लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇತ್ತೀಚಿನ ಬಹು ಚರ್ಚಿತ ವಿಷಯ. ಬಲಪಂಥೀಯ ಚಿಂತನೆಯವರು ಅದರ ಜಾರಿಗೆ ಬಹಳ ಕಾತುರರಾಗಿದ್ದಾರೆ‌. ಎಡಪಂಥೀಯ ಮತ್ತು ಪ್ರಗತಿಪರ ಚಿಂತಕರು ಅಷ್ಟೇ ತೀವ್ರವಾಗಿ ಅದನ್ನು ವಿರೋಧಿಸಲು ಸಿದ್ಧರಾಗುತ್ತಿದ್ದಾರೆ. ಮಾನ್ಯ ಪ್ರಧಾನಿಗಳು ಒಂಬತ್ತು ವರ್ಷಗಳ ನಂತರ ಇನ್ನೇನು ಚುನಾವಣೆ ಒಂದು ವರ್ಷ ಇರುವಾಗ ಅದನ್ನು ಜಾರಿ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.

ಮನಸ್ಸುಗಳು ಬಹುತೇಕ ಒಡೆದು ಮಲಿನವಾಗಿರುವ ಸ್ಥಿತಿಯಲ್ಲಿ ಇಂತಹ ಒಂದು ಗಂಭೀರ ವಿಷಯದ ಬಗ್ಗೆ ವಿಮರ್ಶೆ ಮಾಡುವುದು ಕಷ್ಟ. ಸಾಮಾಜಿಕ ಜಾಲತಾಣಗಳು ವ್ಯಕ್ತಿಗತವಾಗಿ ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ಹೇಗೆ ಅವಕಾಶ ಕಲ್ಪಿಸಿದೆಯೋ ಹಾಗೆಯೇ ಅದನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗದ ಸಾಮಾಜಿಕ ವಾತಾವರಣವನ್ನು ಸೃಷ್ಟಿಸಿದೆ. ಪ್ರತಿ ವಾಕ್ಯದ ತಿರುಳನ್ನು ಗಮನಿಸಿ ವ್ಯಕ್ತಿಯನ್ನು ಎಡಕ್ಕೋ ಬಲಕ್ಕೋ ಪ್ರತಿಷ್ಟಾಪಿಸಲು ಬಹಳಷ್ಟು ಜನ ಕಾಯುತ್ತಿರುತ್ತಾರೆ. ಸತ್ಯ ಮತ್ತು ವಾಸ್ತವಕ್ಕಿಂತ ಸೈದ್ಧಾಂತಿಕ ಸ್ಪಷ್ಟತೆಯೇ ಅವರಿಗೆ ಮುಖ್ಯ ಮತ್ತು ಆ ಮೂಲಕ ಸಮಸ್ಯೆಗಳನ್ನು ಜೀವಂತ ಇರಿಸಿ ಅವರು ತಮ್ಮ ಬದುಕು ಕಟ್ಟಿಕೊಳ್ಳಲು ಇಚ್ಛಿಸುತ್ತಾರೆ. ಆದರೂ ನಮ್ಮ ಬುದ್ಧಿಯ ಮಿತಿಯಲ್ಲಿ ಸತ್ಯ ಮತ್ತು ವಾಸ್ತವದ ಹುಡುಕಾಟ ಮಾಡಲು ಆತ್ಮಸಾಕ್ಷಿಯ ಕರೆಗೆ ಓಗೊಡೋಣ…….

ಈ ಸಮಾನ ನಾಗರಿಕ ಸಂಹಿತೆ ಜಾರಿಯಾಗುವುದರಿಂದ ಕೆಲವು ಮೇಲ್ನೋಟದ ಲಾಭಗಳು ಮತ್ತು ದೀರ್ಘಕಾಲದಲ್ಲಿ ಕೆಲವು ದುಷ್ಪರಿಣಾಮಗಳು ಆಗುವುದು ಇವತ್ತಿನ ಪರಿಸ್ಥಿತಿಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

” ಭಿನ್ನತೆಯಲ್ಲು ಏಕತೆ ನಮ್ಮ ವೈಶಿಷ್ಟ್ಯತೆ ” ಎಂದು ಹೇಳುವ ನಾವು ಅದೇ ಸಮಯದಲ್ಲಿ ” ಏಕ್ ಭಾರತ್ ಶ್ರೇಷ್ಠ್ ಭಾರತ್ ” ಎಂದೂ ವಿರುದ್ಧ ಅಭಿಪ್ರಾಯ ಮೆಚ್ಚುತ್ತೇವೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪ್ರತಿ ನೂರು ಕಿಲೋಮೀಟರ್ ಅಂತರಕ್ಕೆ ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಊಟ ವಸ್ತ್ರ ಭಾಷೆ ಎಲ್ಲದರಲ್ಲೂ ವ್ಯತ್ಯಾಸವಾಗುತ್ತಾ ಹೋಗುವ ಭಾರತದಲ್ಲಿ ಇರುವ ವೈವಿಧ್ಯತೆ ವಿಶ್ವದ ಯಾವ ಮೂಲೆಯಲ್ಲೂ ಇಲ್ಲ. ಇಂತಹ ವಾತಾವರಣದಲ್ಲಿ ಏಕರೂಪತೆ ಎಷ್ಟು ಅವಶ್ಯಕ ಮತ್ತು ಪೂರಕ ಎಂದು ಸಮಗ್ರವಾಗಿ ಯೋಚಿಸಬೇಕಾಗಿದೆ.

