लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಐ.ಎ.ಎಸ್ ನಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಪಡೆದ ಬೇಲೂರಿನ ಆಕಾಶ್.”

1 min read

IAS ಎಂದರೆ ಹೆಚ್ಚಾಗಿ ನಾವೆಲ್ಲ ತಿಳಿದುಕೊಂಡಿರುವುದು Indian Administrative Service ಎಂದು,

ಎಸ್, ರೈಟ್,ನಿಜ,
ಐಎಎಸ್ ಎಂಬುದರ ನಿಜವಾದ ವಿಸ್ತೃತ ಪದ ಇದಾದರೂ ಕೂಡ IAS ಎಂದರೆ Iam A Servent ಎಂದು ತಿಳಿದಿದ್ದೇನೆ ಎಂಬ ಗೋಲ್ಡನ್ ಲೈನ್ ನಂತೆ ಅಂಡರ್ ಲೈನ್ ಮಾಡಿ ಹೇಳಿದ್ದು 2023ನೇ ಬ್ಯಾಚಿನ UPSC ರ್ಯಾಂಕ್ ಹೋಲ್ಡರ್
ಆಕಾಶ್ -ಐಎಎಸ್ ,

ಈ ಅಕಾಶ್ ಚಿಕ್ಕಮಗಳೂರು ತಾಲ್ಲೂಕಿಗೆ ಅಂಟಿಕೊಂಡಿರುವ ಗಡಿ ಗ್ರಾಮವಾದ ಬೇಲೂರು ತಾಲ್ಲೂಕಿನ ಅಗ್ಗಡಲು ಎಂಬ ಒಂದು ಸಣ್ಣ ಹಳ್ಳಿಯ ರೈತಾಪಿ ಕುಟುಂಬದ ಮನೆತನದ ಕುವರ, ಬುರಲೆ ಎಂಬುದು ಇವರ ಮನೆತನದ ಹೆಸರು,

ಇಂತಹ ಬುರಲೆ ಮನೆತನದ ಲಕ್ಷ್ಮಣಗೌಡ ಪ್ರೇಮ ದಂಪತಿಗಳ ಇಬ್ಬರು ಮಕ್ಕಳಲ್ಲಿ ಆಕಾಶ್ ಹಿರಿಯ ಮಗ, ಅಪ್ಪ ಲಕ್ಷ್ಮಣಗೌಡರು ತನ್ನದೇ ಊರಿನ ಪ್ರೇಮ ಎಂಬುವರನ್ನು ಪ್ರೇಮಿಸಿ ಮದುವೆಯಾಗಿ, ಪ್ರೇಮ ವಿವಾಹದ ಕಾರಣ,ಕುಟುಂಬದ ವಿರೋಧವನ್ನು
ಕಟ್ಟಿಕೊಂಡಿದ್ದರಿಂದ ತನ್ನ ಹುಟ್ಟಿದ ಊರನ್ನು ಬಿಟ್ಟು , ಪ್ರೇಮಿಸಿ ಮದುವೆಯಾದ ಮಡದಿ ಪ್ರೇಮಳನ್ನು ಕರೆದುಕೊಂಡು ಜೀವನೋಪಾಯಕ್ಕಾಗಿ ಬಸ್ಸು ಹತ್ತಿ ಹೋಗಿದ್ದು ಕರುನಾಡಿನ ರಾಜಧಾನಿ ಬೆಂಗಳೂರಿನತ್ತ,,,

ಬೆಂಗಳೂರಿನ ಪ್ರತಿಷ್ಠಿತ ಎಂಟಿಆರ್ ಸಂಸ್ಥೆಯಲ್ಲಿ ಸಾಮಾನ್ಯ ಉದ್ಯೋಗಿಯಾಗಿ , ಕೆಲಸಕ್ಕೆ ಸೇರಿ ಬರುವ ಸಣ್ಣ ಸಂಬಳದಲ್ಲಿ ಮನೆ ಮಡದಿ ಮಕ್ಕಳ ವಿದ್ಯಾಭ್ಯಾಸವನ್ನು, ನಿಭಾಯಿಸಬೇಕಾಯಿತು, ಬದುಕಿನ ಪ್ರತಿ ಹಂತದಲ್ಲೂ ಕಷ್ಟವನ್ನು ಎದುರಿಸುತ್ತಲೇ ಬಂದವರು, ಅತಿ ಸಣ್ಣ ಸಂಬಳದಲ್ಲಿ ಅ ದೊಡ್ಡದಾದ ನಗರದಲ್ಲಿ ಜೀವನ ಮಾಡುತ್ತಿದ್ದ ಲಕ್ಷ್ಮಣಗೌಡರು ಎಂದಿಗೂ ತಮ್ಮ ಕಷ್ಟವನ್ನು ತಮ್ಮ ಇಬ್ಬರು ಮಕ್ಕಳ ಮೇಲೆ ಹೇರಿದವರಲ್ಲ, ಈ ಕಾರಣದಿಂದ ಮಗ ಆಕಾಶ್ ಮಗಳು ಭುವನ ಬೆಂಗಳೂರಿನಲ್ಲೇ ಇಂಜಿನಿಯರಿಂಗ್ ಪದವಿಯನ್ನು ಪಡೆಯುತ್ತಾರೆ,

