“ಜನ’ವರಿ’ಯಲ್ಲಿ ಇದೆಂಥಾ ಮಳೆ ಮಾರಾಯ!?”
1 min read
ನಾನು ಪಿಯುಸಿಯಲ್ಲಿ ಓದುತ್ತಿದ್ದಾಗ ಎಕನಾಮಿಕ್ಸ್ ಸಬ್ಜೆಕ್ಟ್ ನಲ್ಲಿ ‘ಜನಸಂಖ್ಯಾ ಸಿದ್ಧಾಂತ’ ಅಂತ ಇತ್ತಲ್ಲ! ಅದರಲ್ಲಿ ಆಧುನಿಕ ಜನಸಂಖ್ಯಾಶಾಸ್ತ್ರದ ಜನಕನೆಂದು ಗೌರವಿಸಲ್ಪಡುವ ಥಾಮಸ್ ರಾಬರ್ಟ್ ಮಾಲ್ಥಸ್ ಅವರು ಹೇಳಿದ್ದು ಎಷ್ಟೊಂದು ಅರ್ಥಪೂರ್ಣ! ಒಂದು- “ಮನುಷ್ಯ ತನ್ನನ್ನು ತಾನು ನಿಯಂತ್ರಿಸದ ಹೊರತು ಪ್ರಕೃತಿಯೇ ಅವನನ್ನು ನಿಯಂತ್ರಿಸುತ್ತದೆ.” ಇನ್ನೊಂದು- “ಈ ಕೃಷಿ ಅನ್ನೋದು ಮಾನ್ಸೂನ್ ನೊಂದಿಗೆ ಆಡುವ ಜೂಜಾಟ!” ಎನ್ನೋದು. ಇದು ನಿಜಕ್ಕೂ ಪ್ರತಿವರ್ಷ ಮಳೆಯಿಂದ ತತ್ತರಿಸುವ ರೈತ ಅಥವಾ ಕೃಷಿಕನ ನಿಟ್ಟುಸಿರ ಮೂಗಿನ ತುದಿಗೆ ಹಬೆಯಾಡುವ ಬಿಸಿಯುಸಿರ ಹನಿಯ ಜಿನುಗಿನಲ್ಲಿ, ಹಾಗೇ ಕಣ್ಣಂಚಿನಲ್ಲಿ ಹೆಪ್ಪುಗಟ್ಟಿದ ಎದೆಯ ದುಃಖದಲ್ಲಿ ಕಂಡಾಗ! ಎಂದು ಯೋಚಿಸುತ್ತ ನಿಂತಿದ್ದೆ. ಆಗಷ್ಟೇ ಮಣ್ಣಿನಂಗಳದ ಸಣ್ಣಪುಟ್ಟ ಗುಂಡಿಗಳಲ್ಲಿ ನಿಂತಿದ್ದ ಮಳೆಯ ಕೆಸರು ನೀರನ್ನು ನೋಡುತ್ತ- ” ಜನವರಿಯಲ್ಲಿ ಇದೆಂಥಾ ಮಳೆ ಮರಾಯ!?” ಎಂದು ಅಪ್ಪ ಗೊಣಗುತ್ತ ನನ್ನ ನೋಡಿದರು. ಆಗ ಅದು ಇನ್ನಷ್ಟು ದೃಢವಾಗಿ ಮನಸ್ಸಿನಲ್ಲಿ ಮೂಡಿತು.
