“ರಸ್ತೆ ದುರಸ್ತಿ ಕಾಣದೇ 3 ತಿಂಗಳಿಂದ ಸರಕಾರಿ ಬಸ್ ಸಂಚಾರ ಸ್ಥಗಿತ: ಕೂಡಲೇ ರಸ್ತೆ ದುರಸ್ತಿಗೆ ಗ್ರಾಮಸ್ಥರಿಂದ ಆಗ್ರಹ.”
1 min read
ಮೂಡಿಗೆರೆ ತಾಲ್ಲೂಕಿನ ಮೂಡಿಗೆರೆ ಪಟ್ಟಣದಿಂದ ಮೂಲರಹಳ್ಳಿ ಮತ್ತು ಗುತ್ತಿಹಳ್ಳಿ ಸಂಪರ್ಕ ರಸ್ತೆಯು ಸುಮಾರು 3 ಕಿ,ಮೀ ಸಂಪೂರ್ಣವಾಗಿ ಗುಂಡಿ ಗೊಟರುಗಳಿಂದ ಕೂಡಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ರೀತಿಯಲ್ಲಿ ತೊಡಕುಂಟಾಗಿದೆ. ಶಾಸಕರು ಇತ್ತ ಗಮನಹರಿಸಿ ಕೂಡಲೇ ರಸ್ತೆ ದುರಸ್ತಿ ಪಡಿಸಿಕೊಡಬೇಕೆಂದು ವಿನಯ್ ಮೂಲರಹಳ್ಳಿ ಗ್ರಾಮಸ್ಥರ ಪರವಾಗಿ ಆಗ್ರಹಿಸಿದ್ದಾರೆ. ಬುಧವಾರ ಹೇಳಿಕೆಯಲ್ಲಿ ತಿಳಿಸಿರುವ ಅವರು, ಅತಿವೃಷ್ಟಿ ಪೀಡಿತ ಪ್ರದೇಶವಾಗಿರುವ ಮೂಲರಹಳ್ಳಿ, ಗುತ್ತಿಹಳ್ಳಿ ರಸ್ತೆ ದುರಸ್ತಿ ಕಂಡು ಅನೇಕ ವರ್ಷಗಳೇ ಕಳೆದಿದೆ. ರಸ್ತೆ ದುರಸ್ತಿ ಕಾಣದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಸೇರಿ ಪ್ರತಿ ವರ್ಷ ರಸ್ತೆಗೆ ಮಣ್ಣು ಹಾಕಿ, ಗುಂಡಿ ಮುಚ್ಚಿ ವಾಹನ ಸಂಚಾರಕ್ಕೆ ಸುಗಮಗೊಳಿಸಿದ್ದರು. ಆದರೆ ಈ ವರ್ಷದ ಮಳೆಯಿಂದ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿ ಗುಂಡಿಗಳಾಗಿ ವಾಹನ ತಿರುಗಾಡದಂತಾಗಿದೆ. ಅಲ್ಲದೇ ಈ ಗ್ರಾಮಕ್ಕೆ ಈ ಹಿಂದೆ ಸರಕಾರಿ ಬಸ್ಸು ಕೂಡ ಬರುತ್ತಿತ್ತು. ಆದರೆ ರಸ್ತೆ ಸರಿಯಿಲ್ಲದ ಕಾರಣ ಸರಕಾರಿ ಬಸ್ಸು ಕೂಡ ಕಳೆದ 3 ತಿಂಗಳಿಂದ ಬಾರದಂತಾಗಿದೆ. ಈ ಗ್ರಾಮಗಳಲ್ಲಿ ಸುಮಾರು 50 ಕ್ಕೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮನೆ ಸೇರಿದಂತೆ ಇತರೆ ವರ್ಗದ ಕುಟುಂಬಗಳು ವಾಸವಾಗಿವೆ. ಗ್ರಾಮದ ಮಕ್ಕಳು ಶಾಲೆಗೆ ತೆರಳಲು, ರೋಗಿಗಳು ಹಾಗೂ ಗ್ರಾಮಸ್ಥರು ಪಟ್ಟಣಕ್ಕೆ ತೆರಳಲು ಸುಮಾರು 3 ಕಿ,ಮೀ ನಡೆದುಕೊಂಡು ಹೋಗುವ ಸ್ಥಿತಿ ಉಂಟಾಗಿದೆ. ಜಿ.ಪಂ. ಅಧಿಕಾರಿಗಳಿಗೆ ರಸ್ತೆ ದುರಸ್ತಿಪಡಿಸಿ ಕೊಡಿ ಎಂದು ಕೇಳಿಕೊಂಡರೆ ನಮಗೆ 1 ಲೋಡ್ ಮಣ್ಣು ಹಾಕಲು ಕೂಡ ಸರಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಸಧ್ಯಕ್ಕೆ ಸಾಧ್ಯವಿಲ್ಲ ಎಂದು ತೋರಿಕೆಯ ಉತ್ತರ ನೀಡುತ್ತಿದ್ದಾರೆ. ಸರಕಾರದ ಗ್ಯಾರಂಟಿ ಯೋಜನೆಯಿಂದ ತುರ್ತು ಅಭಿವೃದ್ಧಿ ಕಾರ್ಯಕ್ಕೆ ತೊಡಕುಂಟಾಗುತ್ತಿದೆ. ನಮಗೆ ಸರಕಾರದ ಯಾವುದೇ ಗ್ಯಾರಂಟಿ ಬೇಡ. ಮೊದಲು ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮುಲಭೂತ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




