“ಚಿಕ್ಕಮಗಳೂರು ಜಿಲ್ಲೆಗೆ ಕನಸಾದ ಸಚಿವ ಸ್ಥಾನ.”
1 min read
ರಾಜ್ಯದ ಸಚಿವ ಸಂಪುಟದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೆಗಣನೆ ಮತ್ತೆ ಮುಂದುವರಿದಿದೆ. ಇಂದು ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟಕ್ಕೆ 24 ನೂತನ ಸಚಿವರನ್ನು ಸೇರಿಸಿಕೊಂಡು ಒಟ್ಟು 34 ಸಚಿವರನ್ನೊಳಗೊಂಡ ಪೂರ್ಣಪ್ರಮಾಣದ ಸಂಪುಟ ರಚನೆ ಮಾಡಲಾಗಿದೆ.
ಈ ಬಾರಿಯೂ ಚಿಕ್ಕಮಗಳೂರು ಜಿಲ್ಲೆಗೆ ಒಂದೂ ಮಂತ್ರಿ ಸ್ಥಾನವನ್ನು ನೀಡದೇ ನಿರ್ಲಕ್ಷ್ಯ ತೋರಲಾಗಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತ ಕಾಂಗ್ರೇಸ್ ಪಕ್ಷದ ಶಾಸಕರು ಗೆದ್ದು ಬಂದಿದ್ದರೂ ಸಹ ಜಿಲ್ಲೆಗೆ ಒಂದೇ ಒಂದು ಮಂತ್ರಿ ಸ್ಥಾನವನ್ನು ನೀಡಲಾಗಿಲ್ಲ.
ಈ ಹಿಂದಿನ ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿಯೂ ಜಿಲ್ಲೆಗೆ ಮಂತ್ರಿ ಸ್ಥಾನ ನೀಡುವಾಗ ಕಡೆಗಣನೆ ಮಾಡಲಾಗಿತ್ತು. ಸಿ.ಟಿ.ರವಿ ಮತ್ತು ಡಿ.ಎನ್. ಜೀವರಾಜ್ ಅಲ್ಪ ಅವಧಿಗೆ ಮಂತ್ರಿಗಳಾಗಿದ್ದು ಬಿಟ್ಟರೆ ಜಿಲ್ಲೆ 2004ರಿಂದ ಈಚೆಗೆ ಸತತವಾಗಿ ಸಚಿವ ಸ್ಥಾನದಿಂದ ವಂಚಿತವಾಗುತ್ತಿದೆ.
ಜಿಲ್ಲೆಯಿಂದ ಗೆಲುವು ಪಡೆದಿರುವ ಐವರು ಶಾಸಕರಲ್ಲಿ ಹಿರಿತನದ ಆಧಾರದಲ್ಲಿ ಎರಡನೇ ಬಾರಿಗೆ ಶಾಸಕರಾಗಿರುವ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅಥವಾ ತರೀಕೆರೆ ಶಾಸಕ ಜಿ.ಹೆಚ್. ಶ್ರೀನಿವಾಸ್ ಈ ಇಬ್ಬರಲ್ಲಿ ಒಬ್ಬರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಜಿಲ್ಲೆಯ ಯಾರೊಬ್ಬರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದೇ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ಅನುಸರಿಸಲಾಗಿದೆ. ಈ ಬಗ್ಗೆ ಯಾವೊಬ್ಬರು ಧ್ವನಿ ಎತ್ತದೇ ಇರುವುದು ಆಶ್ಚರ್ಯಕರವಾಗಿದೆ.
1999ರಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೇಸ್ ಸರ್ಕಾರದಲ್ಲಿ ಜಿಲ್ಲೆಯ ಮೂವರು ಸಚಿವರಾಗಿದ್ದರು. ಡಿ.ಬಿ.ಚಂದ್ರೇಗೌಡ, ಶ್ರೀಮತಿ ಮೋಟಮ್ಮ,ಸಗೀರ್ ಅಹಮದ್ ಸಂಪುಟ ದರ್ಜೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಅಲ್ಲಿಂದೀಚೆಗೆ ಜಿಲ್ಲೆ ಮಂತ್ರಿ ಸ್ಥಾನದಿಂದ ವಂಚಿತವಾಗುತ್ತಾ ಸಾಗಿದೆ. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಬೇರೆ ಜಿಲ್ಲೆಯವರು ನೇಮಕವಾಗುತ್ತಿರುವುದು ವಿಪರ್ಯಾಸವಾಗಿದೆ.
ಒಟ್ಟಾರೆ ಕಳೆದ ಇಪ್ಪತ್ತು ವರ್ಷಗಳಿಂದ ಎಲ್ಲಾ ಪಕ್ಷಗಳು ಸಚಿವ ಸಂಪುಟ ರಚನೆಯಲ್ಲಿ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡುತ್ತಿದ್ದು, ರಾಜಕೀಯ ಪಕ್ಷಗಳ ಇಂತಹ ನಿಲುವಿನಿಂದ ಜಿಲ್ಲೆಯ ಅಭಿವೃದಿಗೆ ಹಿನ್ನಡೆಯಾಗುತ್ತದೆ. ಇದನ್ನು ಜಿಲ್ಲೆಯ ಶಾಸಕರು ಮತ್ತು ರಾಜಕೀಯ ಮುಖಂಡರು ಗಟ್ಟಿಧ್ವನಿಯಲ್ಲಿ ಪ್ರತಿರೋಧಿಸುವ ಅಗತ್ಯವಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.