ನಿಜ ತಾನೇ? ನಾವು ಓದಿದ ಪಠ್ಯ, ಕೇಳಿದ ಪಾಠದ ಥಿಯರಿಯು ಪ್ರಾಕ್ಟಿಕಲ್ ಆಗಿ ನಮ್ಮ ಅನುಭವಕ್ಕೆ ಬಂದಾಗ ಅದನ್ನು ನಾವು ಸದಾಕಾಲ ನೆನಪಿಡುತ್ತೇವೆ. ಮತ್ತೆ ಮತ್ತೆ ಅನುಭವಿಸುತ್ತಾ ಮುಂದುವರೆಯುತ್ತಿರುತ್ತೇವೆ. ಇದು ನಾನು ಬಾಲ್ಯದಿಂದಲೂ ಮಳೆಯೊಂದಿಗೆ ಕಂಡುಕೊಂಡ ಸತ್ಯ. ಆಗೆಲ್ಲ (ಒಂದು ಇಪ್ಪತ್ತು ವರ್ಷಗಳ ಹಿಂದೆ..) ಮಲೆನಾಡಿನ ತುಂಬೆಲ್ಲ ಭತ್ತ ಕೃಷಿ ಚಟುವಟಿಕೆಗಳು. ಆಗ ಪ್ರಾರಂಭದಲ್ಲಿ “ಅಗೇಡಿಗೆ (ಭತ್ತ ಬಿತ್ತುವ ಪಾತಿಗೆ) ನೀರು ಕಟ್ಟೋದಿಕ್ಕೆ ನೀರಿಲ್ಲ ಎಂಥಾ ಮಾಡೋದು ಅಂತ ಗೊತ್ತಾಗ್ತಾ ಇಲ್ಲ!” ಎಂಬ ಹೊಯ್ದಾಟಗಳು. ಅದೇರೀತಿ ಗದ್ದೆಕೊಯ್ಲು (ಭತ್ತದ ಸಂಸ್ಕರಣೆ) ಸಂದರ್ಭದ ಬಿಸಿಲಲ್ಲಿ ಒಣಗಲಿ ಅಂತ ಕೊಯ್ಲು ಮಾಡಿದ ಪೈರನ್ನು ಒಣಗಿಸುವ ಸೂರ್ಯನ ಕಣ್ಣಿಗೆ ಅಡ್ಡಲಾಗಿ ಮೋಡಗಟ್ಟಿ ಸುರಿಯುತ್ತಿದ್ದ ಅದೇ ಮಳೆ. ಹೀಗೆ ಮೊದಲರ್ಧದಲ್ಲಿ ಬೆಂದು, ದ್ವಿತೀಯಾರ್ಧದಲ್ಲಿ ತೊಯ್ದು ಹೋಗಿ ಸುರಿಯುವ ಕಣ್ಣೀರಿಗೆ ನಮ್ಮ ರೈತರು ಮಾಲ್ಥಸ್ ನ ನೊಂದ ಆರ್ಥಿಕ ರೇಖಾಚಿತ್ರದಂತೆ ಚಿತ್ರವತ್ತಾಗಿ ಕಂಡುಬರುತ್ತಿದ್ದರು.
ಹೀಗೆ ಮನುಷ್ಯನ ಬದುಕಿನ ಏರಿಳಿತಗಳ ಮಧ್ಯೆ ಒಮ್ಮೆಗೇ ಸಂತೋಷವನ್ನು, ಮಗದೊಮ್ಮೆ ದುಃಖವನ್ನು ತಂದೊಡ್ಡಿ ಸೂತ್ರಧಾರಿಯಾಗಿ ಪಾತ್ರಧಾರಿಗಳನ್ನು ಆಟವಾಡಿಸುವ ಕಾಲದೇವನಾಗಿ ಕಾಡುತ್ತಾನೆ ಈ ಕಾರು(ಮಳೆ!). ಆಗಲಾದರೂ ಮಳೆರಾಯನಿಗೆ ಎರಡೇ ಹೆಸರುಗಳು. ಒಂದು ಮುಂಗಾರು, ಇನ್ನೊಂದು ಹಿಂಗಾರು ಅಂತ. ಈಗ ಇವನಿಗೆ ‘ಅಕಾಲಿಕ ಮಳೆ’ ಎಂಬ ಹಣೆಪಟ್ಟಿ ಕಟ್ಟುವುದೇ ಪ್ರಸಕ್ತ. ಇದು ಈ ಸಮಯದಲ್ಲಿ ಅವನೇ ತನಗೆ ತಾನೇ ಬರೆಯಿಸಿಕೊಂಡಿರುವ ಪ್ರಶಸ್ತಿ ಪತ್ರ!
