लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.


ನಿಮ್ಮ ಮಕ್ಕಳಿಗೆ ತೋರಿಸಲೇಬೇಕಾದ ಸಿನಿಮಾ, ಯಾಕೆಂದರೆ ತೇಜಸ್ವಿಯವರೇ ಕೈಬೀಸಿ ಕರೆಯುತ್ತಿದ್ದಾರೆ

ಖಂಡಿತ, ಇದು ಸಿನಿಮಾ ವಿಮರ್ಶೆಯ ಬರಹವಲ್ಲ. ಸಿನಿಮಾದಂತಹ ಜನಪ್ರಿಯ ಮಾಧ್ಯಮವೊಂದರ ಕುರಿತು ವಿಮರ್ಶೆ ಬರೆಯುವ ಧಾಟಿಯೂ ಇದಲ್ಲ. ನನಗಿದು ಚೆನ್ನಾಗಿ ಗೊತ್ತು. ಆದರೆ ಡೇರ್‌ಡೆವಿಲ್ ಮುಸ್ತಾಫ ಸಿನಿಮಾ ನೋಡಿದ ನಂತರ ನನ್ನನ್ನು ಕಾಡಿದ ತೇಜಸ್ವಿಯವರ ಇವತ್ತಿನ ಅನುಪಸ್ಥಿತಿಯ ಕೊರಗನ್ನು ಇಲ್ಲಿ ಹಂಚಿಕೊಂಡಿದ್ದೇನಷ್ಟೆ…..

ನಾವೀಗ ಉಸಿರಾಡುತ್ತಿರುವ ಗಾಳಿಯಲ್ಲಿ ದ್ವೇಷವೇ ಅಬ್ಬರಿಸುತ್ತಿದೆ. ನನ್ನ ಗೆಳೆಯನನ್ನೇ ನಾನು ಗುಮಾನಿಯಿಂದ ನೋಡುವಂತಾಗಿದೆ, ಯಾಕೆಂದರೆ ಅವನು ಮುಸಲ್ಮಾನ. ಅವನೂ ನನ್ನತ್ತ ಆತಂಕದ ಕಣ್ಣಾಯಿಸುತ್ತಾ ಕೂತಿದ್ದಾನೆ, ಯಾಕೆಂದರೆ ನಾನು ಹಿಂದೂ. ಮತ್ತು ಯೋಗೋ ಫೋನ್‌ನಲ್ಲಿರುವ smscasino ಇನ್ನೂ ಹೆಚ್ಚಿನ ಅನುಮಾನಗಳನ್ನು ನೀಡಿತು. ಉಪ್ಪಿನ ಪುಡಿ ಉದುರಿಸಿದ ಸೀಳು ಮಾವಿನಕಾಯಿಯ ತುಂಡನ್ನು, ಗಬಕ್ಕನೆ ಅವನ ಕೈಯಿಂದ ಕಿತ್ತು ನನ್ನ ಬಾಯಿಗಿಟ್ಟು, ಮುಸಿಮುಸಿ ನಗುತ್ತಿದ್ದ ಕಾಲದಲ್ಲಿ ನನಗೆ ಕಾಣಿಸದ ಅವನ ಧರ್ಮದ ಎಂಜಲನ್ನು, ಇವತ್ತು ಅವನು ಮಾತಾಡುವಾಗ ತುಟಿಯ ಅಂಚಿನಿಂದ ಚಿಮ್ಮುವ ಪದಗಳಲ್ಲಿ ಹುಡುಕಾಡಲಾರಂಭಿಸಿದ್ದೇನೆ. ಲೆಕ್ಕಾಚಾರದಲ್ಲಿ ಬದುಕುವ ಧಾವಂತದಲ್ಲಿ ಸಹಜವಾಗಿ ಬದುಕುವುದನ್ನೇ ಮರೆತಿದ್ದೇವೆ. ಅಂಟಿಕೊಂಡು ಕೂರುತ್ತಿದ್ದ ದೇಹಗಳ ನಡುವೆ ಧರ್ಮದ ಗೋಡೆಗಳನ್ನು ಎಬ್ಬಿಸಿಕೊಂಡು ಕೊರಗುತ್ತಿದ್ದೇವೆ. ಹಾಗೆ ಕೊರಗುವುದನ್ನೇ ಧರ್ಮ ಪಾಲನೆ ಎಂದು ಭ್ರಮಿಸಿದ್ದೇವೆ. ಪರಸ್ಪರ ವಿಭಜಿಸಿಕೊಳ್ಳುವುದನ್ನೇ ಒಗ್ಗೂಡುವಿಕೆಯೆಂದು ಪರಿಗಣಿಸಿ, ಸುಳ್ಳಿನ ಮಾರುಕಟ್ಟೆಯಲ್ಲಿ ಸತ್ಯದ ಸರಕುಗಳತ್ತ ಸಾರಾಸಗಟು ಬೆನ್ನು ತಿರುಗಿಸಿದ್ದೇವೆ.

