“ವ್ಯವಹಾರದಲ್ಲಿ ಪಾರದರ್ಶಕತೆ ಮುಖ್ಯ : ಸುಧೀರ್ ಅಬ್ಬುಗುಡಿಗೆ.”
1 min read
ಕಳಸ ಅರಣ್ಯ ಇಲಾಖೆಯು ಮಾವಿನಕೆರೆ ಗ್ರಾಮದ ವ್ಯಾಪ್ತಿಗೆ ಬರುವ ಕಳಸೇಶ್ವರ ಗ್ರಾಮ ಅರಣ್ಯ ಸಮಿತಿಗೆ ಸಂಬಂಧಿಸಿದಂತೆ, ಸಮಿತಿಯು ರಚನೆಯಾದ ವರ್ಷದಿಂದ ಇಂದಿನವರೆಗೂ ನಡೆದಿರುವ ಹಣಕಾಸಿನ ವ್ಯವಹಾರದಲ್ಲಿ, ಹಾಗೂ ಸೂರಮನೆ ಜಲಪಾತ ಮತ್ತು ಕ್ಯಾತನಮಕ್ಕಿ ಗುಡ್ಡದ ಶುಲ್ಕ ಸಂಗ್ರಹಣೆ ಮತ್ತು ನಿರ್ವಹಣೆ ವಿಚಾರದಲ್ಲಿ ಹಲವಾರು ವ್ಯತ್ಯಾಸಗಳು ಕಂಡು ಬಂದಿದ್ದು, ಗ್ರಾಮಾರಣ್ಯ ಅರಣ್ಯ ಸಮಿತಿಯ ವ್ಯವಹಾರದಲ್ಲಿ ಪಾರದರ್ಶಕತೆಯ ಕೊರತೆ ಎದ್ದು ಕಾಣುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಸುಧೀರ್ ಅಬ್ಬುಗುಡಿಗೆ ಆರೋಪಿಸಿದ್ದಾರೆ.

ಸಮಿತಿಯು ಮುಖಾಂತರ ಅರಣ್ಯ ಇಲಾಖೆ ನಡೆಸಿರುವ ಹಣಕಾಸಿನ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿ ದಿನಾಂಕ 2022 ನವಂಬರ್ ತಿಂಗಳಲ್ಲಿ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಲಾಗಿತ್ತು. ಕಳಸ ಅರಣ್ಯ ಇಲಾಖೆಯು ಸಮಂಜಸ ಮಾಹಿತಿ ನೀಡದ ಕಾರಣ ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ ನಂತರ ಅಂತಿಮವಾಗಿ ಅರ್ಜಿ ಸಲ್ಲಿಸಿದ ದಿನಾಂಕದಿಂದ ಐದಾರು ತಿಂಗಳ ನಂತರ 21 ಎಪ್ರಿಲ್ 2023ರಂದು ಧೃಡೀಕೃತ ನಕಲು ಪ್ರತಿಯೊಂದಿಗೆ ಮಾಹಿತಿ ನೀಡಿರುತ್ತಾರೆ.

16.12.2002 ರಂದು ಅರಣ್ಯ ಸಮಿತಿ ರಚನೆಯಾಗಿದ್ದು, ಅಲ್ಲಿಂದ ಕಳೆದ 21 ವರ್ಷಗಳಲ್ಲಿ ಎರಡು ಬಾರಿ ಮಾತ್ರ ಕಾರ್ಯಕಾರಿ ಸಮಿತಿ ಬದಲಾವಣಿಯಾಗಿದ್ದು, 31.08.2004 ರಲ್ಲಿ ಅಸ್ತಿತ್ವಕ್ಕೆ ಬಂದ ಕಾರ್ಯಕಾರಿ ಸಮಿತಿಯೇ ಇಂದಿಗೂ ಕಾರ್ಯನಿರ್ವಹಿಸುತ್ತಿದೆ.
