AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮರೆ ಮಾಡುತ್ತಿರುವ ಮತ್ತು ಮರೆಯಾಗುತ್ತಿರುವ ಮೌಲ್ಯಾಧಾರಿತ ರಾಜಕಾರಣಿಗಳ ಶ್ರೀಯುತ ಬಿ,ಎಲ್ ಶಂಕರ್ ಮೌಲ್ಯಗಳೊಡನೆ ಉಳಿದದ್ದು ಇವತ್ತಿನ ಯುವ ಪೀಳಿಗೆ ಗೊತ್ತಾಗಲೇಬೇಕಿದೆ.

1 min read

ಮರೆ ಮಾಡುತ್ತಿರುವ ಮತ್ತು ಮರೆಯಾಗುತ್ತಿರುವ ಮೌಲ್ಯಾಧಾರಿತ ರಾಜಕಾರಣಿಗಳ ಶ್ರೀಯುತ ಬಿ,ಎಲ್ ಶಂಕರ್ ಮೌಲ್ಯಗಳೊಡನೆ ಉಳಿದದ್ದು ಇವತ್ತಿನ ಯುವ ಪೀಳಿಗೆ ಗೊತ್ತಾಗಲೇಬೇಕಿದೆ.

ತನ್ನೊಳಗಿನ ಜಾತ್ಯತೀತ ಪ್ರಜ್ಞೆಯೊಂದಿಗೆ, ಇಂದಿನ ಹುಸಿ ಸಂಸ್ಕೃತಿಗಳ ಹಾವಳಿಗಳ ನಡುವೆ “ಜನ ಸಂಸ್ಕೃತಿಯ” ಪರವಾಗಿ ಗಟ್ಟಿ ಧ್ವನಿಯಾಗಿ ನಿಲ್ಲುವ ಶ್ರೀ ಬಿ.ಎಲ್‌.ಶಂಕರ್ ಅವರನ್ನೂ ರಾಜಕಾರಣಿಯಾಗಿ ನೋಡುವುದಕ್ಕಿಂತ ಅವರೊಳಗಿದ್ದ ಬುದ್ಧ ಬಸವಣ್ಣ ಅಂಬೇಡ್ಕರ್ ಅವರನ್ನು ಯಥಾವತ್ತಾಗಿ ಒಪ್ಪಿದ ಅವರ ಮನಸ್ಸಿನೊಳಗೆ ಮಾರ್ಕ್ಸ್ ವಾದ, ಗಾಂಧಿವಾದ, ಜೆಪಿ ಚಳುವಳಿ, ಲೋಹಿಯವಾದ, ಮಾಜಿ ಪ್ರಧಾನ ಮಂತ್ರಿಗಳಾದ ಚಂದ್ರಶೇಖರ್ ಅವರ ಭಾರತ ಯಾತ್ರೆಯ ಮೌಲ್ಯಗಳು, ವಿ.ಪಿ.ಸಿಂಗ್ ಅವರ ಮಂಡಲ್ ವರದಿಯ ಒಪ್ಪುಗೆಗಳು, ದೇವೇಗೌಡರ ರೈತಪರ ಚಿಂತನೆ, ಕುವೆಂಪು, ತೇಜಸ್ವಿ, ಲಂಕೇಶ್, ಅನಂತಮೂರ್ತಿಯವರ ವೈಚಾರಿಕತೆಗಳು, ಕಡಿದಾಳ್ ಶಾಮಣ್ಣ, ಶಾಂತವೇರಿ ಗೋಪಾಲಗೌಡರು, ಪ್ರೊ,ನಂಜುಂಡಸ್ವಾಮಿ ಅವರುಗಳ ರೈತ ಚಳುವಳಿಗಳನ್ನು ಬೆಂಬಲಿಸಿದ ನಿಲುವುಗಳು, ವಿಷಯಾಧಾರಿತವಾಗಿ ಬಲ ಪಂಥೀಯವನ್ನು ನಿರ್ಲಕ್ಷಿಸದೇ ಗೌರವದಿಂದಲೇ ಒಪ್ಪಿರುವ ಮತ್ತು ಒಪ್ಪದೇ ಇರುವ ರೀತಿಗಳನ್ನು ಗಮನಿಸಿದರೆ ಬಿ.ಎಲ್.ಶಂಕರ್ ಅವರು ಅನೇಕ ವೈವಿಧ್ಯತೆಗಳ ಸಂಗಮವಾಗಿ ಕಾಣುತ್ತಾರೆ.