ಇಷ್ಟೆಲ್ಲಾ ಗೊಂದಲಗಳ ನಡುವೆ ಬದುಕುತ್ತಿರುವ ನಾವು, ’ಹೇಗೆ ಬದುಕಬೇಕೆಂದು?’ ನಮ್ಮ ಮಕ್ಕಳಿಗೆ ಬೋಧಿಸುವ ಅರ್ಹತೆಯನ್ನೂ ಕಳೆದುಕೊಂಡಿದ್ದೇವೆ. ಅಷ್ಟಕ್ಕೂ ನಮ್ಮ ಮಕ್ಕಳು ನಮ್ಮ ಬೋಧನೆಗಿಂತ ಹೆಚ್ಚಾಗಿ ನಾವು ಹೇಗೆ ಬದುಕುತ್ತೇವೆ ಎಂಬುದನ್ನು ನೋಡಿ ಕಲಿಯುತ್ತಾರೆ. ಅಂದರೆ ನಮ್ಮ ಬದುಕೇ ನಮ್ಮ ಮಕ್ಕಳಿಗೆ ಬಹುದೊಡ್ಡ ಪಾಠ. ಆದರೆ, ನಮ್ಮ ಬದುಕೇ ನಮಗೆ ದೊಡ್ಡ ಗೊಂದಲದ ಗೂಡು!

ಇದನ್ನೆಲ್ಲ ನೋಡುವಾಗ ಯಾವ ರೂಪದಲ್ಲಾದರು ಸರಿಯೇ, ತೇಜಸ್ವಿ, ಲಂಕೇಶ್ ಥರಹದ ವ್ಯಕ್ತಿತ್ವಗಳು ಮತ್ತೆ ಉಸಿರಾಡಬಾರದೆ ಎನಿಸುತ್ತಿರುತ್ತೆ.

