“ಜನಪರ ಸಾಹಿತ್ಯ ವೇದಿಕೆಯಿಂದ ಗದ್ದರ್ ಅವರಿಗೆ ನುಡಿನಮನ.”
1 min read
ಗದ್ದರ್ ಅವರು ಜನನಾಟ್ಯ ಮಂಡಳಿ ಎಂಬ ಬಹುದೊಡ್ಡ ಸಾಂಸ್ಕೃತಿಕ ಸಂಘಟನೆ ಕಟ್ಟಿ ದಶಕಗಳ ಕಾಲ ರೈತ, ಆದಿವಾಸಿ, ದಲಿತ, ಹಾಗೂ ವಿದ್ಯಾರ್ಥಿಗಳ ಪರವಾಗಿ, ಕ್ರಾಂತಿಕಾರಿ ಸಾಹಿತ್ಯ ಮತ್ತು ಸಂಗೀತ, ನೃತ್ಯದ ಮೂಲಕ ಲಕ್ಷಾಂತರ ಜನರಿಗೆ ರಾಜಕೀಯ ಅರಿವು ಮೂಡಿಸಿದ ಕಲಾರಾಯಭಾರಿಯಾಗಿದ್ದಾರೆಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಹೇಳಿದರು.
ಅವರು ಬುಧವಾರ ಸಂಜೆ ಪಟ್ಟಣದ ಜೈ ಭೀಮ್ ಹಾಲ್ನಲ್ಲಿ ಜನಪರ ಸಾಹಿತ್ಯ ವೇದಿಕೆಯಿಂದ ಏರ್ಪಡಿಸಿದ್ದ ಗದ್ದರ್ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗದ್ದರ್ ಅವರು ಆರಂಭದಲ್ಲಿ ಮಾರ್ಕ್ಸ್ ವಾದಿ, ಲೆನಿನ್ವಾದಿ ಕ್ರಾಂತಿಕಾರಿ ರಾಜಕೀಯ ಶಿಕ್ಷಣ ಭಿತ್ತರಿಸಲು ಕೈ ಕೋಲು, ಕೆಂಭಾವುಟ, ಬರಿಮೈ, ಕಾಲ್ಗೆಜ್ಜೆ ತೊಟ್ಟು ದಣಿವರಿಯದೆ ದುಡಿದ ಜಾಗೃತ ದನಿಯಾಗಿದ್ದರು. ಅಲ್ಲದೇ ಕಲೆಗಾಗಿ ಕಲೆಯಲ್ಲ-ಬದುಕಿನ ಬದಲಾವಣೆಗಾಗಿ ಕಲೆ ಎಂದು ಕ್ರಾಂತಿಕಾರಿ ವಿಚಾರಧಾರೆಯನ್ನು ಸಹಕಾರಗೊಳಿಸಿ ಹೋರಾಟದ ಕಲಾಮಂಡಳಿ ಎಂಬ ಹೊಸ ಪರಂಪರೆ ಆರಂಭಿಸಿದ ಅಪ್ರತಿಮ ಹೋರಾಟಗಾರರಾಗಿದ್ದಾರೆ. ಗದ್ದರ್ ಅವರು ಭೌತಿಕವಾಗಿ ನಮ್ಮೊಂದಿಗಿಲ್ಲ, ಆದರೆ ನಾಡು ಹಾಗೂ ಹಾಡು ಇರುವ ತನಕ ನಮ್ಮೊಂದಿಗೆ, ನಮ್ಮ ಮುಂದಿನ ಪೀಳಿಗೆಯೊಂದಿಗೆ ಅಜರಾಮರವಾಗಿ ಉಳಿಯಲಿದ್ದಾರೆಂದು ಹೇಳಿದರು.
ನಿವೃತ್ತ ಶಿಕ್ಷಕರಾದ ಹಾಲಯ್ಯನವರು ಮಾತನಾಡಿ ಗದ್ದರ್ ಎಂದರೆ ಆತ್ಮಸ್ಥೈರ್ಯ, ಸ್ವಾತಂತ್ರ್ಯ, ದೇಶಪ್ರೇಮ ಎಂಬುದು ಸಾಬೀತಾಗಿದೆ. ಪ್ರತ್ಯೇಕ ತೆಲಂಗಾಣ ರಾಜ್ಯದ ಹೋರಾಟದಲ್ಲಿ ಮುಂಚೂಣಿ ಪಾತ್ರವಹಿಸಿ ನೂರಾರು ಕಲಾವಿದರು, ಹೋರಾಟಗಾರರನ್ನು ಹಾಗೂ ರಾಜಕಾರಣಿಗಳನ್ನು ಸೃಷ್ಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಗದ್ದರ್ ಅವರ ಅಕಾಲಿಕ ನಿಧನ ಎಲ್ಲಾ ಚಳುವಳಿಗಳಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ಜಿ.ಪಂ. ಮಾಜಿ ಸದಸ್ಯ ಎಂ.ಎಸ್.ಅನಂತ್, ಎಸ್ಡಿಪಿಐ ತಾಲೂಕು ಅಧ್ಯಕ್ಷ ಅಂಗಡಿ ಚಂದ್ರು, ಮುಖಂಡರಾದ ಮಹೇಂದ್ರ ಮೌರ್ಯ, ಪಿ.ಕೆ.ಮಂಜುನಾಥ್, ಶಿವಪ್ರಸಾದ್, ನಾಗೇಶ್, ಕೃಷ್ಣಪ್ಪ, ಹರೀಶ್ ನಲ್ಕೆ, ಸುರೇಶ್ ಹುಲ್ಲೇಮನೆ ಮತ್ತಿತರರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.