ಈಗ ಮತ್ತೆ ಮಾಲ್ಥಸ್ ಅವರ ಜನಸಂಖ್ಯಾ ಸಿದ್ಧಾಂತದ ಪ್ರಕಾರ ವಿವೇಚಿಸುವ. ಮನುಷ್ಯ ತನ್ನನ್ನು ತಾನು ನಿಯಂತ್ರಣ ಸಾಧಿಸಲು ಅಗತ್ಯವಾದ ಕ್ರಮಗಳನ್ನು ಅನುಸರಿಸಿ ನಡೆಯುವ ಎಲ್ಲಾ ಹಂತಗಳಲ್ಲೂ ಕಂಟ್ರೋಲ್ ತಪ್ಪಿ ನಡೆದು.. ಬಿದ್ದು – ಎದ್ದು ಮಾಯವಾಗದ ಗಾಯ ಮಾಡಿಕೊಂಡಿದ್ದಾನೆ. ಪ್ರಕೃತಿಯಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಲೂ ಇಷ್ಟವಾಗದೇ ತನ್ನಿಷ್ಟದಂತೆಯೇ ಬಾಳಲು ಹೊರಟು ಆಹಾರ ಬೆಳೆಗಳ ಬೇಸಾಯ ಬಿಟ್ಟು ಬಹುತೇಕ ವಾಣಿಜ್ಯ ಬೆಳೆಗಳನ್ನು (ಕಾಫಿ, ಅಡಿಕೆ, ಕಾಳು ಮೆಣಸು, ಬಾಳೆ, ಶುಂಠಿ ಇತ್ಯಾದಿ) ಬೆಳೆಯಲು ಮಗ್ಗಲು ಬದಲಾಯಿಸಿ ನಿಂತಾಗ ರಾಸಾಯನಿಕಗಳ ಬಳಕೆ ಮಾಡುವುದರಿಂದ ಹೆಚ್ಚು ಇಳುವರಿ ದಕ್ಕುವುದು ಎಂಬ ಭಾವನೆ ಬಂತು ನೋಡಿ. ಹಾಗೇ ಮಾಡಿದ. ಇದ್ದಕ್ಕಿದ್ದಂತೆ ಯಥೇಚ್ಛವಾಗಿ ಕೈಗಾರಿಕೆಗಳು ಬೆಳೆದು ಬಂದ ಮೇಲೆ ಕಿರುನಗೆ ಸೂಚಿಸಿದ. ಅಂದರೆ ತಾನೇ ಕಟ್ಟಿದ ಕನಸುಗಳಿಗೆ ತಂತ್ರಜ್ಞಾನದ ಮೂಲಕ ಪ್ರಕೃತಿಯನ್ನು ನಿಯಂತ್ರಣ ಸಾಧಿಸಲು ಅಗತ್ಯವಾದ ಕ್ರಮಗಳನ್ನು ಅನುಸರಿಸಿ ವಿಪುಲವಾಗಿ ಪ್ರಯತ್ನಿಸಿ ವೈಫಲ್ಯ ಹೊಂದಿ ಈಗ ತಲೆ ಕೆರೆದು ಕೊಂಡರೆ ಯಾರು ಹೊಣೆ? ಅಂದು ಅಸಹಜವಾಗಿ ಸುರಿಯುತ್ತಿದ್ದ ಅಕಾಲಿಕ ಮಳೆಗೆ ಇಂದು ಸಹಜತೆಯನ್ನು ತಾನೇ ದಯಪಾಲಿಸಿಕೊಂಡನೇನೋ ಎನಿಸುತ್ತದೆ. ಅದಕ್ಕೆ ಈಗ ಗಮನಿಸಿದಂತೆ ವರ್ಷಪೂರ್ತಿ ಮಳೆ ಬೀಳುವ ಸೈಕ್ಲೋನ್ ಸೃಷ್ಟಿಗೆ ಕಾರಣವಾಗಿವೆ. ಸಕಾಲಿಕವಾಗಿ ಸುರಿಯುತ್ತಿದ್ದ ಮಾನ್ಸೂನ್ ಮರೆಯಾಗಿದೆ. ಹೀಗೆ ‘ಮಳೆ ಬಂಧು’ ನೊಂದು ಮನದಲಿ ಇಂದು ಹಿತಶತ್ರು ಥರಾ ಕಾಣ್ತಾ ಕಾಣ್ತಾನೆ ಗೊತ್ತು ಗೊತ್ತಿಲ್ಲದಂತೆ ನಟಿಸಿ ಕಾಡುವಂತಾಗಿದೆ.