ಅವರೆಲ್ಲ ಬಹುದೊಡ್ಡ ಚಿಂತಕರಾಗಿದ್ದರು ಅನ್ನೋದಕ್ಕಿಂತ ಬದುಕನ್ನು ಸಹಜವಾಗಿ ಬದುಕುವುದು ಹೇಗೆ ಅನ್ನೋದನ್ನು ಅರ್ಥ ಮಾಡಿಕೊಂಡಿದ್ದರು ಅನ್ನೋದೆ ಅವರ ಹೆಚ್ಚುಗಾರಿಕೆ. ನಾವು ಯಾವುದೇ ವಿಷಯವನ್ನಾದರೂ, ಆಳವಾಗಿ ಅರ್ಥಮಾಡಿಕೊಳ್ಳಲು ಹಂಬಲಿಸುತ್ತೇವೆ. ಹಾಗೆ ಆಳಕ್ಕೆ ಇಳಿಯುತ್ತಾ, ಇಳಿಯುತ್ತಾ, ವಿಶಾಲಗೊಳ್ಳುವುದನ್ನೇ ಮರೆತು ತುಂಬಾ ಕಿರಿದಾಗಿಬಿಡುತ್ತಿದ್ದೇವೆ, ಇಕ್ಕಟ್ಟಿನ ನಡುವೆ ಬಂಧಿಯಾಗುತ್ತಿದ್ದೇವೆ. ಅವರು ಆಳಕ್ಕಿಂತ ವೈಶಾಲ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟವರು. ವಿಶಾಲವಾಗುವುದೆಂದರೆ, ಅಕ್ಕಪಕ್ಕದವರನ್ನು ಒಳಗೊಳ್ಳುವುದು ಎಂದರ್ಥ. ಒಳಗೊಳ್ಳುವುದು ಅಂದರೆ ಏನು? ನಿಮ್ಮ ಸ್ನೇಹಿತರ ಸಂಖ್ಯೆಯನ್ನು ಹಿಗ್ಗಿಸಿಕೊಳ್ಳುವುದು ಎಂದರ್ಥವಲ್ಲ. ಹಾಗೆ ಮಾಡಲು ಮುಂದಾದರೆ ನಾವು ನಮ್ಮ ನಿಷ್ಠುರತೆಯನ್ನು ಕಳೆದುಕೊಂಡು, ನಮಗಿರುವ ವ್ಯಕ್ತಿತ್ವವನ್ನೆ ಠೊಳ್ಳಾಗಿಸಿಕೊಳ್ಳಬೇಕಾಗುತ್ತೆ. ನಿಜ ಹೇಳಬೇಕೆಂದರೆ, ತೇಜಸ್ವಿಯಾಗಲಿ ಲಂಕೇಶರಾಗಲಿ ಸೀಮಿತ ಸಂಖ್ಯೆಯ ಸ್ನೇಹಿತರ ವಲಯದವರು. ಸ್ನೇಹಿತರಿಗಿಂತ ಟೀಕಾಕಾರರನ್ನೇ ದೊಡ್ಡ ಸಂಖ್ಯೆಯಲ್ಲಿ ಹೊಂದಿದ್ದವರು. ತೇಜಸ್ವಿಯವರಂತೂ ಸಭೆ, ಸಮಾರಂಭಗಳು, ವೇದಿಕೆ, ಭಾಷಣಗಳಿಂದ ಕಿರಿಕಿರಿ ಅನುಭವಿಸಿ ಮೂಡಿಗೆರೆಯ ಕಾಡು, ತೊರೆ, ಪಶು, ಪಕ್ಷಿ, ಕ್ರಿಮಿಗಳ ನಡುವೆಯೇ ಕಳೆದುಹೋದವರು. ಆದರೂ ಅವರು ವಿಶಾಲವಾಗುತ್ತಾ ಬಂದರು; ತಮ್ಮ ಚಿಂತನೆಗಳನ್ನು ವಿಶಾಲಗೊಳಿಸುವುದರ ಮೂಲಕ, ಬದುಕನ್ನು ಸಹಜವಾಗಿಸುವುದರ ಮೂಲಕ, ಮುಖ್ಯವಾಗಿ ‘ಅಮುಖ್ಯರೆನಿಸಿದವರ ನೋವು ನಲಿವಿನ ದನಿಗಳಿಗೂ ಪ್ರಾಮುಖ್ಯ ಕೊಟ್ಟು ತಮ್ಮ ಕಿವಿಯಾನಿಸುವ ಮೂಲಕ! ತೇಜಸ್ವಿಯವರ ಪಟ್ಟಿಯಲ್ಲಂತೂ ಆ ‘ಅಮುಖ್ಯರ ಸಾಲಿನಲ್ಲಿ ಮನುಷ್ಯರಷ್ಟೇ ಅಲ್ಲ, ಚಿಕ್ಕ ಇರುವೆ, ಬಣ್ಣಬಣ್ಣದ ಚಿಟ್ಟೆ, ಸಿಹಿ ಕೂಡಿಡುವ ಜೇನ್ನೊಣ, ಕಪ್ಪೆ, ಮೀನು, ಮುಂಗಸಿಯಂತಹ ಜೀವಜಂತುಗಳೂ ಸ್ಥಾನ ಪಡೆದಿದ್ದವು.

ಬದುಕನ್ನು ನಿಜವಾಗಿ ಬದುಕುವುದೆಂದರೆ, ಹೀಗೆ ಎಲ್ಲರನ್ನೂ ಎಲ್ಲವನ್ನೂ ಒಳಗೊಳ್ಳುತ್ತಾ ಬದುಕುವುದು. ‘ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ಮಾತಿನ ಸಾರದಂತೆ.

