लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

35 ವರ್ಷಗಳ ತನ್ನದೇ ಆದ ಇತಿಹಾಸವಿರುವ ಒಂದು ಹೆಜ್ಜೆ ಗುರುತಿನೊಂದಿಗೆ ನಡೆದುಕೊಂಡು ಬರುತ್ತಿರುವ
ವಸ್ತಾರೆ ಗೌತಮ ಪ್ರೌಢಶಾಲೆಯ ನೀರು ಮತ್ತು ನೆರಳಿನ ಸುದ್ದಿ :-

ಸಮಾಜಿಕ ಪರಿವರ್ತನೆಗಾಗಿ ಹೊಸ ಮಾರ್ಗಗಳನ್ನು ಶೋಧಿಸಬೇಕು, ಈ ಹೊಸ ಮಾರ್ಗಗಳಲ್ಲಿ ಗುಣಾತ್ಮಕ ಶಿಕ್ಷಣವು ಕೂಡ ಒಂದು ಎಂಬುದು ನಮ್ಮ ಆಲೋಚನೆಯಾಗಬೇಕು,

ಇಂತಹ ಒಂದು ಗುಣಾತ್ಮಕ ಕಲಿಕೆಗೆ ಪೂರಕವಾಗಿ ಇತರೆ ಮೂಲ ಸೌಕರ್ಯಗಳ ಜೊತೆಗೆ ಪರಿಶುದ್ಧ ಪರಿಸರ ಮತ್ತು ಶುದ್ಧ ಕುಡಿಯುವ ನೀರು ಕೊಡ ಒಂದು ಭಾಗ ಎಂಬುದು ಸಣ್ಣ ವಯಸ್ಸಿನಲ್ಲೇ ನಮ್ಮ ತಿಳುವಳಿಕೆಗೆ ಬರಬೇಕು,

ಈ ದೇಶದ ಪ್ರಧಾನಿಯೊಬ್ಬರು ಯಾವ ಗುಣಮಟ್ಟದ ಶುದ್ಧ ನೀರನ್ನು ಕುಡಿಯುತ್ತಾರೋ ಹಾಗೂ ತಮ್ಮ ನಿತ್ಯದ ಅಡಿಗೆ ಊಟಕ್ಕೆ ಬಳಸುತ್ತಾರೊ,ಅದೇ ರೀತಿಯ ಶುದ್ಧ ನೀರು ಭಾರತದ ಪ್ರತಿ ಒಬ್ಬ ಪ್ರಜೆಗೂ ಅತಿ ಸುಲಭವಾಗಿ ಪ್ರತಿನಿತ್ಯ ದೊರೆಯುವಂತಾಗಬೇಕು, ಅಂತಹ ಶುದ್ಧ ನೀರನ್ನು ಕುಡಿಯುವುದು ಭಾರತದ ನಾಗರಿಕರಾದ ನಮ್ಮೆಲ್ಲರ ಹಕ್ಕು ಕೂಡ ಆಗಬೇಕು, ಆ ನಿಟ್ಟಿನಲ್ಲಿ ಒಂದು ಸಮಗ್ರ ಯೋಜನೆ ಜಾರಿಮಾಡುವುದು ನಮ್ಮನ್ನು ಆಳುವ ಸರ್ಕಾರಗಳ ನೀತಿ ನಿರೂಪಣೆ ಯಾಗಬೇಕು,

ಈ ಭೂ ಲೋಕದ ಅಮೃತ ಎಂದರೆ ಅದು ಶುದ್ಧ ಕುಡಿಯುವ ನೀರು, ಇಂತಹ ಶುದ್ಧ ನೀರಿನ ಸೇವನೆಯಿಂದ ನಮ್ಮ ನಮ್ಮ ಆಯಸ್ಸು ಆರೋಗ್ಯ ವೃದ್ಧಿಯಾಗುತ್ತದೆ, ಅಶುದ್ಧ ನೀರು ಸೇವನೆಯಿಂದ ಆಗುವ ದುಷ್ಪರಿಣಾಮಗಳು ನಮ್ಮ ಆರೋಗ್ಯ ಮತ್ತು ಆಯಸ್ಸನ್ನು ಕಿತ್ತುಕೊಳ್ಳುತ್ತವೆ,

ಮನುಷ್ಯನಿಗೆ ಶೇಕಡ 70 ರಿಂದ 80 ಭಾಗ ಕಾಯಿಲೆಗಳು ಅಶುದ್ಧವಾದ ನೀರಿನ ಸೇವನೆಯಿಂದ ಬರುತ್ತಿವೆ ಎಂದು ಮಾನವ ಶಾಸ್ತ್ರ ಅಧ್ಯಯನ ಹೇಳುತ್ತಿವೆ,

ಆರೋಗ್ಯ ಉತ್ತಮವಾಗಿ ಇರಬೇಕಾದರೆ ಶುದ್ಧ ನೀರು ಅವಶ್ಯಕ, ಭೂಭಾಗದ ಮುಕ್ಕಾಲು ಭಾಗ ನೀರು ತುಂಬಿಕೊಂಡಿದ್ದರು ಕೂಡ, ಅದರಲ್ಲಿ ಶುದ್ಧ ಕುಡಿಯುವ ನೀರು ಕೇವಲ ಒಂದು ಭಾಗಕ್ಕಿಂತಲೂ ಕಡಿಮೆ ಎನ್ನುತ್ತದೆ ಭೂಗರ್ಭ ಶಾಸ್ತ್ರ,

ಮೂರನೇ ಮಹಾಯುದ್ಧ ಏನಾದರೂ ಜಗತ್ತಿನಲ್ಲಿ ಜರುಗುವುದಾದರೆ, ಅದು ನೀರಿಗಾಗಿ ಮಾತ್ರ ಎಂದು ಹೇಳುತ್ತದೆ ವಿಶ್ವದ ರಾಜಕೀಯ ಚಿಂತನೆ,

ಶುದ್ಧ ನೀರು ಕುಡಿಯುವುದರಿಂದ ದೈಹಿಕವಾದ ಮಾನಸಿಕವಾದ ಆರೋಗ್ಯದ ಜೊತೆಗೆ, ನಮ್ಮ ನಮ್ಮ ಆಲೋಚನೆಗಳು ಕೂಡ ಉತ್ತಮವಾಗಿ ಮೂಡಿ ಬರಲು ಸಾಧ್ಯವಾಗುವುದು, ಅಲ್ಲದೆ ಒಂದು ಆರೋಗ್ಯವಂತ ಸಮಾಜ ನಮ್ಮದಾದರೆ ಮಾತ್ರ ಅಭಿವೃದ್ಧಿಗೆ ವೇಗ ಸಿಗುವುದು,ಆಗ ಮಾತ್ರ ಪರಿವರ್ತನಾ ಬದುಕು ನಮ್ಮೆಲ್ಲರದಾಗಲು ಸಾಧ್ಯ, ಶುದ್ಧ ಕುಡಿಯುವ ನೀರಿನ ಜನಜಾಗೃತಿ ಜೊತೆಗೆ ಅದರ ಪೂರೈಕೆ ಅತ್ಯವಶ್ಯಕವಾಗಿದೆ,

ಇನ್ನೂ ಭಾರತದ ಪರಂಪರೆಯಲ್ಲಿ ಬಸ್ ನಿಲ್ದಾಣಗಳಿಗೆ ತನ್ನದೇ ಆದ ಚರಿತ್ರೆ ಮತ್ತು ಪರಂಪರೆ ಇದೆ.