2007 ರಂದು ಸಮಿತಿಯ ಮೂಲಕ ಎರಡು ಹಂತದಲ್ಲಿ ರಮಣ ಫರ್ನೀಚರ್ಸ್ ಶಿವಮೊಗ್ಗ ಇವರಿಗೆ 1,00,571 ರೂ.ಗಳನ್ನ ಪಾವತಿಸಿ ಖರೀದಿಸಲಾದ 337 ಪ್ಲಾಸ್ಟಿಕ್ ಕುರ್ಚಿ ಮತ್ತು 10 ಸ್ಟೀಲ್ ಟೇಬಲ್ ಗಳನ್ನು ಬಾಡಿಗೆ ನೀಡಿ ಅದರಿಂದ ಬಂದ ಹಣವನ್ನು ಸಮಿತಿಯ ಖಾತೆಗೆ ಜಮಾ ಮಾಡಿಕೊಳ್ಳುವ ಬಗ್ಗೆ ಸಭಾ ನಿರ್ಣಯ ಕೈಗೊಂಡು ಕಾರ್ಯರೂಪಕ್ಕೆ ತರಲಾಗಿರುತ್ತದೆ. ಆದರೆ 23.05.2015 ರಂದು TAPCMS ಕಳಸ ಇವರಿಗೆ 10,000 ಬಾಡಿಗೆ ಪಡೆದಿರುವುದೇ ಕೊನೆಯ ವ್ಯವಹಾರವಾಗಿರುತ್ತದೆ. ಅಲ್ಲದೇ ಇದುವರೆಗೂ ಕೇವಲ 29,477 ರೂಗಳು ಮಾತ್ರ ಸಮಿತಿಯ ಖಾತೆಯಲ್ಲಿ ಉಳಿಸಲಾಗಿದೆಯೆಂಬ ಮಾಹಿತಿಯಿದೆ. ಇಲ್ಲಿ ಲಕ್ಷಾಂತರ ರೂ ವಂಚನೆಯಾಗಿರುವ ಬಗ್ಗೆ ಅನುಮಾನವಿದೆ.

2021 ಜನವರಿ ತಿಂಗಳಿಂದ ಅಬ್ಬುಗುಡಿಗೆ ಜಲಪಾತ ವೀಕ್ಷಣೆಗೆ 30 ರೂ. ಮತ್ತು ಕ್ಯಾತನಮಕ್ಕಿ ಗುಡ್ಡಕ್ಕೆ 50 ರೂಗಳ ವೀಕ್ಷಣಾ ಶುಲ್ಕ ಪ್ರತಿ ವ್ಯಕ್ತಿಗೆ ವಿಧಿಸಿ, ನಿರ್ವಹಿಸಿಕೊಂಡು ಬರಲಾಗುತ್ತಿದೆ. ಜಲಪಾತ ವೀಕ್ಷಣೆಗೆ ಬರುವ ವೀಕ್ಷರಿಂದ ಶುಲ್ಕ ವಸೂಲಿಗೆ ಮತ್ತು ಜಲಪಾತದ ಬಳಿ ಪ್ರವಾಸಿಗರ ಸುರಕ್ಷತೆ ಹಾಗೂ ಸ್ವಚ್ಛತೆ ಕಾಪಾಡಲು ಇಬ್ಬರು ಸಿಬ್ಬಂದಿಗಳನ್ನ ನೇಮಿಸಿಕೊಂಡಿರುತ್ತದೆ. ಆದರೆ
ಕಳೆದ ನಾಲ್ಕೈದು ತಿಂಗಳಿಂದ ಕೇವಲ ಒಬ್ಬ ಸಿಬ್ಬಂದಿ ಮಾತ್ರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಲಪಾತದ ಬಳಿಯಿದ್ದು ಸುರಕ್ಷತೆ ಕಾಯ್ದುಕೊಳ್ಳಬೇಕಿದ್ದ ಮತ್ತೊಬ್ಬ ಸಿಬ್ಬಂದಿಯನ್ನ ಇಲಾಖೆ ಇತರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿದೆ. ಆದರೆ ಇಬ್ಬರಿಗೂ ತಲಾ 12,000 ಸಂಬಳ ಮಾತ್ರ ಸಮಿತಿಯಿಂದಲೇ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸಭಾ ನಡಾವಳಿಯಲ್ಲಿ ಕ್ಯಾತನಮಕ್ಕಿ ಟಿಕೆಟ್ ಬುಕ್ (ಕ್ರಮಸಂಖ್ಯೆ 42801ರಿಂದ 44100ರವರೆಗೆ) ಒಟ್ಟು ಹದಿಮೂರು ಬುಕ್ ಪ್ರಿಂಟಿಂಗ್ ಪ್ರೆಸ್ ನವರ ಕಣ್ತಪ್ಪಿನಿಂದ ಆಗಿದೆಯೆಂದು ಮತ್ತು ಅದನ್ನು ಕ್ಯಾನ್ಸಲ್ ಮಾಡಲಾಗಿದೆಯೆಂದು ಪ್ರಸ್ತಾಪಿಸಿಲಾಗಿದೆ. ಆದರೆ 2022 ನವೆಂಬರ್ ತಿಂಗಳಲ್ಲಿ ಜಲಪಾತದ ವೀಕ್ಷಕರಿಗೆ ವಿತರಿಸಿದ ಹಳದಿ ಬಣ್ಣದಲ್ಲಿ ಮುದ್ರಿಸಲಾದ ಸುಮಾರು 1500 ಟಿಕೆಟ್ ಗಳು ಪುನರಾವರ್ತನೆಯಾದ ಬಗ್ಗೆ ಹಾಲಿ ಸದಸ್ಯ ಕಾರ್ಯದರ್ಶಿಗಳು/ಉಪ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದೆ. ಆದರೆ ಸಾರ್ವಜನಿಕರ ಹಣ ವಂಚನೆಯಾಗಿರುವ ಬಗ್ಗೆ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಅಲ್ಲದೇ ನಗದು ವ್ಯವಹಾರಗಳ ಪುಸ್ತಕದಲ್ಲಿ, ವಿತರಿಸಲಾದ ಟಿಕೆಟ್ ಕ್ರಮಸಂಖ್ಯೆ ಮತ್ತು ಸಂಗ್ರಹವಾದ ಹಣದ ವಿವರವನ್ನ 2022ರ ಸೆಪ್ಟೆಂಬರ್ ತಿಂಗಳವರೆಗೂ ಮಾತ್ರ ನಮೂದಿಸಲಾಗಿದೆ. ಆನಂತರ ಟಿಕೆಟ್ ಕ್ರಮಸಂಖ್ಯೆಯ ಬಗ್ಗೆ ವಿವರಗಳಿಲ್ಲ. ಗುಡ್ಡ ಮತ್ತು ಜಲಪಾತದ ಶುಲ್ಕ ಸಂಗ್ರಹಣೆ ಮತ್ತು ನಿರ್ವಹಣೆ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸ್ಥಳೀಯರಿಗೆ ಷರತ್ತುಬದ್ದ ಗುತ್ತಿಗೆ ನೀಡುವ ಬಗ್ಗೆಯೂ ಇಲಾಖೆ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ.
ಟಿಕೆಟ್ ಕೌಂಟರ್ ನಿಂದ ಪಾರ್ಕಿಂಗ್ ತನಕ ಹೋಗಲು ಟಿ.ಟಿ.ಯಂತಹ ವಾಹನಗಳಿಗೆ ಮಳೆಗಾಲದಲ್ಲಿ ರಸ್ತೆ ಸಮಸ್ಯೆಯಾಗುವುದು ನಿಜ. ಆದರೆ ಬೇಸಿಗೆ ಕಾಲದಲ್ಲೂ ಸಹ ಹೋಗದಂತೆ ತಡೆಹಿಡಿಯಲಾಗಿದೆ. ಈ ವಿಚಾರದಲ್ಲಿ ಸಮಿತಿಯು ಸಭಾ ನಿರ್ಣಯ ಸಹ ಮಾಡಿರುವುದಿಲ್ಲ ಮತ್ತು ಸಂಬಂಧಪಟ್ಟ ಇತರೆ ಯಾವುದೇ ಇಲಾಖೆಯಿಂದ ಅನುಮತಿ ಪಡೆದಿರುವ ಬಗ್ಗೆ ಮಾಹಿತಿಯಿಲ್ಲ.
