“ಪುಸ್ತಕ ಜ್ಞಾನದ ಭಂಡಾರವಾಗಬೇಕು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಆನಂದ್ ಕಣಚೂರು ಹೇಳಿಕೆ.”
1 min read
ವಿದ್ಯಾರ್ಥಿ ದೆಸೆಯಿಂದಲೇ ಪುಸ್ತಕವನ್ನು ಓದುವುದರಿಂದ ನಮ್ಮ ಜ್ಞಾನ ಭಂಡಾರ ಸದೃಢವಾಗುತ್ತದೆ. ಹಾಗಾಗಿ ಪುಸ್ತಕ ಓದುವುದು ಹವ್ಯಾಸವಾಗಿ ನಮ್ಮ ಜೀವನದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಆನಂದ್ ಕಣಚೂರು ಹೇಳಿದರು.
ಅವರು ದಿನಾಂಕ 21/11/2023ರ ಸೋಮವಾರದಂದು ಪಟ್ಟಣದ ಗ್ರಂಥಾಲಯದಲ್ಲಿ ಕಸಾಪ ಕಸಬಾ ಹೋಬಳಿ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು. ಮನೆಯೇ ಒಂದು ಗ್ರಂಥಾಲಯವಾಗಬೇಕು. ಅನೇಕ ಮಹನೀಯರು ಪುಸ್ತಕ ಓದುವ ಮೂಲಕ ಜ್ಞಾನ ಸಂಪಾದಿಸಿ ಹೆಸರುವಾಸಿಯಾಗಿದ್ದಾರೆ. ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಲು ಮಾತ್ರ ಪಠ್ಯ ಪುಸ್ತಕ ಓದಬಾರದು. ಅದರಲ್ಲಿರುವ ಜ್ಞಾನದ ಭಂಡಾರವನ್ನು ಅರಿತುಕೊಳ್ಳಬೇಕೆಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮೂಡಿಗೆರೆ ಕಸಬಾ ಹೋಬಳಿ ಅಧ್ಯಕ್ಷ ಎಂ.ಎಸ್.ನಾಗರಜ್ ಮಾತನಾಡಿ, ಪುಸ್ತಕವನ್ನು ತಲೆ ತಗ್ಗಸಿ ಓದಿದರೆ ಅದೇ ಪುಸ್ತಕ ನಮ್ಮನ್ನು ತಲೆ ಎತ್ತಿ ನಡೆಯುವಂತೆ ಮಾಡುತ್ತದೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಪುಸ್ತಕದ ಮಹತ್ವ ಕಡಿಮೆಯಾಗುತ್ತಿದೆ. ಯುವ ಸಮೂಹ ತಂತ್ರಜ್ಞಾನಕ್ಕೆ ಒತ್ತು ನೀಡುವ ಜೊತೆಗೆ ಪುಸ್ತಕಕ್ಕೂ ಕೂಡ ಮಹತ್ವ ನೀಡಬೇಕಾಗಿದೆ. ಮುಂದಿನ ದಿನದಲ್ಲಿ ಸರಕಾರಿ ಶಾಲೆ ಮತ್ತು ಸರಕಾರಿ ಗ್ರಂಥಾಲಯಗಳು ಮುಚ್ಚದಂತೆ ಕಾರ್ಯ ನಿರ್ವಹಿಸಬೇಕಾದರೆ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವುದರೊಂದಿಗೆ ಹಾಗೂ ಗ್ರಂಥಾಲಯಕ್ಕೆ ತೆರಳಿ ಪುಸ್ತಕ ಓದುವಂತೆ ಮಾಡಬೇಕೆಂದು ಹೇಳಿದರು.
ಗ್ರಂಥಪಾಲಕ ನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಸಾಪ ತಾಲ್ಲೂಕು ಅಧ್ಯಕ್ಷ ಶಾಂತಕುಮಾರ್,ಸಂಚಾಲಕ ಡಿ.ಕೆ.ಲಕ್ಷ್ಮಣ್ಗೌಡ, ನವೀನ್,ಶಿಕ್ಷಕಿ ಯಾಸ್ಮೀನ್ ಸುಲ್ತಾನ್,ತೋಟಪ್ಪ,ಶ್ರಾವ್ಯ, ಜಲೀಲ್ ಮತ್ತಿತರರಿದ್ದರು.
🎙️ವರದಿ.🎙️
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.