ಏಕ ರೂಪದ ಕಾನೂನು ಭಾವನಾತ್ಮಕವಾಗಿ ಮತ್ತು ಆತುರವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಜಕೀಯ ನಿರ್ಧಾರ ಮಾಡಿದರೆ ಅದು ವಿಭಜನೆಯ ಬೀಜಕ್ಕೆ ನೀರೆರೆಯುವಂತೆ ಆಗಬಾರದು. ಆದ್ದರಿಂದ ಬಹಳ ಎಚ್ಚರಿಕೆ ಅವಶ್ಯ.

ಅದರಲ್ಲಿ ಅಡಕವಾಗಿರುವ ತಾಂತ್ರಿಕ ಅಂಶಗಳು ಏನೇ ಇರಲಿ, ಅದರ ಪರಿಣಾಮಗಳು ಏನೇ ಆಗಲಿ, ಅದರ ಸಮರ್ಥನೆ ಮತ್ತು ವಿರೋಧದ ವಾದಗಳು ಎಷ್ಟೇ ಬಲವಾಗಿರಲಿ ಈ ಕ್ಷಣದ ಭಾರತದ ಒಟ್ಟು ಹಿತಾಸಕ್ತಿಯ ದೃಷ್ಟಿಯಿಂದ……..

1) ಮೊದಲನೆಯ ಆಯ್ಕೆ :-
ಏಕರೂಪ ನಾಗರಿಕ ಸಂಹಿತೆ ಎಂಬ ಹೊಸ ಕಾನೂನು ತಿದ್ದುಪಡಿ ಮಾಡುವ ಚರ್ಚೆಯನ್ನೇ ಹದಿನೈದು ವರ್ಷಗಳಷ್ಟು ಸಮಯ ಮುಂದೂಡುವುದು. ಏಕೆಂದರೆ ಇವತ್ತಿನ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆ ಅದನ್ನು ಅರಗಿಸಿಕೊಳ್ಳುವಷ್ಟು ಸಾಮರಸ್ಯದಿಂದಿ ಇಲ್ಲ. ಒಂದು ವೇಳೆ ರಾಜಕೀಯ ಲಾಭ ಮತ್ತು ಶಕ್ತಿ ಪ್ರದರ್ಶನವಾಗಿ ಅದನ್ನು ಜಾರಿಗೊಳಿಸಿದರೆ ಪ್ರಗತಿಯ ಹಾದಿಯಲ್ಲಿರುವ ಭಾರತದ ದಿಕ್ಕು ದಾರಿ ತಪ್ಪಬಹುದು. ಅಂತರರಾಷ್ಟ್ರೀಯ ಒತ್ತಡ ಹೆಚ್ಚಾಗಿ ವಿದ್ವಂಸಕ ಕೃತ್ಯಗಳು ನಡೆಯಬಹುದು. ಆದ್ದರಿಂದ ಚರ್ಚೆಯನ್ನೇ ತಾತ್ಕಾಲಿಕವಾಗಿ ಮುಂದೂಡವುದು.

2) ಎರಡನೆಯ ಆಯ್ಕೆ :-
ಒಂದು ವೇಳೆ ಈಗಿನ ಬಹುಮತದ ಕೇಂದ್ರ ಸರ್ಕಾರ ಕಾಯ್ದೆ ಜಾರಿ ಮಾಡಲು ಉತ್ಸುಕರಾಗಿದ್ದರೆ, ಪ್ರಾಮಾಣಿಕವಾಗಿ ದೇಶದ ಬಹುಜನರ ಹಿತಾಸಕ್ತಿ ಮತ್ತು ಪ್ರಗತಿಯನ್ನು ಬಯಸುವುದಾದರೆ ಚುನಾವಣಾ ಆಯೋಗದಲ್ಲಿ ಮಾನ್ಯತೆ ಪಡೆದ ದೇಶದ ಎಲ್ಲಾ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಸಭೆ ಕರೆದು ಅಲ್ಲಿ ಅಧಿಕೃತವಾಗಿ ಮತ್ತು ಪಾರದರ್ಶಕವಾಗಿ ಮೂರನೇ ಎರಡರಷ್ಟು ಬಹುಮತ ಗಳಿಸಿದರೆ ( 50% ಅಲ್ಲ ಮತ್ತು ಸಂಸತ್ ಸದಸ್ಯರ ಬಹುಮತವಲ್ಲ ) ಈ ವಿಷಯವನ್ನು ಮುಂದಿನ ಲೋಕಸಭಾ ಚುನಾವಣೆಯ ಆಶ್ವಾಸನೆಯಲ್ಲಿ ಪ್ರಮುಖವಾಗಿ ಸೇರಿಸಿ ಜಯ ಗಳಿಸಿದರೆ ಆಗ ಪ್ರಜಾಪ್ರಭುತ್ವದ ಮಾದರಿಯಲ್ಲಿ ಈ ಕಾನೂನು ಜಾರಿ ಮಾಡಬಹುದು.

3) ಮೂರನೆಯ ಆಯ್ಕೆ :-
ಭಾರತದ ಸಂವಿಧಾನ ಅತ್ಯಂತ ಸುಭದ್ರ ಮತ್ತು ಅತ್ಯುತ್ತಮ ಆಶಯದ ಗಟ್ಟಿ ಧ್ವನಿ. ಕೆಲವು ಬದಲಾವಣೆಗೂ ಅವಕಾಶವಿದೆ. ಇಂತಹ ಪರಿಸ್ಥಿತಿಯಲ್ಲಿ ಸುಮಾರು 30 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಅಲ್ಪಸಂಖ್ಯಾತರ ಮನಸ್ಸುಗಳಿಗೆ ಘಾಸಿ ಮಾಡಿ ಆ ನಾಗರಿಕ ಸಂಹಿತೆ ಜಾರಿ ಮಾಡುವ ಅವಶ್ಯಕತೆ ಇದೆಯೇ ಎಂಬುದನ್ನು ವಿಮರ್ಶೆಗೆ ಒಳಪಡಿಸಬೇಕು. ಚಿನ್ನದ ಸೂಜಿ ಎಂದು ಕಣ್ಣಿಗೆ ಚುಚ್ಚಿಕೊಳ್ಳಲು ಆಗುತ್ತದೆಯೇ. ಸನಾತನ ಧರ್ಮದ ಅಸಮಾನತೆಯನ್ನೇ ಇನ್ನೂ ಸರಿ ಮಾಡಲು ಸಾಧ್ಯವಾಗಿಲ್ಲ. ಈಗಲೂ ಅತ್ಯಂತ ಅಮಾನವೀಯ ಮರ್ಯಾದೆ ಹತ್ಯೆಗಳು ನಡೆಯತ್ತಲೇ ಇವೆ. ದಲಿತ ವರ್ಗ ಈಗಲೂ ಅತೃಪ್ತಿಯ ಜ್ವಾಲಾಮುಖಿಯಂತೆ ಸ್ಪೋಟಿಸುತ್ತಲೇ ಇದೆ. ದ್ರಾವಿಡ ಚಳವಳಿ ಆಂತರ್ಯದಲ್ಲಿ ಹೊಗೆಯಾಡುತ್ತಲೇ ಇದೆ. ಪೂರ್ವದ ರಾಜ್ಯಗಳು, ಪಂಜಾಬ್ ಪ್ರತ್ಯೇಕವಾದಿಗಳಿಗೆ ಸ್ವಲ್ಪ ಸಹಾನುಭೂತಿ ತೋರಿಸುತ್ತಿದೆ. ಮಣಿಪುರದ ಮೀಸಲಾತಿಯ ಒಂದು ಸಣ್ಣ ಬದಲಾವಣೆ ಹಚ್ಚಿದ ಕಿಚ್ಚು ಅಗ್ನಿಪರ್ವತವಾಗಿ ಸುಡುತ್ತಿದೆ. ಇದಕ್ಕೆ ಪರಿಹಾರ ಎನ್ನುವ ನೆಪದಲ್ಲಿ ಜೇನುಗೂಡಿಗೆ ಕಲ್ಲುಹಾಕಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ಅವಶ್ಯಕತೆ ಇದೆಯೇ ಎಂದು ಎಲ್ಲರೂ ಯೋಚಿಸಬೇಕು.

4) ನಾಲ್ಕನೆಯ ಆಯ್ಕೆ :-
ಸಮಸ್ಯೆ ಇರುವುದು ವಾಸ್ತವವಾಗಿ ಸಂವಿಧಾನದ ಕಾನೂನಿನ ತೊಡಕಿನಲ್ಲಿ ಅಲ್ಲ. ಅದರ ಅನುಷ್ಠಾನದಲ್ಲಿ‌ ಎಂಬುದು ಇಷ್ಟು ವರ್ಷಗಳ ಆಡಳಿತದ ಅನುಭವದಿಂದ ಅರಿವಿಗೆ ಬಂದಿದೆ. ಹೊಸ ಕಾನೂನಿಗಿಂತ ಇರುವ ಕಾನೂನುಗಳನ್ನೇ ಉಪಯೋಗಿಸಿಕೊಂಡು ಸುಭದ್ರ ದೇಶವನ್ನು ಕಟ್ಟಲು ಸಾಧ್ಯವಿಲ್ಲವೇ. ವ್ಯಕ್ತಿ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಮಾನತೆ ಎಲ್ಲವನ್ನೂ ಕಾಪಾಡಿಕೊಂಡು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಠಿಣಗೊಳಿಸಿ ದೇಶವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲವೇ, ಇಲ್ಲಿ ಕೂಡ ಒಂದು ದ್ವಂದ್ವ ನಮ್ಮ ನಮ್ಮ ವಿವೇಚನೆಯನ್ನು ಅವಲಂಬಿಸಿದೆ. ಸಂವಿಧಾನದ 44 ನೆಯ ವಿಧಿ ಎಲ್ಲಾ ನಾಗರಿಕರ ಸಮಾನತೆಯ ‌ಭಾವವನ್ನು ಎತ್ತಿಹಿಡಿದರೆ 25 ನೆಯ ವಿಧಿ ವೈಯಕ್ತಿಕ ನಂಬಿಕೆಯ ಸ್ವಾತಂತ್ರ್ಯವನ್ನು ನೀಡುತ್ತದೆ. ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ಇದನ್ನು ಅರ್ಥೈಸಬಹುದು.

ಈಗಾಗಲೇ ಏಕರೂಪದ ಅಪರಾಧ ಕಾನೂನು ಜಾರಿಯಲ್ಲಿದೆ. ನಾಗರಿಕ ಸಂಹಿತೆ ಕುಟುಂಬ, ಆಸ್ತಿ ಹಂಚಿಕೆ ಮುಂತಾದ ವಿಷಯಗಳಿಗೆ ಸಂಬಂಧಿಸಿದೆ. ಇದು ಸಾಮಾನ್ಯ ಜನರನ್ನು ಅನವಶ್ಯಕವಾಗಿ ತಬ್ಬಿಬ್ಬು ಮಾಡಬಹುದು.

ಕೊನೆಯದಾಗಿ,
ಈ ವಿಷಯವನ್ನು ಎಡ ಬಲಪಂಥವೆಂದಾಗಲಿ, ತಾಂತ್ರಿಕವಾಗಿಯಾಗಲಿ ದಯವಿಟ್ಟು ನೋಡಬೇಡಿ. ಈಗಿನ ಭಾರತದ ಒಟ್ಟು ಹಿತಾಸಕ್ತಿ ಮತ್ತು ಸಮನ್ವಯದ ದೃಷ್ಟಿಯಿಂದ ನೋಡಿ. ಇಲ್ಲದಿದ್ದರೆ ಘರ್ಷಣೆ ನಿಶ್ಚಿತ. ಏಕೆಂದರೆ ಒಂದು ವಿಷಯವನ್ನು ವಕೀಲಿಕೆ ಮೂಲಕ ಯಾವ ರೀತಿ ಬೇಕಾದರೂ ಸಮರ್ಥಿಸಬಹುದು ಅಥವಾ ವಿರೋಧಿಸಬಹುದು. ನಮ್ಮ ದೇಶದಲ್ಲಿ ಶೇಕಡಾ 90% ಗೂ ಹೆಚ್ಚು ಅಪರಾಧಿಗಳು ನ್ಯಾಯಾಲಯದ ಮೂಲಕ ನಿರಪರಾಧಿಗಳಾಗಿ ಹೊರಬರುವುದಿಲ್ಲವೇ ಹಾಗೆ.

ಆದ್ದರಿಂದ ಈ ವಿಷಯವನ್ನು ಸಂಯಮ ಮತ್ತು ಸಮನ್ವಯದ ದೃಷ್ಟಿಯಿಂದ ಹಾಗು ಹೊಂದಾಣಿಕೆಯ ಮನೋಭಾವದಿಂದ ನೋಡಬೇಕು. ಒಂದೇ ದೃಷ್ಟಿಕೋನದ ಹಠ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು…….

ಅಂದ ಹಾಗೆ ಎಲ್ಲರಿಗೂ ಬಕ್ರೀದ್ ಹಬ್ಬದ ಶುಭಾಶಯಗಳು.

ಬರಹ ಕೃಪೆ.
ವಿವೇಕಾನಂದ ಎಚ್.ಕೆ.
9844013068.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *