“ಶೋಭಾನಿಂದ ಏನ್ ಬಂತು ಲಾಭ.”
1 min read
ಕರಾವಳಿ ಮತ್ತು ಮಲೆನಾಡು ಭಾಗದ ವಿಸ್ತಾರವಾದ ಎರಡು ಜಿಲ್ಲೆಗಳನ್ನು ಒಳಗೊಂಡಿರುವ ಕ್ಷೇತ್ರವು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವಾಗಿದೆ.
ಉಡುಪಿ ಭಾಗದ ಕಾಪು,ಕುಂದಾಪುರ,ಕಾರ್ಕಳ ಮತ್ತು ಉಡುಪಿ ಅಸೆಂಬ್ಲಿ ಕ್ಷೇತ್ರಗಳು ಹಾಗೂ ಚಿಕ್ಕಮಗಳೂರು,ಮೂಡಿಗೆರೆ,ಶೃಂಗೇರಿ,ತರೀಕೆರೆ ಸೇರಿದಂತೆ ಒಟ್ಟು ಎಂಟು ಅಸೆಂಬ್ಲಿ ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿಕೊಂಡಿದೆ.
2002ರಲ್ಲಿ ಡಿಲಿಮಿಟೀಶನ್ ಅಪ್ ಇಂಡಿಯಾದ ಶಿಫಾರಸ್ಸು ಆಧಾರದಲ್ಲಿ 2008 ರಲ್ಲಿ ಡಿ ಲಿಮಿಟೆಶನ್ ಆಧಾರದ ಮೇಲೆ ಸಂಸದೀಯ ಕ್ಷೇತ್ರಗಳ ಪುನರ್ವಿಂಗಡಣೆ ನಡೆಸಲಾಗಿತ್ತು.
ಇದಾದ ನಂತರ 2009 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಂಗಳೂರು ಭಾಗದಿಂದ ವಲಸೆ ಬಂದ ಡಿ.ವಿ.ಸದಾನಂದ ಗೌಡ ಈ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ಮೂಲಕ ಸ್ಪರ್ಧಿಸಿ ಮೊದಲ ಗೆಲುವು ದಾಖಲಿಸಿದ್ದರು.
2011 ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ್ದರಿಂದ ಅವರಿಂದ ತೆರವಾದ ಸ್ಥಾನಕ್ಕೆ ಸಂಸದ ಡಿ.ವಿ.ಸದಾನಂದ ಗೌಡರನ್ನು ಆಯ್ಕೆ ಮಾಡಲಾಯಿತು.ಹೀಗಾಗಿ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲು ಕಾರಣವಾಗಿತ್ತು.
2012 ರಲ್ಲಿ ಈ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಕುಂದಾಪುರ ಭಾಗದ ಕೆ.ಜಯಪ್ರಕಾಶ್ ಹೆಗ್ಡೆ ಗೆಲುವು ಕಂಡಿದ್ದರು.
ಆನಂತರ 2014 ರಲ್ಲಿ ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದ ಕುಮಾರಿ ಶೋಭಾ ಕರಂದ್ಲಾಜೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆದ್ದರಲ್ಲದೆ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯದ ನಡುವೆಯೂ ಎರಡನೇ ಬಾರಿ 2019ರಲ್ಲೂ ಮೋದಿಯವರ ಅಲೆಯ ಮೇಲೆ ಗೆಲುವು ದಾಖಲಿಸಿದರು.
ಹಾಗೆ ನೋಡಿದರೆ,ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕುಮಾರಿ ಶೋಭಾ ಕರಂದ್ಲಾಜೆಯವರ ಕೊಡುಗೆ ಏನೂ ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.ದಕ್ಷಿಣ ಕನ್ನಡ ಭಾಗದಿಂದ ವಲಸೆ ಬಂದಿರುವ ಅವರು ಈ ಕ್ಷೇತ್ರದ ಜನರ ನಾಡಿ ಮಿಡಿತ ಏನೂ ಎನ್ನುವ ಬಗ್ಗೆ ಅರಿವು ಇದ್ದಂತಹ ಆಲೋಚನೆ ಮಾಡಿಲ್ಲ.
ಎರಡನೇ ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು ಅಲ್ಲದೆ ಕಳೆದ ಎರಡು ವರ್ಷಗಳಿಂದ ಕೇಂದ್ರ ಸಚಿವೆ ಆಗಿದ್ದರೂ ಕೂಡ ಈ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿರದ ಸಂಸದೆ ಶೋಭಾ ಅವರ ಬಗ್ಗೆ ಈ ಎರಡು ಜಿಲ್ಲೆಗಳನ್ನು ಒಳಗೊಂಡ ಲೋಕಸಭಾ ಕ್ಷೇತ್ರದ ಜನರಲ್ಲಿ ಅವಿಶ್ವಾಸ ಇರುವುದು ಅಲ್ಲಲ್ಲಿ ಜಗಜ್ಜಾಹೀರಾಗಿದೆ.
ಕಳೆದ ಬಾರಿಯೂ ಕೂಡ ಶೋಭಾರವರಿಗೆ ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡಬಾರದು ಎನ್ನುವ ಕೂಗು ಎದ್ದಿತ್ತು. ಆದರೂ ಯಡಿಯೂರಪ್ಪರವರ ಕೃಪಾಕಟಾಕ್ಷ ಹೊಂದಿರುವ ಶೋಭಾ ಕರಂದ್ಲಾಜೆ ಬಿಜೆಪಿ ಟಿಕೆಟ್ ತರುವಲ್ಲಿ ಯಶಸ್ವಿ ಆಗಿದ್ದರು.
ಆದರೆ ಈ ಬಾರಿ ಮಾತ್ರ ಶೋಭಾ ಕರಂದ್ಲಾಜೆ ಅವರಿಗೆ ಈ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಕೊಡಬಾರದು ಎನ್ನುವ ಕೂಗು ತೀವ್ರ ಮಟ್ಟದಲ್ಲಿ ಹರಿದಾಡುತ್ತಿದೆ.
ಅಷ್ಟಕ್ಕೂ ಎರಡು ಸಲ ಚುನಾವಣೆಯಲ್ಲಿ ಗೆದ್ದಿರುವ ಶೋಭಾ ಕರಂದ್ಲಾಜೆ ಈ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ಹೊಂದಿಲ್ಲ.ಅವರು ಕೇವಲ ದತ್ತ ಪೀಠ,ಬಾಬಾಬುಡನ್ ಗಿರಿ,ಹಿಂದೂ ಮುಸ್ಲಿಂ ಜಗಳ,ಹತ್ಯೆ,ಲವ್ ಜಿಹಾದ್ ಇಂತದ್ದರಲ್ಲಿ ಮಾತ್ರವೇ ಚೌಕಾಶಿ ರಾಜಕೀಯಕ್ಕೆ ಬರುತ್ತಾರೆ ಹೊರತು ಅಭಿವೃದ್ದಿ ವಿಚಾರದಲ್ಲಿ ಅವರ ನಿಲುವು ಕೇವಲ ಮಣ್ಣಾಂಗಟ್ಟಿ ಎಂಬುದು ಇಲ್ಲಿನ ಜನರ ಅಭಿಪ್ರಾಯ ಆಗಿ ಹೋಗಿದೆ.
ನಿಮಗೆ ತಿಳಿದಿರಬಹುದು,ದಿನ ಬೆಳಗಾದರೆ ಉಡುಪಿ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಾನಾ ತರಹದ ಸಮಸ್ಯೆಗಳು ಸಾಮಾನ್ಯ ಜನರಿಂದ ಹಿಡಿದು,ಮಾಧ್ಯಮ ವರ್ಗ,ಕಾರ್ಮಿಕ, ರೈತ,ಬೆಳೆಗಾರರನ್ನು ದಂಗು ಬಡಿಸುವಂತೆ ಕಾಡುತ್ತಿದೆ.
ಮೀಸಲು ಅರಣ್ಯ ವ್ಯಾಪ್ತಿ,ಆನೆ ಕಾರಿಡಾರ್ ಯೋಜನೆಗಳು ಯಾವುದೇ ವರ್ಗದ ಜನರನ್ನು ನೆಮ್ಮದಿಯಾಗಿ ಇರಲು ಬಿಡುತ್ತಿಲ್ಲ.ಒಂದು ಕಡೆ ಜನರು ಒಕ್ಕಲೆಳುವ ಭೀತಿಯಲ್ಲಿ ಇದ್ದರೇ,ಮತ್ತೊಂದು ಕಡೆ ಅಷ್ಟಿಷ್ಟು ಬೆಳೆ ಬರುವ ಆದಾಯದ ಮೂಲ ಜಮೀನು ಕಳೆದುಕೊಳ್ಳುವ ಬೆಳೆಗಾರ ಮತ್ತು ರೈತರ ನಿದ್ದೆಗೆಡಿಸುತ್ತಿದೆ.ಅಲ್ಲದೆ ಆನೆ ಕಾರಿಡಾರ್ ಯೋಜನೆಯ ಪರಿಣಾಮ ಕಾಡಾನೆಗಳು ಮಾತ್ರವಲ್ಲದೆ ಇತರೆ ವನ್ಯ ಜೀವಿಗಳ ಓಡಾಟ ಜನ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ.ಇವುಗಳ ಪರಿಹಾರಕ್ಕೆ ಸಂಸದರ ಪ್ರಯತ್ನ ಏನೂ ಇಲ್ಲ ಎಂಬಂತಾಗಿದೆ.
ಬರೀ ಹಿಂದಿ ಮಾತನಾಡುತ್ತಾ ನೆಟ್ಟಿಗರ ಮತ್ತು ವಿರೋಧ ಪಕ್ಷಗಳ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿರುವುದು ಮಾತ್ರ ವಿಪರ್ಯಾಸ.
ಮುಂದುವರಿಯುತ್ತದೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.