“ಅಂಗಡಿ ಪ್ರೌಢಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ – ಎಚ್.ಎಮ್.ಶಾಂತಕುಮಾರ್ ಗೆ ಹೃದಯಸ್ಪರ್ಶಿ ಬೀಳ್ಕೊಡುಗೆ.”
1 min read
ಜನ್ಮ ಕೊಟ್ಟ ಜೀವದಾತನಾದ ಅಪ್ಪನ ನೆನಪು ಈ ದಿನಕ್ಕೂ ನನಗೆ ಸರಿಯಾಗಿ ಇಲ್ಲ, ಬಾಲ್ಯದಲ್ಲೆ ತಂದೆಯನ್ನು ಕಳೆದುಕೊಂಡ ನನಗೆ, ಆ ಬೆಚ್ಚನೆಯ ತಂದೆಯತನವೊಂದು ನನ್ನೊಳಗೆ ಕಳೆದುಹೋಗದಂತೆ ತಾಯಿಯ ಮಮಕಾರದೊಂದಿಗೆ ಪಿತೃ ವಾತ್ಸಲ್ಯವನ್ನು ಸಹ ಜೊತೆ ಜೊತೆಗೆ ಕಟ್ಟಿಕೊಡುತ್ತಾ ಅಕ್ಷರ ಕಲಿಸಿ ಆಕಾರಕೊಟ್ಟು ಈ ಜಗತ್ತನ್ನು ನನಗೆ ಮೊದಲು ಪರಿಚಯಿಸಿದವಳು ನನ್ನವ್ವ ಪಾಪಮ್ಮ ,ಈ ನನ್ನವ್ವನೇ ನನಗೆ ಮೊದಲ ಗುರುಮಾತೆಯಾಗಿದ್ದಾಳೆ,
ನಂತರ,
ನನಗೆ
ಕಳೆದ 55 ವರ್ಷಗಳ ಹಿಂದೆ ಸ್ಲೆಟು ಬಳಪದ ಮೂಲಕ ಕೈಹಿಡಿದು ಕನ್ನಡ ವರ್ಣಮಾಲೆಯ ಪ್ರಥಮ ಅಕ್ಷರವಾದ ಅ ಆ ಅಕ್ಷರ ಕಲಿಸಿದ ಗುರುಗಳಲ್ಲಿ ಒಬ್ಬರು ಶ್ರೀ ವಾಸುದೇವ್ ಮಹೇಂದ್ರಕರ್ ಅವರು, ಈ ಕಾರಣಕ್ಕಾಗಿ, 35 ವರ್ಷಗಳ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ, ವಯೋನಿವೃತ್ತಿ ಹೊಂದುವ ಮೂಲಕ ಸರ್ಕಾರಿ ಸೇವೆಯಿಂದ ಬಿಡುಗಡೆ ಹೊಂದಿ, ಒಂದು ಹೃದಯಸ್ಪರ್ಶಿ ವಿದಾಯ ಹೇಳುತ್ತಿರುವ ಈ ಸಂದರ್ಭದಲ್ಲಿ, ಮೊದಲಿಗೆ ನನ್ನನ್ನು ಹಡೆದು ಹೆತ್ತು ಹೊತ್ತು ಸಾಕಿ ಸಲಹಿದ ನನ್ನ ತಾಯಿಗೆ , ಎರಡನೇದಾಗಿ,
ಅಕ್ಷರ ಕಲಿಸಿದ ನನ್ನ ಗುರುಗಳಿಗೆ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆನೆ, ಇದೇ ಸಂದರ್ಭದಲ್ಲಿ ವಯೋನಿವೃತ್ತಿಯಾಗುತ್ತಿರುವ ನನಗೆ, ಅಂಗಡಿ ಶಾಲೆಯ ಸಹೋದ್ಯೋಗಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಇತರೆ ಸಂಘ ಸಂಸ್ಥೆಗಳ ಜೊತೆಗೆ ಗ್ರಾಮಸ್ಥರು ಸೇರಿ ಬೀಳ್ಕೊಡುಗೆ ಸಮಾರಂಭವನ್ನು ಇಟ್ಟುಕೊಂಡಿರುವುದು ನನ್ನ ವೃತ್ತಿ ಬದುಕಿನ ಅಪರೂಪದ ಕ್ಷಣಗಳಲ್ಲಿ ಹೆಚ್ಚಾಗಿ ನೆನಪಿಡುವಂತಹದ್ದಾಗಿದೆ ಎಂದು ಎಚ್ ಎಮ್ ಶಾಂತಕುಮಾರ್ ಅವರು ಬಾವುಕರಾಗಿ ಇಡೀ ಸಭೆಗೆ ಸಭೆಯೇ ಮೌನ ವಾಗುವಂತೆ ತನ್ನ ಹೃದಯಂತರಾಳದ ಮಾತುಗಳನ್ನು ತೆರೆದಿಟ್ಟರು.

