“ಬಿಇಒ ಕಚೇರಿಯನ್ನು ದನದ ಕೊಟ್ಟಿಗೆಯಂತೆ ಮಾಡಿದ ಕೆಲ ಶಿಕ್ಷಕರು : ಇಲಾಖೆಯನ್ನು ಸ್ವಚ್ಛಗೊಳಿಸುವಂತೆ ಬಿಇಒಗೆ ನಾಗರೀಕ ಶಿಕ್ಷಕರ ಆಗ್ರಹ.”
1 min read
ಮೂಡಿಗೆರೆ ತಾಲ್ಲೂಕಿನ ಶಿಕ್ಷಕರು ನಿರಂತರವಾಗಿ ಬಿಇಒ ಕಚೇರಿಗೆ ಆಗಮಿಸಿ ಗಲಭೆ,ಕಿರುಚಾಟ ನಡೆಸುವ ಮೂಲಕ ಬಿಇಒ ಕಚೇರಿಯನ್ನು ದನದ ದೊಡ್ಡಿಯಂತೆ ಮಾಡುತ್ತಿದ್ದಾರೆ.ಇದನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನಿಯಂತ್ರಿಸುವ ಮೂಲಕ ಇಲಾಖೆಯನ್ನು ಸ್ವಚ್ಛಗೊಳಿಸಬೇಕೆಂದು ನಾಗರಿಕ ಶಿಕ್ಷಕರ ಆಗ್ರಹವಾಗಿದೆ.
ಇಲ್ಲಿನ ಶಿಕ್ಷಕರ ಸಂಘದಲ್ಲಿ ನಾಲೈದು ಬಣಗಳಾಗಿ ಗುಂಪುಗಳಾಗಿದೆ.ಶಿಕ್ಷಕರ ಸಂಘದ ಚುನಾವಣೆ ಸೇರಿದಂತೆ ಎಲ್ಲಾ ವಿಚಾರಗಳಲ್ಲಿ ಶಿಕ್ಷಕರು ಮೂಗು ತೂರಿಸುತ್ತಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಪರಿಪಾಠ ಮರೆತಿದ್ದಾರೆ.ಇತ್ತೀಚೆಗಂತೂ ಶಿಕ್ಷಕರ ಸಂಘದ ಒಳ ಜಗಳ ಮಿತಿ ಮೀರಿದ್ದರಿಂದ ಇದರ ದುಷ್ಪರಿಣಾಮ ಇತರೇ ಉತ್ತಮ ಶಿಕ್ಷಕರು ಎದುರಿಸುವಂತಾಗಿದೆ. ಶಿಕ್ಷಕರ ಸಂಘದ ಕೆಲ ಪದಾಧಿಕಾರಿಗಳು,ಅನೇಕ ಬಾರಿ ಅಮಾನತ್ತುಗೊಂಡ ಶಿಕ್ಷಕರು ಪ್ರತಿನಿತ್ಯ ಬಿಇಒ ಕಚೇರಿಗೆ ಆಗಮಿಸಿ ಗಂಟೆಗಟ್ಟಲೆ ಕುಳಿತು ಹರಟೆ ಹೊಡೆಯುತ್ತಿರುತ್ತಾರೆ.ಅಲ್ಲದೆ ಇಲಾಖೆಯ ಸಿಬ್ಬಂದಿ ಹಾಗೂ ಅಪರೂಪಕ್ಕೆ ಬಂದಂತಹ ಇತರೆ ಉತ್ತಮ ಶಿಕ್ಷಕರಿಗೆ ಕಾರಣವಿಲ್ಲದೆ ಬಿಇಒ ಎದುರೇ ತರಾಟೆಗೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದರಿಂದ ಸಿಬ್ಬಂದಿಗೆ ಕಚೇರಿಯಲ್ಲಿ ಕೆಲಸ ಮಾಡಲು ಮುಜಗರ ಹಾಗೂ ಸಂಕಷ್ಟ ಎದುರಾಗಿದೆ.
ಈ ಹಿಂದೆ ಕೋಮಾರಯ್ಯ, ಶರಶ್ಚಂದ್ರರಂತಹ ಖಡಕ್ ಬಿಇಒ ಇದ್ದಾಗ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ತೆರಳುತ್ತಿದ್ದರು.ಶಿಕ್ಷಕರ ಸಂಘದಲ್ಲಿ ಒಡಕಿದ್ದರೂ ಇತರೆ ಶಿಕ್ಷಕರ ಮೇಲೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ.ಆ ವ್ಯವಸ್ಥೆ ಈಗ ಸಂಪೂರ್ಣ ಬದಲಾಗಿದೆ.ಶಿಕ್ಷಕರ ಸಂಘದ ಕಿತ್ತಾಟದಿಂದ ಹೆಚ್ಚಾಗಿ ಮಹಿಳಾ ಶಿಕ್ಷಕರು ಹಾಗೂ ಇಲಾಖೆ ಸಿಬ್ಬಂದಿ ಒತ್ತಡದಿಂದಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.ಇದು ನಿಯಂತ್ರಣಕ್ಕೆ ಬರದಿದ್ದರೆ ಬಿಇಒ ಕಚೇರಿ ಸಿಬ್ಬಂದಿ ಆತಂಕದಿಂದಲೇ ಕೆಲಸ ಮಾಡಬೇಕಿದೆ.ಅಲ್ಲದೇ ಶಾಲೆ ಮಕ್ಕಳು ಕೂಡ ಇದರ ಪರಿಣಾಮ ಎದುರಿಸುವಂತಾಗಿದೆ.ಹಾಗಾಗಿ ಶಿಕ್ಷಕರ ಸಂಘದ ಕಿತ್ತಾಟ ಇಲಾಖೆಯೊಳಗೆ ಸುಳಿಯದಂತೆ ಬಿಇಒ ಅವರು ಎಚ್ಚರವಹಿಸಬೇಕು.ಕಚೇರಿಯ ಸಿಸಿ ಕ್ಯಾಮರಾ ಚಾಲ್ತಿಯಲ್ಲಿರಬೇಕು.ಶಾಲೆ ಸಮಯದಲ್ಲಿ ಸುಖಾ ಸುಮ್ಮನೇ ಕಚೇರಿಗೆ ಬರುವ ಎಲ್ಲಾ ಶಿಕ್ಷಕರ ಹೆಸರು ನೊಂದಾಯಿಸಿ ಸಹಿ ಮಾಡಿಸಿಕೊಳ್ಳಬೇಕು. ಆ ಶಿಕ್ಷಕರನ್ನು ಪ್ರತಿ ತಿಂಗಳಿಗೊಮ್ಮೆ ವಿಚಾರಣೆಗೊಳಿಸುವ ಮೂಲಕ ದನದ ಕೊಟ್ಟಿಗೆಯಾಗಿರುವ ಶಿಕ್ಷಣ ಇಲಾಖೆಯನ್ನು ಸ್ವಚ್ಛಗೊಳಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.