“ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷರಿಂದ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಭೇಟಿ.”
1 min read
ಚಿಕ್ಕಮಗಳೂರು ನೂತನ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ದಿನಾಂಕ 26/08/2023ರಂದು ಅಧಿಕಾರ ವಹಿಸಿಕೊಂಡ ಡಾ. ವಿಕ್ರಂ ಅಮಟೆ ಯವರನ್ನು ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಅವರು ಭೇಟಿ ಮಾಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಬೆಳೆಗಾರರ ಸಂಘದ ಪರವಾಗಿ ವಿವಿಧ ವಿಚಾರಗಳ ಬಗ್ಗೆ ನೂತನ ಎಸ್ಪಿಯವರೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡರು.
ವಿಶೇಷವಾಗಿ ಜಿಲ್ಲೆಯ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಹೊರರಾಜ್ಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಅವರ ವಿವರಗಳನ್ನು ಬೆಳೆಗಾರರಿಂದ ಕಡ್ಡಾಯವಾಗಿ ಪಡೆದು ಪೊಲೀಸ್ ಇಲಾಖೆಯಲ್ಲಿ ದಾಖಲಿಸುವುದು, ಅಸ್ಸಾಂ ಮೂಲದ ದರೋಡೆಕೋರರು ಕಾರ್ಮಿಕರ ವೇಷದಲ್ಲಿ ಬಂದು ಮಲೆನಾಡಿನಲ್ಲಿ ಇತ್ತೀಚೆಗೆ ಮನೆಗಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಪ್ರಕರಣಗಳು ನಡೆಯುತ್ತಿರುವುದರ ಬಗ್ಗೆ ನೂತನ ಎಸ್ಪಿಯವರೊಂದಿಗೆ ಚರ್ಚಿಸಿದ್ದಾರೆ. ಅಲ್ಲದೇ ಮಲೆನಾಡು ಭಾಗದ ಪ್ರವಾಸಿ ತಾಣಗಳಿಗೆ ವಾರಾಂತ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಪ್ರಮುಖ ಪ್ರವಾಸಿ ತಾಣಗಳಲ್ಲಿ ವಾರಾಂತ್ಯದಲ್ಲಿ ಪೊಲೀಸರನ್ನು ನೇಮಿಸುವ ಬಗ್ಗೆ ಸಲಹೆ ನೀಡಿದರು.
ಈ ಬಗ್ಗೆ ವಾಹಿನಿಯೊಂದಿಗೆ ಮಾತನಾಡಿದ ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಅವರು ನಾವು ನೂತನ ಎಸ್ಪಿಯವರನ್ನು ಬೆಳೆಗಾರರ ಸಂಘದ ಪರವಾಗಿ ಭೇಟಿ ಆಗಿ ಶುಭಕೋರಿದ್ದು ಅವರೊಂದಿಗೆ ವಿವಿಧ ವಿಚಾರಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡಿದ್ದೇವೆ. ಅವರು ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ಲಾಂಟೇಷನ್ ಪ್ರದೇಶದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದ್ದಾರೆ.

ಈ ಹಿಂದಿನ ಎಸ್ಪಿ ಉಮಾಪ್ರಶಾಂತ್ ಅವರು ಜಿಲ್ಲೆಯಲ್ಲಿ ಇದ್ದಷ್ಟು ಕಾಲ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಅವರನ್ನು ಸಹ ಭೇಟಿ ಮಾಡಿ ಧನ್ಯವಾದ ಸಲ್ಲಿಸಲಾಯಿತು. ಅವರು ಈ ಹಿಂದೆ ಬೆಳೆಗಾರರ ಪ್ರತಿನಿಧಿಗಳ ಸಭೆ ಕರೆದು ಕಾನೂನು ಸುವ್ಯವಸ್ಥೆ ವಿಚಾರವಾಗಿ ಅಭಿಪ್ರಾಯಗಳನ್ನು ಪಡೆದುಕೊಂಡಿದ್ದರು, ವಲಸೆ ಕಾರ್ಮಿಕರ ಮಾಹಿತ ಸಂಗ್ರಹಣೆ ಬಗ್ಗೆ ಪ್ರತ್ಯೇಕ ವೆಬ್ ಸೈಟ್ ಮೂಲಕ ನಿರ್ವಹಣೆ ಮಾಡುವುದಾಗಿ ತಿಳಿಸಿದ್ದರು. ನೂತನ ಎಸ್ಪಿಯವರು ಈ ಕಾರ್ಯದ ಬಗ್ಗೆ ಮುತುವರ್ಜಿ ವಹಿಸುವಂತೆ ಬೆಳೆಗಾರರ ಸಂಘದ ಪರವಾಗಿ ಮನವಿ ಮಾಡಿದ್ದೇನೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಪ್ರವೀಣ್, ಓಂಕಾರಸ್ವಾಮಿ, ಬಾಲಕೃಷ್ಣ ಅವರ ಪುತ್ರ ಬಿಪಿನ್ ಚಂದ್ರ ಪಟೇಲ್ ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.