“ಕವಿಗಳು ಮತ್ತು ಕವಿತೆಗಳು ಒಂದೇ ನಾಣ್ಯದ ಎರಡು ಮುಖಗಳು : ಡಿ.ಎಂ.ಮಂಜುನಾಥ ಸ್ವಾಮಿ.”
1 min read
ಈ ಮನುಷ್ಯ ಪ್ರಪಂಚದ ನಡಿಗೆಯೇ ಒಂದು ಕಾವ್ಯಮಯ, ಇಂತಹ ಬದುಕಿಗೆ ರುಚಿ ಅಭಿರುಚಿಗಳು ಇರಬೇಕು, ಅಭಿರುಚಿಗಳು ಇಲ್ಲದಿದ್ದರೆ ಬದುಕು ಅರ್ಥಪೂರ್ಣವಾಗುವುದಿಲ್ಲ ಎಂಬ ಸತ್ಯ ನಮ್ಮೆಲ್ಲರಿಗೂ ಗೊತ್ತಿದೆ,
ಜಗತ್ತಿನ ಎಲ್ಲ ಮಹಾಕಾವ್ಯಗಳನ್ನು ನೋಡಿದರೆ ಅದರೊಳಗೆ ರಾಜಕೀಯ ಇದ್ದೇ ಇದೆ,
ಉದಾ :- ಮಹಾಭಾರತ,ರಾಮಾಯಣ ಇತ್ಯಾದಿ,,
ಇನ್ನು ಮನುಷ್ಯ ಸಂಕುಲವನ್ನು ಇಡಿಯಾಗಿ ಗ್ರಹಿಸಿದರೆ ಎಲ್ಲಾ ಮನುಷ್ಯ ಮನಸ್ಸುಗಳಲ್ಲೂ ಕವಿ ಮನಸ್ಸು ಇದ್ದೇ ಇರುತ್ತದೆ, ಹಾಗಂತ ಎಲ್ಲರೂ ಕವಿಗಳೇ ಆಗಬೇಕೆಂದೇನೂ ಇಲ್ಲ,
ಆದರೆ
ಜಗದಲ್ಲಿ ಕವಿತೆ ಮತ್ತು ಕವಿಗಳು ಇಲ್ಲದಿದ್ದರೆ ಆ ಜಗತ್ತು ಹೆಚ್ಚು ಸೊಬಗಿನಿಂದ ಕೂಡಿರುವುದಿಲ್ಲ.
ರಾಜ ಮಹಾರಾಜರು ತಮ್ಮ
ಅಸ್ಥಾನದಲ್ಲಿ ಅನೇಕ ಪ್ರಸಿದ್ಧ ಕವಿಗಳಿಗೆ ಆಶ್ರಯ ಕೊಟ್ಟಿದ್ದನ್ನು ನೋಡಬಹುದು, ಅದರಲ್ಲಿ ಬಹುತೇಕ ರಾಜರು ತಮ್ಮನ್ನು ತಾವು ಹೊಗಳಿಸಿಕೊಳ್ಳಲು ವಿಜ್ರಂಬಿಸಿಕೊಳ್ಳಲು ಕವಿಗಳಿಗೆ ತಾಕೀತು ಮಾಡಿದ್ದನ್ನು ಗಮನಿಸಬಹುದು.
