“ಸಾಕ್ಷಿ ತಿಂದು ತೆಗಿದ ಇಲಿಗಳು.”
1 min read





ಗಾಂಜಾ ಸಾಗಾಟದ ಆರೋಪ ಹೊತ್ತಿದ್ದ ಇಬ್ಬರು ಆರೋಪಿಗಳು ಮೂಷಿಕ ಮಹಿಮೆಯಿಂದ ಖುಲಾಸೆಗೊಂಡಿರುವ ವಿಚಿತ್ರ ಸನ್ನಿವೇಶ ತಮಿಳುನಾಡಿನ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ.
2020ರಲ್ಲಿ ಗಾಂಜಾ ಸಾಗಾಟ, ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ನಾಗೇಶ್ವರ ರಾವ್ ಹಾಗೂ ರಾಜಗೋಪಾಲ್ ರನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಚೆನ್ನೈ ಎನ್ಡಿಪಿಎಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.
2020ರಲ್ಲಿ ಚೆನ್ನೈನ ಮರೀನಾ ಪೊಲೀಸ್ ಠಾಣೆ ಪೊಲೀಸರು ಡ್ರಗ್ಸ್ ನಿಗ್ರಹ ಕಾರ್ಯಾಚರಣೆ ಕೈಗೊಂಡಿದ್ದರು. `ಅಪರೇಷನ್ ಡ್ರಗ್ಸ್ ಕಂಟ್ರೋಲ್’ ವೇಳೆ ಮಾದಕ ದ್ರವ್ಯ ಸಾಗಿಸುತ್ತಿದ್ದ ರಾಜಗೋಪಾಲ್ ಹಾಗೂ ನಾಗೇಶ್ವರ್ ರಾವ್ರನ್ನು ಬಂಧಿಸಿ, 22 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದರು.
ತನಿಖೆ ನಡೆಸಿದ್ದ ಪೊಲೀಸರು ಇಬ್ಬರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ದಾಖಲಿಸಿದ್ದರು.ಚಾರ್ಜ್ಶೀಟ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 22 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಉಲ್ಲೇಖ ಮಾಡಿದ್ದರು.
ಗಾಂಜಾ ಮಾಯ, ಇಲಿಗಳ ಲೀಲೆ :

ಎನ್ಡಿಪಿಎಸ್ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆಗೆ ಬರುವಷ್ಟರಲ್ಲಿ ಪೊಲೀಸ್ ಠಾಣೆಯಲ್ಲಿದ್ದ 22 ಕೆ.ಜಿ. ಗಾಂಜಾ ಸಂಪೂರ್ಣ ಮಾಯವಾಗಿತ್ತು. ಅಷ್ಟೊಂದು ಪ್ರಮಾಣದ ಗಾಂಜಾ ಎಲ್ಲಿ ಹೋಯಿತು ಎಂದು ಹುಡುಕಿದಾಗ ಬೆಳಕಿಗೆ ಬಂದಿದ್ದು ಮೂಷಿಕ ಸೇನೆಯ ಮಹಿಮೆ. ಪೊಲೀಸ್ ಠಾಣೆಯ ಸ್ಟೋರ್ನಲ್ಲಿ ಸಂಗ್ರಹಿಸಿದ್ದ 22 ಕೆ.ಜಿ. ಗಾಂಜಾವನ್ನು ಇಲಿಗಳು ತಿಂದು ಮುಗಿಸಿದ್ದವು. ಆರೋಪ ಸಂಬಂಧ ನ್ಯಾಯಾಲಯಕ್ಕೆ ಸಾಕ್ಷ್ಯ ಹಾಜರುಪಡಿಸಬೇಕಿದ್ದ ಪೊಲೀಸರಿಗೆ ಪೀಕಲಾಟ ಶುರುವಾಗಿದೆ. ಬೇರೆ ದಾರಿ ಕಾಣದಾದ ಪೊಲೀಸರು, ಗಾಂಜಾವನ್ನು ಇಲಿಗಳು ತಿಂದು ಹಾಕಿವೆ ಎಂದು ಕೋರ್ಟ್ನಲ್ಲಿ ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ.
ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ 22 ಕೆ.ಜಿ. ಗಾಂಜಾ ಬದಲಿಗೆ ಪೊಲೀಸರು ಕೊನೆಗೆ 50ಗ್ರಾಂ ಗಾಂಜಾ ವಶಪಡಿಸಿಕೊಂಡು ವಿಧಿ ವಿಜ್ಞಾನ ಪ್ರಯೋಗಾಲಯದ ಪರಿಈಕ್ಷೆಗೆ ರವಾನಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಎನ್ಡಿಪಿಎಸ್ ಕೋರ್ಟ್, `ಪೊಲೀಸ್ ಠಾಣೆಯಲ್ಲಿದ್ದ ವಸ್ತುಗಳಿಗೆ ರಕ್ಷಣೆ ಇಲ್ಲವೆಂದರೆ ಹೇಗೆ,ಇದೇನಾ ನೀವು ಮಾಡುವ ಡ್ಯೂಟಿ’ ಎಂದು ತಪರಾಕಿ ಹಾಕಿದೆ.
ಆರೋಪಿಗಳ ವಿರುದ್ಧ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ ಆರೋಪಕ್ಕೆ ಸಾಕ್ಷ್ಯಗಳ ಕೊರತೆಯ ಕಾರಣ ನೀಡಿದ ಕೋರ್ಟ್,ನಾಗೇಶ್ವರ ರಾವ್,ರಾಜಗೋಪಾಲ್ರನ್ನು ಖುಲಾಸೆಗೊಳಿಸಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