ರಾಜ್ಯ ಮತ್ತು ರಾಷ್ಟ್ರದ ರಾಜಕಾರಣದಲ್ಲಿ ಕಳೆದ ನಾಲ್ಕು ದಶಕಗಳಿಂದಲೂ ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಬಿ.ಎಲ್‌.ಶಂಕರರವರು ರಾಜಕೀಯಕ್ಕೂ ಮೀರಿ ಒಬ್ಬ ಸಾಂಸ್ಕೃತಿಕ ನಾಯಕನಾಗಿ, ಸಾಮಾಜಿಕ ಸುಧಾರಣೆಯ ಭಾಗವಾಗಿ, ಜನಪರವಾದ ಸಾಹಿತ್ಯವನ್ನು ಬೆಂಬಲಿಸುತ್ತಾ, ವಿಶೇಷವಾಗಿ ಸಂವಿಧಾನ ಮತ್ತು ಸಂಸತ್ತಿನ ಬಗ್ಗೆ ಅವರು ನಡೆಸಿರುವ ಅಧ್ಯಯನ ಮತ್ತು ಬರಹಗಳನ್ನು ತಿಳಿದಾಗ ಬಿ.ಎಲ್.ಶಂಕರ್ ಒಳಗಿರುವ ಅಸಾಧಾರಣ ವ್ಯಕ್ತಿತ್ವದ ಒಂದು ಗ್ರಂಥಾಲಯವೇ ಆಗಿದ್ದಾರೆ. ಇಂತಹ ಅನೇಕ ಕಾರಣಗಳಿಗಾಗಿ ಇವತ್ತಿನ ರಾಜಕಾರಣ ಮತ್ತು ರಾಜಕಾರಣಿಯ ತೂಕ ಎಷ್ಟಿರಬೇಕು, ಹೇಗಿರಬೇಕು ಎಂಬುದಕ್ಕೆ ಬಿ.ಎಲ್.ಶಂಕರ್ ಅವರ ಅಂತರಂಗ, ಅವರ ಹಿನ್ನಲೆ, ಅವರ ಮೊನ್ನೋಟಗಳು ಉತ್ತಮವಾದ ಉತ್ತರವಾಗಬಲ್ಲವು.

ರಾಜಕಾರಣ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕಳೆದ ನಾಲ್ಕು ದಶಕಗಳನ್ನು ಒಂದು ಮೌಲ್ಯಾಧಾರಿತ ಹದದೊಂದಿಗೆ ದಾಟಿ, ಭಾರತದ ಬಹುತ್ವದ ಬೇರುಗಳನ್ನು ಉಳಿಸಲು ನುಡಿಸೇವೆ ಮತ್ತು ಬರಹಗಳ ಮೂಲಕ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳುತ್ತಲೇ ಬಿ.ಎಲ್.ಶಂಕರ್ ಅವರು ಇಂದಿನ ಸುಡು ವರ್ತಮಾನದಲ್ಲಿ ವಿವಾದಗಳ ಉರಿ ಹೆಚ್ಚುತ್ತಿರುವ ಕಾರಣಕ್ಕೆ ತಣ್ಣನೆಯೆ ನಾಳೆಗಳನ್ನು ಕಟ್ಟುವ ಒಂದು ಮಹತ್ವದ ಉದ್ದೇಶದಿಂದ ರಾಜಕೀಯ ವ್ಯವಸ್ಥೆಯಲ್ಲಿ ಬಿ.ಎಲ್.ಶಂಕರ್ ಇದ್ದಾರೆ ಹೊರತು ಕೇವಲ ಅಧಿಕಾರಕ್ಕಾಗಿಯೇ ತನ್ನ ರಾಜಕಾರಣವನ್ನು ಮೀಸಲಿಟ್ಟವರಲ್ಲ,
ಆಸ್ತಿ ಅಂತಸ್ತುಗಳ ಗಳಿಕೆಗಾಗಿಯೇ ತನ್ನ ತನಗಳನ್ನು ಬಿಟ್ಟುಕೊಟ್ಟವರಲ್ಲ.