ಆಕಾಶ್ ಮೆಕಾನಿಕಲ್ ಇಂಜಿನಿಯರ್ ಆಗಿ ಪದವಿ ಪಡೆದು, ನಂತರ ಏರೋನಾಟಿಕಲ್ ಕ್ಷೇತ್ರದಲ್ಲಿ ಎಕ್ಸಾಮ್ ಪಡೆದು ಅದೇ ಕ್ಷೇತ್ರದಲ್ಲಿ ವೃತ್ತಿಗೆ ಸೇರುತ್ತಾನೆ, ವೃತ್ತಿಗೆ ಸೇರಿದ ನಂತರ ಆ ಕ್ಷೇತ್ರ ಯಾಕೋ ಏನೋ ಆಕಾಶನ ಮನಸ್ಸಿಗೆ ಒಪ್ಪಲಿಲ್ಲ,ಅದಕ್ಕೆ ಅಲ್ಲಿನ ಶ್ರೀಮಂತ ಮನೆತನದ ಹಿನ್ನೆಲೆಯಿಂದ ಬಂದ ಸಹೋದ್ಯೋಗಿಗಳೇ ಕಾರಣರಾಗಿದ್ದರು, ಬಡತನದಲ್ಲಿ ಹುಟ್ಟಿ ಬೆಳೆದ ಆಕಾಶನಿಗೆ ಈ ಶ್ರೀಮಂತ ಮನೆತನದಲ್ಲಿ ಹುಟ್ಟಿ ಬೆಳೆದ ಸಹೋದ್ಯೋಗಿಗಳ ನಡವಳಿಕೆ ಮನಸ್ಸಿಗೆ ಸ್ವಲ್ಪ ಕಿರಿಕಿರಿಯಾದ ಕಾರಣ, ಕೈಗೆ ದೊರೆತ ಕೆಲಸಕ್ಕೆ ಗುಡ್ ಬಾಯ್ ಹೇಳಿ,ಮನೆಯತ್ತ ಮುಖ ಮಾಡಿದ ಈ ಆಕಾಶ್,

ಆಕಾಶ್ ಎಂಬ ಹೆಸರಿಗೆ ತಕ್ಕಹಾಗೆ ಈತನ ಆಲೋಚನೆಗಳು ಆಕಾಶದಷ್ಟೇ ಅಗಲವಾಗಿದ್ದವು, ಮನಸ್ಸು ಏನಾದರೂ ಒಂದು ಮಾಡು ಮಾಡು ಎಂದು ಹುರಿದುಂಬಿಸುತ್ತಲೇ ಇತ್ತು, ಆತನೊಳಗೆ, ಪ್ರೇಮ ವಿವಾಹ ಮಾಡಿಕೊಂಡಿದ್ದಕ್ಕಾಗಿ ಅಪ್ಪ ಅಮ್ಮ ಕುಟುಂಬದ ವಿರೋಧವನ್ನು ಕಟ್ಟಿಕೊಂಡು,ತನ್ನ ಹುಟ್ಟೂರನ್ನು ಬಿಟ್ಟು ಬಂದ ಬಗ್ಗೆ ಮತ್ತು ಈಗ ತಾನು ಕೆಲಸ ಮಾಡುತ್ತಿದ್ದ ಏರೋನಾಟಿಕ್ ಸಂಸ್ಥೆಯ ಕೆಲಸಕ್ಕೆ ರಾಜೀನಾಮೆ ಕೊಟ್ಟ ವಿಚಾರಗಳು ಈತನ ಮನಸ್ಸಿನಲ್ಲಿ ಸಾಲು ಸಾಲು ಪ್ರಶ್ನೆಗಳಾಗಿ ಕಾಡುತ್ತಿದ್ದವು,