ಹೀಗೆ ಬದುಕಿಗೆ ಒಂದು ಮಾಡೆಲ್ ಆಗಬೇಕಾದಂತವರ ಅನುಪಸ್ಥಿತಿಯಿಂದ ಬಳಲುತ್ತಿರುವ ಇವತ್ತಿನ ಪೀಳಿಗೆ ದ್ವೇಷವನ್ನು ಉಸಿರಾಡತೊಡಗಿದೆ. ಅಥವಾ ಉಸಿರಾಡುವಂತೆ ಹುನ್ನಾರಗಳನ್ನು ಹೆಣೆಯಲಾಗಿದೆ. ಯುವ ಸಮೂಹದ ಮೇಲೆ ಅಪಾರ ಭರವಸೆ ಹೊಂದಿದ್ದಾಗ್ಯೂ ’ಜಾತಿ-ಧರ್ಮ ಅಂತ ಹೊಡೆದಾಡುವ ಇವರಿಗೆಲ್ಲ ಭವಿಷ್ಯ ಇದೆಯಾ?’ ಎಂದು ತಮ್ಮದೇ ಸಹಜ ಮಾತಿನ ಮೂಲಕ ನಮ್ಮೊಳಗೂ ಜಾಗೃತ ಪ್ರಜ್ಞೆಯನ್ನು ಹುಟ್ಟುಹಾಕಬಲ್ಲವರಾಗಿದ್ದ ತೇಜಸ್ವಿಯವರಂಹ ದಿಕ್ಸೂಚಿಗಳು ಮತ್ತೆ ಎದ್ದು ಬರಬೇಕಲ್ಲಾ ಎಂದು ನಾನು ಹಂಬಲಿಸುತ್ತಿದ್ದೆ.

ಅದಕ್ಕೆ ತಕ್ಕಂತೆ ಪೂರ್ಣಚಂದ್ರ ತೇಜಸ್ವಿಯವರು ಒಂದು ಸರಿಯಾದ ಕಾಲದಲ್ಲಿ ಮತ್ತೆ ಸಟ್ಟನೆ ಉಸಿರಾಡಿದ್ದಾರೆ. ಡೇರ್‌ಡೆವಿಲ್ ಮುಸ್ತಫಾ ಎಂಬ ಸಿನಿಮಾದ ಮೂಲಕ. ಬಹಳ ಹಿಂದೆ ಅವರೇ ಬರೆದಿದ್ದ ಒಂದು ಸಣ್ಣ ಕತೆಯ ಎಳೆಯನ್ನಿಟ್ಟುಕೊಂಡು ನಿರ್ದೇಶಕ ಶಶಾಂಕ್ ಸೋಗಲ್ ಅವರು ಈ ಸಿನಿಮಾವನ್ನು ತುಂಬಾ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.

ತುಂಬಾ ವಿಶಾಲವಾದ ಜಿಜ್ಞಾಸೆಯನ್ನು ತೀರಾ ಉಡಾಫೆಯಂತಹ ಪಾತ್ರಗಳ ಮೂಲಕ ಹೇಳಿಸುತ್ತಾ ಹೋಗುವುದು ತೇಜಸ್ವಿಯವರ ಜಾಯಮಾನ. ಗಂಭೀರತೆಗಿಂತ ಹೆಚ್ಚಾಗಿ ಲವಲವಿಕೆ ಅವರ ಕಥನಶೈಲಿ ವೈಶಿಷ್ಟ್ಯ. ಕೇವಲ ಒಂದು ಕಥೆಯನ್ನಷ್ಟೇ ಅಲ್ಲ, ಅವರ ಒಟ್ಟಾರೆ ಬದುಕಿನ ರೀತಿ, ಗ್ರಹಿಸುವ ಪರಿ, ವಿವರಿಸುವ ವ್ಯಂಗ್ಯದ ಧಾಟಿಯನ್ನೇ ಒಂದು ಸಿನಿಮಾವಾಗಿ ಹಿಗ್ಗಿಸುವ ಸವಾಲು ನಿರ್ದೇಶಕರ ಮುಂದಿತ್ತು. ಆ ನಿಟ್ಟಿನಲ್ಲಿ ನೋಡಿದಾಗ ತೇಜಸ್ವಿಯವರ ಲವಲವಿಕೆ ಮತ್ತು ಕಾಳಜಿಯನ್ನು ಕಾಯ್ದುಕೊಂಡು ಚಿತ್ರಕಥೆಯನ್ನು ಕಟ್ಟುವಲ್ಲಿ ರಾಘವೇಂದ್ರ ಮಾಯಕೊಂಡ, ಅನಂತ ಶಾಂಡ್ರೇಯ, ಹಾಗೂ ಸ್ವತಃ ನಿರ್ದೇಶಕರಾದ ಶಶಾಂಕ್ ಮಾಡಿರುವ ಕುಸುರಿ ಕೆಲಸ ಚಿತ್ರಪ್ರೇಮಿಗಳನ್ನಷ್ಟೇ ಅಲ್ಲ, ತೇಜಸ್ವಿಯವರ ಗಾಢ ಅಭಿಮಾನಿಗಳನ್ನೂ ತನ್ನತ್ತ ಸೆಳೆಯುತ್ತದೆ.