ಸತ್ಯಗಳನ್ನು ಯೋಚಿಸಲಿಕ್ಕೆ ಸಮಯವೂ ಇಲ್ಲ, ಸಂದರ್ಭವೂ ಇಲ್ಲ, ಅಗತ್ಯವೂ ಇಲ್ಲದವರ ಕೈಗೆ ಇತ್ತೀಚಿಗೆ ಅಧಿಕಾರಗಳು ಸಿಗುತ್ತಿರುವುದರಿಂದ ಆವೇಶ, ಉದ್ವೇಗದ ಮಾತುಗಳಿಂದ ಜಾತಿಧರ್ಮವನ್ನು ಹೊಡೆದು ನಾಯಕರಾಗಿ ಇಂದಿನ ಯುವ ಸಮೂಹದ ಮೇಲೆ ಜ್ಞಾನದ ಬದಲು ಅಜ್ಞಾನವನ್ನು, ಮೌಲ್ಯಗಳ ಬದಲಿಗೆ ಮೌಢ್ಯಗಳನ್ನು ಬಿತ್ತುವ ಅಧಿಕಾರಯುತವಾದ ರಾಜಕೀಯ ತೀರ್ಮಾನಗಳನ್ನು ಜನ ಸಮೂಹದ ಮೇಲೆ ಹೇರುತ್ತಿರುವುದನ್ನು ತಡೆಯಲು ವಿಧಾನ ಮಂಡಲದಲ್ಲಿ, ಸಂಸತ್ತಿನಲ್ಲಿ ಬಿ.ಎಲ್.ಶಂಕರ್ ಅವರಂತಹ ಸಂವಿಧಾನಬದ್ಧ ಸಂಸದೀಯ ಪಟುಗಳು ಅಗತ್ಯ ಹಿಂದೆಂದಿಗಿಂತಲೂ ಇಂದು ತೀರಾ ಅಗತ್ಯವಾಗಿದೆ.

ಹೇಡಿಯ ಪೋಟೋವನ್ನು ಆಂಜನೇಯನ ಗುಡಿಯಲ್ಲಿ ಇಟ್ಟರೆ ಆತನೇನೂ ವೀರನೂ ಆಗವುದಿಲ್ಲ, ಶೂರನೂ ಅಗುವುದಿಲ್ಲವೋ ಹಾಗೆ ರಾಜಕೀಯದಲ್ಲೂ ಅಷ್ಟೇ ಚುನಾವಣೆಯಲ್ಲಿ ಗೆದ್ದು ವಿಧಾನಸಭೆಗೆ ಹೋದಾಕ್ಷಣ ಅವರೆಲ್ಲರೂ ಶಾಂತವೇರಿ ಗೋಪಾಲಗೌಡರು ಆಗುತ್ತಿಲ್ಲ, ಕೆಂಗಲ್ಲು, ಅರಸರಂತೆ ಮುತ್ಸದ್ಧಿಗಳಾಗುತ್ತಿಲ್ಲ; ಇಂತಹ ಯೋಚನೆ ಬಂದಾಗ ಬಿ.ಎಲ್.ಶಂಕರ್ ಅವರಂತಹ ವ್ಯಕ್ತಿತ್ವಗಳು ಎಲ್ಲಾ ಪಕ್ಷಗಳಲ್ಲೂ ಬೇಕೆಂಬ ಅಗತ್ಯಗಳು ಇತ್ತೀಚಿಗೆ ಕಾಡುತ್ತಿರುವುದನ್ನು ಗಮನಿಸಬೇಕಿದೆ.

ಹೊಡಿ ಬಡಿ ಎಂಬ ಮಾತುಗಳಿಲ್ಲದೇ, ಹಿಂಸೆಯ ಜಾಡನ್ನು ತುಳಿಯದೇ, ಸತ್ಯದ ಚರಿತ್ರೆಗಳ ಜೊತೆಗೆ ನೆಮ್ಮದಿಯ ನಾಳೆಗಳಿಗಾಗಿ ವಿಚಾರಗಳ ಜ್ಞಾನದಾಸೋಹದ ಮೂಲಕ ಈ ಸಮಾಜಕ್ಕೆ ಒಂದು ದಿಕ್ಸೂಚಿ ಆಗಿರುವ ಬಿ.ಎಲ್.ಶಂಕರ್ ಅವರನ್ನು ಒಂದೇ ಲೇಖನದಲ್ಲಿ ಅವರ ವ್ಯಕ್ತಿತ್ವದ ಮೊದಲ ಪುಟವನ್ನು ಪರಿಚಯಿಸಲು ಸಾಧ್ಯವಿಲ್ಲದ‌ ಮಾತು. ಆದರೂ ಅವರ ಬಗ್ಗೆ ಬರೆಯುವುದು ನನ್ನ ಸಾಮಾಜಿಕ ಜವಾಬ್ದಾರಿಯೂ ಆಗಿದೆ.

