“ತೇಜಸ್ವಿಯವರ ಪರಿಸರ ಕಾಳಜಿ ಅಪಾರ : ಡಿ.ಎಂ.ಮಂಜುನಾಥ ಸ್ವಾಮಿ.”
1 min read
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು ಕೃತಿ ಸೇರಿದಂತೆ ಅವರ ಬಹುತೇಕ ಕೃತಿಗಳು ಜೀವ ಜಗತ್ತಿನ ಬಗ್ಗೆ ಬೆರಗು ಮೂಡಿಸಿ ಪರಿಸರದೊಂದಿಗೆ ಅನ್ಯೋನ್ಯತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಡಿ.ಎಂ.ಮಂಜುನಾಥಸ್ವಾಮಿ ಹೇಳಿದರು.

ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮತ್ತು ಮೂಡಿಗೆರೆ ಪಟ್ಟಣದ ಡಿಎಸ್ಬಿಜಿ ಕಾಲೇಜಿನ ಸಹಯೋಗದಲ್ಲಿ ಡಿಎಸ್ಬಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ತೇಜಸ್ವಿ ಸಾಹಿತ್ಯ ಯಾನ-ಯುವ ಸ್ಪಂದನ ಕಾರ್ಯಕ್ರಮದಲ್ಲಿ ತೇಜಸ್ವಿ ಅವರ ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು ಕೃತಿಯ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಾಣ ಸಿಗುವ ಕೀಟ, ಪಕ್ಷಿ, ಸಸ್ಯ ಮುಂತಾದ ಜೀವ ಜಗತ್ತಿನ ಕೌತುಕಗಳನ್ನು ತಮ್ಮ ವಿಶಿಷ್ಠ ಬರಹದ ಮೂಲಕ ಕಟ್ಟಿಕೊಡುವ ತೇಜಸ್ವಿ ಅವರು ಕುತೂಹಲ ಮತ್ತು ಬೆರಗಿನಿಂದ ಪರಿಸರವನ್ನು ನೋಡುವುದಕ್ಕೆ ಪ್ರೇರಣೆಯಾಗಿದ್ದಾರೆ, ನಾವ್ಯಾರು ಗಮನಿಸದೇ ಹೋದ ಕೀಟ ಜಗತ್ತಿನ ವಿಸ್ಮಯಕರ ಸಂಗತಿಗಳನ್ನು ಹೇಳುತ್ತಲ್ಲೇ ಕೀಟಪ್ರಪಂಚದ ಅದ್ಬುತ ಜಗತ್ತನ್ನು ನಮ್ಮೆದುರು ತೆರೆದಿಡುತ್ತಾರೆ ಎಂದರು.
ಮಕ್ಕಳು, ಯುವಪೀಳಿಗೆಗೆ ಇಂತಹ ಕೃತಿಗಳು ತಲುಪುವ ಅಗತ್ಯವಿದೆ. ತೇಜಸ್ವಿ ಅವರ ಕೃತಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ತೇಜಸ್ವಿ ಸಾಹಿತ್ಯಯಾನದಂತಹ ಕಾರ್ಯಕ್ರಮಗಳನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಮ್ಮಿಕೊಂಡಿರುವುದು ಅತ್ಯಂತ ಅರ್ಥಪೂರ್ಣ ಎಂದರು.

ಡಿಎಸ್ಬಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ.ಅಪೂರ್ವ ಮಾತನಾಡಿ, ಮೂಡಿಗೆರೆಯ ಜನಜೀವನ, ಪರಿಸರ ತೇಜಸ್ವಿ ಅವರ ಕೃತಿಗಳಲ್ಲಿ ವಿಶಿಷ್ಠವಾಗಿ ದಾಖಲಾಗಿದ್ದು ಸಾಮಾನ್ಯರ ಬದುಕಿನ ವಿಶಿಷ್ಠ ಸಂಗತಿಗಳು ತೇಜಸ್ವಿ ಅವರ ಕೃತಿಗಳಲ್ಲಿ ಕಾಣ ಸಿಗುತ್ತವೆ ಎಂದರು.
ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ರಂಗಸ್ವಾಮಿ ಮಾತನಾಡಿ, ಯುವಪೀಳಿಗೆಗೆ ಪ್ರಕೃತಿ ಮತ್ತು ಪರಿಸರದೊಂದಿಗೆ ಅನ್ಯೋನ್ಯತೆಯನ್ನು ಬೆಳೆಸುವಲ್ಲಿ, ಪರಿಸರ ಜಾಗೃತಿಯ ಬಗ್ಗೆ ಅರಿವನ್ನು ಮೂಡಿಸುವಲ್ಲಿ ತೇಜಸ್ವಿ ಅವರ ಕೃತಿಗಳು ಮಹತ್ವದ ಪಾತ್ರ ವಹಿಸಿವೆ ಎಂದರು.
ಮಾಯಾಲೋಕ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ವಿದ್ಯಾರ್ಥಿಗಳಿಗೆ ಬದುಕಿನ ಬಗೆ ಕಿರುಪುಸ್ತಕ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಡಿಎಸ್ಬಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶಿವರುದ್ರ, ಡಾ.ನಾಗೇಶ್, ಸಾಹಿತಿಗಳಾದ ಹಳೇಕೋಟೆ ರಮೇಶ್, ಜಿಲ್ಲಾ ಕಸಾಪ ಪ್ರಧಾನ ಸಂಚಾಲಕ ಮಗ್ಗಲಮಕ್ಕಿ ಗಣೇಶ್, ಗಾಯಕ ಬಕ್ಕಿ ಮಂಜುನಾಥ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ ಮುಂತಾದವರು ಇದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.










