ಪ್ರಜಾಪ್ರಭುತ್ವದ ತಾಯಿಬೇರುಗಳೆಂದರೆ ಅವು ಗ್ರಾಮ ಪಂಚಾಯತಿಗಳು : ಡಿ.ಎಂ.ಮಂಜುನಾಥಸ್ವಾಮಿ.
1 min read
ಚಿಕ್ಕಮಗಳೂರು ತಾಲೂಕು ವಸ್ತಾರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ
ಟಿ.ಈ.ಯೋಗೀಶ್,ಉಪಾಧ್ಯಕ್ಷರಾಗಿ ಆಶಾ ನವೀನ್ ಅವಿರೋಧವಾಗಿ ಆಯ್ಕೆ.
ಪ್ರಜಾಪ್ರಭುತ್ವ ಎಂಬದು ಒಂದು ಹೆಮ್ಮೆರವಿದ್ದಂತೆ, ಅದು ಐದು ಹಂತಗಳಲ್ಲಿ ತನ್ನ ಕಾರ್ಯ ನಿರ್ವಹಿಸುತ್ತಿದೆ, ಮೇಲಿನ ಹಂತದಲ್ಲಿ ಲೋಕಸಭೆ ವಿಧಾನಸಭೆಗಳಿದ್ದರೆ, ಸ್ಥಳೀಯ ಸಂಸ್ಥೆಗಳಾಗಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಕೆಲಸ ನಿರ್ವಹಿಸುತ್ತಿವೆ.

ಲೋಕಸಭೆ,ವಿಧಾನಸಭೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಎಂಬ ಮೇಲಿನ ಹಂತದ ಈ ನಾಲ್ಕು ಸಂಸ್ಥೆಗಳು ಪ್ರಜಾಪ್ರಭುತ್ವ ಎಂಬ ಹೆಮ್ಮೆರದ ರಂಬೆ ಕೊಂಬೆಗಳಿದ್ದಂತೆ, ಆದರೆ ಅತ್ಯಂತ ಕೆಳಹಂತದಲ್ಲಿರುವ ಗ್ರಾಮ ಪಂಚಾಯಿತಿ ಎಂಬುದು ಈ ಪ್ರಜಾಪ್ರಭುತ್ವ ಎಂಬ ಹೆಮ್ಮೆರದ ತಾಯಿಬೇರು ಇದ್ದಂತೆ,
ಒಂದು ಮರ ಆರೋಗ್ಯವಾಗಿ ಸದೃಢವಾಗಿ ನೆರಳು ಮತ್ತು ಫಲ ಕೊಡಬೇಕಾದರೆ ಅಂತಹ ಮರಕ್ಕೆ ತಾಯಿ ಬೇರು ಬಹಳ ಮುಖ್ಯ, ತಾಯಿ ಬೇರು ಘನವಾಗಿದ್ದರೆ ಆರೋಗ್ಯವಾಗಿದ್ದರೆ ಮಾತ್ರ ರೆಂಬೆ ಕೊಂಬೆಗಳು ಸದೃಢವಾಗಿರಲು ಸಾಧ್ಯ,
ಹಾಗೆಯೇ, ಪ್ರಜಾಪ್ರಭುತ್ವದ ಈ ವ್ಯವಸ್ಥೆಯಲ್ಲಿ ತಳಹಂತದ ಗ್ರಾಮ ಪಂಚಾಯಿತಿ ಸದೃಢವಾಗಿ ಸ್ವಾವಲಂಬಿಯಾಗಿ ತನ್ನ ಬೇಕು ಬೇಡಗಳನ್ನು ತಾನೇ ನಿರ್ವಹಿಸಿಕೊಳ್ಳುವ ಶಕ್ತಿ ಪಡೆಯುತ್ತದೆಯೋ ಆಗ ಪ್ರಜಾಪ್ರಭುತ್ವದ ಆಶಯ ಯಶಸ್ವಿಯಾದಂತೆ.
ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತಿಗಳು ತಮ್ಮದೇ ಆದ ಒಂದು ಮುನ್ನೋಟವನ್ನು ಕ್ರಿಯಾ ಯೋಜನೆಯನ್ನು ರೂಪಿಸಿಕೊಳ್ಳಬೇಕಾಗಿದೆ, ಇದರ ಯಶಸ್ಸಿಗೆ ಎಲ್ಲರನ್ನೂ ಒಳಗೊಂಡಂತಹ ಸಹಕಾರ ಅತ್ಯಗತ್ಯ.
ಇತ್ತೀಚೆಗೆ ಚಿಕ್ಕಮಗಳೂರು ತಾಲ್ಲೂಕು ವಸ್ತಾರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕಾರಣ, ತೆರವಾದ ಆ ಸ್ಥಾನಗಳಿಗೆ ,ಎರಡನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆಯು ಪಂಚಾಯಿತಿ ಸಭಾಂಗಣದಲ್ಲಿ ಜರುಗಿತು,ಒಟ್ಟು ಏಳು ಸದಸ್ಯರನ್ನು ಒಳಗೊಂಡ ವಸ್ತಾರೆ ಗ್ರಾಮ ಪಂಚಾಯತಿಯಲ್ಲಿ ಇತರರು ಯಾರು ನಾಮಪತ್ರ ಸಲ್ಲಿಸದೆ ಇದ್ದ ಕಾರಣ,ನೂತನ ಅಧ್ಯಕ್ಷರಾಗಿ ಟಿ ಈ ಯೋಗೀಶ್ , ಉಪಾಧ್ಯಕ್ಷರಾಗಿ ಆಶಾ ನವೀನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲು ಆಗಮಿಸಿದ್ದ ಚರಣರಾಜ್ ಘೋಷಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಯೋಗೇಶ್ ಈ ಸಂದರ್ಭದಲ್ಲಿ ಮಾತನಾಡುತ್ತಾ ,ಎಲ್ಲರನ್ನೂ ಒಳಗೊಂಡಂತಹ,ಯಾವುದೇ ಭಿನ್ನ ಭೇದ ಮಾಡದೆ ಸಾರ್ವಜನಿಕರನ್ನು,ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು,ಚುನಾಯಿತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು,ಈ ಮೂಲಕ ವಸ್ತಾರೆ ಗ್ರಾಮ ಪಂಚಾಯಿತಿಗೆ ಒಂದು ಹೊಸ ಮುನ್ನುಡಿ ಬರೆಯುವ ಆಶಯ ನನ್ನದಾಗಿದೆ ಎಂದು ಆಯ್ಕೆ ಮಾಡಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವುದರ ಜೊತೆಗೆ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ಮರಿಸಿದರು.
ಪ್ರಾರಂಭದ ಎರಡೂವರೆ ವರ್ಷಗಳ ಕಾಲ ಪಂಚಾಯತಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿರ್ಗಮಿಸಿದ ಗ್ರಾಮ ಪಂಚಾಯಿತಿ ಹಾಲಿ ಸದಸ್ಯ ವಿ.ಜಿ.ಮಧುಸೂದನ್ ಅವರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ, ವಸ್ತಾರೆ ಗ್ರಾಮ ಪಂಚಾಯಿತಿಯು ಗ್ರೇಡ್ ಸೆಕೆಂಡ್ ಪಂಚಾಯಿತಿಯಾಗಿದ್ದು ಅದನ್ನು ಫಸ್ಟ್ ಗ್ರೇಡ್ ಪಂಚಾಯಿತಿಯಾಗಿ ಪರಿವರ್ತಿಸಬೇಕಾಗಿದೆ, ಕಾರಣ, ವಸ್ತಾರೆ ಹೋಬಳಿ ಕೇಂದ್ರವಾಗಿದ್ದು, ಮೂಕಲಸೌಕರ್ಯ ಮತ್ತು ಇತರೆ ಅಭಿವೃದ್ಧಿ ಕೆಲಸಗಳಿಗೆ ಪಂಚಾಯಿತಿಗೆ ಬರುತ್ತಿರುವ ಆದಾಯ ಮತ್ತು ಕಂದಾಯ ತೀರ ಕಡಿಮೆಯಾಗಿದೆ, ಈ ನಿಟ್ಟಿನಲ್ಲಿ ಪಂಚಾಯಿತಿಯನ್ನು ಉನ್ನತ ದರ್ಜೆಗೆ ಏರಿಸಲು ನೂತನ ಅಧ್ಯಕ್ಷರು ಉಪಾಧ್ಯಕ್ಷರು ಶ್ರಮಿಸಲಿ ಎಂದು ಕಿವಿ ಮಾತು ಹೇಳಿ ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ಸಿ.ಪಿ.ಸುಧಾ,ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಾಂತಿ ಮುಂತಾದವರು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಸ್ತಾರೆ ಗ್ರಾಮಪಂಚಾಯಿತಿ ಸದಸ್ಯರಾದ ದೀಪಕ್ ಟಿ.ಟಿ.,ವೇದಾ,ಶಶಿಕಲಾ,ಕಾರ್ಯದರ್ಶಿ ಯೋಗೇಶ್ ಮತ್ತು ಪಂಚಾಯಿತಿ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು,ವಸ್ತಾರೆ ಗ್ರಾಮ ಪಂಚಾಯಿತಿಗೆ ಸೇರಿದ ಬಹುತೇಕ ಎಲ್ಲಾ ಗ್ರಾಮಗಳ ಹಿತೈಷಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಅಭಿನಂದಿಸಿ,ಪಟಾಕಿ ಸಿಡಿಸುವ ಮೂಲಕ ಸಂತೋಷ ಮತ್ತು ಸಂಭ್ರಮವನ್ನು ಜೈಕಾರದೊಂದಿಗೆ ಪರಸ್ಪರ ಹಂಚಿಕೊಂಡು ಏಕತೆಯನ್ನು ಮೆರೆದರು.
✍🏻ಬರಹ ಕೃಪೆ.
ಡಿ.ಎಂ.ಮಂಜುನಾಥಸ್ವಾಮಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.