ಆದರೆ,
ಕವಿತೆ ಎಂದರೆ ಹೊಗಳಲು ಇರುವ ಓಲೈಕೆಯ ಸಾಹಿತ್ಯವಲ್ಲ, ಕವಿ ಎಂದರೆ ಹೊಗಳುಭಟ್ಟನಲ್ಲ ಎಂದು ತೋರಿಸಿಕೊಟ್ಟವರು ನಮ್ಮ ಆದಿಕವಿ ಪಂಪ,ಈ ಕಾರಣಕ್ಕಾಗಿ ಅಧಿಕವಿ ಪಂಪನು ರಾಜಶ್ರಯದಲ್ಲಿದ್ದರೂ ಕೂಡ , ತನ್ನ ಕವಿತೆಯ ಮೂಲಕ ರಾಜನ ವಿರುದ್ಧ ಬಂಡಾಯ ಎದ್ದಿದ್ದನ್ನು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕಾಣಬಹುದು,
ವಿಶೇಷವಾಗಿ ಕವಿಗಳ ಕೆಲಸ , ಸಮಾಜಕ್ಕೆ ಸಮಾಧಾನ ಮಾಡುವ ಕವಿತೆಗಳನ್ನು ಕಟ್ಟಿಕೊಡುವುದಲ್ಲ, ಕವಿಗಳು ಜನ್ಮ ನೀಡಬೇಕಾಗಿರುವುದು ಪರಿವರ್ತನೆಯ ಕವಿತೆಗಳಿಗೆ ,
ಕಾರಣ ಪರಿವರ್ತನೆ ಜಗದ ನಿಯಮವಾಗಿದೆ,
ನಾವೆಲ್ಲರೂ ನಿಜವಾಗಿಯೂ ಕವಿಗಳಾಗಬೇಕಾದರೆ ಸಾಹಿತ್ಯವೇ ನಮ್ಮ ಸ್ವಧರ್ಮವಾಗಿರಬೇಕು, ಯಾರು ಜಾತಿ ಮತ ಧರ್ಮ ಮೇಲು ಕೀಳು ಎಂಬ ಶ್ರೇಷ್ಠತೆಯ ವ್ಯಸನಗಳಿಗೆ ಅಂಟಿಕೊಂಡಿರುತ್ತಾರೋ ಅಂತಹವರು ನಿಜ ಅರ್ಥದಲ್ಲಿ ಕವಿಗಳಾಗಲು ಸಾಧ್ಯವಿಲ್ಲ, ಒಂದು ವೇಳೆ ಅಂತವರಿಂದ ಕವಿತೆಗಳು ಹುಟ್ಟಿದರೂ ಕೂಡ ಇಂದು ಹುಟ್ಟಿ ನಾಳೆ ಸಾಯುತ್ತವೆ,
ಕವಿತೆ ಎಂದರೆ ಜಾತಿ ಮತ ಧರ್ಮ ನೋಡಿ ಬರೆಯುವುದಲ್ಲ, ಜಾತಿ- ಮತಧರ್ಮ ನೋಡಿ ಬರೆಯುವುದಕ್ಕೂ – ಜನರನ್ನು ನೋಡಿ ಬರೆಯುವುದುಕ್ಕೂ ವ್ಯತ್ಯಾಸವಿದೆ,
ಯಾರು ಜನ ವರ್ಗವನ್ನು ನೋಡಿ ಕವಿತೆ ಬರೆಯುತ್ತಾರೋ, ಈ ಪರಿಸರದ ಚರಾಚರ ಜೀವ ಸಂಕಲವನ್ನು ಪ್ರೀತಿಯ ಕಣ್ಣುಗಳಿಂದ ತೆರೆದು ನೋಡಿ ಕವಿತೆಗಳಿಗೆ ಜನ್ಮ ನೀಡುತ್ತಾರೋ ಅಂತಹ ಕವಿತೆಗಳಿಗೆ ಈ ನೆಲದಲ್ಲಿ ಯಾವತ್ತೂ ಸಾವು ಎಂಬುದು ಇರುವುದಿಲ್ಲ,
ಮನುಷ್ಯ ಹುಟ್ಟಿದ ಮೇಲೆ, ಅವನ ಜೀವನ ಸಾರ್ಥಕವಾಗಬೇಕಾದರೆ ಮಕ್ಕಳಿಗೆ ಜನ್ಮ ನೀಡಬೇಕು ಎಂಬ ಮಾತಿದೆ, ಒಂದು ವೇಳೆ ಮಕ್ಕಳಿಗೆ ಜನ್ಮ ನೀಡಲು ನಮ್ಮಿಂದ ಸಾಧ್ಯವಾಗದಿದ್ದರೆ ಚಿಂತೆ ಮಾಡಬೇಕಾದ ಅವಶ್ಯಕತೆ ಇಲ್ಲ,
ಕಾರಣ,
ಮಕ್ಕಳಿಗೆ ಜನ್ಮ ನೀಡಲು ಸಾಧ್ಯವಾಗದಿದ್ದರೆ, ಕವಿತೆಗಳಿಗೆ ಜನ್ಮ ನೀಡಿ, ನಾವು ಜನ್ಮ ಕೊಟ್ಟ ಮಕ್ಕಳು ಇಂದಲ್ಲ ನಾಳೆ ಸತ್ತೇ ಸಾಯುತ್ತಾರೆ,
ಆದರೆ ,,
