“ನಿವೇಶನ, ಸ್ಮಶಾನ ಭೂಮಿ ಸಮಸ್ಯೆ ಬಗೆಹರಿಸದಿದ್ದರೆ ಆ.15ರಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ.”
1 min read
ಮೂಡಿಗೆರೆ ತಾಲ್ಲೂಕಿನಲ್ಲಿ ನಿವೇಶನ,ಸ್ಮಶಾನ,ದಲಿತರ ಭೂಮಿ ಒತ್ತುವರಿ ಸಮಸ್ಯೆಗೆ ಆ.15ರೊಳಗೆ ತಾಲ್ಲೂಕು ಆಡಳಿತ ಪರಿಹಾರ ಕಂಡುಕೊಳ್ಳದಿದ್ದರೆ ಆ.15 ಸ್ವಾತಂತ್ರ್ಯ ದಿನಾಚರಣೆ ದಿನವೇ ಪಟ್ಟಣದಲ್ಲಿ ನಮ್ಮ ಪಕ್ಷ ಹಾಗೂ ಪ್ರಗತಿಪರ ಸಂಘಟನೆಯೊಂದಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಎಚ್ಚರಿಕೆ ನೀಡಿದರು.
ಅವರು 10/08/2023ರ ಗುರುವಾರದಂದು ವಾಹಿನಿಯೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಅನೇಕ ವರ್ಷದಿಂದ ಎಲ್ಲಾ ವರ್ಗದ ಕೂಲಿ ಕಾರ್ಮಿಕರ ಕುಟುಂಬ ನಿವೇಶನ, ಸ್ಮಶಾನ ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಹಿಂದಿನಿಂದಲೂ ಸಿಪಿಐಎಂಎಲ್ ಮತ್ತು ವಸತಿಗಾಗಿ ಹೋರಾಟ ವೇದಿಕೆಯಿಂದ ಹೋರಾಟಗಳು ನಡೆಸಿಕೊಂಡು ಬಂದಿದ್ದು, ವಿಧಾನಸಭೆ ಚುನಾವಣೆ ಪೂರ್ವದಲ್ಲಿ ತಾಲೂಕು ಆಡಳಿತ ಎಲ್ಲಾ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿತ್ತು. ಆದರೆ ಚುನಾವಣೆ ಕಳೆದು 2 ತಿಂಗಳಾದರೂ ತಾಲೂಕು ಆಡಳಿತ ಮೌನ ವಹಿಸಿದೆ. ಈಗ ಕೇಂದ್ರ ಸರಕಾರ ಆ.15ರಂದು ನಮ್ಮ ದೇಶ ನಮ್ಮ ಮಣ್ಣು ಕಾರ್ಯಕ್ರಮ ಆಯೋಜಿಸಿದ್ದು, ಅದರಂತೆ ಜಿಲ್ಲೆಯಲ್ಲಿಯೂ ಈ ಕಾರ್ಯಕ್ರಮ ನಡೆಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಸ್ವಾತಂತ್ರ್ಯ ನಿಜವಾಗಿಯೂ ಸಿಕ್ಕಿರುವುದು ಉಳ್ಳವರಿಗೆ ಮಾತ್ರ. ಆದರೆ ಈ ದೇಶದಲ್ಲಿ ಇಂದಿಗೂ ನಿವೇಶನ ಇಲ್ಲದೇ ತೋಟದ ಲೈನ್ ಮತ್ತು ಬಾಡಿಗೆ ಮನೆಯಲ್ಲಿ ಬದುಕುತ್ತಿರುವ ಕೂಲಿ ಕಾರ್ಮಿಕರಿಗೆ ಸ್ವಾತಂತ್ರ್ಯ ದೊರಕಿಲ್ಲ. ಹಾಗಾಗಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಹೇಳಿದರು.
ಹಳೆಮೂಡಿಗೆರೆ ಗ್ರಾ.ಪಂ. ವ್ಯಾಪ್ತಿಯ ಸರ್ವೇ ನಂ 7ರಲ್ಲಿ 7.03 ಎಕರೆ ಸರಕಾರಿ ಭೂಮಿಯನ್ನು ಅಂಬೇಡ್ಕರ್ ಭವನ, ಪೊಲೀಸ್ ಕ್ವಾಟ್ರಸ್, ಹಾಸ್ಟೆಲ್, ಆಶ್ರಯ ನಿವೇಶನಕ್ಕಾಗಿ ಭೂಮಿ ಕಾಯ್ದಿರಿಸಲಾಗಿದೆ. ಆದರೆ ನಿವೇಶನ ಇನ್ನೂ ಹಂಚಿಕೆಯಾಗಿಲ್ಲ. ಅಲ್ಲದೇ ದಾರಿ ಕೂಡ ಬಿಡಿಸಿಕೊಟ್ಟಿಲ್ಲ. ಹಳೆಕೋಟೆಯಲ್ಲಿ ಸ್ಮಶಾನ ಭೂಮಿ ಒತ್ತುವರಿಯಾಗಿದ್ದು, ಅಲ್ಲಿ ಮೃತ ದೇಹವಿಟ್ಟು ಪ್ರತಿಭಟನೆ ಮಾಡಿದ್ದ ಹಿನ್ನಲೆಯಲ್ಲಿ ಮೂಡಿಗೆರೆ ನ್ಯಾಯಾಧೀಶರೇ ಖುದ್ದು ಆಗಮಿಸಿ ಸಮಸ್ಯೆ ಬಗೆಹರಿಸಲು ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದರೂ, ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಗೋಣಿಬೀಡು ವ್ಯಾಪ್ತಿಯ ಸರ್ವೆ ನಂ 144ರಲ್ಲಿ 4 ಎಕರೆ ಭೂಮಿ ನಿವೇಶನಕ್ಕಾಗಿ ಕಾಯ್ದಿರಿಸಿದ ಭೂಮಿ ಸಮಸ್ಯೆ ಬಗೆಹರಿಸಿಲ್ಲ. ಘಟ್ಟದಹಳ್ಳಿ, ಹೊಯ್ಸಳಲು ಗ್ರಾಮದಲ್ಲಿ ಒತ್ತುವರಿಯಾಗಿರುವ ದಲಿತರ ಭೂಮಿ ಸಮಸ್ಯೆ ಬಗೆಹರಿಸಿಲ್ಲ. ಇಂತಹ ಸಮಸ್ಯೆ ತಾಲೂಕಿನಲ್ಲಿ ಬಹುತೇಕ ಕಡೆಯಲ್ಲಿದೆ. ಅದನ್ನು ತಾಲೂಕು ಆಡಳಿತ ಕೂಡಲೇ ಬಗೆಹರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗೋಣಿಬೀಡು ಗ್ರಾ.ಪಂ. ಸದಸ್ಯ ಕೃಷ್ಣ, ವಸತಿಗಾಗಿ ಹೋರಾಟ ವೇದಿಕೆ ಕಾರ್ಯದರ್ಶಿ ರಾಜೇಶ್, ಎಸ್ಎನ್.ವಿಠಲ್ ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.