ಈ ಬಗ್ಗೆ ಕಳಸ ಠಾಣಾಧಿಕಾರಿಗಳ ಗಮನ ಸೆಳೆದಾಗ ಅವರು ಹೇಳಿದ್ದೇನೆಂದರೆ, ಟಿ.ಟಿ. ಯಂತಹ ಯಾವುದೇ ವಾಹನಗಳು ಸಂಚರಿಸಲು ಸಾಧ್ಯವಿದ್ದರೆ ಹೋಗಬಹುದು. ಉದ್ದೇಶಪೂರ್ವಕವಾಗಿ ಹೋಗದಂತೆ ಅಡ್ಡಿಪಡಿಸಿ ತಡೆಹಿಡಿದರೆ ಅಂತವರು ದೂರು ಸಲ್ಲಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಲಕ್ಷಾಂತರ ರೂಪಾಯಿ ಆದಾಯವಿದ್ದರೂ ಜಲಪಾತಕ್ಕೆ ಹೋಗುವ ಮಾರ್ಗ ಮಧ್ಯೆ ಸಿಗುವ ಅಬ್ಬುಗುಡಿಗೆ ಹಳ್ಳಕ್ಕೆ ಕಿರುಸೇತುವೆ ಸಹ ಮಾಡಿಸಲು ಇಲಾಖೆ ಇನ್ನೂ ಪ್ರಯತ್ನಿಸುತ್ತಿಲ್ಲ. ಸಂಬಂಧಿಸಿದ ಇಲಾಖೆಯಿಂದ ಅಂದಾಜು ಪಟ್ಟಿ ತಯಾರಿಸದೇ, ಜಲಪಾತದ ಬಳಿ ಮೆಟ್ಟಿಲು ನಿರ್ಮಾಣ, ಪಾರ್ಕಿಂಗ್ ನಿರ್ಮಾಣ ಮಾಡಲಾಗಿದೆ. ಆದರೆ ಇದನ್ನೂ ಸಹ ಪೂರ್ಣ ಪ್ರಮಾಣದಲ್ಲಿ ಮಾಡಿರುವುದಿಲ್ಲ.
ಪ್ರವಾಸಿಗರ ಅನುಭವ ಮತ್ತು ದೂರುಗಳನ್ನು ದಾಖಲಿಸಲು ಪುಸ್ತಕವನ್ನು ನಿರ್ವಹಿಸುತ್ತಿಲ್ಲ.ಅಲ್ಲದೇ ಫೋಟೋಶೂಟ್ ಗೆ ಷರತ್ತುಬದ್ದ ಒಂದು ಸಾವಿರ ರೂಪಾಯಿಗಳ ಅಧಿಕ ಶುಲ್ಕವನ್ನು ಅನಗತ್ಯವಾಗಿ ವಿಧಿಸಲಾಗುತ್ತಿದೆ. ವರ್ಷಕ್ಕೊಮ್ಮೆ ನಡೆಸಬೇಕಾಗಿದ್ದ ಸರ್ವ ಸದಸ್ಯರ ಸಭೆಯನ್ನ ಇದುವರೆಗೂ ಕರೆದಿಲ್ಲ.
ಮಲೆನಾಡು ಭಾಗದಲ್ಲಿ ಕೃಷಿಯನ್ನೆ ನಂಬಿರುವ ಹಲವರು, ಇತ್ತೀಚೆಗೆ ಅಡಿಕೆ ಮರಗಳಿಗೆ ವ್ಯಾಪಕವಾಗಿ ಹರಡುತ್ತಿರುವ ರೋಗ, ತೋಟ ನಿರ್ವಹಣೆ ದುಬಾರಿ ವೆಚ್ಚ, ಪ್ರತಿವರ್ಷ ಅತೀವೃಷ್ಟಿಯಿಂದಾಗಿ ಫಸಲು ಹಾನಿಯಾಗಿ ಆದಾಯ ಕಡಿಮೆಯಾಗಿ ಕೃಷಿಯಿಂದಲೇ ಜೀವನ ನಿರ್ವಹಣೆ ಕಷ್ಟವೆನಿಸಿ, ಇದೀಗ ಹೋಂಸ್ಟೇಯಂತಹ ಪರ್ಯಾಯ ಮಾರ್ಗದತ್ತ ಯೋಚಿಸುತ್ತಿದ್ದಾರೆ.
ಕಳಸದಲ್ಲಿಯೇ ಉದ್ಯೋಗ ಸೃಷ್ಟಿ ಅವಕಾಶವಿರುವಾಗ, ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸುವತ್ತ ಪರಿಸರ ಉಳಿಸುವುದರ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವತ್ತ ಅರಣ್ಯ ಇಲಾಖೆ ಗಮನ ಹರಿಸುವಂತೆ ಕಾಣುತ್ತಿಲ್ಲ.
ಇವೆಲ್ಲದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.