ಇತ್ತೀಚಿಗೆ ಮೂಡಿಗೆರೆ ತಾಲ್ಲೂಕು ಸರ್ಕಾರಿ ಅಂಗಡಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಮತ್ತು ಬೀಳ್ಕೊಡುಗೆ ಸಮಾರಂಭದ ಸನ್ಮಾನ ಸ್ವೀಕರಿಸಿ ತನ್ನ ವೃತ್ತಿ ಬದುಕಿನಲ್ಲಿ ಹಾಯ್ದು ಬಂದ ಸೇವೆಯ ಜಾಡನ್ನು ಹಿಡಿದು, ತಾನು ಅಕ್ಷರ ಕಲಿಸಿ ಬದುಕನ ರೂಪಿಸಿದ ಎಲ್ಲಾ ಹಳೆಯ ವಿದ್ಯಾರ್ಥಿಗಳ ಯಶಸ್ವಿ ಬದುಕನ ಪ್ರಸ್ತಾಪಿಸುತ್ತಾ , ಸಹಕಾರ ಕೊಟ್ಟ ಸಹೋದ್ಯೋಗಿಗಳ ಸ್ನೇಹವನ್ನು, ಸರಿಯಾಗಿ ಮಾರ್ಗದರ್ಶನ ಕೊಟ್ಟು ಬೆಳೆಸಿದ ಅಧಿಕಾರಿಗಳ ನಡೆಯನ್ನು ನೆನಪಿಸುತ್ತ, ಸನ್ಮಾನ ಸ್ವೀಕರಿಸಿ ಶಾಂತಕುಮಾರ್ ಅವರು ಮಾತನಾಡಿ ಕೃತಜ್ಞತೆ ಸಲ್ಲಿಸುವ ಮೂಲಕ ತಮ್ಮ ವೃತ್ತಿ ಜೀವನದ ನೆನಪುಗಳನ್ನು ಸುರುಳಿಸುರುಳಿಯಾಗಿ ಬಿಚ್ಚಿಟ್ಟರು.

ನಿವೃತ ಹಿರಿಯ ಶಿಕ್ಷಕರಾದ ಅಜ್ಜಂಪುರದ ಶ್ರೀ ವಾಸುದೇವ್ ಮಹೇಂದ್ರಕರ್ ಅವರು ಸರಸ್ವತಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ, ಈ ಕಾರ್ಯಕ್ರಮ ಒಂದು ಗುರು ಪರಂಪರೆಯ ಶ್ರೀಮಂತಿಕೆಯನ್ನು ಭವಿಷ್ಯದ ವಿದ್ಯಾರ್ಥಿಗಳಿಗೆ ಕಟ್ಟಿ ಕೂಡುವ ಮೂಲಕ ಗುರು ಮತ್ತು ವಿದ್ಯಾರ್ಥಿಯ ಸಂಬಂಧ ಎಷ್ಟೊಂದು ಮಹತ್ವವಾದ ಪರಂಪರೆ ಎಂಬುದನ್ನು ಈ ಸಭೆಯು ಎತ್ತಿ ತೋರಿಸುತ್ತಿದೆ, ಜೊತೆಗೆ ತನ್ನ ಶಿಷ್ಯನೊಬ್ಬ ಶಿಕ್ಷಕನಾಗಿ ಸೇವೆ ಸಲ್ಲಿಸಿ , ನಿವೃತ್ತಿ ಹೊಂದುತ್ತಿರುವ ಈ ದಿನದಲ್ಲಿ ಅವನಿಗೆ ಅಕ್ಷರ ಕಲಿಸಿಕೊಟ್ಟ ಗುರುವಾದ ನನ್ನನ್ನು ಕರೆಸಿ, ನನ್ನ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿಸಿ, ಗುರುವಂದನೆಯನ್ನು ಸಲ್ಲಿಸುವ ಮೂಲಕ ಸೇವೆಯಿಂದ ನಿರ್ಗಮನವಾಗುತ್ತಿರುವುದು ಅತ್ಯಂತ ಆನಂದ ಭಾಷ್ಪವಾದ ಸಂಗತಿಯಾಗಿದೆ ಎಂದರು,
ಚಿತ್ರದುರ್ಗದ ವಾಣಿಜ್ಯ ತೆರಿಗೆ ಅಧಿಕಾರಿ ಜಿ ಆರ್ ಮಂಜಪ್ಪ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ ಇತಿಹಾಸ ಪ್ರಸಿದ್ಧವಾದ ಹೊಯ್ಸಳರ ನೆಲೆಬೇಡಾದ ಈ ಅಂಗಡಿ ಗುರುವಂದನಾ ಕಾರ್ಯಕ್ರಮದ ಮೂಲಕ ಹಳೆಯ ಮತ್ತು ಹೊಸ ಗೆಳೆಯರ ಸಮ್ಮಿಲನಕ್ಕೆ ಸಾಕ್ಷಿಯಾಗಿ ಮಾದರಿಯಾದ ಕಾರ್ಯಕ್ರಮ ಆಗಿದೆ ಎಂದರು,
ಈ ಸಂದರ್ಭದಲ್ಲಿ
ಶಾಂತಕುಮಾರ್ ಅವರ ತಾಯಿ ಪಾಪಮ್ಮ ಮತ್ತು ಅವರಿಗೆ ಅಕ್ಷರ ಕಲಿಸಿದ ಮೊದಲ ಗುರು ವಾಸುದೇವ ಮಹೇಂದ್ರಕರ್ ಅವರಿಗೆ ಗುರುವಂದನೆಯನ್ನು ಸಲ್ಲಿಸಲಾಯಿತು,
ನಂತರ, ಹಳೆಯ ವಿದ್ಯಾರ್ಥಿಗಳು, ಸಹೋದ್ಯೋಗಿಗಳು, ಅಂಗಡಿ ಗ್ರಾಮಸ್ಥರು, ಈ ಹಿಂದೆ ಕೆಲಸ ಮಾಡಿದ ಬೇರೆ ಬೇರೆ ಶಾಲೆಯ ಸನ್ಮಿತ್ರರರು, ಕರ್ನಾಟಕದ ಹಲವು ಜಿಲ್ಲೆಗಳಿಂದ ಆಗಮಿಸಿದ ಹಿತೈಷಿಗಳು ಒಡಗೂಡಿ ನಿವೃತ್ತಿಯಾಗುತ್ತಿರುವ ಶಾಂತಕುಮಾರ್ ಅವರಿಗೆ ಸನ್ಮಾನ ಮಾಡಿ ಬೀಳ್ಕೊಡುಗೆ ನೀಡಿದರು,
ಸಭೆಯ ಅಧ್ಯಕ್ಷತೆಯನ್ನು
ಎಸ್ ಡಿ ಎಂ ಸಿ ಅಧ್ಯಕ್ಷರಾದ ಸತೀಶ್ ವಹಿಸಿದ್ದರು,
ಮುಖ್ಯ ಅತಿಥಿಗಳಾಗಿ ಅವಿನ್ ಟಿವಿ ಸ್ತಾನಿಕ ಸಂಪಾದಕ ಮಗ್ಗಲಮಕ್ಕಿ ಗಣೇಶ್, ಮಲೆನಾಡಿನ ಜಾನಪದ ಕೋಗಿಲೆ ಬಕ್ಕಿ ಮಂಜುನಾಥ್, ಅಂಬಳೆ ಪ್ರೌಢಶಾಲೆಯ ಟಿ ಆರ್ ರುದ್ರಪ್ಪ, ಬೆಂಗಳೂರು ಮಹಾರಾಣಿ ಮಹಿಳಾ ಕಾಲೇಜಿನ ಡಾ, ಈಶ್ವರಪ್ಪ, ಕೆಜೆವಿಎಸ್ ಜಿಲ್ಲಾಧ್ಯಕ್ಷ ಮುಗಳಿಕಟ್ಟೆ ಲೋಕೇಶ್,ಮೂಡಿಗೆರೆ ತಾಲ್ಲೂಕು ಕೆಜೆವಿಎಸ್ ಘಟಕದ ಅಧ್ಯಕ್ಷ ಪ್ರಕಾಶ್ ಮಾತನಾಡಿದರು,
ವೇದಿಕೆಯಲ್ಲಿ ಶ್ಯಾಮಲ , ಶ್ರಾವ್ಯ ಎಸ್ ಕುಮಾರ್ ,ಅಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಪಾರ್ವತಮ್ಮ, ವಿನೋದ್, ಆದರ್ಶ್, ವಿಜಯ್, ಅಂಬಿಕಾ, ಅನಿತಾ ಜಗದೀಶ್, ರಾಜು, ಶಿವಣ್ಣ, ಸೇರಿದಂತೆ ಹಲವು ಸಂಘ ಸಂಸ್ಥೆಗಳ ಮುಖಂಡರು, ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು,
ಅಂಗಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ರಾಮೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕರಾದ ಮಂಜಪ್ಪ ದೊಡ್ಮನಿ ಸ್ವಾಗತಿಸಿ, ಸೋಮಶೇಖರ್ ವಂದಿಸಿ, ಲತಾ ಕಾರ್ಯಕ್ರಮ ನಿರೂಪಣೆ ಮಾಡಿದರು.
✍🏻ಬರಹ ಕೃಪೆ✍🏻
ಡಿ.ಎಂ.ಮಂಜುನಾಥಸ್ವಾಮಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.