ಈಗ ಗಮನಿಸಿದಂತೆ ಪ್ರತಿವರ್ಷವೂ ವಾಣಿಜ್ಯ ಬೆಳೆ ಕಾಫಿ ಕೊಯ್ಲು ಮಾಡಲು ಒಂದು ಕಾರ್ಮಿಕರ ಕೊರತೆ. ಅಕ್ಕಪಕ್ಕದ ಕೃಷಿಕರು ‘ನಿಮಗೆ ಈ ಸಲ ಜನ ಜಾಸ್ತಿ ಇದ್ದರೆ ನಮಗೆ ಒಂದು ದಿನವಾದರೂ ಕಳುಹಿಸು, ಪುಣ್ಯ ಕಟ್ಕೊ! ‘ ಎಂಬ ಪ್ರೀತಿಯ ಕೋರಿಕೆ. ಈ ನಡುವೆ ಹೇಗೋ ಅಡೆಮೂಲೆಯಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಅಂತ ಜನವ ಗುಡ್ಡಿ ಹಾಕಿ ಕಾಫಿ ಕೊಯ್ಲು ಮಾಡಲು ಶುರುವಾದಾಗ ಮೋಡಕಟ್ಟಿದ ವಾತಾವರಣ. ಒಣಗಿಸಲು ಬಿಸಿಲು ಇಲ್ಲ! ಆಕಾಶವೇ ತೂತು ಬಿದ್ದು ಜರಡಿ ಹಿಡಿದಂತೆ ಸುರಿಯುವ ಜಡಿಮಳೆ ಜೋಡಿಯು! (ಅವತ್ತು ನನ್ನ ಬಾಲ್ಯ ಕಾಲದ ಗದ್ದೆ ಪೈರಿಗೆ ಬಂದ ಪರಿಸ್ಥಿತಿ ಇವತ್ತು ಕಾಫಿಗೆ?! ಆದರೆ ಅವತ್ತು ಸಹಜ ಮಾನ್ಸೂನ್ ನ ಮೋಸ. ಇಂದು ಅದೇ ಮಾನ್ಸೂನ್ ಬದಲಾಗಿ ಸೈಕ್ಲೋನ್ ವೇಷ!) ‘ಈಗ ಎಂಥಾ ಮಾಡೋದು ಅಂತ ಗೊತ್ತಾಗ್ತಾ ಇಲ್ಲ ಮಾರಾಯಾ!’ ಎಂದು ಶ್ರಮಜೀವಿ ಕೃಷಿಕನಾದ ಅಪ್ಪ ನನ್ನ ನೋಡುತ್ತ ‘ಏನು ಯೋಚನೆ ಮಾಡ್ತಾ ಇದೀಯಾ ಬರಿ ಕವನ ಬರೀ!’ ಅಂತ ನನ್ನಂತಹ ಕವಿಯ ಮುಖ ನೋಡಿಕೊಂಡು ವ್ಯಂಗ್ಯಚಿತ್ರವಾಗಿ ಪರಿಕಲ್ಪನೆ ಮಾಡಿಕೊಳ್ಳಲೂ ಕೂಡ ಈ ಮಳೆ ಬಿದ್ದು ಸೂರು ನೀರಾಗಿ ಹರಿದು ಹೋಗುತ್ತಿದೆ.
ಆದರೇನು? ಟಿ.ವಿಯಲ್ಲಿ ಮಾತ್ರ ‘ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ!’ ಎಂಬ ಹಾಡು ಕಣ್ಣಂಚಿನಲ್ಲಿ ಕನಸು ಕಟ್ಟಿಕೊಂಡು ಮುಂದೆ ಸಾಗುವಂತೆ ಪ್ರಸಾರವಾಗಿ ಮತ್ತಷ್ಟು ಮಳೆ ಕವಿತೆ ಕಟ್ಟಲು ಪ್ರೇರಣೆ ಆಗಿದೆ. ಹೀಗೆ ನಾನೂ ಹೊಸ ಹಾಡು ಬರೆಯೋದ? ಅಥವಾ ಮಾಲ್ಥಸ್ ಅವರ ಸಿದ್ಧಾಂತಕ್ಕೊಂದು ವೇದಾಂತ ದರ್ಶನದ ವ್ಯಾಖ್ಯಾನ ಮಾಡೋದಾ? ಎಂದು ಯೋಚಿಸುತ್ತ ಹೋದಂತೆ ಹೊಳೆದ ಅಕ್ಷರ ರೂಪವಿದು. ಸರಿ ಓದುಗರಾದ ನೀವೂ ಕೂಡ ‘ಇದೆಂಥ ಮಳೆ ಮಾರಾಯಾ?’ ಎಂಬ ದುಗುಡ ಉಕ್ಕಿ ಬಂದಂತೆ ಕಾಣಿಸುತ್ತೆ! ಏನೇ ಅನ್ನಿ.. ಪ್ರಕೃತಿ ಮುಂದೆ ನಾವೆಲ್ಲಾ ಸೊನ್ನೆ. ಕಾಲ ಕ್ರಮೇಣ ಎಲ್ಲಾ ಒಳ್ಳೆಯದಾಗುತ್ತದೆ.
✍🏻ಬರಹ ಕೃಪೆ.✍🏻
ಡಾ.ಸಂಪತ್ ಬೆಟ್ಟಗೆರೆ.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.