“ಉದ್ಘಾಟನೆ ಬರಲು ನಿರಾಕರಿಸಿದ 19 ರಾಜಕೀಯ ಪಕ್ಷಗಳು.”
1 min read
ಒಂದಲ್ಲ, ಎರಡಲ್ಲ, ಒಟ್ಟು 19 ರಾಜಕೀಯ ಪಕ್ಷಗಳು ನೂತನ ಸಂಸತ್ ಭವನದ ಉದ್ಘಾಟನೆಯಿಂದ ದೂರ ಸರಿಯುವುದಾಗಿ ಘೋಷಿಸಿವೆ. ಇದೇ ತಿಂಗಳ 28ರಂದು ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಮುಹೂರ್ತ ಸಮೀಪಿಸುತ್ತಿದ್ದಂತೆ, ಈ ಕಾರ್ಯಕ್ರಮವನ್ನು ಬಹಿಷ್ಕಾರಿಸುವ ಪಕ್ಷಗಳ ಸಂಖ್ಯೆ ಹೆಚ್ಚುತ್ತಿದೆ. ಇದುವರೆಗೆ 19 ಪಕ್ಷಗಳ ಪ್ರತಿನಿಧಿಗಳು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಮೋದಿ ಮಾಡುವ ಸಮಾರಂಭೋತ್ಸವಕ್ಕೆ ಬರುವುದಿಲ್ಲ ಎನ್ನುತ್ತಿದ್ದಾರೆ. ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ತೃಣಮೂಲ ಕಾಂಗ್ರೆಸ್, ಡಿಎಂಕೆ, ಆರ್ಜೆಡಿ, ಜೆಡಿಯು, ಎನ್ಸಿಪಿ, ಉದ್ಧವ್ ಸೇನೆ, ಕಮ್ಯುನಿಸ್ಟ್ ಪಕ್ಷಗಳು ಸೇರಿದಂತೆ ಎಲ್ಲಾ 19 ಪಕ್ಷಗಳು ಜಂಟಿ ಪತ್ರದಲ್ಲಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.
ಸಂಸತ್ ಭವನವನ್ನು ತಮ್ಮ ಕೈಯಿಂದಲೇ ಆರಂಭಿಸುವ ಪ್ರಧಾನಿ ಮೋದಿ ಅವರ ಆಶಯಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಈ ಕಟ್ಟಡವನ್ನು ರಾಷ್ಟ್ರಪತಿಯವರೊಂದಿಗೆ ಆರಂಭಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಅಷ್ಟೇ ಅಲ್ಲದೇ, ಸಾವರ್ಕರ್ ಜನ್ಮ ದಿನಾಚರಣೆಯ ದಿನದಂದು ಸಂಸತ್ ಭವನ ಉದ್ಘಾಟನೆ ಮಾಡಿರುವುದು ಯಾವುದರ ಸಂಕೇತ ಎಂಬ ಟೀಕೆಗಳು ಕೇಳಿ ಬರುತ್ತಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬಿಟ್ಟು ತಾವೇ ನೂತನ ಸಂಸತ್ ಭವನವನ್ನು ಉದ್ಘಾಟಿಸುವ ಮೋದಿಯವರ ನಿರ್ಧಾರ ಪ್ರಜಾಪ್ರಭುತ್ವಕ್ಕೆ ಮಾಡಿದ ಘೋರ ಅವಮಾನ ಎಂದು ಪ್ರತಿಪಕ್ಷಗಳು ಹೇಳಿವೆ.
ಈ ಕ್ರಮವು ರಾಷ್ಟ್ರಪತಿ ಸರ್ವೋಚ್ಚ ಪದವಿಯನ್ನು, ಸಂವಿಧಾನದ ಸ್ಫೂರ್ತಿಗೆ ವಿರುದ್ಧವಾಗಿದೆ. ರಾಷ್ಟ್ರಪತಿಯಾಗಿ ಆಯ್ಕೆಯಾದ ಮೊದಲ ಆದಿವಾಸಿ ಮಹಿಳೆಯ ಗೌರವವನ್ನು ದಮನಿಸುವುದೇ ಆಗಿದೆ ಎಂದು ಪ್ರತಿಪಕ್ಷಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿವೆ.
ಪ್ರತಿಪಕ್ಷಗಳ ಜಂಟಿ ಹೇಳಿಕೆಗೆ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ. ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭಕ್ಕೆ ಎಲ್ಲಾ ಪಕ್ಷಗಳನ್ನು ಆಹ್ವಾನಿಸಲಾಗಿದೆ ಎಂದರು. ಉಭಯ ಸದನಗಳ ಸಂಸದರು, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಿಎಂಗಳು ಮತ್ತು ಇತರೆ ನಾಯಕರಿಗೆ ಭೌತಿಕವಾಗಿ ಆಹ್ವಾನಗಳನ್ನು ಕಳುಹಿಸಲಾಗಿದೆ. ಮತ್ತು ಡಿಜಿಟಲ್ ರೂಪದಲ್ಲಿಯೂ ಸಹ ಕಳುಹಿಸಲಾಗಿದೆ ಎಂದರು.
ಸಂಸತ್ತಿನ ಉದ್ಘಾಟನೆಗೆ ಬರುವುದು ಅಥವಾ ಬರದೇ ಇರುವುದು ಅವರ ವಿವೇಚನೆಗೆ ಬಿಟ್ಟ ವಿಚಾರ. ಕಾರ್ಯಕ್ರಮವನ್ನು ಬಹಿಷ್ಕರಿಸುತ್ತಿರುವ ವಿರೋಧ ಪಕ್ಷಗಳು ಮರುಪರಿಶೀಲಿಸಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸಲಹೆ ನೀಡಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.






