“ಹೆಣದ ಮೇಲೆ ಗಿಡ ನೆಟ್ಟ ಇಲಾಖೆ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ, ಚಕ್ಕುಡಿಗೆ ಗ್ರಾಮದ,ಸರ್ವೆ ನಂ.9ರಲ್ಲಿ 1.05 ಎಕರೆ ಸರ್ಕಾರಿ ರುದ್ರಭೂಮಿ ಇದ್ದು, ಇದನ್ನು ಅನಾದಿ ಕಾಲದಿಂದಲೂ ಚಕ್ಕುಡಿಗೆ ಗ್ರಾಮದಲ್ಲಿ ನಿಧನ ಹೊಂದಿದವರ ಅಂತ್ಯ ಸಂಸ್ಕಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಈ ಭೂಮಿಯನ್ನು ಅರಣ್ಯ ಇಲಾಖೆ ನಾಶಪಡಿಸಿ ಗಿಡಗಳನ್ನು ನೆಟ್ಟು ಗ್ರಾಮಕ್ಕೆ ಸ್ಮಶಾನದ ಕೊರತೆ ಉಂಟು ಮಾಡಿದ್ದಾರೆಂದು ಗ್ರಾಮದ ನಿವಾಸಿ ಗಿರಿಪ್ರಸಾದ್ ಹೇಳಿದರು.
ಅವರು ಮಂಗಳವಾರ ಪಟ್ಟಣದಲ್ಲಿ ವಾಹಿನಿಯೊಂದಿಗೆ ಮಾತನಾಡಿ, ತಾಲ್ಲೂಕಿನಲ್ಲಿ ಸ್ಮಶಾನದ ಕೊರತೆ ಅಧಿಕವಾಗಿದೆ. ಇದರ ನಡುವೆ ಇದ್ದ ಸ್ಮಶಾನ ಜಾಗವನ್ನು ಅಧಿಕಾರಿಗಳು ನಾಶ ಪಡಿಸುತ್ತಿದ್ದಾರೆ. ಚಕ್ಕುಡಿಗೆ ಗ್ರಾಮದಲ್ಲಿದ್ದ ಸ್ಮಶಾನ ಭೂಮಿಯನ್ನು ಕಳೆದ ತಿಂಗಳು ಅರಣ್ಯ ಇಲಾಖೆ ಅಧಿಕಾರಿಗಳು ನರೇಗಾ ಯೋಜನೆಯಡಿಯಲ್ಲಿ ಅರಣ್ಯೀಕರಣಗೊಳಿಸಲು ಏಕಾಏಕಿ ಗ್ರಾಮಸ್ಥರ ಗಮನಕ್ಕೆ ತರದೇ ಗಿಡಗಳನ್ನು ನೆಟ್ಟಿದ್ದಾರೆ. ಈ ಹಿಂದೆ ಕುಟುಂಬದವರು ಸ್ಮಶಾನಕ್ಕೆ ತೆರಳಿ ಹಿರಿಯರಿಗೆ ಪೂಜೆ ಸಲ್ಲಿಸುವ ವಾಡಿಕೆ ನಿರಂತರವಾಗಿ ನಡೆದುಕೊಂಡು ಬರುತ್ತಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಮಶಾನದಲ್ಲಿ ಇದ್ದ ಹಳೆ ಮರಗಳನ್ನು ತೆರವುಗೊಳಿಸಿ ಗಿಡ ನೆಡುವ ಸಲುವಾಗಿ ಸಮಾಧಿ ಹಾಗೂ ಶವ ಸುಡುವ ಸ್ಥಳವನ್ನು ಜೆಸಿಬಿಯಿಂದ ಬಗೆದು ಗ್ರಾಮಸ್ಥರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆಂದು ದೂರಿದರು.
ಈಗಾಗಲೇ ಅರಣ್ಯೀಕರಣ ಮಾಡಿರುವ ಸ್ಮಶಾನ ಭೂಮಿಯಲ್ಲಿ ಹಳೆ ಕಾಲದ ಮರಗಳನ್ನು ತೆರವುಗೊಳಿಸಿದ್ದು, ಆ ಸ್ಥಳಕ್ಕೆ ಗಿಡಗಳನ್ನು ನೆಟ್ಟಿರುವುದು ನ್ಯಾಯ ಸಮ್ಮತವಲ್ಲ. ನರೇಗಾ ಯೋಜನೆಯಡಿ 1.83 ಲಕ್ಷ ರೂ ಬಳಕೆ ಮಾಡಿ ಕೇವಲ ಸುಮಾರು 25 ಸಾವಿರ ರೂಗಳಲ್ಲಿ ಕೆಲಸ ಮುಗಿಸಿದ್ದಾರೆ. ಅಲ್ಲದೇ ಈ ಕೆಲಸವನ್ನು ನಿಯಮವಾಗಿ ಕಾರ್ಮಿಕರಿಂದ ಮಾಡಿಸಬೇಕಿತ್ತು. ಬದಲಾಗಿ ಜೆಸಿಬಿ ಮೂಲಕ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಸಚಿವರು, ಜಿಲ್ಲಾಧಿಕಾರಿ, ಜಿ.ಪಂ.ಸಿಇಒ ಗೆ ದೂರು ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕುಮಾರ್, ತೇಜಾ, ರಾಜಶೇಖರ್, ಪುಟ್ಟರಾಜು, ನಾಗರಾಜು, ರಾಹುಲ್ ಉಪಸ್ಥಿತರಿದ್ದರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.