ಬಿ.ಎಲ್.ಶಂಕರ್ ಅವರು ತನ್ನ ಭಾಷಣ ಬದುಕು ಬರಹ ಭಾವನೆಗಳ ನಡುವೆ ಬಿರುಕಿಲ್ಲದ ತನ್ನ ಸಂವಾದನೀಯ ನಡೆನುಡಿಗಳ ಮೂಲಕವೇ ನಾಡಿನಾದ್ಯಂತ ತನ್ನದೇ ಹಿತೈಷಿಗಳನ್ನು ಗಳಿಸಿ ಉಳಿಸಿಕೊಂಡ ಬಿ.ಎಲ್.ಶಂಕರ್ ಅವರು ತನ್ನೊಳಗಿನ ಸೃಜನಶೀಲತೆ ಮತ್ತು ಕ್ರಿಯಾಶೀಲತೆಗಳನ್ನು ಒಂದಾಗಿಸಿ ಜನಪರವಾದ ಸಮಾಜಮುಖಿ ಬದ್ಧತೆಯನ್ನು ಬಿಟ್ಟುಕೊಡದೇ ಬದುಕುತ್ತಾ ಬಂದವರನ್ನು ಪರಿಚಯಿಸುವ ಸೌಭಾಗ್ಯ ನನ್ನದು.

ಬಿ.ಎಲ್.ಶಂಕರ್ ಅವರು ಈ ಕೆಳಗಿನ ವಚನದ ಆಶಯದಂತೆ ಪದವಿಗಳ ಹಿಂದೆ ಸುಳಿಯದೇ, ಬದುಕಿನ ಪರಿಶುದ್ಧತೆಯ ಭಾಗವಾಗಿ ತನ್ನ ಸಾರ್ವಜನಿಕ ಜೀವನವನ್ನು ಸಾರ್ಥಕತೆಗಾಗಿ ಸವೆಸಿದ್ದು ಒಂದು ಬಹುಮುಖ್ಯ ಸಾಧನೆಯಾಗಿ ಕಾಣುತ್ತದೆ.
“ಬ್ರಹ್ಮಪದವಿಯನೊಲ್ಲೆ, ವಿಷ್ಣುಪದವಿಯನೊಲ್ಲೆ, ರುದ್ರಪದವಿಯನೊಲ್ಲೆ:
ನಾನು ಮತ್ತಾವ ಪದವಿಯನೊಲ್ಲೆನಯ್ಯಾ!
ಕೂಡಲಸಂಗಮದೇವಾ, ನಿಮ್ಮ ಸದ್ಭಕ್ತರ
ಪಾದವನರಿದಿಪ್ಪ ಮಹಾಪದವಿಯನೆ ಕರುಣಿಸಯ್ಯಾ ಎಂಬ ಬಸವಣ್ಣನವರ ಆಶಯಗಳ ಹಾದಿಯಲ್ಲಿ ನಡೆಯುತ್ತಿರುವ ಬಿ.ಎಲ್.ಶಂಕರ್ ಅವರ ನಡೆನುಡಿಗಳು ಮತ್ತು ಅದರ ಫಲಗಳು ಇವತ್ತಿನ ಯುವ ಸಮೂಹಕ್ಕೆ ಪರಿಚಯಿಸುವ ನನ್ನ ಪುಟ್ಟ ಪ್ರಯತ್ನವಿದು.

ಹಣ ಅಂತಸ್ತು‌ ಅಧಿಕಾರಗಳಿಂದಲೇ ಗುರುತಿಸಿಕೊಳ್ಳುವ ಈ ಕಾಲದಲ್ಲಿ , ಯಾವುದೇ ಅಧಿಕಾರದ ವ್ಯಕ್ತಿಗಳನ್ನು ಮೀರಿಸುವ ವ್ಯಕ್ತಿತ್ವವನ್ನು ಅಧಿಕಾರೇತರವಾಗಿ ಗಳಿಸಿಕೊಂಡ ಕೆಲವೇ ಕೆಲವು ಮುತ್ಸದ್ದಿಗಳ ಸಾಲಿಗೆ ಬಿ.ಎಲ್ ಶಂಕರ್ ಸೇರಿರುವುದು ಈ ನಾಡಿನ ಹೆಮ್ಮೆಯ ವಿಚಾರ ಎಂಬುದೇ ನಮ್ಮೇಲ್ಲರಿಗೂ ಸಂತೋಷದ ವಿಚಾರವಾಗಿದೆ‌.

ಮನಸುಳಿ ಮೋಹನ್ ತರೀಕೆರೆ.

About Author

Leave a Reply

Your email address will not be published. Required fields are marked *