ಬಸ್ ನಿಲ್ದಾಣವನ್ನು ಚಂದವಾಗಿ ಕಟ್ಟಬಹುದು, ಆದರೆ ಅದರ ನಿರ್ವಹಣೆ ಬಹಳ ಕಷ್ಟ, ಕೆಲವು ಊರಿನಲ್ಲಂತೂ ಬಸ್ಸು ನಿಲ್ದಾಣಗಳು ಅತ್ಯಂತ ಸುಂದರವಾಗಿ ತಲೆಯೆತ್ತಿ ನಿಂತಿದ್ದಾವೆ, ಮತ್ತೆ ಹಲವೆಡೆ ಸಭ್ಯರು ಮತ್ತು ಮಹಿಳೆಯರು ಆ ಬಸ್ ನಿಲ್ದಾಣಗಳಿಗೆ ಹೋಗಿ ಕೂರಲು ಸಾಧ್ಯವೇ ಇಲ್ಲ ಅನ್ನುವಂತಹ ಅಶ್ಲೀಲ ಬರಹಗಳು ಮತ್ತು ಚಿತ್ರಗಳು ಗೋಡೆ ತುಂಬಾ ಎದ್ದು ಕಾಣುತ್ತಿರುತ್ತವೆ, ಜೊತೆಗೆ ಅಸಭ್ಯ ಚಟುವಟಿಕೆಗಳಿಗೆ ತಾಣವಾಗಿ ಪರಿವರ್ತನೆಯಾಗಿವೆ,

ಇತ್ತೀಚೆಗೆ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ಗಿಡಮರಗಳು ನೆಲಸಮವಾಗುವುದರ ಜೊತೆಗೆ, ಸಾವಿರಾರು ಬಸ್ಸ್ ನಿಲ್ದಾಣಗಳು ಕಣ್ಮರೆಯಾಗಿ ಹೋದವು,

ಇನ್ನು ಆಧುನಿಕತೆಯು ಭಾರತದ ಹಳ್ಳಿಗಳ ಗುಡಿಸಲಿನ ಅಡುಗೆ ಮನೆ ಒಳಗೆ ನುಗ್ಗಿದ ಕಾರಣ ಹಳ್ಳಿಗೆ ಹಳ್ಳಿಗಳೆ ಕಾಣೆಯಾಗುತ್ತಿವೆ,ಹಳ್ಳಿಗಳು ತಮ್ಮ ಕೃಷಿ ಬದುಕಿಕಡೆ ಬೆನ್ನು ಮಾಡಿ,ನಗರಗಳತ್ತ ಮುಖ ಮಾಡಿಕೊಂಡು ವಲಸೆ ಹೊರಟಿದ್ದಾವೆ, ಈ ಕಾರಣ , ಅಳಿದುಳಿದ ಬಸ್ ನಿಲ್ದಾಣಗಳಲ್ಲಿ ಕುಳಿತು ವಿಶ್ರಾಂತಿ ಪಡೆಯುವ ಪ್ರಯಾಣಿಕರೆ ಇಲ್ಲದಾಗಿದೆ,

ಒಟ್ಟಾರೆ ಕರ್ನಾಟಕದ ಚಿತ್ರಣವನ್ನು ನೋಡುವುದಾದರೆ, ಶುದ್ಧ ನೀರಿನ ಘಟಕಗಳು ಸಾರ್ವಜನಿಕವಾಗಿ ಹೆಚ್ಚಾಗಿ ಕಂಡುಬರುವುದು ಗದಗ ಜಿಲ್ಲೆಯಲ್ಲಿ ಅನ್ನಬಹುದು,ಹಾಗೆ ಸುಂದರವಾದ ಮನಸ್ಸಳೆಯುವಂತಹ ಬಸ್ಸ್ ನಿಲ್ದಾಣಗಳನ್ನು ಕಾಡಿನ ಮಧ್ಯೆ ಮಧ್ಯೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣಬಹುದು.

ಇಂಥ ಶುದ್ಧ ಕುಡಿಯುವ ನೀರು ಘಟಕ ಮತ್ತು ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಸಾಕ್ಷಿಯಾಗಿದ್ದು ಚಿಕ್ಕಮಗಳೂರು ಸಮೀಪದ ವಸ್ತಾರೆ ಗೌತಮ ಪ್ರೌಢಶಾಲೆಯ ಆಡಳಿತ ಮಂಡಳಿ ಮತ್ತು ಬೋಧಕ ಹಾಗೂ ಸಿಬ್ಬಂದಿ ವರ್ಗ.

1988ರಲ್ಲಿ ಒಂದು ಸಣ್ಣ ಮನೆಯೊಳಗೆ ಸ್ಥಾಪನೆಯಾದ ಗೌತಮ ಪ್ರೌಢಶಾಲೆಯು ತನ್ನ 35 ವರ್ಷಗಳ ಕಾಲ ನಿರಂತರವಾಗಿ ನಡೆದು ಬಂದ ತನ್ನದೇ ಆದ ಒಂದು ಇತಿಹಾಸವನ್ನು ದಾಖಲಿಸಿಕೊಂಡಿದೆ.ಪ್ರಾರಂಭದಲ್ಲಿ, ಸುಮಾರು ಒಂದುವರೆ ದಶಕಗಳ ಕಾಲ ಈ ಶಾಲೆಯ ಬೋಧಕರು ಮತ್ತು ಸಿಬ್ಬಂದಿಗಳು ಯಾವುದೇ ವೇತನ ಇಲ್ಲದೆ ಕೆಲಸ ಮಾಡಿ, ಮನೆ ಮನೆಗೆ ತೆರಳಿ ವಿದ್ಯಾರ್ಥಿಗಳನ್ನು ಕರೆತಂದು, ಶಾಲೆಯನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ನಿಜ ಅರ್ಥದಲ್ಲಿ ತ್ಯಾಗ ಮಾಡಿದ್ದಾರೆ. ದಾನಿಗಳ ಮತ್ತು ಹಿತೈಷಿಗಳ ಸಹಕಾರದಿಂದ ಇಂದು ವಿಶಾಲವಾದ ಜಾಗದಲ್ಲಿ ಸ್ವಂತ ಕಟ್ಟಡದೊಂದಿಗೆ ಗಿಡಮರಗಳ ಮಧ್ಯೆ ಗೌತಮ ಪ್ರೌಢಶಾಲೆಯು ಇಂದು ತಲೆಯೆತ್ತಿ ನಿಂತಿದೆ ಸರ್ಕಾರದ ಸಹಾಯಕ್ಕಿಂತ ಹೆಚ್ಚಾಗಿ ತನ್ನ ಶಾಲೆಯ ನೆರೆಹೊರೆಯ ಗ್ರಾಮದ ದಾನಿಗಳನ್ನು ಭೇಟಿ ಮಾಡಿ, ಶಾಲೆಯಲ್ಲಿ ಕಲಿಯುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಮಾತನಾಡಿ, ವಿದ್ಯಾರ್ಥಿಗಳಿಗೆ ಅವಶ್ಯವಿರುವ ತಂಗುದಾಣ ಮತ್ತು ಶುದ್ಧ ಕುಡಿಯುವ ನೀರಿನ ಘಟಕದ ಮಹತ್ವವನ್ನು ತಿಳಿಹೇಳಿ, ದಾನಿಗಳ ಸಹಾಯದಿಂದ ಕುಡಿಯುವ ಶುದ್ಧ ನೀರಿನ ಘಟಕ ಮತ್ತು ಶಾಲೆಯ ರಸ್ತೆ ಬದಿ ಸುಸಜ್ಜಿತವಾದ ಮನಮೋಹಕವಾದ ಬಸ್ ನಿಲ್ದಾಣವನ್ನು ನೆನ್ನೆ ಲೋಕಾರ್ಪಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ,ಈ ಒಂದು ಶಾಲಾ ಕಲ್ಯಾಣ ಕಾರ್ಯಕ್ರಮಕ್ಕೆ ನೆರವಾದ ದಾನಿಗಳಿಗೆ ಮತ್ತು ಶಾಲಾ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತಿರುವ ಅನೇಕರಿಗೆ ಗೌತಮ ಪ್ರೌಢಶಾಲಾ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ, ಸಾಮಾಜಿಕವಾಗಿ ಕೆಲಸ ಮಾಡುತ್ತಿರುವ ವಸ್ತಾರೆ ಮತ್ತು ನೆರೆಹೊರೆಯ ಅನೇಕ ಗ್ರಾಮಸ್ಥರು ಭಾಗಿಯಾಗಿದ್ದರು.

ಬರಹ ಕೃಪೆ.
ಡಿ.ಎಂ.ಮಂಜುನಾಥಸ್ವಾಮಿ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *