“ನಾಡು-ನುಡಿಯಲ್ಲಿ ಶ್ರೇಷ್ಠ ಚಿಂತನೆ ಅಡಗಿದೆ : ಸೂರಿ ಶ್ರೀನಿವಾಸ್.”
1 min read
ಸರ್ಕಾರವು ಕನ್ನಡ ಭಾಷೆ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.ಅವರು ದಿನಾಂಕ 29/12/2023ರ ಶುಕ್ರವಾರದಂದು ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಕೊಟ್ಟಿಗೆಹಾರದ,ತರುವೆ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಕನ್ನಡ ಭಾಷೆಗೆ ಶೇ 60ರಷ್ಟು ಪ್ರಾಧಾನ್ಯತೆ ನೀಡಿ, ನಂತರ ಅನ್ಯಭಾಷೆಗಳಿಗೆ ಒತ್ತು ನೀಡಿದರೆ ಕನ್ನಡನಾಡಿನ ಭಾಷೆ ಸಮೃದ್ಧವಾಗುತ್ತದೆ.ಒಂದರಿಂದ ನಾಲ್ಕನೇ ತರಗತಿವರೆಗೆ ಮಾತೃಭಾಷೆ ಬೋಧನೆ ಮಾಡಿ,ಐದನೇ ತರಗತಿಯಿಂದ ಅಗತ್ಯವಿದ್ದರೆ ಬೇರೆ ಮಾಧ್ಯಮದಲ್ಲಿ ಮಕ್ಕಳು ಓದಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡರೆ ಕನ್ನಡ ಭಾಷೆ ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ.ನಾಡು-ನುಡಿಯಲ್ಲಿ ಶ್ರೇಷ್ಠ ಚಿಂತನೆ ಅಡಗಿದೆ.ನಾವು ಬಾಗಿದಾಗ ಮಾತ್ರ ಬೀಗಲು ಸಾಧ್ಯವಾಗುತ್ತದೆ.ಮಕ್ಕಳು ಮೊಬೈಲ್ ಫೋನ್ ಬಳಕೆ ಮಾಡದೆ ಮಾನಸಿಕವಾಗಿ ಸದೃಢರಾಗಿ,ದೇಶದ ಆಸ್ತಿಯಾಗಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ ಕಸಬಾ ಹೋಬಳಿ ಘಟಕದ ಅಧ್ಯಕ್ಷ ಎಂ.ಎಸ್.ನಾಗರಾಜ್ ಮಾತನಾಡಿ, ‘ಗ್ರಾಮೀಣ ಬದುಕಿನ ಪರಿ ಮರೆಯಲು ಸಾಧ್ಯವಿಲ್ಲ. ಬದಲಾದ ಆಧುನಿಕ ಯುಗದಲ್ಲಿ ನಾವು ಗ್ರಾಮೀಣ ಬದುಕನ್ನು ನೆನಪಿಸುವ ಅಗತ್ಯವಿದೆ’ಎಂದರು.
ಮೂಡಿಗೆರೆ ತಾಲ್ಲೂಕು ಘಟಕದ ಅಧ್ಯಕ್ಷ ಶಾಂತಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಹಂತದಲ್ಲಿ ಮಕ್ಕಳಿಗೆ ಪ್ರಕೃತಿಯ ಅರಿವು,ನಾಡು-ನುಡಿಯ ಬಗ್ಗೆ ತಿಳಿಸುವ ಅಗತ್ಯವಿದೆ.ಪ್ರಕೃತಿಯನ್ನು ಪ್ರೀತಿಸಿದರೆ ಅದು ನಮಗೆ ಒಳಿತನ್ನು ಮಾಡುತ್ತದೆ.ಉತ್ತಮ ಆರೋಗ್ಯ ದೊರೆಯುತ್ತದೆ ಎಂದರು.
ಕುವೆಂಪು ಅವರ ಬಗ್ಗೆ ಸಾಹಿತಿಗಳಾದ ಪೂರ್ಣೇಶ್ ಮತ್ತಾವರ,ನಂದೀಶ್ ಬಂಕೇನಹಳ್ಳಿ ಉಪನ್ಯಾಸ ನೀಡಿದರು.ಗಾಯಕ ಬಕ್ಕಿ ಮಂಜುನಾಥ್ ಜಾನಪದ ಹಾಡುಗಳನ್ನು ಹಾಡಿದರು.
ಕಸಾಪ ಪ್ರಧಾನ ಸಂಚಾಲಕ ಮಗ್ಗಲಮಕ್ಕಿ ಗಣೇಶ್, ಬಾಳೂರ ಕಸಾಪ ಘಟಕದ ಅಧ್ಯಕ್ಷ ರವಿ ಪಟೇಲ್ ಕೂವೆ, ಆರ್.ಪ್ರಕಾಶ್,ಪರೀಕ್ಷಿತ್ ಜಾವಳಿ,ಬೆಟ್ಟಗೆರೆ ಲೋಕೇಶ್,ಕಾಂತರಾಜ್,ವಸಂತ್ ಹಾರ್ಗೋಡು,ಅನಿತಾ ಜಗದೀಪ್,ಪ್ರಾಂಶುಪಾಲರಾದ ಬಿ.ಟಿ ವೆಂಕಟೇಶ್,ಶಿಕ್ಷಕಿ ವೀಣಾ ಇದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.