‘ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ ತರಹದ ಅಪೂರ್ಣ ಸತ್ಯದ ಅರೆಬೆಂದ ಸಿನಿಮಾಗಳ ಮೂಲಕ ಯುವಜನರಲ್ಲಿ ಪರಸ್ಪರ ದ್ವೇಷ ಬಿತ್ತುವ, ವೈಮನಸ್ಸುಗಳನ್ನು ಕಟೆದು ನಿಲ್ಲಿಸುವ ರಾಜಕೀಯ ಹುನ್ನಾರಗಳು ನಡೆಯುತ್ತಿರುವ ಈ ಕಾಲಮಾನದಲ್ಲಿ ‘ಡೇರ್‌ಡೆವಿಲ್ ಮುಸ್ತಾಫ’ ಸಿನಿಮಾವು ಅಂತವುಗಳಿಗೆಲ್ಲ ‘ಆಂಟಿಡೋಟ್ನಂತೆ ಮೂಡಿಬಂದಿದೆ. ಕಥೆಯಲ್ಲಿ ಪ್ರಸ್ತಾಪವಾಗುವ ಅಬಚೂರು ಪಿಯು ಕಾಲೇಜಿನ
ರಾಮಾನುಜ ಅಯ್ಯಂಗಾರಿ ಮತ್ತವನ ಮಿತ್ರಮಂಡಳಿಯಾಗಲಿ, ದಿಟ್ಟವಾಗಿ ಎದುರುನಿಲ್ಲುವ ಜಮಾಲ್ ಅಬ್ದುಲ್ ಮುಸ್ತಾಫ ಹುಸೇನ್ ಪಾತ್ರವಾಗಲಿ, ಕೇವಲ ಕಥೆಯ ಪಾತ್ರಗಳಷ್ಟೇ ಆಗದೆ, ನಮ್ಮೊಳಗೇ ಹುಟ್ಟಿಸಾಯುವ ದ್ವಂದ್ವಗಳೂ ಹೌದೆನಿಸುತ್ತವೆ. ತೇಜಸ್ವಿಯವರಿಗೆ ಹೀಗೆ ಸಮಾಜವನ್ನು ಸೀಳಿ ನೋಡುವ ವಿಶೇಷತೆ ಇತ್ತು. ಹಾಗೆ ನೋಡಿದ್ದನ್ನೇ, ಓದುಗ ಆಸಕ್ತಿಯಿಂದ ಓದುವಂತೆ ಮಾಡಬಲ್ಲ ಕಥೆಯಾಗಿಸುವ ಕುಶಲತೆಯೂ ಇತ್ತು. ಆ ವಿಶೇಷತೆ ಮತ್ತು ಕುಶಲತೆಗೆ ಎಲ್ಲೂ ಮುಕ್ಕಾಗದಂತೆ ಸಿನಿಮಾ ಮೂಡಿಬಂದಿದೆ.

ನೋಡಲೇಬೇಕಾದ ಸಿನಿಮಾ ಇದು. ಆದರೆ ಯಾವಯಾವ ಕಾರಣಕ್ಕೆ ಅಂತ ಪಟ್ಟಿ ಮಾಡುವುದು ಕಷ್ಟ. ಒಂದು ಮಾತಂತೂ ಸತ್ಯ. ನಿಮ್ಮ ಮನೆಯಲ್ಲಿ ಬೆಳೆಯುವ ಅಥವಾ ವಯಸ್ಸಿಗೆ ಬಂದ ಮಕ್ಕಳಿದ್ದರೆ, ಖಂಡಿತ ಅವರನ್ನು ನಿಮ್ಮ ಜೊತೆಗೆ ಥಿಯೇಟರಿಗೆ ಕರೆದೊಯ್ದು ಈ ಸಿನಿಮಾವನ್ನು ತೋರಿಸಲೇಬೇಕು. ಪ್ರಕ್ಷುಬ್ಧತೆಯ ವಾತಾವರಣದಲ್ಲಿ ಸಮುದಾಯಗಳನ್ನು ನಂಜಿನ ಕಣ್ಣಿಂದ ಕಾಣುತ್ತಿರುವ ಅವರ ಮನಸ್ಸು ಕೊಂಚವಾದರೂ ತಿಳಿಯಾಗಬೇಕೆಂದರೆ, ಈ ಸಿನಿಮಾ ಪರಿಣಾಮಕಾರಿ ಮದ್ದು. ನಾನಾಗಲೇ ಈ ಕೆಲಸ ಮಾಡಿದ್ದೇನೆ. ನನ್ನ ಮಕ್ಕಳೊಟ್ಟಿಗೆ ಕೂತು ಸಿನಿಮಾ ನೋಡಿಬಂದಿದ್ದೇನೆ. ಥಿಯೇಟರಿನಿಂದ ಹೊರಬರುವಾಗ, ಮಕ್ಕಳ ಮನಸ್ಸನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಲು ಒಬ್ಬ ತಂದೆಯಾಗಿ ಮಾಡಬೇಕಾದ ಕರ್ತವ್ಯವೊಂದನ್ನು ನಿಭಾಯಿಸಿದ ತೃಪ್ತಿ ನನ್ನನ್ನು ಆವರಿಸಿತ್ತು.

ತೇಜಸ್ವಿಯವರ ಕಥೆ ತನ್ನ ಸ್ವಂತಿಕೆಯನ್ನು ಎಲ್ಲೂ ರಾಜಿ ಮಾಡಿಕೊಳ್ಳದೆ ಒಂದು ಸಿನಿಮಾವಾಗಿ ಹಿಗ್ಗಿದೆ. ಸಿನಿಮಾಗಾಗಿ ದುಡಿದ ಪ್ರತಿಯೊಬ್ಬರ ಶ್ರಮವೂ ಸಾರ್ಥಕವಾಗಿದೆ. ಇಷ್ಟೇ, ಇದರಾಚೆಗೆ ಸಿನಿಮಾ ವಿಮರ್ಶಕನಾಗಲು ನನಗೆ ಬರುವುದಿಲ್ಲ. ನೀವು ನಿಜವಾಗಲೂ ಮನುಷ್ಯಪ್ರೇಮಿಯಾಗಿದ್ದರೆ, ಸಹಜೀವಿಗಳೊಂದಿಗೆ ಅನ್ಯೋನ್ಯತೆ-ಸಹಬಾಳುವೆಯನ್ನು ಬಯಸುವವರೇ ಆಗಿದ್ದರೆ, ನಿಮ್ಮ ಮಕ್ಕಳ ಜೊತೆ ಈ ಸಿನಿಮಾವನ್ನು ಥಿಯೇಟರಿಗೆ ಹೋಗಿ ನೋಡುವುದನ್ನು ಮರೆಯಬೇಡಿ. ಇಷ್ಟು ಮಾತ್ರ ಹೇಳಬಲ್ಲೆ.

ಬರಹ ಕೃಪೆ.

ಗಿರೀಶ್ ತಾಳಿಕಟ್ಟೆ.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *