ವರ್ಷ. ಬೆಂಗಳೂರಿನಲ್ಲಿ ಕಲಿಯುತ್ತಿದ್ದೆ. ಆಗ ಅವರ ಪ್ರಭಾವಕ್ಕೆ ಒಳಗಾದೆ. ವಿಜ್ಞಾನ ಕಲಿಯಬೇಕು ಎಂಬ ಕನಸು ಮೂಡಿದ್ದು ಅದೇ ಹೊತ್ತಿನಲ್ಲಿ. ಸಿ.ವಿ. ರಾಮನ್‌ ಭಾರತರತ್ನ ಗೌರವಕ್ಕೆ ಪಾತ್ರರಾಗಿದ್ದರು. ಅವರ ಸಾಲಿನಲ್ಲಿ ನಾನು ಕೂಡಾ ಭಾರತರತ್ನ ಗೌರವ ಪಡೆದಿರವುದು ನನಗೆ ತುಂಬಾ ಸಂತೋಷ ತಂದಿದೆ. ಆದರೆ, ಅವರೊಂದಿಗೆ ನನ್ನನ್ನು ಹೋಲಿಸಿಕೊಳ್ಳಲು ಇಷ್ಟಪಡುವುದಿಲ್ಲ. ಅವರೊಬ್ಬ ಮಹಾನ್‌ ವಿಜ್ಞಾನಿ” ಎಂದು ಪ್ರೊ. ರಾವ್ ನಮ್ರರಾಗುತ್ತಾರೆ.
ರಸಾಯನಶಾಸ್ತ್ರದ ಸಾಲಿಡ್ ಸ್ಟೇಟ್ ಅಂಡ್ ಮೆಟೀರಿಯಲ್ಸ್ ಕೆಮಿಸ್ಟ್ರಿ ಹಾಗೂ ಸ್ಟ್ರಕ್ಚರಲ್ ಕೆಮಿಸ್ಟ್ರಿ ವಿಭಾಗಗಳು ಪ್ರೊ. ಸಿ. ಎನ್. ಆರ್. ರಾವ್ ಅವರ ಪ್ರಧಾನ ಸಂಶೋಧನಾ ಕ್ಷೇತ್ರಗಳು. ಈ ಕ್ಷೇತ್ರದಲ್ಲಿ ಸುಮಾರು 1600 ಸಂಶೋಧನಾ ಪ್ರಬಂಧಗಳನ್ನೂ, 50 ಬೃಹದ್ಗ್ರಂಥಗಳನ್ನೂ ರಚಿಸಿರುವ ಭಗೀರಥ ಸಾಧನೆ ಅವರದ್ದಾಗಿದೆ. ವಿಜ್ಞಾನ ಕ್ಷೇತ್ರದ ಅವರ ಇತರ ಆಸಕ್ತಿಗಳೆಂದರೆ ವಿಜ್ಞಾನ ಶಿಕ್ಷಣ ಹಾಗೂ ಶಾಲಾ ವಿದ್ಯಾರ್ಥಿಗಳೊಂದಿಗೆ ನೇರ ಸಂಪರ್ಕ ಕಾರ್ಯಕ್ರಮಗಳು.
ಹನುಮಂತ ನಾಗೇಶ್‌ ರಾವ್‌ ಮತ್ತು ನಾಗಮ್ಮ ದಂಪತಿಗಳ ಸುಪುತ್ರರಾದ ಚಿಂತಾಮಣಿ ಪ್ರೊ. ನಾಗೇಶ ರಾಮಚಂದ್ರರಾವ್‌ ಅವರು, 1934 ರ ಜೂನ್‌ 30 ರಂದು ಬೆಂಗಳೂರಿನಲ್ಲಿ ಜನಿಸಿದರು. 1951 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್‌ಸಿ ಪದವಿ ಪಡೆದ ಅವರಿಗೆ ಉತ್ತಮ ಸಂಬಳದ ನೌಕರಿ ಸಿಗುವುದು ಕಷ್ಟವಾಗಿರಲಿಲ್ಲ. ಆದರೆ ಜ್ಞಾನಾಕಾಂಕ್ಷಿಗಳಾಗಿದ್ದ ರಾವ್‌ ಪ್ರತಿಷ್ಠಿತ ಸಂಸ್ಥೆಯಾದ ಭಾರತೀಯ ವಿಜ್ಞಾನ ಮಂದಿರದಲ್ಲಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಿನಲ್ಲಿ) ಡಿಪ್ಲೋಮಾ ಮಾಡುವ ಉದ್ದೇಶ ಹೊಂದಿದ್ದರು. ಅದೇ ಸಂದರ್ಭದಲ್ಲಿ ಅವರಿಗೆ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಂಎಸ್‌ಸಿಗೆ ಪ್ರವೇಶ ಲಭಿಸಿದ್ದರಿಂದ ಅವರ ವಿಜ್ಞಾನ ಕಲಿಕೆಯ ಯಾತ್ರೆ ತಡೆಯಿಲ್ಲದೆ ಸಾಗಿತು. 1958 ರಲ್ಲಿ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪಡೆದ ಅವರು 1959 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿ ನಂತರ 1963 ರಲ್ಲಿ ಕಾನ್ಪುರದ ಐಐಟಿಗೆ ಸೇರಿ 1976 ರ ವರೆಗೆ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ತರಾಗಿ, ಡೀನ್ ಆಗಿ ವಿವಿಧ ಜವಾಬ್ಧಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದರು. 1977 ರ ವರ್ಷದಿಂದ 1984 ರ ಅವಧಿಯಲ್ಲಿ ಅವರು ಭಾರತೀಯ ವಿಜ್ಞಾನ ಮಂದಿರದಲ್ಲಿ ಸಾಲಿಡ್ ಸ್ಟೇಟ್ ಅಂಡ್ ಸ್ಟ್ರಕ್ಚರಲ್ ಕೆಮಿಸ್ಟ್ರಿ ಅಂಡ್ ಮೆಟೀರಿಯಲ್ ರಿಸರ್ಚ್ ಪ್ರಯೋಗಾಲಯಗಳ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. 1984 ರಿಂದ 1994 ರ ಅವಧಿಯಲ್ಲಿ ಭಾರತೀಯ ವಿಜ್ಞಾನ ಮಂದಿರದ ನಿರ್ದೇಶಕರಾಗಿದ್ದರು. 1989 ರಿಂದ 1999 ರ ಅವಧಿಯಲ್ಲಿ ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ರಿಸರ್ಚ್ ಕೇಂದ್ರದ ಅಧ್ಯಕ್ಷರಾಗಿದ್ದ ರಾವ್ ಅವರು ಈಗಲೂ ಆ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿಯೂ ಗೌರವಾಧ್ಯಕ್ಷರಾಗಿಯೂ ತಮ್ಮ ಸೇವೆಯನ್ನು ನಿರಂತರವಾಗಿ ಮುಂದುವರೆಸಿದ್ದಾರೆ. ಆಲ್ಬರ್ಟ್ ಐನ್ ಸ್ಟೀನ್ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿರುವ ರಾವ್ ಅವರನ್ನು ವಿಶ್ವದ ಎಲ್ಲ ವಿಶ್ವವಿದ್ಯಾಲಯಗಳೂ ತಮ್ಮ ಸಂದರ್ಶನ ಪ್ರಾಧ್ಯಾಪಕರಾಗಿ ಅಥವಾ ಗೌರವ ಪ್ರಾಧ್ಯಾಪಕರನ್ನಾಗಿ ಆದರಿಸುತ್ತಾ ಬಂದಿವೆ. ವಿಶ್ವದ 67 ಪ್ರತಿಷ್ಠಿತ ವಿಜ್ಞಾನ ವಿಶ್ವವಿದ್ಯಾಲಯಗಳು ಪ್ರೊ. ಸಿ. ಎನ್. ಆರ್. ರಾವ್ ಅವರಿಗೆ ಡಾಕ್ಟೊರೇಟ್ ಗೌರವವನ್ನು ಸಲ್ಲಿಸಿವೆ, ವಿಶ್ವದ 30 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಫೆಲೋ ಗೌರವವನ್ನು ನೀಡಿವೆ ಹಾಗೂ ಸುಮಾರು 40 ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವೈಜ್ಞಾನಿಕಾ ಸಾಂಸ್ಥಿಕ ನಿರ್ವಹಣಾ ಔನ್ನತ್ಯ ಸಮಿತಿಗಳಲ್ಲಿ ಅವರ ನಿರ್ದೇಶನಾ ಸೇವೆ ಸಂದಿದೆ ಎಂದರೆ ಅವರ ಸಾಧನೆಯ ಅಗಾಧತೆಯ ಸಣ್ಣ ಅರಿವು ನಮ್ಮಲ್ಲುಂಟಾದೀತು.
ಪ್ರೊ.ಸಿ.ಎನ್‌.ಆರ್‌ ರಾವ್‌ ಅವರದು ‘ವಿಜ್ಞಾನ ಕುಟುಂಬ’. ಅವರ ಪತ್ನಿ ಇಂದುಮತಿ ರಾವ್‌ ಈ ಹಿಂದೆ ನಗರದ ಎಂಇಎಸ್‌ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದರು. ಪ್ರಸ್ತುತ ಅವರು ಜವಾಹರ್‌ಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಮಕ್ಕಳಿಗೆ ವಿಜ್ಞಾನ ಆಸಕ್ತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ರ ಸಂಜಯ್‌ ರಾವ್‌ ಕೂಡ ಜವಾಹರ್‌ಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪುತ್ರಿ ಸುಚಿತ್ರಾ ರಾವ್‌ ಅವರ ಪತಿ ಕೆ.ಎನ್‌. ಗಣೇಶ್‌ ಪುಣೆಯ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಕೇಂದ್ರದ ನಿರ್ದೇಶಕರು.
ವಿಶ್ವದೆಲ್ಲೆಡೆ ಪ್ರೊ. ಸಿ. ಎನ್. ಆರ್. ರಾವ್ ಅವರ ಕೀರ್ತಿ ಬೆಳಗಿದ್ದು ವಿಶ್ವಸಂಸ್ಥೆಯ ಅಂಗವಾದ ಯುನೆಸ್ಕೋದ ಹಲವಾರು ಗೌರವಗಳೂ ಒಳಗೊಂಡಂತೆ ವಿಶ್ವದ ಪ್ರತಿಷ್ಠಿತ ಮಹಾನ್ ಸಂಸ್ಥೆಗಳ ಹಲವು ನೂರು ಪ್ರತಿಷ್ಠಿತ ಗೌರವಗಳು, ಪದಕಗಳು, ಪಾರಿತೋಷಕಗಳು ಇತ್ಯಾದಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಭಾರತದ ಎಲ್ಲ ರೀತಿಯ ವಿಜ್ಞಾನ ಪ್ರತಿಷ್ಠಿತ ಗೌರವಗಳೂ; ಪದ್ಮಶ್ರೀ, ಪದ್ಮವಿಭೂಷಣ, ಹಾಗೂ ಸರ್ವಶ್ರೇಷ್ಠ ಸಾಧನೆಗಳ ಕುರುಹಾದ ಭಾರತರತ್ನ ಪ್ರಶಸ್ತಿ ಗೌರವಗಳೂ ರಾವ್ ಅವರಿಗೆ ಸಂದಿದ್ದು ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡಿವೆ.
“ವಿಜ್ಞಾನವೇ ನನ್ನ ಉಸಿರು. ನನಗೆ ದೊರೆತಿರುವ ಎಲ್ಲ ಗೌರವಗಳೂ ವಿಜ್ಞಾನ ಕ್ಷೇತ್ರಕ್ಕೆ ಸಿಕ್ಕ ಗೌರವ. ನಾನು ಯಾವತ್ತೂ ಹಣ ಸಂಪಾದನೆ ಮಾಡಬೇಕು ಎಂದು ಬಯಸಿದವನಲ್ಲ. ವಿಜ್ಞಾನಕ್ಕಾಗಿ ಜೀವನವನ್ನು ಮುಡಿಪಾಗಿಟ್ಟವನು. ಸಂಶೋಧನಾ ಚಟುವಟಿಕೆ ನಡೆಸುವ ವೇಳೆ ಅನೇಕ ಮಂದಿ ಸಹಕಾರ ನೀಡಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳ ಪಾತ್ರ ಅಪಾರವಾದುದು. ವಿಜ್ಞಾನ ಕ್ಷೇತ್ರದಲ್ಲಿ ಭಾರತ ಅಗ್ರಪಟ್ಟಕ್ಕೆ ಏರಬೇಕು. ಚೀನಾ, ದಕ್ಷಿಣ ಕೋರಿಯಾದಂತಹ ರಾಷ್ಟ್ರಗಳಿಗಿಂತ ಮಂಚೂಣಿಯಲ್ಲಿ ನಮ್ಮ ದೇಶ ಕಾಣಿಸಿಕೊಳ್ಳಬೇಕು. ಭಾರತದ ಭವಿಷ್ಯ ಯುವಜನರ ಕೈಯಲ್ಲಿದೆ. ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮಲ್ಲಿ ಯುವ ಜನರ ಸಂಖ್ಯೆ ಜಾಸ್ತಿ ಇದೆ. ಯುವಜನರು ಕಠಿಣ ಪರಿಶ್ರಮಿಗಳಾಗಬೇಕು” ಎನ್ನುತ್ತಾರೆ ಪ್ರೊ.ಸಿ.ಎನ್‌. ಆರ್‌.ರಾವ್.
ಈ ಮಹಾನ್ ಸಾಧಕರೂ ನಮ್ಮ ಕನ್ನಡಿಗರೂ ಆದ ಪ್ರೊ. ಸಿ. ಎನ್. ಆರ್. ರಾವ್ ಅಂತಹ ಮಹನೀಯರ ಕಾಲದಲ್ಲಿ ನಾವೂ ಜೀವಿಸಿದ್ದೇವೆ ಎಂಬುದೇ ನಮ್ಮ ಹೆಮ್ಮೆಯ ವಿಷಯವಾಗಿದೆ. ಈ ಮಹಾನ್ ಭಾರತ ಜನನಿಯ ತನುಜಾತೆಯಾದ ಕನ್ನಡ ಮಾತೆಯ ಹೆಮ್ಮೆಯ ಪುತ್ರರಿಗೆ ಸಾಷ್ಟಾಂಗ ನಮನಪೂರ್ವಕ ಜನ್ಮದಿನದ ಶುಭಹಾರೈಕೆಗಳು.
ಬರಹ::
*ಹೇಮಂತ್ ಚಿನ್ನು*
*ಕರ್ನಾಟಕ ಶಿಕ್ಷಕರ ಬಳಗ*
🙏🙏🙏🙏🙏🙏🙏🙏

About Author

Leave a Reply

Your email address will not be published. Required fields are marked *