ಈ ಕಾಡುವಿಕೆಯಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು ಎಂಬ ಹಂಬಲ ಆಕಾಶನ ಹೃದಯದಲ್ಲಿ ಚಿಗುರುಡೆಯುತ್ತಲೇ ಇತ್ತು,

ಇಂತಹ ಒಂದು ಕಾಡುವಿಕೆಯೇ ಮುಂದೆ ಆತನ ಸಾಧನೆಗೆ ದಾರಿಯಾಯಿತು ಎಂಬುದು ಸ್ವಾರಸ್ಯಕರ ಸಂಗತಿ,

ಒಳ್ಳೆ ಮೈಕಟ್ಟು ಗೋಧಿ ಮೈಬಣ್ಣ ಎನ್ನುವ ಹಾಗೆ, ಹ್ಯಾಂಡ್ಸಮ್ ಆಗಿರುವ ಆಕಾಶ್ ಮೊಗದಲ್ಲಿ ಸದಾ ನಗು ಚಿಮ್ಮುತ್ತಲೇ ಇರುತ್ತದೆ, ಮಾತು ಕಡಿಮೆ, ಗ್ರಹಿಕೆ ಜಾಸ್ತಿ ಅನ್ನುವ ಚಿಂತನೆ ಅವನ ಕಣ್ಣುಗಳನ್ನು ಸೂಕ್ಷ್ಮವಾಗಿ ಗ್ರಹಿಸಿದರೆ ಗೊತ್ತಾಗುತ್ತದೆ,

ಈ ಆಕಾಶ್
ಕೇಂದ್ರ ಲೋಕಸೇವಾ ಆಯೋಗ ನಡೆಸುತ್ತಿರುವ UPSC (Union Public Service Commission ) ಪರೀಕ್ಷೆಗೆ ಪ್ರವೇಶ ಪಡೆದು ಉತ್ತೀರ್ಣನಾಗಿ ಹೊರಬಂದಿದ್ದು ಇತರರಿಗೆ ಒಂದು ಸಿದ್ಧ ಮಾದರಿಯಾಗಿದೆ, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಎಂದರೆ ಕಬ್ಬಿಣದ ಕಡಲೆ ಎಂದು ತಿಳಿದವರೇ ಹೆಚ್ಚು, ಅದಕ್ಕಾಗಿ ಐಎಎಸ್ ತರಬೇತಿಗಾಗಿ ವರ್ಲ್ಡ್ ಕ್ಲಾಸ್ ಲೈಬ್ರರಿ ಇರುವ, ಸುಸಜ್ಜಿತವಾದ ಇನ್ಫ್ಯಾಕ್ಟ್ರಕ್ಚರ್ ಹೊಂದಿರುವ ಪ್ರತಿಷ್ಠಿತವಾದ ಅಕಾಡಮಿಗಳಿಗೆ ಲಕ್ಷಾಂತರ ಹಣ ಕೊಟ್ಟು , ವರ್ಷಗಳ ಕಾಲ ನುರಿತ ಅನುಭವಿಗಳಿಂದ ಕೋಚಿಂಗ್ ಪಡೆದರೂ ಕೊಡ ಫೇಲ್ ಆಗುವವರೇ ಹೆಚ್ಚು , ಹಲವು ಅಟೆಂಪ್ಟ್ ಗಳ ನಂತರ ಕೆಲವರು ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರ್ಯಾಂಕ್ ಪಡೆಯುತ್ತಾರೆ,

ಆದರೆ,
ಈ ಆಕಾಶ್ , ಯಾವುದೇ ಕೋಚಿಂಗ್ ಪಡೆಯದೆ ಮೊದಲನೇ ಅಟ್ಟೆಂಪ್ಟ್ ನಲ್ಲೇ ರಾಷ್ಟ್ರಮಟ್ಟದಲ್ಲಿ 210ನೇ ರ್ಯಾಂಕ್ , ರಾಜ್ಯಮಟ್ಟದಲ್ಲಿ 5 ನೇ ರ್ಯಾಂಕ್ ಪಡೆದು ಕರುನಾಡಿನ ಜನತೆಯನ್ನು ತನ್ನತ್ತ ಸೆಳೆಯುವಂತೆ ಮಾಡಿದ್ದಾನೆ ಈ ನಗುಮೊಗದ ಯುವ ಗೆಳೆಯ,

