“ಕಳ್ಳ ಬೇಟೆ ಮಾಡಿದವರು ಅರಣ್ಯ ಇಲಾಖೆಗೆ ಶಿಕಾರಿಯಾದರು.”
1 min read
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಬೃಹತ್ ಗಾತ್ರದ ಜಿಂಕೆಯನ್ನು ಶಿಕಾರಿ ಮಾಡಿ ಪಾರ್ಟಿ ಮಾಡುತ್ತಿದ್ದಾಗ ಅಧಿಕಾರಿಗಳು ದಾಳಿ ನಡೆಸಿದ್ದು ಆರು ಜನರನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮೇಲಿನ ಹುಲುವತ್ತಿ ಗ್ರಾಮದ ಅರಣ್ಯ ವ್ಯಾಪ್ತಿಯ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಸಂಗಮ ಕಾಫಿ ತೋಟದಲ್ಲಿ ಬೃಹತ್ ಗಾತ್ರದ ಜಿಂಕೆಯನ್ನು ಕಳ್ಳ ಬೇಟೆ ಮಾಡಿ ಅಲ್ಲಿಯೆ ಮಾಂಸವನ್ನು ಹಸನು ಮಾಡಿ ಬಾಡೂಟಕ್ಕೆ ತಯಾರಿ ನಡೆಸುತ್ತಿದ್ದಾಗ ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.
ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಮುತ್ತೊಡಿ ಪ್ರಾದೇಶಿಕ ವಲಯದ ವ್ಯಾಪ್ತಿಯಲ್ಲಿ ಜಿಂಕೆ ಶಿಕಾರಿ ಮಾಡಿರುವ ಆರೋಪಿಗಳು ಕಾಫಿ ತೋಟದಲ್ಲಿ ಮಾಂಸದೂಟ ತಯಾರಿ ಮಾಡಿ ಪಾರ್ಟಿ ಮಾಡಲು ತಯಾರಿ ನಡೆಸಿದ್ದಾರೆ.

ಶಿಕಾರಿ ಮಾಡಿ ಅಲ್ಲೇ ಬಾಡೂಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಅಧಿಕಾರಿಗಳ ತಂಡ ಆ ಪ್ರದೇಶವನ್ನು ಸುತ್ತುವರಿದು ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಆರು ಜನರನ್ನು ಬಂಧಿಸಿದ್ದಾರೆ.
ಶಿಕಾರಿ ಮಾಡಿದ ಆರೋಪದ ಮೇಲೆ ಮೊಹಮ್ಮದ್ ಶಕೀಲ್, ಇರ್ಫಾನ್, ನೌಫಲ್, ಶಾಯಿದ್, ರಾಜಿಕ್ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಮಂಗಳೂರು ಮೂಲದವರು ಎನ್ನಲಾಗಿದೆ. ಈ ಭಾಗದಲ್ಲಿ ಇವರು ಈ ಹಿಂದೆಯೂ ಇಂತಹ ಕೃತ್ಯದಲ್ಲಿ ತೊಡಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ. ಇವರಿಗೆ ಸ್ಥಳೀಯವಾಗಿ ಕೆಲವರು ಸಹಕಾರ ನೀಡುತ್ತಿರುವ ಬಗ್ಗೆಯೂ ಸಂಶಯವಿದೆ. ಆರೋಪಿಗಳು ಅಂದಾಜು 25 ಕೆ.ಜಿ. ತೂಕದ ಜಿಂಕೆಯನ್ನು ಶಿಕಾರಿ ಮಾಡಿದ್ದಾರೆ.
ಆರೋಪಿಗಳಿಂದ 8 ಕೆ.ಜಿ. ಜಿಂಕೆ ಮಾಂಸದ ಜೊತೆಗೆ ನಾಡ ಬಂದೂಕು ವಶಪಡಿಸಿಕೊಳ್ಳಲಾಗಿದೆ. ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.