“ಮೂಡಿಗೆರೆಯಲ್ಲಿ ಆದಿವಾಸಿ ದಿನಾಚರಣೆ : ಗಿರಿಜ್ಯೋತಿ ಗಿರಿಜನರ ಸ್ವಸಹಾಯ ಸಂಘದ ಕಾರ್ಯಗಳು ಶ್ಲಾಘನೀಯ : ನಯನ ಮೋಟಮ್ಮ.”
1 min read
ಗಿರಿಜನರ ಸಮುದಾಯದಲ್ಲಿ ಬಹಳಷ್ಟು ಸಾಧಕರು ಉದಯಿಸುತ್ತಿದ್ದು ರಾಜ್ಯ ಹಾಗೂ ದೇಶದ ರಾಜಕಾರಣದಲ್ಲಿ ಕೂಡ ಹೆಸರು ಮಾಡುತ್ತಿದ್ದು ಇಂದಿನ ಪೀಳಿಗೆ ಅವರನ್ನು ಆದರ್ಶವಾಗಿ ಹಾಗೂ ಸ್ಫೂರ್ತಿಯಾಗಿ ತೆಗೆದುಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಭರವಸೆಯ ಶಾಸಕಿ ನಯನ ಮೋಟಮ್ಮ ಹೇಳಿದರು.
ಗಿರಿಜ್ಯೋತಿ ಗಿರಿಜನರ ಸ್ವಸಹಾಯ ಸಂಘ ಮೂಡಿಗೆರೆ ಇವರ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಆದಿವಾಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾಡಿದ ಅವರು ಗಿರಿಜನರು ಶಿಕ್ಷಣ ಪಡೆಯಬೇಕು, ಸ್ವಾವಲಂಬಿಗಳಾಗಬೇಕು, ಅವರ ಅಭಿವೃಧ್ದಿಗೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು ಅದರ ಸದುಪಯೋಗ ಪಡೆದುಕೊಂಡು ಮುಂದುವರೆಯಬೇಕು ಎಂದ ಅವರು ಇಂದು ದೇಶದ ರಾಷ್ಟ್ರಪತಿಯವರು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯಾಗಿದ್ದಾರೆ. ಜೊತೆಗೆ ಹಲವಾರು ಸಾಧಕರು ಪ್ರತಿಯೊಂದು ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಾಂಗದವರು ಒಂದೇ ದೋಣಿಯಲ್ಲಿ ಸಾಗುವ ಪಯಣಿಗರಾಗಿದ್ದು ಇವರ ಪರಸ್ಪರ ಒಗ್ಗೂಡುವಿಕೆ ಈ ಸಮುದಾಯಗಳ ರಾಜಕೀಯ ಹಾಗೂ ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ ಆದ್ದರಿಂದ ಹಿಂದುಳಿದ ಸಮುದಾಯಗಳು ಜಾತಿ ಪ್ರಜ್ಞೆ ಬಿಟ್ಟು ಒಂದಾಗಬೇಕಾಗಿದೆ ಎಂದರು. ಗಿರಿಜ್ಯೋತಿ ಗಿರಿಜನರ ಸ್ವಸಹಾಯ ಸಂಘದ ಕಾರ್ಯಗಳು ಶ್ಲಾಘನೀಯವಾಗಿದ್ದು ಇತರೆ ಸಂಘಸಂಸ್ಥೆಗಳಿಗೆ ಮಾದರಿ ಎಂದರು.
ಆದಿವಾಸಿ ಪರಿಷತ್ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ ಗೌಡಲು ಮಾತನಾಡಿ ಇಂದು ಗಿರಿಜನರ ಪರವಾದ ಕಾನೂನುಗಳನ್ನು ಗಾಳಿಗೆ ತೂರಿ ಸರ್ಕಾರದ ಜೊತೆಗೆ ಅರಣ್ಯ ಇಲಾಖೆಯು ಕೂಡ ಗಿರಿಜನರ ಮೂಲಭೂತ ಹಕ್ಕಾದ ಕಾಡಿನ ಉತ್ಪನ್ನ ಸಂಗ್ರಹಕ್ಕೆ ಸಾಕಷ್ಟು ತೊಂದರೆ ನೀಡುತ್ತಿದ್ದು, ಜೊತೆಗೆ ಗಿರಿಜನರ ಮೂಲ ನೆಲೆಯಿಂದ ಒಕ್ಕಲೆಬ್ಬಿಸುವ ಪ್ರಯತ್ನ ಕೂಡ ಆಗುತ್ತಿದೆ. ಒಕ್ಕಲೆಬ್ಬಿಸಿದ ಗಿರಿಜನ ಕುಟುಂಬಗಳಿ ಸಮರ್ಪಕ ನೆಲೆಯನ್ನು ಕೂಡ ಕಲ್ಪಿಸದೇ ಗಿರಿಜನರನ್ನು ಬೀದಿಗೆ ತರುವ ಪ್ರಯತ್ನ ನಡೆಯುತ್ತಿರುವುದು ಕೂಡ ವಿಪರ್ಯಾಸವಾಗಿದೆ. ಕೋಟಿ ಕೋಟಿ ಸರ್ಕಾರದ ಅನುದಾನಗಳು ಗಿರಿಜನರಿಗೆ ತಲುಪದೇ ಹಿಂದಕ್ಕೆ ಹೋಗುತ್ತಿರುವುದು ಆತಂಕದ ವಿಷಯವಾಗಿದ್ದು ಈ ಕೂಡಲೇ ಸರ್ಕಾರ ಗಿರಿಜನರ ಮೇಲಿನ ತಾರತಮ್ಯ ನೀತಿ ಅನುಸರಿಸುವ ಅಧಿಕಾರಿ ವರ್ಗಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಕರ್ನಾಟಕ ರಾಜ್ಯ ಲ್ಯಾಂಪ್ಸ್ ಮಹಾಮಂಡಲ ರಾಜ್ಯ ಅಧ್ಯಕ್ಷ ಮುತ್ತಪ್ಪ ಮಾತನಾಡಿ ಗಿರಿಜನರ ಪಾಲ್ಗೊಳ್ಳುವಿಕೆಯಿಂದ ಲ್ಯಾಂಪ್ಸ್ ಸಹಾಕಾರ ಸಂಘಗಳು ಉತ್ತಮ ಸ್ಥಿತಿಯಲ್ಲಿ ಇದ್ದು ಸರ್ಕಾರ ಹೆಚ್ಚಿನ ಅನುದಾನವನ್ನು ನೀಡಿ ಗಿರಿಜನರ ಸಂಸ್ಥೆ ಹಾಗೂ ಗಿರಿಜನರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಹಾಗೂ ಪ್ರೋತ್ಸಾಹ ನೀಡಬೇಕು. ಹಾಗೂ ಜಿಲ್ಲೆಯಲ್ಲಿ ಇರುವ ಮಲೆಕುಡಿಯ ಸಮುದಾಯಕ್ಕೂ ಪೌಷ್ಟಿಕ ಆಹಾರವನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ವಿಜೇಂದ್ರ ಮಾತನಾಡಿ ಸುಮಾರು 3 ವರ್ಷಗಳ ಹಿಂದೆ ರಚನೆ ಆದ ಸಮಾನ ಮನಸ್ಕರ ಸ್ವಸಹಾಯ ಸಂಘ ಇಂದು ಸುಮಾರು 3 ಲಕ್ಷಕ್ಕೂ ಅಧಿಕ ಉಳಿತಾಯ ಮಾಡಿದ್ದಲ್ಲದೇ ಇತರೆಡೆ ಕೂಡ ಸ್ವಸಹಾಯ ಸಂಘಗಳನ್ನು ರಚನೆ ಮಾಡಿ ಮಹಿಳೆಯರಿಗೂ ಕೂಡ ಉಳಿತಾಯದ ಮಹತ್ವವನ್ನು ತಿಳಿಸುತ್ತಾ ಗಿರಿಜನ ಮಹಿಳೆಯರು ಕೂಡ ಸ್ವಸಹಾಯ ಸಂಘಗಳನ್ನು ಮಾಡಿ ಉಳಿತಾಯ ಮಾಡುವಂತೆ ಪ್ರೇರೇಪಿಸುತ್ತಿದೆ. ಇಂದು ಸುಮಾರು 100 ಜನ ಮಹಿಳೆಯವರು ಸ್ವಸಹಾಯ ಸಂಘದಲ್ಲಿ ಉಳಿತಾಯ ಮಾಡುತ್ತಾ ತಮ್ಮ ಕುಟುಂಬವನ್ನು ಭದ್ರವಾಗಿ ಕಟ್ಟುವ ಮಟ್ಟಿಗೆ ಜಾಗೃತರಾಗುತ್ತಿದ್ದಾರೆ.

