“ಕಂದಾಯ ಭೂಮಿ ಮಂಜೂರಾತಿಯಲ್ಲಿ ನಡೆದಿರುವ ಹಗರಣ ಸಮರ್ಪಕವಾಗಿ ತನಿಖೆಯಾಗಬೇಕು : ಯು.ಬಿ.ಮಂಜಯ್ಯ.”
1 min read
ಮೂಡಿಗೆರೆ ತಾಲ್ಲೂಕಿನಲ್ಲಿ ಫಾರಂ ನಂ 50 ಮತ್ತು 53 ರಲ್ಲಿ ಭೂ ಮಂಜೂರಾತಿಯಲ್ಲಿ ಅನೇಕ ಹಗರಣಗಳು ನಡೆದಿದೆ. ಇದನ್ನು ರಾಜೇಂದ್ರ ಕುಮಾರ್ ಕಠಾರಿಯ ಕಮಿಟಿ ತಂಡ ಸೂಕ್ತ ತನಿಖೆ ನಡೆಸಿ, ಭೂಮಿ ಹಿಂಪಡೆದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಡಬೇಕೆಂದು ಬಿಎಎಸ್ಪಿ ಜಿಲ್ಲಾ ಸಂಯೋಜಕ ಯು.ಬಿ.ಮಂಜಯ್ಯ ಒತ್ತಾಯಿಸಿದರು.
ಅವರು ದಿನಾಂಕ 30/08/2023ರ ಬುಧವಾರದಂದು ಪಟ್ಟಣದಲ್ಲಿ ವಾಹಿನಿಯೊಂದಿಗೆ ಮಾತನಾಡಿ, 1981ರಿಂದ 1986ರವರೆಗೆ ದರ್ಕಾಸ್ ಕಮಿಟಿಯಲ್ಲಿ ತಾಲ್ಲೂಕಿನ 5 ಹೋಬಳಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಮಂಜೂರು ಮಾಡಿದ್ದ ಜಮೀನಿನ ಕಡತ ನಾಶಪಡಿಸಿ, ಅದೇ ಜಮೀನನ್ನು 1991ರಿಂದ ಇಲ್ಲಿಯವರೆಗೆ ಫಾರಂ ನಂಬರ್ 50 ಮತ್ತು 53 ರಲ್ಲಿ ಭೂಮಾಲೀಕರಿಗೆ ಮತ್ತೆ ಮಂಜೂರು ಮಾಡಲಾಗಿದೆ. ನಿಯಮದ ಪ್ರಕಾರ 4.38 ಎಕರೆ ಭೂಮಿ ಉಳ್ಳವರು ಫಾರಂ ನಂಬರ್ 50 ಮತ್ತು 53 ರಲ್ಲಿ ಭೂಮಿ ಪಡೆಯುವಂತಿಲ್ಲ. ಆದರೆ ಕಾನೂನು ಉಲ್ಲಂಘಿಸಿ ಭೂ ಮಾಲೀಕರ ಕುಟುಂಬದ ಸದಸ್ಯರಿಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಲಾಗಿದೆ. ಈ ಬಗ್ಗೆ ಪಾರದರ್ಶಕವಾದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಬಿಎಸ್ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಂಜುನಾಥ್ ಮಾತನಾಡಿ, ಅಧಿಕಾರಿಗಳ ಬೇಜವಾಬ್ದಾರಿಯಿಂದ ತಾಲ್ಲೂಕಿನಲ್ಲಿ ದಲಿತರ ಹಾಗೂ ಸರಕಾರಿ ಭೂಮಿಗಳೆಲ್ಲಾ ಭೂ ಮಾಲೀಕರ ಪಾಲಾಗಿದೆ. ಅಲ್ಲದೇ ತಾಲ್ಲೂಕು ಕಚೇರಿಯಲ್ಲಿ ಮೂಲ ಕಡತಗಳೇ ನಾಶವಾಗಿದೆ. ಮೀಸಲು ಕ್ಷೇತ್ರವಾಗಿರುವ ಮೂಡಿಗೆರೆ ತಾಲ್ಲೂಕನಲ್ಲಿ ದಲಿತರ ಬಗ್ಗೆ ಈ ಹಿಂದಿನ ಹಾಗೂ ಈಗಿನ ಶಾಸಕರಾಗಲಿ ಕಾಳಜಿ ವಹಿಸುತ್ತಿಲ್ಲ. ಈಗಿನ ಶಾಸಕರನ್ನಂತೂ ಹುಡುಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಸರಕಾರ ಭೂಮಿತಿ ಕಾಯಿದೆ ಜಾರಿ ಮಾಡಿ, ಭೂಹೀನರಿಗೆ ಭೂಮಿ ಹಂಚಿಕೆ ಮಾಡಬೇಕು. ತಾಲ್ಲೂಕಿನಲ್ಲಿ ಭೂಮಿಗೆ ಸಂಬಂಧಿಸಿದ ಹಗರಣವನ್ನು ಈಗ ತನಿಖೆ ಕೈಗೊಂಡಿರುವ ತಂಡ ಸಮರ್ಪಕವಾಗಿ ತನಿಖೆ ನಡೆಸಬೇಕು. ಇಲ್ಲವಾದರೆ ಅವರ ವಿರುದ್ಧವೂ ರಾಜೇಂದ್ರ ಕುಮಾರ್ ಕಠಾರಿಯ ಅವರ ಬಳಿಗೆ ನಿಯೋಗ ತೆರಳಿ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಬಕ್ಕಿ ಮಂಜುನಾಥ್, ತಾಲೂಕು ಸಂಯೋಜಕ ಬಿ.ರಾಮು, ಮುಖಂಡರಾದ ಯು.ಬಿ.ನಾಗೇಶ್, ಬಿ.ಎಂ.ಸುಮಿತ್ರ,ಬಕ್ಕಿ ರವಿ ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