ಅಚ್ಚರಿಯ ಸಂಗತಿ ಎಂದರೆ ತಾನು UPSC ಪರೀಕ್ಷೆ ತೆಗೆದುಕೊಂಡಿದ್ದೇನೆ, ಅದಕ್ಕಾಗಿ ಅಭ್ಯಾಸ ಮಾಡುತ್ತಿದ್ದೇನೆ ಎಂದು ಯಾರಲ್ಲಿಯೂ ಹೇಳಿಕೊಂಡಿಲ್ಲ, ಅಷ್ಟು ಮಾತ್ರವಲ್ಲ, ಫಲಿತಾಂಶ ಸುದ್ದಿ ಟಿವಿಯಲ್ಲಿ ಬಂದದ್ದನ್ನು ಈ ಆಕಾಶನ ಅಪ್ಪ ಅಮ್ಮನೋಡಿ ಆನಂತರ UPSC ಪರೀಕ್ಷೆಯಲ್ಲಿ ರ್ಯಾಂಕ್ ಬಂದ ವಿಚಾರವನ್ನು ಮಗನೊಂದಿಗೆ ಅನುಮಾನದಿಂದ ಪ್ರಸ್ತಾಪ ಮಾಡಿದ ನಂತರ ಈ ವಿಚಾರ ಆತನ ಹೆತ್ತವರಿಗೆ ಮತ್ತು ಕುಟುಂಬಕ್ಕೆ ತಿಳಿಯುತ್ತದೆ,

ಹೆತ್ತ ಅಪ್ಪ ಅಮ್ಮನ ಅಕ್ಕರೆ ಮತ್ತು ತನ್ನ ಒಬ್ಬಳೇ ಒಬ್ಬಳು ಮುದ್ದು ತಂಗಿ ಭುವನ ಆಗಾಗ ಕೊಡುತ್ತಿದ್ದ ಸಣ್ಣ ಸಣ್ಣ ಪಾಕೆಟ್ ಮನಿಯಿಂದಲೇ ಈ ಪರೀಕ್ಷೆಗೆ ಬೇಕಾದ ಪುಸ್ತಕ ಸಾಹಿತ್ಯ ಇತರೆ ಸಾಮಗ್ರಿಗಳನ್ನು ಕೊಂಡು ಓದಿ ಅಪ್ಪ ಅಮ್ಮನಿಗೆ ಯಾವ ಆರ್ಥಿಕ ಹೊರೆಯನ್ನು ಕೊಡದೆ ರ್ಯಾಂಕ್ ನೊಂದಿಗೆ ಹೊರಬಂದ ಇವನ ಸಾಧನೆ ಇತರರಿಗೆ ಮಾದರಿಯಾಗಿದೆ,

ನಾವೆಲ್ಲ ಗ್ರಹಿಸಬೇಕಾದ ವಿಚಾರವೆಂದರೆ UPSC ಎಂದರೆ ಅದೊಂದು ಲೋಕಸೇವಾ ಆಯೋಗದ ಪರೀಕ್ಷೆ ಅಷ್ಟೇ ಎಂದು ಮಾತ್ರ ತಿಳಿದಿದ್ದೇವೆ, ಈ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ದೇಶದ ಹಲವು ರಾಜ್ಯಗಳ ಆಯಾಕಟ್ಟಿನ ಜಾಗದಲ್ಲಿ ಐಎಎಸ್, ಐಪಿಎಸ್ , ಐಎಫ್ಎಸ್, ಐ ಆರ್ ಎಸ್ ನಂತಹ ಉನ್ನತ ಅಧಿಕಾರಿಯಾಗಿ ಸರ್ಕಾರದ ಸಕಲ ಸವಲತ್ತುಗಳೊಂದಿಗೆ ಕೆಲಸ ಮಾಡಬಹುದು ಎಂದು ಭಾವಿಸಿದ್ದೇವೆ, ಆದರೆ UPSC ಅಂತಹ ಪರೀಕ್ಷೆಗಳು ಕೇವಲ ರ್‍ಯಾಂಕ್ ನೀಡುವುದಿಲ್ಲ, ಅದು ಒಂದು ಒಳ್ಳೆಯ ವ್ಯಕ್ತಿತ್ವವನ್ನು ತಯಾರು ಮಾಡುತ್ತದೆ ಎಂಬುದಕ್ಕೆ ನಮ್ಮ ಆಕಾಶನ ಮಾತುಗಳು ಅಂದು ಸಾಕ್ಷಿಯಾದವು,