ಜೊತೆಗೆ ಗಿರಿಜ್ಯೋತಿ ಸ್ವಸಹಾಯ ಸಂಘ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಡಿದ್ದು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಹಣಕಾಸಿನ ನೆರವು, ಹಲವಾರು ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಪುಸ್ತಕ ವಿತರಣೆ ಮಾಡಿದ್ದು ರಾಷ್ರೀಯ ಹಬ್ಬಗಳ ಆಚರಣೆ, ಅಂಬೇಡ್ಕರ್ ಜಯಂತಿ, ಬಿರ್ಸಾಮುಂಡ ಜಯಂತಿ, ಹಾಗೂ ಪ್ರತಿ ಗಿರಿಜನ ಗ್ರಾಮಗಳಿಗೆ ಹೋಗಿ ಅವರಲ್ಲಿ ಶಿಕ್ಷಣ, ರಾಜಕೀಯ, ಸ್ವಚ್ಛತೆ, ಆರೋಗ್ಯ, ಸಂಘಟನೆ ಮುಂತಾದ ವಿಷಯಗಳ ಮಾಹಿತಿ ನೀಡಿ ಅವರನ್ನು ಜಾಗೃತಗೊಳಿಸುವ ಕಾರ್ಯಗಳು ಸ್ವಸಹಾಯ ಸಂಘದಿಂದ ನಡೆಯುತ್ತಿವೆ . ಇದಕ್ಕೆ ತಾಲ್ಲೂಕು ಸ್ವಸಹಾಯ ಸಂಘದ ಸದಸ್ಯರೆಲ್ಲರೂ ಬೆನ್ನೆಲುಬಾಗಿ ನಿಂತಿರುವುದು ಸಂಘದ ಶಕ್ತಿಯಾಗಿದೆ ಎಂದರು. ಈ ವೇಳೆ ಬಣಕಲ್ ಪಿಡಿಒ ಕೃಷ್ಣಪ್ಪರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪರಿಷತ್ ಜಿಲ್ಲಾಧ್ಯಕ್ಷ ಅಕ್ಷರತೋರಣ ಪತ್ರಿಕೆ ಸಂಪಾದಕ ರಾಜೇಶ್ ಸಿ.ಪಿ, ಪಟ್ಟಣಪಂಚಾಯಿತಿ ಸದಸ್ಯ ರಮೇಶ್ ,ಗ್ರಾಮ ಪಂಚಾಯತ್ ಸದಸ್ಯ ವಿಶ್ವ ಹಾರ್ಲಗದ್ದೆ, ಹಳೆ ಮೂಡಿಗೆರೆ ಗ್ರಾಪಂ ಸದಸ್ಯ ಚಂದ್ರೇಶ್ ,ಗಿರಿಜನ ಜಿಲ್ಲಾ ಸಮನ್ವಯಾಧಿಕಾರಿ ಭಾರತಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಸೋಮಶೇಖರ್,ಗಿರಿಜನ ಲ್ಯಾಂಪ್ಸ್ ಅಧ್ಯಕ್ಷ ಕೇಶವ ಹೊರನಾಡು, ಮುಖಂಡ ವಾಸು, ವಂಸತ ಹೊಸನಗರ,ಮಂಜು ಕೆಂಜಿಗೆ, ಶಿವಪ್ಪ ಬಾಪುನಗರ, ಚಂದ್ರು ಅಂಬೇಡ್ಕರ್ ನಗರ, ರಮೇಶ್ ತಮಟೆ ಬೈಲ್, ಶಿವಪ್ಪ, ನಾಗಪ್ಪ ಬಾಪುನಗರ, ಈಶ್ವರ್ ತತ್ಕೊಳ ಮುಂತಾದವರು ಇದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




