“ವಿದ್ಯಾರ್ಥಿ ನಿಲಯದ ಭ್ರಷ್ಟ ಅಧಿಕಾರಿಗಳ ವರ್ಗಾವಣೆ ಮಾಡಲೇಬೇಕು : ಅಂಗಡಿ ಚಂದ್ರು.”
1 min read
ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಿಯಮ ಉಲ್ಲಂಘನೆ ನಡೆಯುತ್ತಿದೆ. ಇದಕ್ಕೆ ಚಿಕ್ಕಮಗಳೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಬಿ.ವಿ. ಚೈತ್ರಾ ಅವರ ಕುಮ್ಮಕ್ಕು ಇದೆ. ಈ ಬಗ್ಗೆ ಅನೇಕ ಹೋರಾಟ ನಡೆಸಿ, ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ರೀತಿಯ ಕ್ರಮ ಆಗದಿರುವುದು ಹಲವಾರು ಅನುಮಾನಕ್ಕೆ ಕಾರಣವಾಗಿದೆ ಎಂದು ಎಸ್ಡಿಪಿಐ ತಾಲ್ಲೂಕು ಅಧ್ಯಕ್ಷ ಅಂಗಡಿ ಚಂದ್ರು ಆರೋಪಿಸಿದರು.
ಮಂಗಳವಾರ ವಾಹಿನಿಯೊಂದಿಗೆ ಮಾತನಾಡಿದ ಅವರು, ನಿಯಮದ ಪ್ರಕಾರ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರು 3 ವರ್ಷ ಕಳೆದ ಬಳಿಕ ವರ್ಗಾವಣೆಯಾಗಬೇಕಿತ್ತು. ಆದರೆ ಇಲ್ಲಿನ ಪ್ರಾಂಶುಪಾಲರು ಸುಮಾರು 10 ವರ್ಷದಿಂದ ಇಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಒಂದು ಹುದ್ದೆಯಲ್ಲಿ ಇಬ್ಬರು ಕರ್ತವ್ಯ ನಿರ್ವಹಿಸುವಂತಿಲ್ಲವೆಂಬ ನಿಯಮವಿದ್ದರೂ ಇಲ್ಲಿ ಇಬ್ಬರು ದೈಹಿಕ ಶಿಕ್ಷಕರಿದ್ದಾರೆ. ಹೈಕೋರ್ಟ್ ಆದೇಶದಂತೆ ಹೊರ ಸಂಪನ್ಮೂಲದಡಿ ರಮೇಶ್ ಎಂಬುವರು ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಸತೀಶ್ ಎಂಬುವವರು ಅವರು ಬೇರೆ ಕಡೆ ವರ್ಗಾವಣೆಯಾದರೂ ಇಲ್ಲಿ ಸಂಗೀತ, ದೈಹಿಕ ಶಿಕ್ಷಕರ ಹೆಸರಿನಲ್ಲಿ ಹಾಜರಾತಿಗೆ ಸಹಿ ಮಾಡುತ್ತಿದ್ದು, ನಿಲಯ ಪಾಲಕರಾಗಿಯೂ ಒಟ್ಟು 3 ಹುದ್ದೆಯಲ್ಲಿ ಒಬ್ಬರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ದೂರಿದರು. ವಸತಿ ಶಾಲೆಗಳಲ್ಲಿ ಬಹಳಷ್ಟು ಅವ್ಯವಹಾರಗಳು ನಡೆಯುತ್ತಿವೆ, ಇವುಗಳ ಬಗ್ಗೆ ಜಿಲ್ಲಾ ಉಪನಿರ್ದೇಶಕಿ ಚೈತ್ರ ಅವರು ಯಾವುದೇ ಕ್ರಮ ಕೈಗೊಳ್ಳದೇ ಲಂಚ ಪಡೆದು ಎಲ್ಲವನ್ನು ಮುಚ್ಚಿಹಾಕುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ವರ್ಷ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಶಾಲೆ ವಾಲಿಬಾಲ್ ಪಂದ್ಯಾವಳಿಯಲ್ಲಿ 7 ಮತ್ತು 8ನೇ ತರಗತಿ ವಿದ್ಯಾರ್ಥಿಗಳ ಬದಲಾಗಿ 9ಮತ್ತು 10ನೇ ತರಗತಿ ವಿದ್ಯಾರ್ಥಿಗಳನ್ನು ಆಟವಾಡಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೋಸ ಮಾಡಿದ್ದಾರೆ. ಇದಕ್ಕೆ ಮೇಲಾಧಿಕಾರಿ ಚೈತ್ರ ಅವರ ಪ್ರೇರೇಪಣೆ ಇದೆ. ಅಲ್ಲದೇ ಇದೇ ಚೈತ್ರ ಅವರು, ಜಿಲ್ಲೆಯ ವಿದ್ಯಾರ್ಥಿ ನಿಲಯವೊಂದರಲ್ಲಿ ಓರ್ವ ವಿದ್ಯಾರ್ಥಿನಿಗೆ ಹೆರಿಗೆಯಾಗಿದ್ದು, ಅದನ್ನು ಹಣಕ್ಕಾಗಿ ಮುಚ್ಚಿ ಹಾಕಿ ಅಲ್ಲಿಯ ನಿಲಯ ಪಾಲಕರನ್ನು ರಕ್ಷಣೆ ಮಾಡಿದ್ದಾರೆಂಬ ಅನುಮಾನವಿದೆ.
ಈ ಬಗ್ಗೆ ಆಗಿನ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಸಿಇಒ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಇನ್ನಾದರೂ ಈ ಬಗ್ಗೆ ಸಂಬಂಧಿಸಿದ ಮೇಲಾಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದರೆ ಲೋಕಾಯುಕ್ತಕ್ಕೆ ದೂರು ಸಲ್ಲಿಸುವ ಮೂಲಕ ಎಲ್ಲಾ ಪ್ರಗತಿಪರ ಸಂಘಟನೆಯೊಂದಿಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಹೋರಾಟಗಾರ ಸುರೇಶ್ ಹುಲ್ಲೆಮನೆ, ಹೊಯ್ಸಳಲು ಅಂಬೇಡ್ಕರ್ ಸೇವಾ ಸಮಿತಿ ಕಾರ್ಯದರ್ಶಿ ಸುಂದ್ರೇಶ್, ಡಿಎಸ್ಎಸ್ ಮುಖಂಡ ಸಂತೋಷ್, ಚಂದನ್ ಆನೆದಿಬ್ಬ, ಎಸ್ಡಿಪಿಐ ಉಪಾಧ್ಯಕ್ಷ ರಿಜ್ವಾನ್ ಉಪಸ್ಥಿತರಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.