ನಾವು ಜನ್ಮ ಕೊಟ್ಟ ಕವಿತೆಗಳು ಸಾಯುವುದಿಲ್ಲ, ಶ್ರೇಷ್ಠ ಕವಿತೆಗಳಾಗಿದ್ದರೆ, ಜಾತಿಯನ್ನು ನೋಡದೆ ಜನರನ್ನು ನೋಡಿ ಬರೆದ ಕವಿತೆಗಳಾಗಿದ್ದರೆ, ನಾವು ಸತ್ತ ಮೇಲೂ ನಮ್ಮ ಕವಿತೆಗಳು ಈ ನೆಲದಲ್ಲಿ ಶಾಶ್ವತವಾಗಿ ಸಂಚರಿಸುತ್ತಿರುತ್ತವೆ,
ನಾವು ಸತ್ತ ಮೇಲೂ ಜೀವಂತವಾಗಿರುವಂತಹ ಕವಿತೆಗಳಿಗೆ ಜನ್ಮ ನೀಡುವುದು ನಿಜವಾದ ಕವಿಗಳ ಆಶಯ,
ಕವಿಗಳ ಲೋಕದಲ್ಲಿ ಪಯಣಿಸುತ್ತಿರುವ ನಾವೆಲ್ಲ ಇಂಥ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಾಗೋಣ,,,,,
ಸಾಹಿತ್ಯ ಸಂಭ್ರಮ ಮೂಡಿಗೆರೆ ಬಳಗದ ಈ ಎಲ್ಲ ಮನಸ್ಸುಗಳು ಈ ತರಹದ ಕವಿತೆ ಹೆಸರಿನಲ್ಲಿ ಬಹುದೂರ ನಡೆದು ಬಂದಿದ್ದೇವೆ,,,,,
ಯಾವುದೇ ಒಂದು ಘಟನೆಗೆ ಕಾರಣ ಮತ್ತು ಪರಿಣಾಮವಿರಬೇಕು, ಈ ಪರಿಣಾಮಕ್ಕೆ ನಿಜವಾಗಿ ಕಾರಣರಾದವರು ನನ್ನ ಒಲವಿನ ಸೃಜನಶೀಲ ಮನಸ್ಸಿನ ಕಿರಿಯ ಸಂಗಾತಿ ಕವಿ ಹೃದಯದ ಈ ಗುಂಪಿನ ನಿರ್ಮಾತೃ ಎಂ.ಎಸ್.ನಾಗರಾಜ್,
ಈ ನಾಗರಾಜ್ ನನ್ನ ಬಹುಕಾಲದ ಸಾಹಿತ್ಯ ಲೋಕದ ಒಡನಾಡಿ, ತನ್ನ ಕುಟುಂಬದ ನಿರ್ವಹಣೆಗಾಗಿ ಖಾಸಗಿ ಸಂಸ್ಥೆಯಲ್ಲಿ ಹಗಲಿಡಿ ದುಡಿದು ತಾನು ಮತ್ತು ತನ್ನ ಕುಟುಂಬವನ್ನು ಸಾಕುತ್ತ,, ಪ್ರವೃತ್ತಿಯಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಚಿಕ್ಕ ವಯಸ್ಸಿನಿಂದಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ ಈ ನನ್ನ ಕಿರಿಯ ಸನ್ಮಿತ್ರ ನಾಗರಾಜ್,
ಈ ಗೆಳೆಯ ಮೂಡಿಗೆರೆ ಕಸಬಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮೇಲೆ, ಸಾಹಿತ್ಯ ಕ್ಷೇತ್ರದಲ್ಲಿ ಏನಾದರೂ ಒಂದು ಕೆಲಸ ಮಾಡಬೇಕೆಂಬ ಬಯಕೆ ಇತ್ತು, ಈ ಬಯಕೆ ಬಸಿರಾಗಿ ರೂಪಗೊಂಡಿದ್ದೆ ಸಾಹಿತ್ಯ ಸಂಭ್ರಮ ಮೂಡಿಗೆರೆ ಹೆಸರಿನ ಈ ವಾಟ್ಸಪ್ ಬಳಗ,
ಈ ವಾಟ್ಸಪ್ ಗುಂಪನ್ನು ಪ್ರಾರಂಭ ಮಾಡಿದಾಗ 52 ಸದಸ್ಯರಿದ್ದರು, ಅದರಲ್ಲಿ ಆರರಿಂದ ಏಳು ಜನ ಕವಿಗಳು ಇದ್ದರು, ಈಗ ಈ ಗುಂಪು 164 ಸದಸ್ಯರಿರುವ ಕುಟುಂಬವಾಗಿದೆ, ಇದರಲ್ಲಿ ಇಂದು ಸುಮಾರು 50ರಿಂದ 60 ಜನ ಕವಿಗಳು ಒಂದಲ್ಲ ಒಂದು ವಿಷಯದ ಮೇಲೆ ತಮ್ಮದೇ ಆದ ಕವಿತೆಗಳಿಗೆ ಜನ್ಮ ನೀಡುತ್ತಾ ಬಂದಿದ್ದಾರೆ – ಬರುತ್ತಲೇ ಇದ್ದಾರೆ,
ಗೆಳೆಯ ನಾಗರಾಜ್ ಒಂದು ಸದಾಶಯವನ್ನು ಇಟ್ಟುಕೊಂಡು – ಕಟ್ಟಿಕೊಂಡು ಈ ಬಳಗದ ಮೂಲಕ ಕವಿತಾ ಮತ್ತು ಕಥಾ ಸ್ಪರ್ಧೆಯ ನಡಿಗೆಯನ್ನು ಆರಂಭಿಸಿ 24 ವಾರಗಳು ತುಂಬಿ ಇಂದಿಗೆ 25ನೇ ವಾರಕ್ಕೆ ಕಾಲಿಟ್ಟಿದೆ,
25ನೇ ವಾರ ಅಂದರೆ ಅದೊಂದು ಬೆಳ್ಳಿಗೆರೆ ಮೂಡಿದಂತೆ ಆಗಿದೆ, ರಾಜ್ಯದ ಸುಮಾರು 25 ಜಿಲ್ಲೆಗಳ ಕವಿಗಳು ಈ ಗುಂಪಿನಲ್ಲಿ ಗುಂಪಿನಲ್ಲಿ ಭಾಗವಹಿಸಿ ಗುಂಪಿಗೆ ಒಂದು ವಿಸ್ತಾರತೆಯನ್ನು ಹೆಚ್ಚಿಸಿರುವುದು ಹೆಮ್ಮೆಯ ಸಂಗತಿ,
25 ವಾರಗಳಲ್ಲಿ ಒಂದು ವಾಟ್ಸಪ್ ಗ್ರೂಪ್ ಮೂಲಕ 50 ರಿಂದ 60 ಕವಿಗಳು ರೂಪುಗೊಳ್ಳುತ್ತಾರೆ ಎಂದರೆ ಅದು ಒಂದು ದೊಡ್ಡ ಶ್ರೇಯಸ್ಸಿನ ಮಾತು ಕೂಡ ಆಗಿದೆ,
ಈ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ, ನಾವೆಲ್ಲ
ನಾವು ಇರುವ ಜಾಗದಲ್ಲೆ ಪರಸ್ಪರ ನಮ್ಮ ಮನಸುಗಳ ಮೂಲಕ ಆಲಿಂಗನ ಮಾಡಿಕೊಳ್ಳುತ್ತಾ,,,, ಒಂದು ಹೊಸ ಸ್ಪರ್ಶವನ್ನು ಪಡೆಯೋಣ,
ಮುಂದಿನ ದಿನಗಳಲ್ಲಿ ಗುಂಪಿನ ಎಲ್ಲರೂ ಒಂದೆಡೆ ಮುಖಾಮುಖಿಯಾಗುವಂತಹ ಕಾರ್ಯಕ್ರಮವನ್ನು ರೂಪಿಸೋಣ, ಈ ಗುಂಪಿನ ಮೂಲಕ ಒಂದು ಮಾದರಿಯಾಗಿ ನಾವೆಲ್ಲ ಎದ್ದು ನಿಲ್ಲೋಣ,
ಗುಂಪಿನಲ್ಲಿ ಕವಿತೆ ಮತ್ತು ಕಥಾ ಸ್ಪರ್ಧೆಯನ್ನು ಮಾಡುವಾಗ, ಈ ಎರಡು ಸ್ಪರ್ಧೆಗಳಿಗೂ ತೀರ್ಪುಗಾರನಾಗಿ ತೀರ್ಪು ಕೊಡುವ ಅವಕಾಶವನ್ನು ನಾಗರಾಜ್ ನನ್ನ ಮೇಲೆ ಹೊರಿಸಿದ್ದರು.
ಅಂದು ತೀರ್ಪು ಕೊಟ್ಟು ಮುಂದಿನ ಬೆಳವಣಿಗೆ ಬಗ್ಗೆ ಶುಭ ಹಾರೈಸಿದ್ದೆ, ಅದು ಇಂದು ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಬಂದಿದೆ ಎಂದರೆ ನನಗೆ ಅತೀವ ಸಂತೋಷವಾದ ಸಂಗತಿಯಾಗಿದೆ,
ಈ ಎಲ್ಲ ನೆನಪುಗಳೊಂದಿಗೆ,,,,,
ತಮ್ಮೆಲ್ಲರಿಗೂ ಸಾಹಿತ್ಯ ಸಂಭ್ರಮ ಮೂಡಿಗೆರೆ ಬಳಗದ ಬೆಳ್ಳಿ ಹಬ್ಬದ ಶುಭಾಶಯಗಳು
ಬರಹ ಕೃಪೆ
ಡಿ.ಎಂ.ಮಂಜುನಾಥಸ್ವಾಮಿ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.