ನನ್ನ ಹೆಸರು ಆಕಾಶ ಎಂದಿದ್ದರೂ ಕೂಡ, ನಾನು ಯಾವತ್ತೂ ಆ ಆಕಾಶದ ಎತ್ತರಕ್ಕೆ ಇರಲು ಬಯಸುವುದಿಲ್ಲ, ಕಾರಣ, ನಾನು ಆಕಾಶದ ಎತ್ತರಕ್ಕೆ ಏರಿದರೆ ಭೂಮಿಯಲ್ಲಿ ಇರುವವರು ಕಾಣುವುದಿಲ್ಲ, ಹಾಗಾಗಿ ನನ್ನ ಮುಖ್ಯ ಗೋಲ್ ಜನಸಾಮಾನ್ಯರ ಬದುಕು ಬವಣೆಗಳಿಗೆ ಸ್ಪಂದಿಸುವುದೇ ಆಗಿದೆ, ಈ ಕಾರಣಕ್ಕಾಗಿ ನನ್ನ ಐಎಎಸ್ ಪದವಿಯನ್ನು ಐ ಆಮ್ ಎ ಸರ್ವೆಂಟ್ ಎಂದು ತಿಳಿದಿದ್ದೇನೆ ಎಂದು ಭಾವುಕವಾಗಿ ಸನ್ಮಾನ ಸ್ವೀಕರಿಸಿ ಮಾತನಾಡುವ ಮೂಲಕ, ದೊಡ್ಡವರ ಮುಂದೆ ಅತೀ ದೊಡ್ಡವನಾಗಿ ಬಿಟ್ಟ ಈ ಕಿರಿಯ ಗೆಳೆಯ,

ಇಂತಹ ಒಂದು ಘನ ವ್ಯಕ್ತಿತ್ವದೊಂದಿಗೆ ರೂಪುಗೊಂಡು ಹೊರಬಂದಿರುವ ನಮ್ಮ ನಡುವಿನ ನಮ್ಮೂರಿನ ಈ ಚಿಕ್ಕ ಗೆಳೆಯ ಅಕಾಶ್ ಮತ್ತು ಆತನ ತಂದೆ ತಾಯಿಗಳಿಗೆ ಇತ್ತೀಚಿಗೆ ಚಿಕ್ಕಮಗಳೂರಿನ ಹೋಟೆಲ್ ಗ್ರಾಂಡ್ ಕೃಷ್ಣದ ರೆಡ್ ಚೆರಿ ಸಭಾಂಗಣದಲ್ಲಿ , ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಷ್ಠಾನ ಮತ್ತು ಬುರಲೆ ಮನೆತನದ ವತಿಯಿಂದ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿತ್ತು,

ಈ ಸಮಾರಂಭದಲ್ಲಿ ಕೇಂದ್ರದ ಮಾಜಿ ಸಚಿವರಾದ ಶ್ರೀಮತಿ ಡಿ,ಕೆ ತಾರಾದೇವಿ ಸಿದ್ಧಾರ್ಥ, ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಬಿ.ಬಿ.ನಿಂಗಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಂಎಲ್ ಮೂರ್ತಿ , ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಡಾ.ಸುಂದರ ಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಷ್ಠಾನದ ಅಧ್ಯಕ್ಷರಾದ ಮಾವಿನಕೆರೆ ದಯಾನಂದ್, ಕಾರ್ಯಕ್ರಮದ ಆತಿಥ್ಯವನ್ನು ವಹಿಸಿದ್ದ
ಬಿಗ್ಗನಹಳ್ಳಿ ಪರಮೇಶ್ ಶಕುಂತಲಾ ದಂಪತಿಗಳು ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಯ ಮುಖಂಡರು, ಸಾಹಿತಿಗಳು, ಜನಪರ ಹೋರಾಟಗಾರರು,ನ್ಯಾಯವಾದಿಗಳು, ಮುದ್ರಣ ಮತ್ತು ದೃಶ್ಯ ಮಾಧ್ಯಮದ ಮಿತ್ರರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಬುರಲೆ ಮನೆತನದ ಕುಟುಂಬ ವರ್ಗ ಈ ಅಭಿನಂದನಾ ಸಮಾರಂಭದಲ್ಲಿ ಭಾಗಿಯಾಗಿ ಗೆಳೆಯ ಆಕಾಶ್ ಗೆ ಶುಭ ಕೋರಿ ಸನ್ಮಾನಿಸಿದರು.

ಬರಹ ಕೃಪೆ.

ಡಿ.ಎಂ.ಮಂಜುನಾಥ ಸ್ವಾಮಿ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *