“ಗಣಪತಿ ಬಪ್ಪ ಮೋರೆಯ….ಉಳಿಸು ನಮ್ಮ ಬೆಳೆಯ….”
1 min read
ಇತ್ತ ನಾಡಿನಾದ್ಯಂತ ಗಣಪತಿ ಉತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ ಅತ್ತ ಸಾರಗೋಡು ಗ್ರಾಮದಲ್ಲಿ ಗಜಪಡೆಯೊಂದು ಗ್ರಾಮದ ಕಾಫಿ ತೋಟಗಳಿಗೆ ಲಗ್ಗೆಯಿಟ್ಟಿವೆ.ಚಿಕ್ಕಮಗಳೂರು ಜಿಲ್ಲೆ ಸಾರಗೋಡು ಗ್ರಾಮದ ಹಲಸೂರು ಎಸ್ಟೇಟ್, ಬೀಡಿಕೆ ಎಸ್ಟೇಟ್ ಸೇರಿದಂತೆ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಏಳು ಕಾಡಾನೆಗಳು ಸಂಚರಿಸುತ್ತಾ ಜನರಲ್ಲಿ ಆತಂಕ ಮೂಡಿಸಿವೆ.
ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರು ಕಾಡಾನೆಗಳನ್ನು ಅಟ್ಟಲು ಎಷ್ಟೇ ಪ್ರಯತ್ನಿಸಿದರು ಆನೆಗಳು ಸ್ಥಳದಿಂದ ಕಾಲು ಕೀಳುತ್ತಿಲ್ಲ.ಕೆಲ ದಿನಗಳಿಂದ ಆಲ್ದೂರು ಅರೇನೂರು ಭಾಗದಲ್ಲಿ ಸಂಚರಿಸುತ್ತಿದ್ದ ಮತ್ತು ವ್ಯಕ್ತಿಯೋರ್ವರನ್ನು ತುಳಿದು ಸಾಯಿಸಿದ್ದ ಕಾಡಾನೆಗಳ ಗುಂಪು ಈಗ ಸಾರಗೋಡು ಭಾಗಕ್ಕೆ ಆಗಮಿಸಿವೆ ಎನ್ನಲಾಗಿದೆ. ಈ ತಂಡದಲ್ಲಿ ಎರಡು ಮರಿಯಾನೆಗಳು ಇವೆ. ಮರಿಯಾನೆಗಳ ರಕ್ಷಣೆಗಾಗಿ ಆನೆಗಳು ಒಟ್ಟಾಗಿ ಸಂಚರಿಸುತ್ತಿವೆ. ಅಟ್ಟಲು ಹೋದರೆ ಮನುಷ್ಯರ ಮೇಲೆ ಎಗರಿ ಬರುತ್ತಿವೆ.ಆನೆಗಳು ತೋಟದಲ್ಲಿ ಕಾಫಿ, ಅಡಿಕೆ ಮರಗಳನ್ನು ನಾಶ ಮಾಡುತ್ತಿದ್ದು, ರೈತರಿಗೆ ಅಪಾರ ಹಾನಿ ಉಂಟುಮಾಡುತ್ತಿವೆ. ಅವು ಗುಂಪಾಗಿ ಸಂಚರಿಸುವ ಸಂದರ್ಭದಲ್ಲಿ ಕಾಫಿ ಗಿಡಗಳು ಸಂಪೂರ್ಣ ನಾಶವಾಗುತ್ತಿವೆ.ಸಾರಗೋಡು, ಕುಂದೂರು, ಬಿಕ್ಕರಣೆ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಆನೆಗಳು ಇದ್ದು ಜನವಸತಿ ಪ್ರದೇಶಗಳ ಸಮೀಪಕ್ಕೆ ಬಂದಿದೆ. ಈ ಭಾಗದ ಜನರು ಹೊರಗೆ ತಿರುಗುವಾಗ ಜಾಗ್ರತೆ ವಹಿಸಬೇಕು ಎಂದು ಅರಣ್ಯ ಇಲಾಖೆಯವರು ಮುನ್ನೆಚ್ಚರಿಕೆ ನೀಡಿದ್ದಾರೆ.
ಭುಗಿಲೆದ್ದ ಜನರ ಆಕ್ರೋಶ.
ಕಳೆದ ಹಲವಾರು ದಿನಗಳಿಂದ ಮಲೆನಾಡಿನ ಸುತ್ತಮುತ್ತ ಗಜರಾಜನ ಅಟ್ಟಹಾಸ ಮೇಲೆ ಮೀರಿದೆ.ಕಾಫಿತೋಟಗಳಿಗೆ ಲಗ್ಗೆ ಇಟ್ಟು ಕಾಫಿ ಗಿಡಗಳನ್ನು,ಅಡಿಕೆ ಮರಗಳನ್ನು ಸರ್ವನಾಶ ಮಾಡುತ್ತಿದೆ.ಇದರಿಂದ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ.ಆದಷ್ಟು ಬೇಗ ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಗಳನ್ನು ಸ್ಥಳಾಂತರ ಮಾಡದಿದ್ದರೆ ಅರಣ್ಯ ಇಲಾಖೆಯ ಮುಂದೆ ಧರಣಿ ಮಾಡುತ್ತೇವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




